ಇತ್ತೀಚೆಗೆ ದೇಶದಾದ್ಯಂತ ನಡೆದ 30 ವಿಧಾನಸಭೆ ಮತ್ತು ಮೂರು ಲೋಕಸಭಾ ಉಪಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಇವುಗಳಲ್ಲಿ ಪಶ್ಚಿಮ ಬಂಗಾಳದ 4 ವಿಧಾನಸಭೆಗೆ ನಡೆದಿದ್ದ ಉಪಚುನಾವಣೆಯಲ್ಲಿ ಆಡಳಿತ ಪಕ್ಷವಾದ ತೃಣಮೂಲ ಕಾಂಗ್ರೆಸ್ ಭರ್ಜರಿ ಗೆಲುವು ದಾಖಲಿಸಿದ್ದು, ಬಿಜೆಪಿ ಹೀನಾಯ ಸೋಲನ್ನು ಅನುಭವಿಸಿದೆ. ಆರು ತಿಂಗಳ ಮುಂಚೆ ಚುನಾವಣೆ ನಡೆದಿದ್ದ ಈ ನಾಲ್ಕು ಕ್ಷೇತ್ರಗಳಲ್ಲಿ ಎರಡರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಕೇವಲ ಆರು ತಿಂಗಳಲ್ಲಿ ಅಲ್ಲಿನ ಜನರು ತಮ್ಮ ತೀರ್ಮಾನವನ್ನು ಬದಲಿಸಿ ಟಿಎಂಸಿಯನ್ನು ಗೆಲ್ಲಿಸಿದ್ದಾರೆ.
ದೀನ್ಹಟಾ, ಶಾಂತಿಪುರ್, ಖಾರ್ದಹೊ ಮತ್ತು ಗೋಸಬಾದ ನಾಲ್ಕು ಕ್ಷೇತ್ರಗಳಲ್ಲೂ ಟಿಎಂಸಿ ಭರ್ಜರಿ ಗೆಲುವು ಸಾಧಿಸಿದೆ.
ದೀನ್ಹಟಾ ಕ್ಷೇತ್ರದಲ್ಲಿ ಬಿಜೆಪಿಯ ನಿಸಿತ್ ಪ್ರಮಾಣಿಕ್ ಒಕ್ಕೂಟ ಸರ್ಕಾರದ ಕಿರಿಯ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ತಾನು ಗೆದ್ದದ್ದ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಈ ಕ್ಷೇತ್ರದಲ್ಲಿ ಟಿಎಂಸಿ ಭರ್ಜರಿಯಾಗಿ ಗೆಲುವು ಸಾಧಿಸಿದ್ದು, 1.89 ಲಕ್ಷ ಮತಗಳನ್ನು ಪಡೆದಿದೆ. ಬಿಜೆಪಿ ಇಲ್ಲಿ ಕೇವಲ 25 ಸಾವಿರ ಮತಗಳನ್ನಷ್ಟೇ ಪಡೆದಿದೆ. ಇಲ್ಲಿ ಟಿಎಂಸಿಯಲ್ಲಿ ಉದ್ಯಾನ್ ಗುಹಾ ಸ್ಪರ್ಧಿಸಿದ್ದರೆ, ಬಿಜೆಪಿಯಿಂದ ಅಶೋಕ್ ಮಂಡಲ್ ಸ್ಪರ್ಧಿಸಿದ್ದರು.
ಇದನ್ನೂ ಓದಿ: ಹರಿಯಾಣ ಉಪಚುನಾವಣೆ: ’ಇದು ರೈತರ ಗೆಲುವು’ ಎಂದ ಅಭ್ಯರ್ಥಿ ಅಭಯ್ ಚೌಟಾಲಾ
ಶಾಂತಿಪುರ್ ಕ್ಷೇತ್ರದಲ್ಲಿ ಬಿಜೆಪಿ ಸಂಸದ ಜಗನ್ನಾಥ್ ಸರ್ಕಾರ್ ಅವರು ತಾನು ಗೆದ್ದ ವಿಧಾನಸಭೆಗೆ ರಾಜೀನಾಮೆ ನೀಡಿದ್ದರಿಂದ ಕ್ಷೇತ್ರವು ತೆರವಾಗಿತ್ತು. ಟಿಎಂಸಿಯ ಬ್ರಜಾ ಕಿಶೋರ್ ಗೋಸ್ವಾಮಿ 11.1 ಲಕ್ಷ ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿಯ ನಿರಂಜನ್ ಬಿಸ್ವಾಸ್ ಕೇವಲ 47 ಸಾವಿರ ಮತಗಳನ್ನು ಪಡೆದಿದ್ದಾರೆ.
ಖಾರ್ದಹೊ ಕ್ಷೇತ್ರವು ಕೋಲ್ಕತ್ತಾದ ಮಾಜಿ ಮೇಯರ್ ಸೋವಂದೇಬ್ ಚಟ್ಟೋಪಾಧ್ಯಾಯ ಸ್ಪರ್ಧಿಸುತ್ತಿರುವ ಕ್ಷೇತ್ರವಾಗಿದೆ. ಅವರು ಮಮತಾ ಬ್ಯಾನರ್ಜಿಗಾಗಿ ಕೋಲ್ಕತ್ತಾದ ಭವಾನಿಪುರ್ ಸ್ಥಾನವನ್ನು ಬಿಟ್ಟುಕೊಟ್ಟಿದ್ದರು. ಇಲ್ಲಿ ಅವರು 1.14 ಲಕ್ಷ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿಯಲ್ಲಿ ಸ್ಪರ್ಧಿಸಿದ್ದ ಜೋತ್ ಶಾ 20 ಸಾವಿರ ಮತಗಳನ್ನಷ್ಟೇ ಪಡೆದಿದ್ದಾರೆ.
ಗೋಸಬಾ ಕ್ಷೇತ್ರದಲ್ಲಿ ಟಿಎಂಸಿಯಿಂದ ಸ್ಪರ್ಧಿಸಿದ್ದ ಸುಬ್ರತಾ ಮಂಡಲ್ 1.60 ಲಕ್ಷ ಮತಗಳನ್ನು ಪಡೆದಿದ್ದರೆ, ಬಿಜೆಪಿಯ ಪಲಾಶಾ ರಾಣಾ 18 ಸಾವಿರ ಮತ ಪಡೆದು ಹೀನಾಯವಾಗಿ ಸೋಲುಂಡಿದ್ದಾರೆ.
ಇದನ್ನೂ ಓದಿ: ಸಿಎಂ ಬೊಮ್ಮಾಯಿಗೆ ತವರು ಜಿಲ್ಲೆಯಲ್ಲಿಯೇ ಮುಖಭಂಗ: ಹಾನಗಲ್ನಲ್ಲಿ ಗೆಲುವಿನ ನಗೆ ಬೀರಿದ ಕಾಂಗ್ರೆಸ್
ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆಯ ಚುನಾವಣೆಯ ನಂತರ ಬಿಜೆಪಿ ಹಲವರು ಟಿಎಂಸಿಗೆ ಸೇರಿಕೊಂಡಿದ್ದರು. ಬಿಜೆಪಿಗೆ ಈ ಮುಖಭಂಗ ಉಪಚುನಾವಣೆಯಲ್ಲೂ ಮುಂದುವರೆದಿದೆ. ಜೊತೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಗೆಲುವಿನ ಸರಣಿಯು ಮುಂದುವರಿದಿದೆ.
ಚುನಾವಣಾ ಗೆಲುವನ್ನು ಸಂಭ್ರಮಿಸಿರುವ ಮಮತಾ ಬ್ಯಾನರ್ಜಿ ವಿಜೇತ ಅಭ್ಯರ್ಥಿಗಳನ್ನು ಅಭಿನಂದಿಸಿದ್ದಾರೆ. “ಎಲ್ಲಾ ನಾಲ್ಕು ವಿಜೇತ ಅಭ್ಯರ್ಥಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು! ಈ ವಿಜಯವು ಜನರ ವಿಜಯವಾಗಿದೆ. ಇದು ಬಂಗಾಳ ಯಾವಾಗಲೂ ಪ್ರೊಪಾಗಾಂಡ ಮತ್ತು ದ್ವೇಷದ ರಾಜಕೀಯಕ್ಕಿಂತ ಅಭಿವೃದ್ಧಿ ಮತ್ತು ಏಕತೆಯನ್ನು ಹೇಗೆ ಆರಿಸಿಕೊಳ್ಳುತ್ತದೆ ತೋರಿಸಿದೆ. ಜನರ ಆಶೀರ್ವಾದದೊಂದಿಗೆ, ಬಂಗಾಳವನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುದಾಗಿ ನಾವು ಭರವಸೆ ನೀಡುತ್ತೇವೆ!” ಎಂದು ಅವರು ಹೇಳಿದ್ದಾರೆ.
My heartiest congratulations to all the four winning candidates!
This victory is people's victory, as it shows how Bengal will always choose development and unity over propaganda and hate politics. With people's blessings, we promise to continue taking Bengal to greater heights!
— Mamata Banerjee (@MamataOfficial) November 2, 2021
ಈ ನಾಲ್ಕು ಕ್ಷೇತ್ರಗಳೊಂದಿಗೆ ರಾಜ್ಯದ ವಿಧಾನಸಭೆಯಲ್ಲಿ ಟಿಎಂಸಿಯ ಸೀಟು 213 ಕ್ಕೆ ಏರಿದೆ.
ಇದನ್ನೂ ಓದಿ: ರಾಜ್ಯ ಉಪಚುನಾವಣೆ ಫಲಿತಾಂಶ: ಸಿಂದಗಿಯಲ್ಲಿ ಬಿಜೆಪಿಗೆ ಭರ್ಜರಿ ಮುನ್ನಡೆ