”ಬಿಜೆಪಿಯವರು ರಾಜ್ಯದ ಜನರಿಗೆ ಸುಳ್ಳು ಹೇಳುತ್ತಿರುವುದು ಗೊತ್ತಾಗಿದೆ. ಒಂದು ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆಯನ್ನು ನೀಡಿದರು, ಅವರು ಯಾವ ಆಧಾರದ ಮೇಲೆ ಹೇಳಿದರೋ ಗೊತ್ತಿಲ್ಲ” ಎಂದು ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ್ ಅವರು ಭಾನುವಾರ ಹೇಳಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಡಿಕೆ ಶಿವಕುಮಾರ್, ”BJP ಬಡಾಯಿ ಬ್ಯಾಂಕ್ ಬ್ಯಾಲೆನ್ಸ್ ನಲ್ಲಿ ಬರೀ ಸುಳ್ಳುಗಳೇ ತುಂಬಿವೆ. ಬೆಂಗಳೂರಲ್ಲಿ iPhone ತಯಾರಿಕಾ ಘಟಕ ಆರಂಭವಾಗಿ, 1 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಪುಂಗಿದ್ದ BJP, ರಾಜ್ಯದ ಮರ್ಯಾದೆಯನ್ನು ನಡುಬೀದಿಯಲ್ಲಿ ಹರಾಜು ಹಾಕಿದೆ. ಎಷ್ಟು ದಿನ ಅಂತಾ ಜನರ ಕಿವಿಗೆ ಹೂ ಇಡ್ತೀರಾ ಸಿಎಂ ಬಸವರಾಜ ಬೊಮ್ಮಾಯಿ ಅವರೇ? ಅಧಿಕಾರ ಹೋಗುವಾಗಲಾದರೂ ಸತ್ಯ ಹೇಳಬಾರದೇ?” ಎಂದು ಕೇಳಿದ್ದಾರೆ.
BJP ಬಡಾಯಿ ಬ್ಯಾಂಕ್ ಬ್ಯಾಲೆನ್ಸ್ ನಲ್ಲಿ ಬರೀ ಸುಳ್ಳುಗಳೇ ತುಂಬಿವೆ. ಬೆಂಗಳೂರಲ್ಲಿ iPhone ತಯಾರಿಕಾ ಘಟಕ ಆರಂಭವಾಗಿ 1 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಪುಂಗಿದ್ದ BJP ಮರ್ಯಾದೆ ನಡುಬೀದಿಯಲ್ಲಿ ಹರಾಜಾಗಿದೆ. ಎಷ್ಟು ದಿನ ಅಂತಾ ಜನರ ಕಿವಿಗೆ ಹೂ ಇಡ್ತೀರಾ @BSBommai ಅವರೇ?
ಅಧಿಕಾರ ಹೋಗುವಾಗಲಾದರೂ ಸತ್ಯ ಹೇಳಬಾರದೇ? pic.twitter.com/bn4BSgBFF5
— DK Shivakumar (@DKShivakumar) March 5, 2023
ರಾಜ್ಯದಲ್ಲಿ ಐಫೋನ್ ಉತ್ಪಾದನ ಘಟಕ ಆಗತ್ತದೆ, ಈ ಬಗ್ಗೆ ಫಾಕ್ಸ್ಕಾನ್ನೊಂದಿಗೆ ಒಪ್ಪಂದ ಆಗಿದೆ ಎಂದು ಸಿಎಂ ಹೇಳಿದ್ದರು. ಆ ಬಗ್ಗೆ ಫಾಕ್ಸ್ಕಾನ್ ಸ್ಪಷ್ಟನೆ ನೀಡಿದ್ದು, ನಾವು ಭಾರತದಲ್ಲಿ ಹೊಸ ಹೂಡಿಕೆಗೆ ಸಂಬಂಧಿಸಿದಂತೆ ”ಯಾವುದೇ ಖಚಿತ, ನಿರ್ಣಾಯಕ ಒಪ್ಪಂದಗಳನ್ನು ಮಾಡಿಕೊಂಡಿಲ್ಲ” ಎಂದು ಹೇಳಿದೆ. ಇದೀಗ ಬೊಮ್ಮಾಯಿ ಸುಳ್ಳು ಹೇಳಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ.
”ಬೆಂಗಳೂರಿನ ಐಫೋನ್ ಉತ್ಪಾದನಾ ಘಟಕ ತೆರೆಯಲಾಗುತ್ತದೆ ಎಂಬ ಸಿಎಂ ಹೇಳಿಕೆಯನ್ನು ಫಾಕ್ಸ್ಕಾನ್ ನಿರಾಕರಿಸಿದೆ. ಸುಳ್ಳೇ ಬಿಜೆಪಿಯ ಮನೆದೇವ್ರು ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಸ್ವತಃ ಸಿಎಂ ಸುಳ್ಳು ಹೇಳಿದ್ದು ನಾಚಿಕೆಗೇಡಿನ ಸಂಗತಿ. ಬಸವರಾಜ ಬೊಮ್ಮಾಯಿ ಅವರೇ, ತಾವು ಬಲು ಶಾಣ್ಯ ಇದಿರ್ರಿ.. ಬಾಳ್ ಚೆನ್ನಾಗಿ ಕಿವಿ ಮೇಲೆ ಹೂ ಇಡ್ತಿರ್ರಿ!!” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಭಾರತದಲ್ಲಿ ಯಾವುದೇ ಹೊಸ ಹೂಡಿಕೆ ಒಪ್ಪಂದವಾಗಿಲ್ಲ: ಬೊಮ್ಮಾಯಿ ಹೇಳಿಕೆ ತಳ್ಳಿಹಾಕಿದ ಫಾಕ್ಸ್ಕಾನ್
”ಫಾಕ್ಸ್ಕಾನ್ ಕಂಪೆನಿಯೊಂದಿಗೆ ಒಪ್ಪಂದಕ್ಕೆ ಸಹಿ ಮಾಡಲಾಯ್ತು ಎಂದಿರುವ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಹೇಳಿಕೆಯನ್ನು ಕಂಪೆನಿ ನಿರಾಕರಿಸಿದೆ. ◆ರಾಜ್ಯಕ್ಕೆ ಸುಳ್ಳು ಹೇಳಿದ್ದೇಕೆ? ◆ಸಿಎಂ ಹುದ್ದೆಯ ಜವಾಬ್ದಾರಿ ಮರೆತು ‘ಫೇಕ್ನ್ಯೂಸ್’ ಹರಿಬಿಟ್ಟಿದ್ದೇಕೆ? ◆ಉದ್ಯೋಗ ಬಯಸುತ್ತಿರುವ ಯುವಕರಿಗೆ ಕಿವಿ ಮೇಲೆ ಹೂ ಇಟ್ಟಿದ್ದೇಕೆ?” ಎಂದು ಪ್ರಶ್ನೆ ಮಾಡಿದೆ.
”ಒಪ್ಪಂದವೇ ಆಗದೆ ಐಫೋನ್ ತಯಾರಿಕಾ ಘಟಕ ಸ್ಥಾಪನೆ ಆಗಿಯೇ ಬಿಡುತ್ತದೆ ಎಂದು ಕಿವಿ ಮೇಲೆ ಹೂ ಇಡುವ ಮೂಲಕ ಸುಳ್ಳೇ ಬಿಜೆಪಿಯ ಮನೆದೇವ್ರು ಎಂಬುದಕ್ಕೆ ಬಸವರಾಜ ಬೊಮ್ಮಾಯಿ ಅವರು ಮತ್ತೊಂದು ಪುರಾವೆ ಒದಗಿಸಿದ್ದಾರೆ! ಸುಳ್ಳು ಹೇಳುವ ಮೂಲಕ ಸಿಎಂ ಹುದ್ದೆಯ ಘನತೆಯನ್ನು, ಕರ್ನಾಟಕದ ಮರ್ಯಾದೆಯನ್ನು ಜಾಗತಿಕ ಮಟ್ಟದಲ್ಲಿ ಹರಾಜು ಹಾಕಿದ್ದಾರೆ” ಎಂದು ಕಾಂಗ್ರೆಸ್ ಟೀಕಿಸಿದೆ.
ಆತುರಗಾರನಿಗೆ ಬುದ್ದಿ ಮಂದ ಎನ್ನುತ್ತಾರೆ, ಬಸವರಾಜ ಬೊಮ್ಮಾಯಿ ಅವರದ್ದೂ ಹಾಗೇನಾ? ಅಂತಿಮ ಒಪ್ಪಂದವಾಗದೆ ಐಫೋನ್ ಘಟಕ ಸ್ಥಾಪನೆ ಆಗಿಯೇಬಿಟ್ಟಿತು ಎಂದು ಆತುರದಲ್ಲಿ ಘೋಷಿಸಿದ್ದೇಕೆ? ಕರ್ನಾಟಕದಲ್ಲಿ ಹೂಡಿಕೆ ಮಾಡಲು ಹೂಡಿಕೆದಾರರು ಹಿಂಜರಿಯುತ್ತಿರುವುದೇಕೆ? ರಾಜ್ಯದ ಜನರ ಕಿವಿ ಮೇಲೆ ಹೂ ಇಟ್ಟಿದ್ದೇಕೆ? ಫಾಕ್ಸ್ಕಾನ್ ಸಂಸ್ಥೆ ನಿರಾಕರಿಸಿದ್ದೇಕೆ? ಎಂದು ಕಾಂಗ್ರೆಸ್ ಘಟಕ ಪ್ರಶ್ನಿಸಿ ಟ್ವೀಟ್ ಮಾಡಿದೆ.
ಒಟ್ಟಾರೆ ಇಲ್ಲಿ ಬಸವರಾಜ ಬೊಮ್ಮಾಯಿ ಅವರು ನಗೆಪಾಟಲಿಗೆ ಈಡಾಗಿರುವುದು ಸುಳ್ಳಲ್ಲ. ಏಕೆಂದರೆ ಐ ಫೋನ್ ಘಟಕ ಸ್ಥಾಪನೆಯ ಒಪ್ಪಂದವೇ ಆಗದೇ ಅದಕ್ಕಾಗಿ ದೊಡ್ಡಬಳ್ಳಾಪುರ ಮತ್ತು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 300 ಎಕರೆ ಭೂಮಿಯನ್ನು ಗುರುತಿಸಿದ್ದಾರೆ.
ಎಲೆಕ್ಟ್ರಾನಿಕ್ಸ್ ಉತ್ಪಾದನಾ ಯೋಜನೆಯು ಮುಂದಿನ 10 ವರ್ಷಗಳಲ್ಲಿ ರಾಜ್ಯದೊಳಗಿನ 1,00,000 ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಗಳಿಸುವ ನಿರೀಕ್ಷೆಯಿದೆ ಎಂದು ಸಿಎಂ ತಿಳಿಸಿದ್ದರು.
ಫಾಕ್ಸ್ಕಾನ್:- ಇದು ವಿಶ್ವದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ತಯಾರಕ ಕಂಪನಿಯಾಗಿದ್ದು, 2022 ರಲ್ಲಿ ಒಟ್ಟು ಆದಾಯವು ಹೊಸ ತೈವಾನ್ ಡಾಲರ್ 6 ಟ್ರಿಲಿಯನ್ ಅನ್ನು ಮೀರಿದೆ. ಕಳೆದ ವರ್ಷದಂತೆ, ಇದು ಫಾರ್ಚೂನ್ ಗ್ಲೋಬಲ್ 500ರಲ್ಲಿ 20 ನೇ ಸ್ಥಾನದಲ್ಲಿದೆ.
ಕಂಪನಿಯು ವಿಶ್ವದ 24 ದೇಶಗಳು ಅಥವಾ ಪ್ರದೇಶಗಳಲ್ಲಿ 173 ಕ್ಯಾಂಪಸ್ಗಳು ಮತ್ತು ಕಚೇರಿಗಳನ್ನು ಹೊಂದಿದೆ. ಕಂಪನಿಯ ಪ್ರಾಥಮಿಕ ಉತ್ಪನ್ನ ವಿಭಾಗಗಳಲ್ಲಿ ಸ್ಮಾರ್ಟ್ ಗ್ರಾಹಕ ಎಲೆಕ್ಟ್ರಾನಿಕ್ಸ್, ಉದಾಹರಣೆಗೆ ಸ್ಮಾರ್ಟ್ಫೋನ್ಗಳು, ಟಿವಿಗಳು, ಗೇಮ್ ಕನ್ಸೋಲ್ಗಳು, ಸರ್ವರ್ಗಳು ಮತ್ತು ಸಂವಹನ ನೆಟ್ವರ್ಕ್ ಅನ್ನು ಒಳಗೊಂಡಿರುವ ಕ್ಲೌಡ್ ಮತ್ತು ನೆಟ್ವರ್ಕಿಂಗ್ ಉತ್ಪನ್ನಗಳು ಸೇರಿವೆ; ಕಂಪ್ಯೂಟರ್, ಟ್ಯಾಬ್ಲೆಟ್ಗಳು ಮತ್ತು ಘಟಕಗಳಂತಹ ಕಂಪ್ಯೂಟಿಂಗ್ ಉತ್ಪನ್ನಗಳು ಮತ್ತು ಕನೆಕ್ಟರ್ಗಳು, ಯಾಂತ್ರಿಕ ಭಾಗಗಳು, ಸೇವೆಗಳು ಮುಂತಾದವುಗಳು(ಎಎನ್ಐ).