”ರಾಜಕೀಯ ಪಕ್ಷಗಳು ಪಡೆಯುವ ಹಣದ ಮೂಲವನ್ನು ತಿಳಿದುಕೊಳ್ಳುವ ಹಕ್ಕು ನಾಗರಿಕರಿಗೆ ಇಲ್ಲ” ಎಂದು ಕೇಂದ್ರ ಸರ್ಕಾರ ಭಾನುವಾರ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದೆ ಎಂದು ಲೈವ್ಲಾ ವರದಿ ಮಾಡಿದೆ.
ಚುನಾವಣಾ ಬಾಂಡ್ಗಳ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳಿಗೆ ಪ್ರತಿಕ್ರಿಯಿಸಿದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಹೇಳಿಕೆಯಲ್ಲಿ ಈ ವಿಷಯ ತಿಳಿಸಿದ್ದಾರೆ.
ರಾಜಕೀಯ ಪಕ್ಷಗಳಿಗೆ “ಅಪಾರದರ್ಶಕ” ಚುನಾವಣಾ ಬಾಂಡ್ಗಳ ಮೂಲಕ ದೇಣಿಗೆ ನೀಡುವ ವಿಧಾನವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಈ ವಾದ ಮಂಡಿಸಿದರು. ಈ ನಿಧಿಗಳ ಮೂಲವನ್ನು ತಿಳಿದುಕೊಳ್ಳುವ ಹಕ್ಕನ್ನು ಸಂವಿಧಾನ ನಾಗರಿಕರಿಗೆ ಮೂಲಭೂತ ಹಕ್ಕಾಗಿ ನೀಡಿಲ್ಲ ಎಂದು ಅವರು ಹೇಳಿದರು. ಚುನಾವಣಾ ಬಾಂಡ್ಗಳನ್ನು ನಿಯಂತ್ರಿಸುವ ಸಲುವಾಗಿ ನೀತಿ ರೂಪಿಸುವ ಕಾರ್ಯಕ್ಕೆ ಸುಪ್ರೀಂಕೋರ್ಟ್ ಮುಂದಾಗಬಾರದು ಎಂದು ಅವರು ಎಚ್ಚರಿಕೆ ನೀಡಿದರು.
ಚುನಾವಣಾ ಬಾಂಡ್ಗಳು ವಿತ್ತೀಯ ಸಾಧನವಾಗಿದ್ದು, ನಾಗರಿಕರು ಅಥವಾ ಕಾರ್ಪೊರೇಟ್ ಗುಂಪುಗಳು ಬ್ಯಾಂಕ್ನಿಂದ ಖರೀದಿಸಬಹುದು ಮತ್ತು ರಾಜಕೀಯ ಪಕ್ಷಕ್ಕೆ ನೀಡಬಹುದು, ನಂತರ ಇವುಗಳನ್ನು ಹಣಕ್ಕಾಗಿ ಪಡೆದುಕೊಳ್ಳಲು ಮುಕ್ತವಾಗಿರುತ್ತದೆ. ಈ ಬಡ್ಡಿ ರಹಿತ ಬಾಂಡ್ಗಳ ಖರೀದಿಯನ್ನು ಯಾರೂ ಘೋಷಿಸಬೇಕಾಗಿಲ್ಲ ಮತ್ತು ರಾಜಕೀಯ ಪಕ್ಷಗಳು ಹಣದ ಮೂಲವನ್ನು ತೋರಿಸುವ ಅಗತ್ಯವಿಲ್ಲದ ಕಾರಣ ಸಂಪೂರ್ಣ ಪ್ರಕ್ರಿಯೆಯು ಅನಾಮಧೇಯವಾಗಿದೆ. ಕೇಂದ್ರ ಬಿಜೆಪಿ ಸರ್ಕಾರವು ಜನವರಿ 2018ರಲ್ಲಿ ಈ ಯೋಜನೆಯನ್ನು ಪರಿಚಯಿಸಿತು.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ನ ಸಂವಿಧಾನ ಪೀಠವು ಮಂಗಳವಾರದಿಂದ ಪ್ರಕರಣದ ವಿಚಾರಣೆಯನ್ನು ಪ್ರಾರಂಭಿಸಲಿದೆ.
ಭಾನುವಾರದ ಅಟಾರ್ನಿ ಜನರಲ್ ಅವರು ತಮ್ಮ ಹೇಳಿಕೆಯಲ್ಲಿ, ”ಈ ಯೋಜನೆಯು ಯಾವುದೇ ವ್ಯಕ್ತಿಗಳ ಪ್ರಸ್ತುತ ಇರುವ ಹಕ್ಕನ್ನು ಉಲ್ಲಂಘಿಸುವುದಿಲ್ಲ. ಅಂತೆಯೇ ಸಂವಿಧಾನದ 3ನೇ ವಿಭಾಗದ ಅಡಿಯಲ್ಲಿ ನೀಡಿರುವ ಯಾವುದೇ ಹಕ್ಕುಗಳಿಗೆ ಅಸಂಗತ ಎನಿಸುವುದಿಲ್ಲ. ಆದ್ದರಿಂದ ಯೋಜನೆ ಕಾನೂನುಬಾಹಿರವಲ್ಲ ಅಸಂಗತ ಎನಿಸದ ಯಾವುದೇ ಕಾನೂನನ್ನು ಯಾವುದೇ ಕಾರಣಕ್ಕೆ ರದ್ದುಪಡಿಸುವಂತಿಲ್ಲ” ಎಂದು ಸ್ಪಷ್ಟಪಡಿಸಿದರು.
ಉತ್ತಮ ಅಥವಾ ಭಿನ್ನ ಸಲಹೆಗಳನ್ನು ನೀಡುವ ಉದ್ದೇಶಕ್ಕೆ ಸರ್ಕಾರದ ನೀತಿಗಳನ್ನು ನ್ಯಾಯಾಂಗ ಪರಾಮರ್ಶೆ ಮಾಡುವಂತಿಲ್ಲ ಎಂದು 2003ರಲ್ಲಿ ಪಿಯುಸಿಎಲ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿದರು.
ಈ ಚುನಾವಣಾ ಬಾಂಡ್ ಯೋಜನೆಯು ದೇಣಿಗೆ ನೀಡಿದ ಸಂಸ್ಥೆಗೆ ಗೌಪ್ಯತೆಯ ಪ್ರಯೋಜನವನ್ನು ನೀಡುತ್ತದೆ. ಸ್ವಚ್ಛ ಹಣ ದೇಣಿಗೆಯಾಗಿ ನೀಡುವಂತೆ ಇದು ಉತ್ತೇಜಿಸುತ್ತದೆ ಹಾಗೂ ಇದನ್ನು ಖಾತರಿಪಡಿಸುತ್ತದೆ. ಎಲ್ಲ ತೆರಿಗೆ ಹೊಣೆಗಾರಿಕೆಗಳಿಗೆ ಬದ್ಧವಾಗಿದೆ. ಆದ್ದರಿಂದ ಹಾಲಿ ಇರುವ ಯಾವುದೇ ಹಕ್ಕುಗಳಿಗೆ ವಿರುದ್ಧ ಎನಿಸುವುದಿಲ್ಲ’ ಎಂದರು.
ಚುನಾವಣಾ ಬಾಂಡ್ಗಳ ಯೋಜನೆಯು ನಾಗರಿಕರ ಹಕ್ಕುಗಳ ಮೇಲೆ ಪರಿಣಾಮ ಬೀರುವುದಿಲ್ಲ ಮತ್ತು ಆದ್ದರಿಂದ ನ್ಯಾಯಾಲಯವು ನೀತಿ ಡೊಮೇನ್ನಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಅಟಾರ್ನಿ ಜನರಲ್ ಹೇಳಿದ್ದಾರೆ.
ಇದನ್ನೂ ಓದಿ: ಮಧ್ಯಪ್ರದೇಶ: ಅಮಿತ್ ಶಾ ಭೇಟಿ ಬೆನ್ನಲ್ಲೆ ಬಿಜೆಪಿಗೆ ಇಬ್ಬರು ಹಿರಿಯ ನಾಯಕರು ರಾಜೀನಾಮೆ