ಎಸ್ಸಿ, ಎಸ್ಟಿ, ಒಬಿಸಿ ಪಟ್ಟಿಗೆ ಸೇರದ, ಎಂಟು ಲಕ್ಷ ರೂ. ಆದಾಯ ಮಿತಿಯೊಳಗಿನ ಜಾತಿಗಳಿಗೆ ‘ಆರ್ಥಿಕವಾಗಿ ಹಿಂದುಳಿದ ವರ್ಗ’ದ (ಇಡಬ್ಲ್ಯೂಎಸ್) ಮೀಸಲಾತಿ ನೀಡಿರುವುದನ್ನು ಸ್ವಾಗತಿಸಿದ್ದ ಕಾಂಗ್ರೆಸ್, ಈಗ ತನ್ನ ನಿಲುವಿನ ಮರುಪರಿಶೀಲನೆಗೆ ಮುಂದಾಗಿದೆ.
ಇಡಬ್ಲ್ಯೂಎಸ್ ಮೀಸಲಾತಿಯನ್ನು 2019ರಲ್ಲಿ ಕೇಂದ್ರ ಸರ್ಕಾರ ಪರಿಚಯಿಸಿದಾಗ ಕಾಂಗ್ರೆಸ್ ಸ್ವಾಗತಿಸಿತ್ತು. ಅಲ್ಲದೆ ಇತ್ತೀಚೆಗೆ ಸುಪ್ರೀಂಕೋರ್ಟ್ ಇಡಬ್ಲ್ಯೂಎಸ್ ಪರ ತೀರ್ಪು ನೀಡಿದಾಗಲೂ ಕಾಂಗ್ರೆಸ್ ವರಿಷ್ಠರು ಸ್ವಾಗತಿಸಿದ್ದರು. ಆದರೆ ಕಾಂಗ್ರೆಸ್ ನಿಲುವಿಗೆ ಆಕ್ಷೇಪಗಳೂ ವ್ಯಕ್ತವಾಗಿದ್ದವು. ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಅಂತಹ ವ್ಯತ್ಯಾಸಗಳೇನೂ ಇಲ್ಲ ಎಂಬ ಟೀಕೆಗಳು ಬಂದಿದ್ದವು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇಡಬ್ಲ್ಯೂಎಸ್ ಮೀಸಲಾತಿಗಾಗಿ ಮಾಡಲಾದ ಸಂವಿಧಾನದ 103ನೇ ತಿದ್ದುಪಡಿಯು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ವಿಶ್ಲೇಷಣೆಗಳು ಬರುತ್ತಿವೆ. ಹಿಂದುಳಿದ ವರ್ಗದಲ್ಲಿನ ಸಮುದಾಯಗಳಿಗೆ ಜನಸಂಖ್ಯೆಗನುಗುಣವಾಗಿ ಮೀಸಲಾತಿಯನ್ನು ನೀಡಲಾಗಿಲ್ಲ. ಆದರೆ ಬೆರಳೆಣಿಕೆಯಷ್ಟು ಇರುವ ಮೇಲ್ಜಾತಿಗಳಿಗೆ ಶೇ. 10ರಷ್ಟು ಮೀಸಲಾತಿಯನ್ನು ನೀಡಿರುವುದು ಟೀಕೆಗೆ ಗುರಿಯಾಗಿದೆ.
ಇಡಬ್ಲ್ಯೂಎಸ್ ಮೀಸಲಾತಿಯು ಸಾಮಾಜಿಕ ನ್ಯಾಯದ ವಿರೋಧಿಯಷ್ಟೇ ಅಲ್ಲ, ಒಬಿಸಿ ವರ್ಗದ ವಿರೋಧಿಯೂ ಹೌದು ಎಂದು ರಾಜಕೀಯ ಚಿಂತಕರು ಹೇಳಲಾರಂಭಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ಕಾಂಗ್ರೆಸ್ ತನ್ನ ನಿಲುವನ್ನು ಮರುಪರಿಶೀಲನೆಗೆ ಒಳಪಡಿಸಲು ಮುಂದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕಾಂಗ್ರೆಸ್ ಮಿತ್ರಪಕ್ಷಗಳಾದ ಡಿಎಂಕೆ ಮತ್ತು ಆರ್ಜೆಡಿ ತೀರ್ಪನ್ನು ವಿರೋಧಿಸಿವೆ. ಅದರಂತೆಯೇ ಕಾಂಗ್ರೆಸ್ ಸಹ ತನ್ನ ನಿರ್ಧಾರ ಬದಲಿಸಲು ಚಿಂತಿಸಿದೆ.
ಡಿಎಂಕೆ ನೇತೃತ್ವದಲ್ಲಿ ಶನಿವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್ ಪಾಲ್ಗೊಂಡಿತ್ತು. “ಸಂವಿಧಾನ ಕಲ್ಪಿಸಿರುವ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ, ಸರ್ವೋಚ್ಚ ನ್ಯಾಯಾಲಯದ ವಿವಿಧ ತೀರ್ಪುಗಳ ವಿರುದ್ಧವಾದ ಮತ್ತು ಬಡವರಲ್ಲಿ ಜಾತಿ ತಾರತಮ್ಯವನ್ನು ಸೃಷ್ಟಿಸಿ ಪ್ರಗತಿ ಸಾಧಿಸಿರುವ ಜಾತಿಗಳಿಗೆ 10%ರಷ್ಟು ಮೀಸಲಾತಿ ನೀಡುವ 103ನೇ ಸಾಂವಿಧಾನಿಕ ತಿದ್ದುಪಡಿಯನ್ನು ನಾವು ತಿರಸ್ಕರಿಸುತ್ತೇವೆ” ಎಂದು ಸರ್ವಪಕ್ಷ ಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಗಿದೆ.
‘ಸಾಮಾಜಿಕ ನ್ಯಾಯದ ಕುರಿತ ಭಾರತದ ಸುದೀರ್ಘ ಹೋರಾಟಕ್ಕೆ ಈ ತೀರ್ಪಿನಿಂದ ಹಿನ್ನೆಡೆಯಾಗಲಿದೆ’ ಎಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಹೇಳಿದ್ದಾರೆ.
ಕಾಂಗ್ರೆಸ್, ಎಡಪಕ್ಷಗಳು, ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ, ವಿದುತಲೈ ಚಿರುತೈಗಲ್ ಕಚ್ಚಿ ಮತ್ತು ಎನ್ಡಿಎ ಬಣದಲ್ಲಿರುವ ಪಟ್ಟಾಲಿ ಮಕ್ಕಳ್ ಕಚ್ಚಿ ಪಕ್ಷಗಳು ಸಭೆಯಲ್ಲಿ ಪಾಲ್ಗೊಂಡಿದ್ದವು.
ಇದನ್ನೂ ಓದಿರಿ: ಇಡಬ್ಲ್ಯೂಎಸ್ ಮೀಸಲಾತಿ ವಿರುದ್ಧ ತಮಿಳುನಾಡು ಪಕ್ಷಗಳಿಂದ ನಿರ್ಣಯ ಅಂಗೀಕಾರ
ತಮಿಳುನಾಡು, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಈ ತೀರ್ಪಿನ ಕುರಿತು ವಿರೋಧ ವ್ಯಕ್ತವಾಗುತ್ತಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ತನ್ನ ನಿಲುವಿನ ಮರುಪರಿಶೀಲನೆಗೆ ಮುಂದಾಗಿದೆ.
ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ನಾಯಕರು, ಈ ತೀರ್ಪಿನಿಂದಾಗುವ ‘ಸಾಮಾಜಿಕ ಮತ್ತು ರಾಜಕೀಯ ಪರಿಣಾಮ’ದ ಕುರಿತು ಅಧ್ಯಯನ ನಡೆಸುತ್ತಿದ್ದಾರೆ. ಜೊತೆಗೆ, ತೀರ್ಪಿನ ಕಾನೂನು ಆಯಾಮದ ಕುರಿತು ಪಿ. ಚಿದಂಬಂರಂ ಮತ್ತು ಅಭಿಷೇಕ್ ಮನು ಸಿಂಘ್ವಿ ಅಧ್ಯಯನ ನಡೆಸುತ್ತಿದ್ದಾರೆ ಎಂದು ಶನಿವಾರ ಪಕ್ಷದ ಮೂಲಗಳು ತಿಳಿಸಿವೆ.
‘ರಾಜಕೀಯ ಪರಿಣಾಮವನ್ನು ಗಮನಿಸದೆಯೇ ಪಕ್ಷವು ಆತುರಾತುರವಾಗಿ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿತು’ ಎಂದು ಪಕ್ಷದ ಮುಖಂಡರೊಬ್ಬರು ಅಭಿಪ್ರಾಯಪಟ್ಟಿರುವುದಾಗಿ ವರದಿಯಾಗಿದೆ.
ರಾಜ್ಯ ಸರ್ಕಾರಗಳು ಭಾರತದಲ್ಲಿರುವ ಜಾತಿ ಜನಸಂಖ್ಯೆಗೆ ಅನುಗುಣವಾಗಿ ಈಗಿರುವ 60% ಪ್ರತಿಶತ ಮಿಸಲಾತಿಯನ್ನು ರದ್ದು ಮಾಡಿ 100% ರಷ್ಟು ಮಿಸಲಾತಿಯನ್ನು ಎಕಕಾಲಕ್ಕೆ ಹಂಚಿಕೆ ಮಾಡಿ ಬಿಡಲಿ. ಪ್ರತಿಯೊಂದು ಜಾತಿಯವರಿಗೂ ಪ್ರಾತಿನಿಧ್ಯ ದೊರೆಯಲಿ.