ವಿವಾದಾತ್ಮಕ ಕೃಷಿ ಕಾಯ್ದೆಗಳ ಕುರಿತ ಮಹತ್ವದ ರೈತ ಮುಖಂಡರು ಮತ್ತು ಸಚಿವರೊಂದಿಗಿನ 7 ಗಂಟೆಗಳ ಮಾತುಕತೆ ಅಂತ್ಯ ಕಂಡಿದೆ. ಆದರೆ ಇಂದಿನ ಸಭೆಯು ಸಹ ತಾರ್ಕಿಕ ಅಂತ್ಯ ಕಾಣುವಲ್ಲಿ ವಿಫಲವಾಗಿದ್ದು ಮುಂದಿನ ಸಭೆ ಡಿಸೆಂಬರ್ 05ಕ್ಕೆ ನಿಗಧಿಯಾಗಿದೆ. ರೈತರು ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂಬ ತಮ್ಮ ನಿಲುವಿಗೆ ಬದ್ಧರಾಗಿದ್ದರೆ ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್ “ನಮಗೆ ಯಾವುದೇ ಅಹಂಕಾರವಿಲ್ಲ. ರೈತರ ಸಮಸ್ಯೆಗಳನ್ನು ಮುಕ್ತವಾಗಿ ಆಲಿಸುತ್ತೇವೆ. ರೈತರು ಪ್ರತಿಭಟನೆ ಹಿಂತೆಗೆದುಕೊಂಡರೆ ಒಳ್ಳೆಯದು” ಎಂದಿದ್ದಾರೆ.
ಸರ್ಕಾರವು ಕನಿಷ್ಠ ಬೆಂಬಲ ಬೆಲೆ ಮುಂದುವರೆಯುತ್ತದೆ ಎಂದು ಲಿಖಿತ ಭರವಸೆ ನೀಡಲು ಮುಂದಾಗಿದೆ. ಅಲ್ಲದೇ ಗುತ್ತಿಗೆ ಕೃಷಿ ಪದ್ದತಿಯಲ್ಲಿ ಉದ್ಭವಿಸುವ ಸಮಸ್ಯೆಗಳಿಗೆ ರೈತರು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಬಹುದು ಎಂದು ಕೇಂದ್ರ ಹೇಳಿದೆ. ಈ ಕಾಯ್ದೆಗಳ ಪ್ರಕಾರ ರೈತರು ರೈತರು ಸಮಸ್ಯೆಗಳನ್ನು ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಬಳಿ ಮಾತ್ರ ಬಗೆಹರಿಸಬೇಕಿತ್ತು.
ಆದರೆ ರೈತರು ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯದಿದ್ದರೆ ಹೋರಾಟ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಕೇವಲ ಎಂಎಸ್ಪಿ ನೀಡುವುದು ಸಮಸ್ಯೆಯನ್ನು ಬಗೆಹರಿಸುವುದಿಲ್ಲ, ಕಾನೂನುಗಳನ್ನು ಹಿಂತೆಗೆದುಕೊಳ್ಳಿ ಎಂದು ತಾಕೀತು ಮಾಡಿದ್ದಾರೆ.
ಇಂದಿನ ಸಭೆ ಕೇಂದ್ರ ಕೊನೆಯ ಅವಕಾಶ ಎಂದು ರೈತರು ಎಚ್ಚರಿಕೆ ನೀಡಿದ್ದರು. ಆದರೂ ಇಂದಿನ ಸಭೆ ತಾರ್ಕಿಕ ಅಂತ್ಯ ಕಾಣದ ಕಾರಣ ಶನಿವಾರ ನಡೆಯುವ ಸಭೆಗೆ ರೈತ ಮುಖಂಡರು ಭಾಗವಹಿಸುವರೋ ಅಥವಾ ಸಭೆ ಬಹಿಷ್ಕರಿಸಿ ಹೋರಾಟ ಮುಂದುವರೆಸುವರೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇಂದು 35 ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ನಡೆದ ಮಾತುಕತೆಯಲ್ಲಿ ಕೇಂದ್ರ ಸರ್ಕಾರದ ಪರವಾಗಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕ್ಯಾಬಿನೆಟ್ ಸಚಿವ ಪಿಯೂಶ್ ಗೋಯಲ್ ಮತ್ತು ಸೋಮ್ ಪ್ರಕಾಶ್ ಭಾಗವಹಿಸಿದ್ದರು.
ಮೂವರು ಕೇಂದ್ರ ಸಚಿವರೊಂದಿಗಿನ ರೈತ ಮುಖಂಡರ ಮಹತ್ವದ ಸಭೆಯಲ್ಲಿ ರೈತರು ಮತ್ತೊಮ್ಮೆ ಸ್ವಾಭಿಮಾನ ಮೆರೆದಿದ್ದಾರೆ. ಮಧ್ಯಾಹ್ನದ ಊಟದ ಬಿಡುವಿನಲ್ಲಿ ರೈತ ಮುಖಂಡರಿಗೆ ಸರ್ಕಾರದಿಂದ ಮಾಡಿದ ಊಟದ ವ್ಯವಸ್ಥೆಯನ್ನು ತಿರಸ್ಕರಿಸಿದ ರೈತರ ತಾವೇ ತಂದಿದ್ದ ಊಟವನ್ನು ನೆಲದಲ್ಲಿ ಕೂತು ಉಣ್ಣುವ ಮೂಲಕ ಸರ್ಕಾರದ ಹಂಗು ನಮಗೆ ಬೇಡ ಎಂಬ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ: ‘ನಮ್ಮ ಊಟ ನಾವೇ ತಂದಿದ್ದೇವೆ’: ಸರ್ಕಾರದ ಜೊತೆಗಿನ ಸಭೆಯಲ್ಲಿ ಊಟ ಮಾಡಲು ನಿರಾಕರಿಸಿದ ರೈತರು!