Homeನ್ಯಾಯ ಪಥವ್ಯಾಯಾಮ, ಹೃದಯಾಘಾತ ಮತ್ತು ’ವೈಜ್ಞಾನಿಕ' ಗಾಸಿಪ್‌ಗಳು: ಡಾ.ಎಚ್.ವಿ ವಾಸು

ವ್ಯಾಯಾಮ, ಹೃದಯಾಘಾತ ಮತ್ತು ’ವೈಜ್ಞಾನಿಕ’ ಗಾಸಿಪ್‌ಗಳು: ಡಾ.ಎಚ್.ವಿ ವಾಸು

ಪುನೀತ್ ವಿಚಾರದಲ್ಲಿ ನಿರ್ದಿಷ್ಟವಾಗಿ ಇಂತಹುದೇ ಕಾರಣಕ್ಕೆ ಸಾವು ಸಂಭವಿಸಿರಬಹುದು ಎಂದು ಅತಿಯಾದ ಊಹೆ ಮಾಡುವುದು, ಆತಂಕಕ್ಕೊಳಗಾಗುವುದು, ವೈಜ್ಞಾನಿಕವಲ್ಲದ ಸಂಗತಿಗಳನ್ನು ಇನ್ನಷ್ಟು ದಾಟಿಸುವುದನ್ನಂತೂ ಮಾಡಲೇಬೇಡಿ.

- Advertisement -
- Advertisement -

ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಪ್ರತಿ ಶನಿವಾರ ಬೆಳಿಗ್ಗೆ 9ಕ್ಕೆ ಮಾರ್ಟಾಲಿಟಿ ಮೀಟಿಂಗ್ ಅಂತ ನಡೆಯುತ್ತದೆ (ನಾನು ಅಲ್ಲಿ ಕೆಲಸ ಮಾಡುವಾಗ ನಡೆಯುತ್ತಿತ್ತು; ಈಗಲೂ ನಡೆಯುತ್ತಿರುತ್ತದೆ ಎಂಬ ಬಗ್ಗೆ ಸಂದೇಹವಿಲ್ಲ). ಆ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಅಥವಾ ವಾರ್ಡುಗಳಲ್ಲಿ ಅಡ್ಮಿಟ್ ಆದ ರೋಗಿಗಳಲ್ಲಿ ಆ ವಾರ ಸತ್ತಿರುವ ರೋಗಿಗಳಿಗೆ ಸಂಬಂಧಿಸಿದ ಸೀನಿಯರ್ ರೆಸಿಡೆಂಟ್ ವಿವರಗಳನ್ನು ನೀಡಬೇಕು. ರೋಗಿ ಆಸ್ಪತ್ರೆಗೆ ಬಂದಾಗಿನಿಂದ ಸಾವು ಸಂಭವಿಸುವವರೆಗೆ ಏನೇನಾಯಿತು? ಪ್ರತಿ ಹಂತದಲ್ಲೂ ತನ್ನ ಕಡೆಯಿಂದ ಮಾಡಬೇಕಾದ್ದೆಲ್ಲವನ್ನೂ ಮಾಡಲಾಯಿತೇ? ಅಂತಿಮವಾಗಿ ಈ ಸಾವಿಗೆ ಕಾರಣವೇನು? ಇವಿಷ್ಟಕ್ಕೆ ಪುರಾವೆಗಳ ಸಮೇತ ಅವರು ಮಂಡನೆ ಮಾಡುತ್ತಾರೆ. ಆಗ ಆ ಸೀನಿಯರ್ ರೆಸಿಡೆಂಟ್ (ಅಂದರೆ ಸ್ನಾತಕೋತ್ತರ ಪದವಿ ಮಾಡುತ್ತಿರುವವರಲ್ಲಿ 3ನೇ ವರ್ಷದ ನಂತರದವರು) ಮಾತುಗಳನ್ನು ಕೇಳಿದ ತಜ್ಞ ವೈದ್ಯರು ಪ್ರಶ್ನೆಗಳನ್ನು ಕೇಳುತ್ತಾರೆ. ಕೆಲವರು ಸೀದಾ ಎದ್ದು ಹೋಗಿ ಅಲ್ಲಿನ ಪುರಾವೆಗಳನ್ನು (ಅಂದರೆ ಸ್ಕ್ಯಾನಿಂಗ್ ಫಿಲ್ಮ್ ಇತ್ಯಾದಿ) ಪರಿಶೀಲಿಸುತ್ತಾರೆ. ತಪ್ಪು ಮಾಡಿದ್ದರೆ ಸೀನಿಯರ್ ರೆಸಿಡೆಂಟ್ ಹೃದಯ ಬಾಯಿಗೆ ಬರಬೇಕು, ಹಾಗಾಗುತ್ತದೆ. ಹಾಗೆಂದು ಈ ತಜ್ಞ ವೈದ್ಯರು ಸದರಿ ಸ್ನಾತಕೋತ್ತರ ವಿದ್ಯಾರ್ಥಿ ವೈದ್ಯರನ್ನು ದೂರುವುದಿಲ್ಲ. ಒಂದು ಸಂಸ್ಥೆಯಾಗಿ ನಾವು ಮಾಡಬೇಕಾದ್ದೆಲ್ಲವನ್ನೂ ಮಾಡಿದೆವಾ? ಕಲಿಯಬೇಕಾದ್ದನ್ನು ಕಲಿತೆವಾ? ಇನ್ನೂ ಅರ್ಥ ಮಾಡಿಕೊಳ್ಳಬೇಕಾದ್ದು ಏನಿದೆ? ಎಂಬುದನ್ನು ಪರಿಶೀಲಿಸುವ ಸಭೆ ಅದು.

ಅಂತಿಮವಾಗಿ ಪೋಸ್ಟ್ ಮಾರ್ಟಂ ವರದಿ (ತಕ್ಷಣದ ಒಂದು ವರದಿಯಷ್ಟೇ ಲಭ್ಯವಾಗಿರುತ್ತದೆ; ಅಂತಿಮ ವರದಿ ತಡವಾಗಿ ಬರುತ್ತದೆ) ಏನು ಹೇಳಿತು ಎಂಬುದನ್ನೂ ಅಲ್ಲಿ ಕೇಳಲಾಗುತ್ತದೆ. ಅದನ್ನೂ ಸ್ನಾತಕೋತ್ತರ ವಿದ್ಯಾರ್ಥಿ ವೈದ್ಯ ಹೇಳುತ್ತಾರೆ. ಒಂದು ವೇಳೆ ಪೋಸ್ಟ್ ಮಾರ್ಟಂ ಆಗಿಲ್ಲ ಎಂದರೆ, ಏಕೆ ಆಗಲಿಲ್ಲ ಎಂಬುದನ್ನೂ ಆ ಕೋಣೆಯಲ್ಲಿ ಸೇರಿರುವ ಹಿರಿಯ/ಕಿರಿಯ ವೈದ್ಯರಿಗೆ ಮನವರಿಕೆ ಮಾಡಿಕೊಡುವುದೂ ಆತನ ಜವಾಬ್ದಾರಿಯಾಗಿರುತ್ತದೆ. ನಮಗೆಲ್ಲರಿಗೂ ಗೊತ್ತಿರುವ ಹಾಗೆ ರೋಗಿ ಸತ್ತ ನಂತರ ಪೋಸ್ಟ್ ಮಾರ್ಟಂ ಮಾಡಿಸುವುದು ನಮ್ಮ ದೇಶದಲ್ಲಿ ಬಹುತೇಕರಿಗೆ ಒಪ್ಪಿಗೆ ಇರದ ಸಂಗತಿ. ಹೀಗಿರುವಾಗ ಅವರನ್ನು ಒಪ್ಪಿಸುವುದು ಹರಸಾಹಸವೇ ಸರಿ.

ಆದರೆ, ನಮ್ಮ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದ, ನಂತರ ನಿಮ್ಹಾನ್ಸ್‌ನ ನಿರ್ದೇಶಕರಾದ ಡಾ.ಸತೀಶ್ ಚಂದ್ರ ರೋಗಿಗಳ ಕಡೆಯವರನ್ನು ಒಪ್ಪಿಸುತ್ತಿದ್ದ ರೀತಿಯೇ ವಿಶಿಷ್ಟ ಬಗೆಯದ್ದಾಗಿತ್ತು. ’ಬನ್ನೀಮ್ಮಾ.. ನಿಮ್ಮ ಮಗುವಿನ ಸಾವಿನ ಸುದ್ದಿ ಕೇಳಿದೆ. ಬಹಳ ನೋವಾಯಿತು. ಈ 8 ವರ್ಷದ ಮಗುವನ್ನು ಉಳಿಸಿಕೊಳ್ಳುವುದು ನಮ್ಮ ಕೈಲಿ ಆಗಲಿಲ್ಲ. ನಿಮ್ಮ ಮಗುವಿನ ವಿಚಾರದಲ್ಲಿ ಏನು ಸಮಸ್ಯೆ ಆಯಿತು ಎಂಬ ಬಗ್ಗೆ ನಮಗೆ ಕೆಲವು ವಿಚಾರ ಗೊತ್ತಾಯಿತು. ಕೆಲವು ಗೊತ್ತಾಗಲಿಲ್ಲ. ಕೆಲವು ಹೇಗೆ ತಿಳಿಯಿತೆಂದರೆ ಪ್ರಪಂಚದಲ್ಲಿ ಇಂತಹ ಎಷ್ಟೋ ಸಾವುಗಳು ಸಂಭವಿಸಿದಾಗ ಡಾಕ್ಟರುಗಳು ಅದರಿಂದ ಕಲಿತುಕೊಂಡಿದ್ದಾರೆ. ಆದರೆ ನಮಗೆ ಗೊತ್ತಿರದ ಹಲವಾರು ಸಂಗತಿಗಳಿವೆ. ಆದ್ದರಿಂದ ಇನ್ನೂ ಎಷ್ಟೋ ವಿಚಾರ ತಿಳಿದುಕೊಳ್ಳಲಾಗದೇ ನಿಮ್ಮ ಮಗುವಿನ ರೀತಿ ಸಾವುಗಳು ಆಗುತ್ತಿವೆ. ಈಗ ನಿಮ್ಮ ಮಗು ತೀರಿಕೊಂಡಿದೆ. ನಾವು ಈಗ ಒಂದು ಸ್ವಲ್ಪ ಪರೀಕ್ಷೆ ಮಾಡಲು ನಿಮ್ಮ ಮಗುವಿನ ಶರೀರದಿಂದ – ಹೊರಗೆ ಗೊತ್ತಾಗದೇ – ಸ್ವಲ್ಪ ಭಾಗ ತೆಗೆದು ಪರೀಕ್ಷೆಗೆ ಕಳಿಸಿದರೆ, ಮುಂದೆ ಇಂತಹ ಎಷ್ಟೋ ಮಕ್ಕಳನ್ನು ಉಳಿಸುವುದು ಸಾಧ್ಯವಾಗಬಹುದು. ಹಾಗಾಗಿ ಇದಕ್ಕೆ ಅನುಮತಿ ಕೊಡಬೇಕು.’ ಇಷ್ಟು ಹೇಳುವಷ್ಟರಲ್ಲಿ ಆ ತಂದೆ-ತಾಯಿ ಆಯ್ತು ಸಾರ್ ಎಂದುಬಿಡುತ್ತಿದ್ದರು.

ಹೌದು, ನಮಗೆಲ್ಲರಿಗೂ ದುಃಖ, ವಿಷಾದ ತಂದಿರುವ ಪುನೀತ್ ರಾಜ್‌ಕುಮಾರ್ ಸಾವಿನ ಹಿನ್ನೆಲೆಯಲ್ಲೇ ಇದನ್ನೆಲ್ಲಾ ಹೇಳುತ್ತಿದ್ದೇನೆ. ವಿಕ್ರಂ ಆಸ್ಪತ್ರೆಗೆ ಹೋಗುವಾಗಲೇ ಮರಣಿಸಿದ್ದ ಪುನೀತ್, ಅದಕ್ಕೆ ಮುಂಚೆ ಅವರ ಕುಟುಂಬದ ವೈದ್ಯರಾದ ಡಾ.ರಮಣರಾವ್‌ರ ಕ್ಲಿನಿಕ್‌ಗೆ ಹೋಗಿದ್ದರು. ಅಲ್ಲಿ ತೆಗೆದಿದ್ದ ಇಸಿಜಿಯು ಹೃದಯಕ್ಕೆ ತೊಂದರೆಯಾಗುತ್ತಿದೆ ಎಂದು ಕಾಣಿಸಿದ್ದರಿಂದ ಅವರು ಕೂಡಲೇ ವಿಕ್ರಂ ಆಸ್ಪತ್ರೆಗೆ ಹೋಗಲು ಸೂಚಿಸಿದ್ದರು. ವಿಕ್ರಂ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಅವರು ಜೀವಂತವಾಗಿರಲಿಲ್ಲ. ಆದರೂ ಪುನಶ್ಚೇತನಗೊಳಿಸುವ ಪ್ರಯತ್ನಗಳನ್ನು ಮಾಡಿದ ವೈದ್ಯರು ಸಫಲವಾಗುವುದು ಸಾಧ್ಯವಾಗಲಿಲ್ಲ. ಲಭ್ಯವಿರುವ ಪುರಾವೆಗಳಷ್ಟರಿಂದ ಇದು ಬಹುತೇಕ ಹೃದಯದ ತೊಂದರೆಯಿಂದ ಎಂದು ಹೇಳಬಹುದಾದರೂ, ನೂರಕ್ಕೆ ನೂರು ಖಚಿತವಾಗಿ ಹೇಳಲು ಕಷ್ಟ. ಎರಡನೆಯದಾಗಿ ನೂರಕ್ಕೆ 99ರಷ್ಟು ಹೃದಯಾಘಾತವೆಂದೇ ಇಟ್ಟುಕೊಂಡರೂ, ಈ ಹೃದಯಾಘಾತಕ್ಕೆ ಕಾರಣವಾದ ಅಂಶವೇನು? ಅದಕ್ಕೆ ಕಾರಣವಾದ ಜೀವನಶೈಲಿಯ ಅಥವಾ ಜೆನೆಟಿಕ್ ಸಮಸ್ಯೆ ಏನು ಎಂಬುದನ್ನು ಹೇಳುವುದಂತೂ ಅಸಾಧ್ಯ. ಪೋಸ್ಟ್ ಮಾರ್ಟಂ ಆಗಿದ್ದರೂ ಎಲ್ಲವನ್ನೂ ಹೇಳಲು ಅಸಾಧ್ಯವಾದರೂ, ಸ್ವಲ್ಪ ಮಾಹಿತಿ ಗೊತ್ತಾಗಬಹುದಿತ್ತು.

ಪುನೀತ್ ವಿಚಾರದಲ್ಲಿ ಮರಣೋತ್ತರ ಪರೀಕ್ಷೆ ಆಗಲೇಬೇಕಿತ್ತು ಎಂದು ಹೇಳುವುದು ನನ್ನ ಉದ್ದೇಶವಲ್ಲ. ಆದರೆ ಇಂತಹ ಸಂದರ್ಭದಲ್ಲಿ ಅಳವಡಿಸಬೇಕಾದ ವೈಜ್ಞಾನಿಕ ವಿಧಾನ ಏನು ಎಂಬುದನ್ನಷ್ಟೇ ಸೂಚಿಸುತ್ತಿದ್ದೇನೆ. ಅದನ್ನು ಬಿಟ್ಟು ಸುಖಾಸುಮ್ಮನೆ ಇಲ್ಲದ ಗಾಸಿಪ್‌ಗಳು, ನೂರೆಂಟು ಬಗೆಯ ಅಸಲಿ ಹಾಗೂ ನಕಲಿ ವಾಟ್ಸಾಪ್ ಮೆಸೇಜ್‌ಗಳನ್ನು ಹರಿಯಬಿಡುವುದು ಒಳ್ಳೆಯದೇನನ್ನೂ ಮಾಡುವುದಿಲ್ಲ. ಇಂತಹ (ಅ)ವೈಜ್ಞಾನಿಕ ಗಾಸಿಪ್‌ಗಳಿಂದ ಪುನೀತ್‌ರ ವಯಸ್ಸಿನ ಅಥವಾ ಇನ್ನೂ ಕಡಿಮೆ ವಯಸ್ಸಿನ ಎಷ್ಟೋ ಜನರು ಭಯಕ್ಕೆ ಗುರಿಯಾಗಿದ್ದಾರೆ. ಮೂರ್‍ನಾಲ್ಕು ದಿನಗಳಿಂದ ಹೃದಯ ಪರೀಕ್ಷೆ, ರಕ್ತ ಪರೀಕ್ಷೆ ಮಾಡಿಸಿರುವವರ ಸಂಖ್ಯೆ ಹೆಚ್ಚಾಗಿದೆ. ಜಯದೇವ ಆಸ್ಪತ್ರೆಗೆ ಕಳೆದೆರಡು ದಿನಗಳಿಂದ ಶೇ.20ರಷ್ಟು ಹೆಚ್ಚು ಸಂಖ್ಯೆಯಲ್ಲಿ ತಪಾಸಣೆಗೆಂದು ಹೋಗಿದ್ದಾರೆ. ಅಲ್ಲಿ ಅಕ್ಟೋಬರ್ 31ರಂದು ಒಂದೇ ದಿನ 1,500ಕ್ಕೂ ಹೆಚ್ಚು ಜನರು ಪರೀಕ್ಷೆ ಮಾಡಿಸಿಕೊಂಡಿದ್ದಾರೆ.

ಇದಕ್ಕೆ ಒಂದು ಮುಖ್ಯ ಕಾರಣ, ಮೇಲ್ನೋಟಕ್ಕೆ ಅತ್ಯಂತ ಫಿಟ್ ಆಗಿದ್ದ, ಕೇವಲ 45 ವರ್ಷ ವಯಸ್ಸಿನ ಸೆಲೆಬ್ರಿಟಿಯೊಬ್ಬರು ಈ ರೀತಿ ದಿಢೀರ್ ಸಾವಿಗೆ ಗುರಿಯಾಗಿರುವುದು. ಎರಡನೆಯದಾಗಿ, ಪುನೀತ್ ಜಿಮ್‌ಗೆ ಹೋಗಿದ್ದವರು ಅಲ್ಲಿಯೇ ಸುಸ್ತಾಗಿ ವೈದ್ಯರ ಕ್ಲಿನಿಕ್‌ಗೆ ಹೋದವರು, ಆಸ್ಪತ್ರೆಗೆ ಹೋಗುವತನಕ ಉಳಿಯಲಿಲ್ಲ. ಹೀಗಾಗಿ ’ಜಿಮ್ ಮಾಡುವುದು ಒಳ್ಳೆಯದೇ ಇಲ್ಲವೇ? ಅತಿಯಾದ ಜಿಮ್‌ನಿಂದಲೇ ಹೀಗಾಯಿತೇ? 45 ವರ್ಷಕ್ಕೇ ಹೀಗಾಗುವುದಾದರೆ ಏನು ಕಥೆ? ಅತಿಯಾಗಿ ಜಿಮ್ ಮಾಡುವುದು ಮಾತ್ರವಲ್ಲದೇ, ಅತಿಯಾಗಿ ತಿನ್ನುತ್ತಿದ್ದರಂತೆ, ಅದಕ್ಕೇ ಹೀಗಾಯಿತಂತೆ. ವೈದ್ಯರು ರಕ್ತ ಹೆಪ್ಪುಗಟ್ಟದಂತೆ ಆಗಲೇ ಮಾತ್ರೆ ಕೊಟ್ಟುಬಿಟ್ಟಿದ್ದರೆ ಉಳಿಯುವ ಸಾಧ್ಯತೆ ಇತ್ತು.’ ಇತ್ಯಾದಿ ಇತ್ಯಾದಿ ಮಾತುಗಳು ಎಲ್ಲೆಡೆ ಚರ್ಚೆಯಲ್ಲಿವೆ.

ಮೇಲೆ ಹೇಳಿದಂತೆ ಈ ನಿರ್ದಿಷ್ಟ ಪ್ರಕರಣದಲ್ಲಿ ಏನಾಗಿತ್ತು, ಏನಾಗಬಹುದಿತ್ತು ಎಂಬುದನ್ನು ನೂರಕ್ಕೆ ನೂರು ಖಚಿತವಾಗಿ ಹೇಳುವುದು ಸಾಧ್ಯವಿಲ್ಲ. ಪ್ರತಿಯೊಂದು ಪ್ರಕರಣವನ್ನೂ ವೈಜ್ಞಾನಿಕ ಸಂಶೋಧನೆಗೆ ಒಳಪಡಿಸಲು ಅನುವು ಮಾಡಿಕೊಟ್ಟರೆ ಮಾತ್ರ ಈಗ ಹೇಳಬಹುದಾದಕ್ಕಿಂತ ಸ್ವಲ್ಪ ಹೆಚ್ಚಿನ ಮಾಹಿತಿ ದೊರೆಯಲು ಸಾಧ್ಯ. ಅಂತಹ ಸಂಶೋಧನೆಗಳು ಹೆಚ್ಚೆಚ್ಚು ಆದಂತೆ ಮುಂದಿನ ದಿನಗಳಲ್ಲಿ ಇನ್ನಷ್ಟು ಇಂತಹ ಸಾವುಗಳು ಆಗದಂತೆ ತಡೆಯುವ ಸಾಧ್ಯತೆ ಹೆಚ್ಚಾಗಬಹುದು.

ದೈಹಿಕ ಚಟುವಟಿಕೆ ಕಡಿಮೆಯಿರುವುದು ಮತ್ತು ವ್ಯಾಯಾಮದ ಕೊರತೆ ಸ್ಥೂಲಕಾಯಕ್ಕೂ ದಾರಿ ಮಾಡಿಕೊಟ್ಟು, ಸಾವು ಅಥವಾ ಇತರ ಸಂಕಷ್ಟಗಳಿಗೆ ದಾರಿ ಮಾಡಿಕೊಡುತ್ತದೆ. ಅದರಲ್ಲೂ ಹೃದ್ರೋಗದ ಹೆಚ್ಚಳಕ್ಕೂ ಕಾರಣವಾಗುತ್ತದೆ. ಈ ಕುರಿತು ಸಾವಿರಾರು ಸಂಶೋಧನೆಗಳು ನಡೆದಿವೆ ಮತ್ತು ಅವನ್ನು ದೃಢಪಡಿಸಿವೆ. ಹಾಗಾಗಿ ದೈಹಿಕವಾಗಿ ಚಟುವಟಿಕೆಯಿಂದಿರುವುದು ಮತ್ತು ವ್ಯಾಯಾಮ ಮಾಡುವುದು ಒಳ್ಳೆಯದು. ಪುನೀತ್ ಸಾವಿನ ಕಾರಣವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸದೇ ವ್ಯಾಯಾಮ ಮಾಡುವುದೇ ತಪ್ಪು ಎಂಬ ನಿರ್ಧಾರಕ್ಕೆ ಬರುವುದು ತಪ್ಪು ಮತ್ತು ಅವೈಜ್ಞಾನಿಕವಾದುದು.

ಆದರೆ, ಅತಿಯಾದ ವ್ಯಾಯಾಮದಿಂದ ಸಾವು ಸಂಭವಿಸುತ್ತದೆಯೇ? ಈ ಕುರಿತು ವಿಜ್ಞಾನ ಏನು ಹೇಳುತ್ತದೆ? ವ್ಯಾಯಾಮ ಒಳ್ಳೆಯದು. ಅತಿಯಾದ ವ್ಯಾಯಾಮದಿಂದ ಅತಿಯಾಗಿ ಒಳ್ಳೆಯದಾಗುತ್ತದೆ ಎಂದು ಕೆಲವರು ಭಾವಿಸುತ್ತಾರೆ. ಅದು ನಿಜವಲ್ಲ. ಹೌದು ಅತಿಯಾದ ವ್ಯಾಯಾಮವೂ ಒಳ್ಳೆಯದಲ್ಲ. ಅದರಲ್ಲೂ ಮಿತಿಮೀರಿ ವ್ಯಾಯಾಮ ಮಾಡುವವರು ದೀರ್ಘ ಕಾಲ ಬದುಕುತ್ತಾರೆ ಎಂಬುದಕ್ಕೆ ಯಾವ ಆಧಾರವೂ ಇಲ್ಲ. ಬದಲಿಗೆ, ಅಂತಹವರ ಆಯಸ್ಸು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಸಂಶೋಧನೆಗಳು ಹೇಳುತ್ತವೆ. ಅಂತಹವರಲ್ಲಿ ದೀರ್ಘಕಾಲಿಕ ಹೃದಯದ ಸಮಸ್ಯೆಗಳು (increased risks of atrial fibrillation) ಹೆಚ್ಚಾಗುತ್ತವೆ ಎಂಬುದಕ್ಕೆ ಪುರಾವೆಗಳಿವೆ.

ಇಲ್ಲಿ ಪ್ರಶ್ನೆಯಿರುವುದು, ದೀರ್ಘಕಾಲಿಕ ಹೃದಯದ ಸಮಸ್ಯೆಗಳು ಹೆಚ್ಚಾಗುತ್ತದಾ ಎಂಬುದಕ್ಕಿಂತ ಹೆಚ್ಚಾಗಿ ಇದ್ದಕ್ಕಿದ್ದಂತೆ ದಿಢೀರ್ ಸಾವು ಸಂಭವಿಸುತ್ತದಾ ಎಂದು. ಹೌದು, ಅಂತಹ ಸಾಧ್ಯತೆಗಳೂ ಇವೆ. ಅವರವರ ದೇಹಕ್ಕೆ ಅಭ್ಯಾಸವಿಲ್ಲದ ಪ್ರಮಾಣಕ್ಕೆ, ನಿಯಮಿತವಾಗಿ ಅಷ್ಟು ವ್ಯಾಯಾಮ ಮಾಡದವರು ಹೆಚ್ಚು ಮಾಡಿದರೆ ತಕ್ಷಣದಲ್ಲಿ ದೊಡ್ಡ ಪ್ರಮಾಣದ ಹೃದಯಾಘಾತ ಆಗುವ ಸಾಧ್ಯತೆ ಉಳಿದವರಿಗಿಂತ ಹೆಚ್ಚು. ಅಭ್ಯಾಸವಿದ್ದರೂ ಒಮ್ಮೊಮ್ಮೆ ವಿಪರೀತ ಓಡಿದವರಲ್ಲೂ ಹೃದಯಾಘಾತವಾಗುವ ಸಾಧ್ಯತೆಗಳಿವೆ. ಆದರೆ 100 ಮೀ, 800 ಮೀ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡವರಲ್ಲಿ ಈ ಅಪಾಯ ಕಾಣುವುದಕ್ಕಿಂತ ಮ್ಯಾರಥಾನ್, ಟ್ರಯತ್ಲಾನ್‌ಗಳಲ್ಲಿ ಇಂತಹ ಸಾಧ್ಯತೆ ಹೆಚ್ಚೆಂದು ಅಧ್ಯಯನ ವರದಿಗಳು (https://www.ncbi.nlm.nih.gov/pmc/articles/PMC7431070/) ಹೇಳುತ್ತವೆ.

ಹೆಚ್ಚೆಂದರೆ ಎಷ್ಟು ವ್ಯಾಯಾಮ? ಆರೋಗ್ಯವಂತ ವ್ಯಕ್ತಿಗಳು ಎಷ್ಟು ವ್ಯಾಯಾಮ ಮಾಡಬೇಕು? ವಾರಕ್ಕೆ ಎರಡೂವರೆಯಿಂದ ನಾಲ್ಕೂವರೆ ಗಂಟೆ. ಗಮನಿಸಿ: ನಿಯಮಿತವಾಗಿ ಇಷ್ಟು ವ್ಯಾಯಾಮ ಮಾಡುವವರಿಗೆ ಹಲವಾರು ಅನುಕೂಲಗಳು ಇವೆ. ಆದರೆ ವಾರಕ್ಕೆ ಹತ್ತು ಗಂಟೆಗಿಂತ ಹೆಚ್ಚು ವ್ಯಾಯಾಮ ಮಾಡಲು ಹೊರಟರೆ ಆರೋಗ್ಯ ಲಾಭ ಕಡಿಮೆಯಾಗುತ್ತಾ ಹೋಗುತ್ತದೆ. ಇದನ್ನೇ ಉಲ್ಟಾ ಜೆ ತಿರುವು ಎಂತಲೂ ಹೇಳುತ್ತಾರೆ.

ಇಷ್ಟು ಹೇಳಿದ ಮೇಲೆ ಒಂದು ಸಂಗತಿಯನ್ನು ತಪ್ಪದೇ ಹೇಳುವ ಅಗತ್ಯವಂತೂ ಇದ್ದೇ ಇದೆ. ಸಕ್ಕರೆ ಹಾಗೂ ಶರ್ಕರಪಿಷ್ಟ (ಕಾರ್ಬೋಹೈಡ್ರೇಟ್) ಭರಿತ ಆಹಾರ ಎಷ್ಟು ಕಡಿಮೆ ತಿಂದರೆ ಅಷ್ಟು ಒಳ್ಳೆಯದು. ತರಕಾರಿ, ಕಾಳುಗಳು, ಮೀನು, ಮೊಟ್ಟೆ, ಮಾಂಸ ನಮ್ಮ ಆಹಾರದಲ್ಲಿ ಹೆಚ್ಚಿರಬೇಕು. ದಿನಕ್ಕೆ 7ರಿಂದ 8 ಗಂಟೆ ನಿದ್ದೆ ಮಾಡಿ, ಒತ್ತಡ ಕಡಿಮೆ ಮಾಡಿಕೊಳ್ಳಿ. ವಾರಕ್ಕೆ 150 ನಿಮಿಷಗಳಿಂದ 250 ನಿಮಿಷಗಳಷ್ಟು ವ್ಯಾಯಾಮ ಮಾಡಿ. ತೂಕ ಇಳಿಸುವುದು, ಡಯಾಬಿಟಿಸ್ ನಿಯಂತ್ರಿಸಿ ಮಾತ್ರೆ ನಿಲ್ಲಿಸುವ ಪ್ರಯತ್ನದಲ್ಲಿದ್ದರೆ ಸ್ವಲ್ಪ ಹೆಚ್ಚು ವ್ಯಾಯಾಮವೂ ಅಗತ್ಯ ಬೀಳಬಹುದು. ಆದರೆ ಯಾವ ಕಾರಣಕ್ಕೂ (ಅಭ್ಯಾಸವಿಲ್ಲದಿದ್ದರೆ) ದಿನಕ್ಕೆ 2 ಗಂಟೆ ವ್ಯಾಯಾಮ ಮಾಡಲು ಹೋಗಬೇಡಿ.

ಪುನೀತ್ ವಿಚಾರದಲ್ಲಿ ನಿರ್ದಿಷ್ಟವಾಗಿ ಇಂತಹುದೇ ಕಾರಣಕ್ಕೆ ಸಾವು ಸಂಭವಿಸಿರಬಹುದು ಎಂದು ಅತಿಯಾದ ಊಹೆ ಮಾಡುವುದು, ಆತಂಕಕ್ಕೊಳಗಾಗುವುದು, ವೈಜ್ಞಾನಿಕವಲ್ಲದ ಸಂಗತಿಗಳನ್ನು ಇನ್ನಷ್ಟು ದಾಟಿಸುವುದನ್ನಂತೂ ಮಾಡಲೇಬೇಡಿ.

  • ಡಾ.ಎಚ್.ವಿ ವಾಸು

(ವೈದ್ಯರು, ಸಾಮಾಜಿಕ ಕಾರ್ಯಕರ್ತರು ಮತ್ತು ಪತ್ರಕರ್ತರು)


ಇದನ್ನೂ ಓದಿ: ಅಪ್ಪು ನಿಧನ: ಹೃದಯಾಘಾತದ ಬಗ್ಗೆ ಪ್ಯಾನಿಕ್‌ ಆಗುವ ಅಗತ್ಯವಿಲ್ಲ- ವೈದ್ಯರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...