ಕಳೆದ ವರ್ಷ ಫೆಬ್ರವರಿಯಲ್ಲಿ ಸಂಭವಿಸಿದ ಈಶಾನ್ಯ ದೆಹಲಿ ಗಲಭೆಯಲ್ಲಿ ಲೂಟಿ ಮತ್ತು ಕಾಂಪೌಂಡ್ಗೆ ಬೆಂಕಿ ಹಚ್ಚಿದ ಆರೋಪದಡಿ ದಾಖಲಾದ ಐದು ಎಫ್ಐಆರ್ಗಳಲ್ಲಿ ನಾಲ್ಕು ಅನ್ನು ದೆಹಲಿ ಹೈಕೋರ್ಟ್ ರದ್ದುಗೊಳಿಸಿದೆ.
ಒಂದೇ ಘಟನೆಗೆ ಐದು ಪ್ರತ್ಯೇಕ ಎಫ್ಐಆರ್ಗಳನ್ನು ದಾಖಲಿಸುವುದು ಸುಪ್ರೀಂಕೋರ್ಟ್ ನೀಡಿದ್ದ ಆದೇಶಗಳಿಗೆ ವಿರುದ್ಧವಾಗಿದೆ. ಆದ್ದರಿಂದ, ಪ್ರಸ್ತುರ ಪ್ರಕರಣದಲ್ಲಿ ಎರಡನೇ ಎಫ್ಐಆರ್ ಮತ್ತು ಹೊಸ ತನಿಖೆಯನ್ನು ಮಾಡಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಕಳೆದ ವರ್ಷ ಮಾರ್ಚ್ನಲ್ಲಿ ಜಾಫ್ರಾಬಾದ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಇತರ ನಾಲ್ಕು ಪ್ರಕರಣಗಳನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಇದನ್ನೂ ಓದಿ: ದೆಹಲಿ ಗಲಭೆ ಪ್ರಕರಣ: ಪಬ್ಲಿಕ್ ಪ್ರಾಸಿಕ್ಯೂಟರ್ಗಳ ಆಯ್ಕೆ ಮಾಡಲಿರುವ ಪೊಲೀಸರು, ಪ್ರಶ್ನಿಸಿದ ಆಪ್ ಸರ್ಕಾರ
“ಪ್ರಕರಣದಲ್ಲಿ ಘಟನೆಗಳು ಪ್ರತ್ಯೇಕವಾಗಿವೆ ಅಥವಾ ಅಪರಾಧಗಳು ವಿಭಿನ್ನವಾಗಿವೆ ಎಂದು ಹೇಳಲಾಗುವುದಿಲ್ಲ. ಮೊದಲೇ ಹೇಳಿದಂತೆ, ಆಯಾ ಎಫ್ಐಆರ್ಗಳಲ್ಲಿ ಸಲ್ಲಿಸಲಾದ ಚಾರ್ಜ್ಶೀಟ್ಗಳ ಪರಿಶೀಲನೆಯು ಅವುಗಳು ಹೆಚ್ಚು ಕಡಿಮೆ ಒಂದೇ ರೀತಿಯಾಗಿರುತ್ತವೆ ಮತ್ತು ಆರೋಪಿಗಳು ಕೂಡ ಒಂದೇ ಆಗಿರುತ್ತವೆ ಎಂದು ಕಾಣುತ್ತಿದೆ. ಅದೇನೇ ಇದ್ದರೂ, ಆರೋಪಿಯ ವಿರುದ್ಧ ಯಾವುದಾದರೂ ವಿಷಯ ಕಂಡುಬಂದಲ್ಲಿ ಅದನ್ನು ಎಫ್ಐಆರ್ನಲ್ಲಿ ದಾಖಲಿಸಬಹುದು” ಎಂದು ನ್ಯಾಯಮೂರ್ತಿ ಸುಬ್ರಮಣಿಯನ್ ಪ್ರಸಾದ್ ಹೇಳಿದ್ದಾರೆ.
ಇತ್ತೀಚೆಗೆ, ಸೆಷನ್ಸ್ ನ್ಯಾಯಾಲಯವು ಫೆಬ್ರವರಿ 2020 ಹಿಂಸಾಚಾರಕ್ಕೆ ಸಂಬಂಧಿಸಿ ನಡೆಸಲಾದ ತನಿಖೆಯ ಗುಣಮಟ್ಟ ತುಂಬಾ ಕಳಪೆಯಾಗಿದೆ ಎಂದು ಹೇಳಿತ್ತು. ಅರ್ಧಂಬರ್ಧ ಚಾರ್ಜ್ ಶೀಟ್ಗಳನ್ನು ಸಲ್ಲಿಸಿದ್ದ ಪೊಲೀಸ್ ಅಧಿಕಾರಿಗಳು ತನಿಖೆಯನ್ನು ತಾರ್ಕಿಕ ತೀರ್ಮಾನಕ್ಕೆ ತಂದಿರಲಿಲ್ಲ.
ಫೆಬ್ರವರಿ 24 ರಂದು ಪೌರತ್ವ ಕಾನೂನಿನ ಬೆಂಬಲಿಗರು ಮತ್ತು ಪ್ರತಿಭಟನಾಕಾರರ ನಡುವೆ ಹಿಂಸಾಚಾರ ಭುಗಿಲೆದ್ದ ನಂತರ ಈಶಾನ್ಯ ದೆಹಲಿಯಲ್ಲಿ ಕೋಮು ಘರ್ಷಣೆಗಳು ಪ್ರಾರಂಭವಾದವು. ಗಲಭೆಯಲ್ಲಿ ಕನಿಷ್ಠ 53 ಜನರು ಸಾವನ್ನಪ್ಪಿ, ಸುಮಾರು 700 ಜನರು ಗಾಯಗೊಂಡಿದ್ದರು.