ಬಿಜೆಪಿ ಮತ್ತು ಕೆಂದ್ರ ಸಚಿವ ಪ್ರಲ್ಹಾದ ಜೋಷಿ ವಿರುದ್ಧ ಸಿಡಿದೆದ್ದಿರುವ ದಿಂಗಾಲೇಶ್ವರ ಮಹಾಸ್ವಾಮೀಜಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿರಹಟ್ಟಿ ದಿಂಗಾಲೇಶ್ವರ ಮಹಾಸ್ವಾಮೀಜಿ, ಧರ್ಮದಲ್ಲಿ ರಾಜಕೀಯ ಇರಬಾರದು, ರಾಜಕೀಯದಲ್ಲಿ ಧರ್ಮ ಇರಬೇಕು ಎಂದು ಜನರು ಬಯಸಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳು ಎಲೆಕ್ಷನ್ ಫಿಕ್ಸಿಂಗ್ ಮಾಡಿಕೊಂಡಿದೆ ಎಂದು ಜನರು ಹೇಳಿಕೊಳ್ಳುತ್ತಿದ್ದಾರೆ. ನೊಂದ ಜನರು ನೋವು ತೋಡಿಕೊಂಡಿದ್ದರಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಒಕ್ಕಲಿಗ, ಲಿಂಗಾಯತ ಸಮುದಾಯದ ಹೊರತುಪಡಿಸಿದರೆ ಕುರುಬ ಸಮುದಾಯ ದೊಡ್ಡದು, ಆದರೆ ಕುರುಬ ಸಮುದಾಯಕ್ಕೆ ಒಂದೇ ಒಂದು ಟಿಕೆಟ್ ಕೊಡಲಿಲ್ಲ. ಲಂಬಾಣಿ ಸಮುದಾಯಕ್ಕೆ ಟಿಕೆಟ್ ಕೊಡಲಿಲ್ಲ. ಈಶ್ವರಪ್ಪಗೆ ಬಿಜೆಪಿ ಟಿಕೆಟ್ ಕೊಡಲಿಲ್ಲ. ಈಶ್ವರಪ್ಪ ಅವರಿಗೆ ಟಿಕೆಟ್ ತಪ್ಪಲು ಪ್ರಲ್ಹಾದ ಜೋಷಿ ಅವರೇ ಕಾರಣ. ಬಿಜೆಪಿ ಹೈಕಮಾಂಡ್, ಕುರುಬ ಸಮುದಾಯ ನಮಗೆ ಅವಶ್ಯಕತೆ ಇಲ್ಲ ಎಂದು ಹೇಳಿದೆ. ಬಹುದೊಡ್ಡ ಸಮುದಾಯವನ್ನು ಬಿಜೆಪಿ ಕಡೆಗಣಿಸಿದೆ. ಶೇಕಡಾ 2ರಷ್ಟು ಇರುವ ಸಮುದಾಯದ ನಾಯಕರಿಗೆ ಎರಡು ಕ್ಯಾಬಿನೆಟ್ ಹುದ್ದೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಧಾರವಾಡ ಲೋಕಸಭೆ ಕ್ಷೇತ್ರಕ್ಕೆ ಬಿಜೆಪಿಯಿಂದ ಕೇಂದ್ರ ಸಚಿವ ಪ್ರಲ್ಹಾದ ಜೋಷಿಗೆ ಟಿಕೆಟ್ ಘೋಷಣೆ ಬೆನ್ನಲ್ಲಿ ಭಾರೀ ಅಸಮಾಧಾನ ಭುಗಿಲೆದ್ದಿತ್ತು. ಧಾರವಾಡ ಲೋಕಸಭಾ ಕ್ಷೇತ್ರದಿಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನ ಬದಲಾಯಿಸುವಂತೆ ಮಾ.31ರವರೆಗೆ ದಿಂಗಾಲೇಶ್ವರ ಮಹಾಸ್ವಾಮೀಜಿ ಸಮಯವನ್ನು ಕೊಟ್ಟಿದ್ದರು. ಬೇರೆ ಅಭ್ಯರ್ಥಿಯನ್ನು ಕ್ಷೇತ್ರದಲ್ಲಿ ಕಣಕ್ಕಿಳಿಸಲು ಸ್ವಾಮೀಜಿಗಳು ಆಗ್ರಹಿಸಿದ್ದರು. ಇಲ್ಲವಾದರೆ ಪ್ರಲ್ಹಾದ ಜೋಷಿ ಯನ್ನು ಸೋಲಿಸುವುದೇ ನನ್ನ ಮುಖ್ಯ ಉದ್ದೇಶ ಎಂದು ಸ್ವಾಮೀಜಿಗಳು ಹೇಳಿದ್ದರು.
ಜೋಶಿ ವಿರುದ್ಧ ವಾಗ್ಧಾಳಿ ನಡೆಸಿದ್ದ ದಿಂಗಾಲೇಶ್ವರ ಮಹಾಸ್ವಾಮೀಜಿ, ಬಿಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದ್ದು ಪ್ರಲ್ಹಾದ ಜೋಷಿ , ತಾವೇ ಸಿಎಂ ಆಗಬೇಕೆಂದು ಪ್ರಲ್ಹಾದ ಜೋಷಿ ಜಾಕೆಟ್ ಹೊಲಿಸಿದ್ರು, ನಮ್ಮ ಹೋರಾಟದಿಂದಾಗಿ ಅವರ ಜಾಕೆಟ್ ಪಾಕೆಟ್ ಸೇರಿತು, ನಾವು ಯಾರ ಒತ್ತಡಕ್ಕೂ ಒಳಗಾಗುವ ಸ್ವಾಮೀಜಿಗಳಲ್ಲ. ಮಾಜಿ ಮುಖ್ಯಮಂತ್ರಿಯೊಬ್ಬರಿಗೆ ಧಾರವಾಡ ಲೋಕಸಭಾ ಚುನಾವಣೆ ಟಿಕೆಟ್ ತಪ್ಪಿಸಲು ಹುನ್ನಾರ ನಡೆಸಲಾಗಿದೆ. ಪ್ರತಿಯೊಂದು ರೀತಿಯಲ್ಲಿ ನಮಗೆ ಅನ್ಯಾಯ ಆಗಿದೆ. ನಾನು ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರಿಗೆ ದೂರವಾಣಿ ಕರೆ ಮಾಡಿದಾಗ ಅವರು ನಮ್ಮ ಕೆಲಸ ಮಾಡಲು ಲಿಂಗಾಯತ ನಾಯಕರು ಇಲ್ವಾ ಎಂದು ಕೇಳಿದ್ದರು. ಆದ್ದರಿಂದ ನಾವು ಕೂಡ ಈಗ ಬದಲಾವಣೆ ಬಯಸಿದ್ದೇವೆ ಎಂದು ಹೇಳಿದ್ದರು.
ಲಿಂಗಾಯತ ಹಾಗೂ ಇತರ ಸಮಾಜದ ನಾಯಕರನ್ನು, ನೌಕರ, ವ್ಯಾಪಾರಿಗಳು ಸೇರಿದಂತೆ ಹಲವರು ಸಚಿವರಿಂದ ತುಳಿತಕ್ಕೆ ಒಳಗಾಗಿದ್ದಾರೆ. ಇವರ ಸೇಡಿನ ರಾಜಕಾರಣದಿಂದ ಅನೇಕ ನಾಯಕರು ಜಾತ್ಯಾತೀತವಾಗಿ ತುಳಿತಕ್ಕೆ ಒಳಗಾಗಿ, ಮಾನಸಿಕ, ದೈಹಿಕ, ಆರ್ಥಿಕ, ರಾಜಕೀಯವಾಗಿ ಹಿಂಸೆ ಅನುಭವಿಸಿದ್ದಾರೆ. ಐಟಿ, ಇಡಿ ಇತರ ದಾಳಿಯ ಭಯ ಸೃಷ್ಟಿಸಿ ಬಾಯಿ ಬಿಟ್ಟು ಮಾತನಾಡದ ಹಾಗೆ ಮಾಡಿದ್ದಾರೆ. ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ಪ್ರಲ್ಹಾದ ಜೋಷಿ ತಮ್ಮ ಹಿಂಬಾಲಕರನ್ನು ಸೇರಿಸಿ ಪ್ರಮಾಣಿಕರನ್ನು ಬದಿಗೆ ಸರಿಸಿದ್ದಾರೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಇದೇ ನಿಮ್ಮ ನಿಜದವಾದ ಜಾತಕ..’; ಪ್ರಲ್ಹಾದ ಜೋಷಿ ‘ರಾಜಕೀಯ ತಂತ್ರಗಾರಿಕೆ’ ವಾಟ್ಸಾಪ್ ಸಂದೇಶ ವೈರಲ್