Homeಮುಖಪುಟದೆಹಲಿ ಗಲಭೆಯ ವಿವಾದಾತ್ಮಕ ವಿಡಿಯೋದಲ್ಲಿ ಕಪಿಲ್‍ ಮಿಶ್ರಾ ಜೊತೆ ಕಾಣಿಸಿಕೊಂಡಿದ್ದ ಪೊಲೀಸ್‍ ಅಧಿಕಾರಿಯಿಂದ ರಾಷ್ಟ್ರಪತಿ ಮೆಡಲ್‍ಗೆ...

ದೆಹಲಿ ಗಲಭೆಯ ವಿವಾದಾತ್ಮಕ ವಿಡಿಯೋದಲ್ಲಿ ಕಪಿಲ್‍ ಮಿಶ್ರಾ ಜೊತೆ ಕಾಣಿಸಿಕೊಂಡಿದ್ದ ಪೊಲೀಸ್‍ ಅಧಿಕಾರಿಯಿಂದ ರಾಷ್ಟ್ರಪತಿ ಮೆಡಲ್‍ಗೆ ಅರ್ಜಿ!

- Advertisement -
- Advertisement -

ರಾಷ್ಟ್ರಪತಿಗಳು ನೀಡುವ ಶೌರ್ಯ ಪದಕಕ್ಕಾಗಿ ಅರ್ಜಿ ಹಾಕಿರುವ ದೆಹಲಿಯ ಹಲವು ಪೊಲೀಸ್‍ ಅಧಿಕಾರಿಗಳು, ದೆಹಲಿ ಗಲಭೆ ಸಂದರ್ಭಗಳಲ್ಲಿ ತಾವು ಉತ್ತಮ ಕೆಲಸ ಮಾಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ ಎಂದು ಇಂಡಿಯನ್‍ ಎಕ್ಸ್‍ಪ್ರೆಸ್‍ ವರದಿ ಮಾಡಿದೆ. ಇದರಲ್ಲಿ ಬಿಜೆಪಿ ರಾಜಕಾರಣಿ ಕಪಿಲ್‍ ಮಿಶ್ರಾ ವಿವಾದಾತ್ಮಕ ಭಾಷಣ ಮಾಡುವಾಗ ಪಕ್ಕದಲ್ಲೇ ನಿಂತಿದ್ದ ಈಶಾನ್ಯ ದೆಹಲಿಯ ಮಾಜಿ ಡಿಸಿಪಿ, ವೇದ ಪ್ರಕಾಶ್ ಸೂರ್ಯ ಕೂಡ ಇದ್ದಾರೆ.

ಕಪಿಲ್‍ ಮಿಶ್ರಾ ಪ್ರಚೋದನಾಕಾರಿ ಭಾಷಣ ಮಾಡುವಾಗ ಈಶಾನ್ಯ ದೆಹಲಿಯ ಡಿಸಿಪಿಯಾಗಿದ್ದ ವೇದ ಪ್ರಕಾಶ್‍ ಸೂರ್ಯ ಅವರು ಮಿಶ್ರಾ ಪಕ್ಕದಲ್ಲೇ ಇರುವ ವಿಡಿಯೋ ಮತ್ತು ಫೋಟೊಗಳು ಆಗಲೇ ವೈರಲ್‍ ಆಗಿ ವಿವಾದ ಸೃಷ್ಟಿಯಾಗಿತ್ತು. ಕಪಿಲ್‍ ಮಿಶ್ರಾರ ಆ ಭಾಷಣದ ಮರುದಿನವೇ ಈಶಾನ್ಯ ದೆಹಲಿಯಲ್ಲಿ ಗಲಭೆ ಭುಗಿಲೆದ್ದಿತ್ತು.

ಕಳೆದ ವರ್ಷ ಫೆಬ್ರವರಿ 23 ರಂದು ಸಿಎಎ ಪರ ರ್‍ಯಾಲಿಯಲ್ಲಿ ಈ ಘಟನೆ ಸಂಭವಿಸಿತ್ತು.

ಇದನ್ನೂ ಓದಿ: ದೆಹಲಿ ಗಲಭೆ: ವಿದ್ಯಾರ್ಥಿ ಹೋರಾಟಗಾರರ ಬಿಡುಗಡೆಗೆ ಕೋರ್ಟ್‌ ಆದೇಶ

ವೇದ ಪ್ರಕಾಶ್‍ ಸೂರ್ಯ, ಗಲಭೆಯಲ್ಲಿ ನೂರಾರು ಜನರ ಪ್ರಾಣ ಮತ್ತು ಆಸ್ತಿಗಳನ್ನು ಉಳಿಸಿದ್ದಾಗಿ ಮತ್ತು ಗಲಭೆಯ ಸಮಯದಲ್ಲಿ “ಅಸಾಧಾರಣ” ಕೆಲಸವನ್ನು ಮಾಡಿದ್ದಾಗಿ ತಮ್ಮ ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ.

ವೇದಪ್ರಕಾಶ ಸೂರ್ಯ ಅವರ ಜೆಸಿಪಿ  ಆಗಿದ್ದ ಅಲೋಕ್ ಕುಮಾರ್ ಮತ್ತು ಅಧೀನ ಅಧಿಕಾರಿಗಳು ಸೇರಿದಂತೆ ಸುಮಾರು 25 ಪೊಲೀಸ್ ಅಧಿಕಾರಿಗಳು ಪ್ರಶಸ್ತಿಗಾಗಿ ತಮ್ಮ ಅರ್ಜಿಗಳನ್ನು ದೆಹಲಿ ಪೊಲೀಸ್‍ ಪ್ರಧಾನ ಕಚೇರಿಗೆ  ಸಲ್ಲಿಸಿದ್ದಾರೆ. ದೆಹಲಿ ಗಲಭೆಯ ಸಂದರ್ಭದಲ್ಲಿ ತಮ್ಮ ಪಾತ್ರವನ್ನು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

“ಜೀವ ಮತ್ತು ಆಸ್ತಿಯನ್ನು ಉಳಿಸುವ” ಅಥವಾ “ಅಪರಾಧವನ್ನು ತಡೆಗಟ್ಟುವಲ್ಲಿ ಅಥವಾ ಅಪರಾಧಿಗಳನ್ನು ಬಂಧಿಸುವಲ್ಲಿ” ಮಾಡಿದ ಕಾರ್ಯಗಳಿಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕವನ್ನು ನೀಡಲಾಗುತ್ತದೆ.

“ಈ ಪ್ರಸ್ತಾಪವನ್ನು ಜಿಲ್ಲೆಯಿಂದ ಪೊಲೀಸ್ ಪ್ರಧಾನ ಕಚೇರಿಗೆ ಕಳುಹಿಸಲಾಗುತ್ತದೆ. ಅಲ್ಲಿ ಅದನ್ನು ಹಿರಿಯ ಅಧಿಕಾರಿಗಳ ಸಮಿತಿಯ ಮುಂದೆ ಇಡಲಾಗುತ್ತದೆ ಮತ್ತು ಅಂತಿಮವಾಗಿ ದೆಹಲಿ ಪೊಲೀಸ್ ಆಯುಕ್ತರಿಂದ ಅನುಮೋದನೆ ಪಡೆಯಲಾಗುತ್ತದೆ. ಫೈಲ್ ಅನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನಕ್ಕೆ ಧಿಕ್ಕಾರ ಕೂಗುವಂತೆ ಒತ್ತಾಯಿಸಿ ಹಲ್ಲೆ: ಬಂಧಿತ ದೆಹಲಿ ಗಲಭೆಯಲ್ಲೂ ಆರೋಪಿ!

ಕೆಲವು ದಿನಗಳ ಹಿಂದೆ ವೇದಪ್ರಕಾಶ್‍ ಸೂರ್ಯ ಅರ್ಜಿ ಸಲ್ಲಿಸಿದ್ದರು ಮತ್ತು ಅವರ ಅರ್ಜಿಯನ್ನು ಇತರ 24 ಪೊಲೀಸ್ ಅಧಿಕಾರಿಗಳ ಅರ್ಜಿಗಳ ಜೊತೆಗೆ ಪ್ರಧಾನ ಕಚೇರಿಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದಲ್ಲದೆ, 23 ಪೊಲೀಸ್ ಸಿಬ್ಬಂದಿ “ಅಸಾಧಾರಣ ಕಾರ್ಯ ಪುರಸ್ಕಾರ” ಪ್ರಶಸ್ತಿಗಾಗಿ ಮತ್ತು 14 ಮಂದಿ ಔಟ್‍-ಆಫ್‍-ಟರ್ನ್‍-ಪ್ರಮೋಷನ್‍ ಆಧಾರದಲ್ಲಿ ಪದಕಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲವೊಂದು ತಿಳಿಸಿದೆ ಎಂದು ಎಕ್ಸ್‍ಪ್ರೆಸ್‍ ವರದಿ ಮಾಡಿದೆ.

ಮೂರು ನಾಲ್ಕು ದಿನಗಳಲ್ಲಿ ಗಲಭೆಯನ್ನು ನಿಯಂತ್ರಿಸಿದ್ದಾಗಿ ವೇದಪ್ರಕಾಶ್‍ ಸೂರ್ಯ ತಮ್ಮ ಅರ್ಜಿಯಲ್ಲಿ ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಹಾಯಕ್ಕಾಗಿ ಫೋನ್ ಕರೆಗಳಿಗೆ ಪ್ರತಿಕ್ರಿಯೆಯನ್ನು ಒಳಗೊಂಡಂತೆ, ನೂರಾರು ಜನರ ಪ್ರಾಣ ಉಳಿಸುವಲ್ಲಿ ಅವರ ‘ಧೈರ್ಯಶಾಲಿ ಪ್ರಯತ್ನಗಳ’ ಕುರಿತು ಮತ್ತು ಕಲ್ಲು ತೂರಾಟಗಳನ್ನು ಲೆಕ್ಕಿಸದೇ ತಾವು ಕರ್ತವ್ಯ ಮಾಡಿದ್ದಾಗಿ ಅರ್ಜಿಯಲ್ಲಿ ಬರೆದುಕೊಂಡಿದ್ದಾರೆ ಎಂದು ಪೊಲೀಸ್‍ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ದೆಹಲಿ ಗಲಭೆಯ ಅಸಲಿ ಪಿತೂರಿ ಭಾಗ-2: ‘ಅಂತಿಮ ಯುದ್ಧಕ್ಕೆ ಕರೆ ನೀಡಿದ್ದ ಮುಸ್ಲಿಂ-ವಿರೋಧಿ ‘ದೇವಮಾನವ’!

ಕಪಿಲ್‍ ಮಿಶ್ರಾ ಅವರು ಫೆಬ್ರವರಿ 23, 2020 ರಂದು ಮೌಜ್ಪುರ್ ಟ್ರಾಫಿಕ್ ಸಿಗ್ನಲ್ ಬಳಿ ಸಿಎಎ ಪರ ಸಭೆ ನಡೆಸಿದ ಭಾಷಣದ ವೀಡಿಯೊವನ್ನು ಟ್ವೀಟ್ ಮಾಡಿದ್ದರು. ಅದರಲ್ಲಿ ದೆಹಲಿ ಈಶಾನ್ಯ ಡಿಸಿಪಿಯಾಗಿದ್ದ  ವೇದಪ್ರಕಾಶ್‍ ಸೂರ್ಯ ಅವರು ಕಪಿಲ್‍ ಮಿಶ್ರಾ ಪಕ್ಕದಲ್ಲಿ ನಿಂತಿರುವುದನ್ನು ಕಾಣಬಹುದು. ಭಾಷಣದಲ್ಲಿ, ಬಿಜೆಪಿ ನಾಯಕ, “ಡಿಸಿಪಿ ನಮ್ಮ ಪಕ್ಕವೇ ಇದ್ದಾರೆ. ನಿಮ್ಮ ಪರವಾಗಿ, ನಾನು ಅವರಿಗೆ ಹೇಳಲು ಬಯಸುತ್ತೇನೆ ಯುಎಸ್ ಅಧ್ಯಕ್ಷ (ಡೊನಾಲ್ಡ್ ಟ್ರಂಪ್) ಭಾರತದಲ್ಲಿ ಇರುವವರೆಗೂ ನಾವು ಈ ಪ್ರದೇಶವನ್ನು ಶಾಂತಿಯುತವಾಗಿ ನೋಡಿಕೊಳ್ಳುತ್ತೇವೆ. ಅದರ ನಂತರ, ರಸ್ತೆಗಳನ್ನು ಖಾಲಿ ಮಾಡದಿದ್ದರೆ (ಸಿಎಎ ಪ್ರತಿಭಟನಾಕಾರರಿಂದ) ನಾವು ನಿಮ್ಮ (ಪೋಲಿಸ್) ಮಾತುಗಳನ್ನು ಕೇಳುವುದಿಲ್ಲ. ನಾವು ಬೀದಿಗಿಳಿಯಬೇಕಾಗುತ್ತದೆ” ಎಂದು ಹೇಳಿದ್ದರು.

ಈ ವರ್ಷ ಫೆಬ್ರವರಿ 24 ರಂದು ವೇದಪ್ರಕಾಶ್‍ ಸೂರ್ಯ ಅವರನ್ನು ದೆಹಲಿ ಈಶಾನ್ಯ ಜಿಲ್ಲೆಯಿಂದ ರಾಷ್ಟ್ರಪತಿ ಭವನಕ್ಕೆ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಈ  ಪ್ರಶಸ್ತಿ ಅರ್ಜಿ ಕುರಿತು  ದಿ ಇಂಡಿಯನ್ ಎಕ್ಸ್‌ಪ್ರೆಸ್‍ಗೆ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು.

ಕೆಲವೇ ದಿನಗಳ ಹಿಂದೆ ನಿವೃತ್ತರಾದ ಆಗಿನ ದೆಹಲಿ ಪೊಲೀಸ್ ಆಯುಕ್ತ ಎಸ್ ಎನ್ ಶ್ರೀವಾಸ್ತವ ಅವರು ಹಿಂಸಾಚಾರದ ಸಮಯದಲ್ಲಿ ತಮ್ಮ ಕೆಲಸಕ್ಕಾಗಿ ವಿಶೇಷ ಸೆಲ್‌ನಲ್ಲಿ ಪೋಸ್ಟ್ ಮಾಡಿದ ನಾಲ್ಕು ಪೊಲೀಸ್ ಸಿಬ್ಬಂದಿಗೆ ಔಟ್‍-ಆಫ್-ಟರ್ನ್‍ ಬಡ್ತಿ ನೀಡಿದ್ದರು. ಜೆಎನ್‌ಯು ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್, ಜಾಮಿಯಾ ಸಮನ್ವಯ ಸಮಿತಿಯ ಮಾಧ್ಯಮ ಸಂಯೋಜಕರಾದ ಸಫೂರಾ ಝರ್ಗಾರ್ ಮತ್ತು ಪಿಂಜ್ರಾ ಟೋಡ್‌ನ ದೇವಂಗನಾ ಕಲಿತಾ ಮತ್ತು ನತಾಶಾ ನರ್ವಾಲ್‍ ಸೇರಿದಂತೆ 21 ಮಂದಿಯನ್ನು ಬಂಧಿಸಿದ ತನಿಖಾ ತಂಡದ ಈ ನಾಲ್ವರು ಅಧಿಕಾರಿಗಳು ಸಿಎಎ ವಿರುದ್ಧದ ಪ್ರತಿಭಟನೆಗಳನ್ನು ದೆಹಲಿ ಗಲಭೆಗೆ ಜೋಡಿಸಿದವರು.

ಇದನ್ನೂ ಓದಿ: ದೆಹಲಿ ಗಲಭೆ ಮತ್ತು ರೈತ ಹೋರಾಟವನ್ನು ನಿಭಾಯಿಸುವಲ್ಲಿ ದೆಹಲಿ ಪೊಲೀಸರು ಉತ್ತೀರ್ಣ: ಅಮಿತ್ ಶಾ

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ‘ದೆಹಲಿ ಗಲಭೆಯ ಸಂದರ್ಭದಲ್ಲಿ ಐಬಿ ಅಧಿಕಾರಿ ಅಂಕಿತ್ ಶರ್ಮಾ ಅವರನ್ನು ಕೊಂದ ಆರೋಪದಲ್ಲಿ ಹಸೀನ್ ಖುರೇಷಿಯನ್ನು ಬಂಧಿಸಲು ಕಾರಣವಾದ ಹೆಡ್ ಕಾನ್ಸ್‍ಟೇಬಲ್‍ ಹಮೇಂದ್ರ ರತಿ ಅವರಿಗೆ ಔಟ್‍-ಆಫ್‍-ಟರ್ನ್‍  ಬಡ್ತಿಯನ್ನು ಕಳೆದ ತಿಂಗಳು ನೀಡಲಾಗಿದೆ’ ಎಂದು ತಿಳಿಸಿದರು.

ಈ ವರ್ಷದ ಫೆಬ್ರವರಿ 19 ರಂದು ನಡೆದ ದೆಹಲಿ ಪೊಲೀಸ್ ಮುಖ್ಯಸ್ಥರ ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ, ಶ್ರೀವಾಸ್ತವ ಅವರು ಗಲಭೆ ನಿಯಂತ್ರಣದಲ್ಲಿ ತಮ್ಮ ಪೊಲೀಸ್‍ ಪಡೆಗಳ ಪಾತ್ರವನ್ನು ಶ್ಲಾಘಿಸಿದ್ದರು. “ಒಟ್ಟು 755 ಎಫ್‌ಐಆರ್‌ಗಳನ್ನು ನೋಂದಾಯಿಸಲಾಗಿದೆ ಮತ್ತು ನಮ್ಮ ದೂರನ್ನು ಅಂಗೀಕರಿಸಿಲ್ಲ ಎಂದು ಯಾರೂ ಕುಂದುಕೊರತೆ ಹೇಳಿಲ್ಲ’ ಎಂದಿದ್ದರು.

ವಾರ್ಷಿಕ ಪರಿಶೀಲನೆಯ ಸಮಯದಲ್ಲಿ ಗಲಭೆಯನ್ನು ಉಲ್ಲೇಖಿಸಿ, ಡಿಸಿಪಿ (ವಿಶೇಷ ಕೋಶ) ಪ್ರಮೋದ್ ಕುಶ್ವಾ ಮತ್ತು ಡಿಸಿಪಿ (ಅಪರಾಧ) ಜಾಯ್ ಟಿರ್ಕಿ ಅವರು, ಮೌಜ್‌ಪುರದಲ್ಲಿ ಸಿಎಎ ಪರ ಮತ್ತು ಸಿಎಎ ವಿರೋಧಿ ಪ್ರತಿಭಟನಾಕಾರರ ನಡುವಿನ ಘರ್ಷಣೆಯನ್ನು ಪ್ರಸ್ತಾಪಿಸಿದ್ದು, ಇದರ ನಂತರ “ಪರಿಸ್ಥಿತಿ ಹದಗೆಟ್ಟಿತು” ಎಂದು ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿ ಗಲಭೆಗೆ ಅಮಿತ್ ಶಾ ಅವರೇ ನೇರ ಹೊಣೆ: ಸತ್ಯಶೋಧನಾ ಸಮಿತಿಯ ವರದಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...