“ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿವರಗಳನ್ನು ತಮ್ಮ ವೆಬ್ಸೈಟ್ಗಳಲ್ಲಿ ಅಪ್ಲೋಡ್ ಮಾಡಬೇಕು ಅಲ್ಲದೆ ಅವರನ್ನು ಆಯ್ಕೆ ಮಾಡುವ ಕಾರಣಗಳನ್ನು ಕೂಡಾ ಅಪ್ಲೋಡ್ ಮಾಡಬೇಕು” ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ.
ಕಳೆದ ನಾಲ್ಕು ರಾಷ್ಟ್ರೀಯ ಚುನಾವಣೆಗಳಲ್ಲಿ “ರಾಜಕೀಯದ ಅಪರಾಧೀಕರಣದಲ್ಲಿ ಆತಂಕಕಾರಿ ಏರಿಕೆ” ಆಗಿರುವುದನ್ನು ಸೂಚಿಸಿದ ಕೋರ್ಟ್ “ಪಕ್ಷಗಳು ತಮ್ಮ ವೆಬ್ಸೈಟ್ಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ 48 ಗಂಟೆಗಳ ಒಳಗೆ ವಿವರಗಳನ್ನು ಅಪ್ಲೋಡ್ ಮಾಡುವುದು ಕಡ್ಡಾಯ” ಎಂದು ಹೇಳಿದೆ.
“72 ಗಂಟೆಗಳ ಒಳಗೆ ಇದರ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ,ಅಭ್ಯರ್ಥಿಗಳ ಆಯ್ಕೆಯೂ ಸಹ ಅರ್ಹತೆಯ ಆಧಾರದ ಮೇಲೆ ಇರಬೇಕೇ ಹೊರತು ಗೆಲುವಿನ ಸಾಮರ್ಥ್ಯದ ಮೇಲಲ್ಲ” ಎಂದು ಉನ್ನತ ನ್ಯಾಯಾಲಯ ನಿರ್ದೇಶಿಸಿದೆ.
“ರಾಜಕೀಯ ಪಕ್ಷಗಳು ವಿವರಗಳನ್ನು ನೀಡಲು ವಿಫಲವಾದರೆ ಅಥವಾ ಚುನಾವಣಾ ಆಯೋಗವು ನಿರ್ದೇಶನವನ್ನು ಜಾರಿಗೆ ತರಲು ಸಾಧ್ಯವಾಗದಿದ್ದರೆ, ಅದನ್ನು ನ್ಯಾಯಾಲಯದ ನಿಂದನೆಯೆಂದು ಪರಿಗಣಿಸಲಾಗುತ್ತದೆ” ಎಂದು ನ್ಯಾಯಾಧೀಶರು ಹೇಳಿದರು.
ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಮತ್ತು ಇತರರು ಸಲ್ಲಿಸಿದ್ದ ಅರ್ಜಿಗಳ ಮೇರೆಗೆ ಈ ತೀರ್ಪು ಬಂದಿದೆ. ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿರುವವರನ್ನು ಚುನಾವಣೆಗೆ ಸ್ಪರ್ಧಿಸದಂತೆ ಮತ್ತು ಪಕ್ಷದ ಮುಖ್ಯಸ್ಥರಾಗುವುದನ್ನು ನಿಷೇಧಿಸಲು ಬೇಕಾಗಿ ಕಾನೂನುಗಳನ್ನು ಜಾರಿಗೆ ತರಲು 2018 ರ ಸೆಪ್ಟೆಂಬರ್ನಲ್ಲಿ ಐವರು ನ್ಯಾಯಾಧೀಶರ ಸಂವಿಧಾನ ಪೀಠವೂ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.