Homeಅಂಕಣಗಳುಬಹುಜನ ಭಾರತ: ಪಾರುಲ್ ಖಕ್ಕಡ್ ಎಂಬ ಗೃಹಿಣಿ ಬರೆದ ರಾಜಕೀಯ ಕವಿತೆ!

ಬಹುಜನ ಭಾರತ: ಪಾರುಲ್ ಖಕ್ಕಡ್ ಎಂಬ ಗೃಹಿಣಿ ಬರೆದ ರಾಜಕೀಯ ಕವಿತೆ!

- Advertisement -
- Advertisement -

ಐವತ್ತೊಂದರ ಹರೆಯದ ಆ ಗೃಹಿಣಿಯ ಹೆಸರು ಪಾರುಲ್ ಖಕ್ಕಡ್. ಅಹ್ಮದಾಬಾದ್‌ನಿಂದ 200 ಕಿ.ಮೀ.ದೂರದಲ್ಲಿರುವ ಅಮ್ರೇಲಿಯ ನಿವಾಸಿ. ಕವಿತೆಯೊಂದನ್ನು ಬರೆದು ವಿವಾದದ ಬಿರುಗಾಳಿಗೆ ಸಿಕ್ಕಿದ್ದಾರೆ. ಆದರೂ ಧೃತಿಗೆಡದೆ ನಿಂತಿದ್ದಾರೆ ಈ ದಿಟ್ಟ ಹೆಣ್ಣುಮಗಳು.

ಬೆಂಬಲ ನೀಡಿದ ಬರೆಹಗಾರ ಲೋಕಕ್ಕೆ ಅವರು ನೀಡಿರುವ ಜವಾಬು- ’ಯಾವುದೇ ಒತ್ತಡ ಕಿರುಕುಳ ನನ್ನನ್ನು ಬಾಧಿಸಿಲ್ಲ, ನಿಮಗೆ ಸರಿತೋಚಿದ್ದನ್ನು ನೀವು ಮಾಡಿರಿ’.

ಇತ್ತೀಚೆಗೆ ತಮ್ಮನ್ನು ಸಂಪರ್ಕಿಸಲು ಬಯಸಿದ ಬಿ.ಬಿ.ಸಿ. ಸುದ್ದಿ ಸಂಸ್ಥೆಯ ಬಾತ್ಮೀದಾರನಿಗೆ ಮಿಂಚಂಚೆಯ ಮೂಲಕ ಪಾರುಲ್ ನೀಡಿರುವ ಪ್ರತಿಕ್ರಿಯೆ- ’ನಿಮ್ಮ ಸದ್ಭಾವನೆಗೆ ಋಣಿಯಾಗಿದ್ದೇನೆ. ಆದರೆ ಈಗ ನಾನು ಯಾರ ಕೂಡವೂ ಮಾತಾಡಲಾರೆ’.

ತಮ್ಮ ಕವಿತೆಯನ್ನು ಟೀಕಿಸಿ ಬೈಗುಳದ ಮಳೆ ಸುರಿಸಿದವರಿಗೆ ಉತ್ತರವಾಗಿ ಕಳೆದ ವಾರ ಅವರು ಮತ್ತೊಂದು ಕವಿತೆ ಬರೆದಿದ್ದಾರೆ. ಅದರಲ್ಲಿ ತಮ್ಮನ್ನು ಮತ್ತು ತಮ್ಮ ವಿವಾದಿತ ಕವಿತೆಯನ್ನು ಹಾಡಿ ಹೊಗಳಿದವರನ್ನೂ ದೂರವಿರಿಸಿ ಮಾತಾಡಿದ್ದಾರೆ. ಈ ಕವಿತೆಯ ಶೀರ್ಷಿಕೆ ’ತಾರೆ ಬೋಲ್ವಾನೂ ನಹೀ’ (ನೀನು ಮಾತಾಡುವಂತಿಲ್ಲ). ’ನಿರೀಕ್ಷಕ್’ ಎಂಬ ಗುಜರಾತಿ ಪಾಕ್ಷಿಕ ಈ ಕವಿತೆಯನ್ನು ಪ್ರಕಟಿಸಿದೆ. ಪ್ರಗತಿಪರರು ಮತ್ತು ಉದಾರವಾದಿಗಳು ತಮ್ಮ ಅನಿಸಿಕೆಗಳನ್ನು ಹೇಳಲು ಗುಜರಾತಿನಲ್ಲಿ ಉಳಿದಿರುವ ಕೆಲವೇ ಉದಾರವಾದೀ ಮಾಧ್ಯಮ ಆವರಣಗಳಲ್ಲೊಂದು ನಿರೀಕ್ಷಕ್.

’ಯಾತನೆಯು ಸಹನೆಯ ಸರಹದ್ದು ದಾಟಿದರೂ ತುಟಿ ಬಿಚ್ಚುವುದಿಲ್ಲ ನೀವು- ಹೃದಯ ವಿಲಪಿಸಿ ಚೀರಿದರೂ ಸೊಲ್ಲೆತ್ತುವವರಲ್ಲ ನೀವು’ ಎಂಬುದು ಈ ಹೊಸ ಕವಿತೆಯ ಸಾಲುಗಳಲ್ಲೊಂದು.

ತಿಂಗಳ ಹಿಂದೆ ಫೇಸ್ಬುಕ್ಕಿನಲ್ಲಿ ಆಕೆ ತಮ್ಮದೊಂದು ಕವಿತೆಯನ್ನು ಹಾಕಿದರು. ಹದಿನಾಲ್ಕು ಸಾಲುಗಳ ಈ ಕವಿತೆ ಮಿಂಚಿನ ಸಂಚಲನ ಸೃಷ್ಟಿಸಿತು. ಹತ್ತಾರು ಭಾಷೆಗಳಿಗೆ ತರ್ಜುಮೆಯಾಯಿತು. ಸಾಮಾಜಿಕ ಮಾಧ್ಯಮಗಳು ಮತ್ತು ಸೈಬರ್ ಲೋಕದಲ್ಲಿ ಕೋಲಾಹಲ ಎಬ್ಬಿಸಿತು.

ಕೋವಿಡ್ ಮಹಾಸಾಂಕ್ರಾಮಿಕದ ಕ್ರೂರ ಮತ್ತು ಸಿದ್ಧತೆಯೇ ಇಲ್ಲದೆ ಈ ದಾಳಿಗೆ ಶರಣಾಗಿ, ಆಳುವವರು ಸೃಷ್ಟಿಸಿದ ಮಾರಣಹೋಮವನ್ನು ಪ್ರತಿಫಲಿಸಿದ್ದ ಕವಿತೆಯಿದು. ಚಿಕಿತ್ಸೆ ಪಡೆಯಲು ಆಸ್ಪತ್ರೆಯಲ್ಲಿ ಜಾಗವಿಲ್ಲದೆ, ಜಾಗ ಸಿಕ್ಕರೆ ಆಮ್ಲಜನಕ ದೊರೆಯದೆ, ಸತ್ತರೆ ಅಂತ್ಯಸಂಸ್ಕಾರಕ್ಕೂ ದಿಕ್ಕಿಲ್ಲದ ದುರ್ಗತಿಯಲ್ಲಿ ಬೆಂದ ಜನಮನಗಳು ಈ ಕವಿತೆಗೆ ಮಿಡಿದು ಮರುಗಿದವು.

ಆದರೆ ರಾಜಕೀಯ ಪಕ್ಷವೊಂದರ ಟ್ರೋಲ್ ಸೇನೆ ಅಂತರ್ಜಾಲ ಸಾಮಾಜಿಕ ತಾಣಗಳಲ್ಲಿ ಖಕ್ಕಡ್ ಅವರ ಮೇಲೆ ಸಮರವನ್ನೇ ಸಾರಿತು. ಅಶ್ಲೀಲ ಬೈಗುಳಗಳ ಸುರಿಮಳೆಯಾಯಿತು. ಸ್ತ್ರೀದ್ವೇಷದ ಕಾರ್ಕೋಟಕ ಹೊಳೆಯೇ ಹರಿಯಿತು. ಜೊತೆಗೆ ವ್ಯಾಪಕ ಬೆಂಬಲವೂ ದೊರೆಯಿತು.

ಹಾಗೆ ನೋಡಿದರೆ ಪಾರುಲ್ ವ್ಯವಸ್ಥೆಯನ್ನು ವಿರೋಧಿಸುವ ಇಲ್ಲವೇ ಯಥಾಸ್ಥಿತಿಯನ್ನು ಪ್ರಶ್ನಿಸುವ ಕವಿಯೇನೂ ಆಗಿರಲಿಲ್ಲ. ಬಹುತೇಕ ಭಾರತೀಯ ಸಂಪ್ರದಾಯಸ್ಥ ಕುಟುಂಬಗಳ ಹೆಣ್ಣುಮಕ್ಕಳ ಪಾಲಿಗೆ ವಿವಾಹವೇ ಪರಮ. ಒಳ್ಳೆಯ ’ಗಂಡು’ ಸಿಕ್ಕರೆ ಓದಿನ ಆಸೆಗೆ ಎಳ್ಳುನೀರು ಬಿಟ್ಟಂತೆಯೇ ಲೆಕ್ಕ. ಪಾರುಲ್ ಪರಿಸ್ಥಿತಿ ಭಿನ್ನವೇನಲ್ಲ. ಕಾಲೇಜು ಶಿಕ್ಷಣವನ್ನು ಎರಡನೆಯ ವರ್ಷಕ್ಕೇ ಮೊಟಕಾಗಿಸಿತ್ತು ಮದುವೆ. ಬ್ಯಾಂಕ್ ಉದ್ಯೋಗಿ ಪತಿಯೊಂದಿಗೆ ಮದುವೆಯ ’ಭದ್ರತೆ’ಗೆ ಅಡಿಯಿಟ್ಟರು.

ಹೈಸ್ಕೂಲಿನಲ್ಲಿದ್ದಾಗಲೇ ರೂಢಿಸಿಕೊಂಡಿದ್ದ ಕವಿತೆ ಬರೆವ ಹವ್ಯಾಸವನ್ನು ವಿವಾಹದ ನಂತರ ದೀರ್ಘ ರಜೆಯ ಮೇಲೆ ಕಳಿಸಬೇಕಾಯಿತು. ಹತ್ತು ವರ್ಷಗಳ ಹಿಂದೆ ಅಂತರ್ಜಾಲ ಸಾಮಾಜಿಕತಾಣ ಪಾರುಲ್ ಪಾಲಿಗೆ ಅನಾವರಣಗೊಳಿಸಿದ್ದು ಅವರ ಮುದ್ದಿನ ಮಗ.

’ಸದ್ದುಗದ್ದಲವಿಲ್ಲದೆ ನನ್ನ ಬದುಕಿಗೆ ಇಂಬಾಗಿ ನಿಂತದ್ದು ಕಾವ್ಯವೇ. ಅದುವೇ ನನ್ನ ಚೊಚ್ಚಲ ಪ್ರೀತಿ. ಬದುಕಿನ ಸಮುದ್ರದಲ್ಲಿ ಈಜಲು ಕಲಿಸಿದ್ದೇ ಕವಿತೆ. ಗುಜರಾತಿ, ಹಿಂದಿ ಉರ್ದುವಿನಲ್ಲಿ ಬರೆಯುತ್ತೇನೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಮನಸ್ಥಿತಿ ನನ್ನದು. ಘಜಲುಗಳ ಬರೆವುದು ಅಚ್ಚುಮೆಚ್ಚು. ಭಗವಂತನ ಅತ್ಯುತ್ತಮ ಸೃಷ್ಟಿ ನಾನು ಎಂಬುದು ನನ್ನ ಭಾವನೆ’ ಎಂಬ ಮಾತುಗಳನ್ನು ಅವರ ಬ್ಲಾಗಿನ ಮುನ್ನುಡಿಯಲ್ಲಿ ಓದಬಹುದು.

ಕುಟುಂಬಪ್ರೀತಿ ಮತ್ತು ಮನೆಗೆಲಸವೇ ತಮ್ಮ ಪಾಲಿನ ಬಹುದೊಡ್ಡ ಸಂತೋಷ ಎಂದಿದ್ದಾರೆ. ಗುಜರಾತಿನ ವೈಷ್ಣವ ಪಂಥ ಪೂಜಿಸುವ ಶ್ರೀಕೃಷ್ಣನ ಮತ್ತೊಂದು ರೂಪ ಶ್ರೀನಾಥಜೀ ಕುರಿತು ಆರು ಕವಿತೆಗಳನ್ನು ಬರೆದಿದ್ದಾರೆ. ಕೃಷ್ಣ ಮತ್ತು ರಾಧೆಯ ಕುರಿತು ಆಕೆ ಬರೆದಿರುವ ಕವಿತೆಗಳು ಗುಜರಾತಿ ಭಕ್ತಿಗೀತೆಗಳಾಗಿ ಜನಪ್ರಿಯವಾಗಿವೆ.

ಅವರ ಮನೆಯ ಮುಂದಿನ ಗುಲ್ಮೊಹರ್ ಮರವೊಂದನ್ನು ಕಡಿದು ಹಾಕಿದಾಗ ದುಗುಡಭರಿತ ಶೋಕಗೀತೆಯೊಂದನ್ನು ಬರೆದವರೀಕೆ.

ಅಂತರ್ಮುಖಿ ಸ್ವಭಾವದ ಪಾರುಲ್ ತಮ್ಮ ಹಿಂದೂ ಧರ್ಮಮೂಲ ಕುರಿತು ಹೆಮ್ಮೆಪಡುವ ವ್ಯಕ್ತಿ. ಮೋದಿಯವರು ಪ್ರಧಾನಿಯಾದ ನಂತರ ಅವರ ಮೇಲೆ ಮೆಚ್ಚುಗೆಯ ಸುರಿಮಳೆ ಕರೆದವರು. ಬಿಜೆಪಿಯನ್ನು ಬೆಂಬಲಿಸುವ ಕುಟುಂಬ ಆಕೆಯದು. ಎಂದೆಂದೂ ಬಿಜೆಪಿ ವಿರುದ್ಧ ದನಿ ಎತ್ತಿದವರಲ್ಲ. ಆದರೆ ಗಂಗೆಯಲ್ಲಿ ತೇಲಿದ ಶವಗಳನ್ನು ಕಂಡು ಆಕೆಯ ಮನಸು ಖಿನ್ನಗೊಂಡು ದ್ರವಿಸಿತ್ತು. ಕೋವಿಡ್ ದಾಳಿಯ ಮುಂದೆ ಜನರ ಕಷ್ಟ ಕಣ್ಣೀರುಗಳು ಅಕೆಯನ್ನು ಮಮ್ಮಲ ಮರುಗಿಸಿದ್ದವು. ಆಕೆಯಲ್ಲಿನ ಕವಯತ್ರಿ ಎಚ್ಚರಗೊಂಡಿದ್ದಳು.

ಆಕೆ ಬರೆದ ಈ ಕವಿತೆಗೆ ರಾಜಕಾರಣದ ಉದ್ದೇಶವೇ ಇರಲಿಲ್ಲ. ಸಾವಿನ ದುರಂತಕ್ಕೆ ಸಂವೇದನಾಶೀಲ ಮನಸ್ಸೊಂದು ಮಿಡಿದ ಸರಳ ಕ್ರಿಯೆಯಿದು ಎಂದು ಪಾರುಲ್ ಮತ್ತು ಅವರ ಕವಿತೆಯನ್ನು ಬಲ್ಲವರು ಹೇಳಿದ್ದಾರೆ. ಇಲ್ಲಿಯತನಕ ಗುಜರಾತಿನ ಬಲಪಂಥೀಯರು ಮೆಚ್ಚಿಕೊಂಡಿದ್ದ ಕವಿ ಆಕೆ.

ಖುದ್ದು ಗುಜರಾತಿನ ಆರೆಸ್ಸೆಸ್ ಮುಖವಾಣಿ ಸಾಧನಾ ನಿಯತಕಾಲಿಕದ ಸಂಪಾದಕರಾಗಿದ್ದ ವಿಷ್ಣು ಪಾಂಡ್ಯ ಗುಜರಾತೀ ಕಾವ್ಯದ ಉಜ್ವಲ ಭವಿಷ್ಯ ಎಂದು ಆಕೆಯ ಪ್ರತಿಭೆಯನ್ನು ಈ ಹಿಂದೆ ಕೊಂಡಾಡಿದ್ದುಂಟು. ಇದೀಗ ಆಕೆ ಏಕಾಏಕಿ ಹಿಂದೂ ವಿರೋಧಿ, ಸಡಿಲ ಶೀಲದ ಹೆಂಗಸು, ನೈತಿಕ ಮೌಲ್ಯಗಳೇ ಇಲ್ಲದವಳು ಎಂಬ ಹಿಂಸಾತ್ಮಕ ಟೀಕೆಗಳ ದಾಳಿಯನ್ನು ಎದುರಿಸಿದ್ದಾರೆ. ಸಾವಿರಕ್ಕೂ ಹೆಚ್ಚು ಮಂದಿ ಕವಿಗಳು-ಬರೆಹಗಾರರನ್ನು ಒಳಗೊಂಡ ಗುಜರಾತಿ ಲೇಖಕ ಮಂಡಲ ಅವರ ಬೆಂಬಲಕ್ಕೆ ನಿಂತಿರುವುದು ಹೌದು.

ಗಂಗೆಯು ಶವವಾಹಿನಿಯಾಗಿ ಮಾರ್ಪಟ್ಟಿರುವ ರಾಮರಾಜ್ಯದ ಬೆತ್ತಲೆ ಅರಸ ಎಂದು ಕವಿತೆಯಲ್ಲಿ ಬಣ್ಣಿಸಿದ್ದರೂ ಆಕೆ ಯಾರನ್ನೂ ಹೆಸರಿಸಿಲ್ಲ. ಗಂಗೆಯಲ್ಲಿ ತೇಲಿದ ಶವಗಳು ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಸುದ್ದಿ ಮಾಡಿದ್ದವು. ಗಂಗಾ-ಯಮುನಾ ನದಿಗಳ ತಟದ ಮರಳಿನ ವಿಸ್ತಾರದಲ್ಲಿ ಹುಗಿಯಲಾಗಿದ್ದ ಸಹಸ್ರಾರು ಕೋವಿಡ್ ಪೀಡಿತರ ಕಳೇಬರಗಳ ಛಾಯಾಚಿತ್ರಗಳು, ಡ್ರೋನ್ ಮೂಲಕ ಸೆರೆಹಿಡಿದ ವಿಡಿಯೋಗಳು ವಿದೇಶೀ ಸಮೂಹ ಮಾಧ್ಯಮಗಳಲ್ಲಿ ವ್ಯಾಪಕ ಪ್ರಸಾರ ಕಂಡವು. ಬಿಳಿ ಮರಳಿನ ವಿಸ್ತಾರದಲ್ಲಿ ಹುಗಿದು ರಾಮನಾಮ ಅಚ್ಚು ಮಾಡಿದ ಕಾವಿ ವಸ್ತ್ರಗಳನ್ನು ಹೊದಿಸಿ, ಗುರುತಿಗಾಗಿ ಸುತ್ತ ಬಿದಿರು ದಬ್ಬೆಗಳನ್ನು ಸಿಕ್ಕಿಸಿದ್ದ ಘೋರ ದುರಂತದ ಚಿತ್ರಗಳು ಕೋವಿಡ್ ಸಾಂಕ್ರಾಮಿಕದ ಮುಂದೆ ಪ್ರಭುತ್ವದ ಅಸಹಾಯಕತೆಯನ್ನೂ, ಜನಸಮುದಾಯ ಎದುರಿಸಿದ ಸಾವುನೋವುಗಳ ದುರಂತವನ್ನೂ, ಶವಸಂಸ್ಕಾರಕ್ಕೆ ಸಾವಿರಾರು ರುಪಾಯಿಗಳನ್ನು ವೆಚ್ಚ ಮಾಡಲಾಗದೆ ಬಂಧುಗಳ ಶವಗಳನ್ನು ಗಂಗೆಯಲ್ಲಿ ತೇಲಿಬಿಟ್ಟ ಇಲ್ಲವೇ ಮರಳಿನಲ್ಲಿ ಹುಗಿದ ಬಡಜನರ ತಬ್ಬಲಿತನದ ಕಠೋರ ಬಿಂಬಗಳಾಗಿ ಪ್ರಸಾರವಾದವು.

ಗುಜರಾತಿ ಸಾಹಿತ್ಯ ಆಕಾಡೆಮಿಯ ನಿಯತಕಾಲಿಕ ಶಬ್ದಸೃಷ್ಟಿಯ ಸಂಪಾದಕೀಯದ ವಿರುದ್ಧ ಆ ರಾಜ್ಯದ ಉದ್ದಗಲಕ್ಕೆ ಬುದ್ಧಿಜೀವಿಗಳು ಸಿಡಿದೆದ್ದಿದ್ದಾರೆ. ’ಶಬ್ದಸೃಷ್ಟಿ’ ಎಂಬುದು ಗುಜರಾತ್ ಸಾಹಿತ್ಯ ಆಕಾಡೆಮಿಯ ಮುಖವಾಣಿ. ಈ ನಿಯತಕಾಲಿಕ ಪ್ರಕಟಿಸಿರುವ ಸಂಪಾದಕೀಯವೊಂದು ಆ ರಾಜ್ಯದ ಸಾಹಿತ್ಯ ಜಗತ್ತಿನಲ್ಲಿ ಕೋಲಾಹಲ ಎಬ್ಬಿಸಿದೆ. ಈ ಹಿಂದೆ ಆರೆಸ್ಸೆಸ್ ನಿಯತಕಾಲಿಕದ ಸಂಪಾದಕರಾಗಿದ್ದ ವಿಷ್ಣು ಪಾಂಡ್ಯ ಅವರು ಈಗ ಗುಜರಾತ್ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು.

’ಅಲ್ಲ, ಇದು ಕವಿತೆಯಲ್ಲ, ಅರಾಜಕತೆಯ ಸೃಷ್ಟಿಗೆ ಕವಿತೆಯೊಂದರ ದುರುಪಯೋಗ’ ಎಂಬುದು ಈ ಸಂಪಾದಕೀಯದ ತಲೆಬರೆಹ. ಪ್ರಸ್ತಾಪಿತ ಕವಿತೆಯನ್ನು ರಚಿಸಿದ ಕವಯತ್ರಿಯನ್ನು ಬೆಂಬಲಿಸಿ ಕವಿತೆಯನ್ನು ಹಂಚಿಕೊಂಡವರು ’ಸಾಹಿತ್ಯ ನಕ್ಸಲೀಯರು’ ಎಂದು ಬಣ್ಣಿಸಲಾಗಿದೆ. ಮೋದಿ ಆಡಳಿತವನ್ನು ವಿಮರ್ಶೆಗೆ ಗುರಿ ಮಾಡಿದ ಸಾಮಾಜಿಕ ಕಾರ್ಯಕರ್ತರು ಮತ್ತು ಚಿಂತಕರಿಗೆ ಈಗಾಗಲೆ ’ಅರ್ಬನ್ ನಕ್ಸಲರು’ ಎಂಬ ಹಣೆಪಟ್ಟಿ ಹಚ್ಚಿ ಸೆರೆಮನೆಗೆ ತಳ್ಳಲಾಗಿದೆ. ಅರ್ಬನ್ ನಕ್ಸಲರು ಪದಪುಂಜ ಸರಣಿಗೆ ಇದೀಗ ಸೇರಿಸಲಾಗಿರುವ ಹೊಸ ಶಬ್ದಾವಳಿ ’ಸಾಹಿತ್ಯ ನಕ್ಸಲೀಯರು’.

ಸೃಜನಶೀಲ ಲೇಖಕರು ಏನನ್ನು ಬರೆಯಬೇಕು, ಏನನ್ನು ಬರೆಯಕೂಡದು ಎಂದು ವಿಧಿಸುವ ಪಾಂಡ್ಯ ಸಂಪಾದಕೀಯವು ಇಂದಿರಾಗಾಂಧಿ 1975ರಲ್ಲಿ ಹೇರಿದ್ದ ತುರ್ತುಪರಿಸ್ಥಿತಿಯನ್ನು ನೆನಪಿಸುತ್ತದೆ. ಲೇಖನಿಯನ್ನು ಸುತ್ತಿಗೆಯಿಂದ ಜಜ್ಜಿ ಹಾಕಿದಂತೆ ಮತ್ತು ಗುಜರಾತಿ ಲೇಖಕರ ಅಭಿವ್ಯಕ್ತಿ ಸ್ವಾತಂತ್ರ್ಯದ ಮರಣಶಾಸನ. ದೇಶದಲ್ಲಿ ಅರಾಜಕತೆ ಹರಡುವ ರಾಷ್ಟ್ರವಿರೋಧಿ ಸಾಹಿತ್ಯ ನಕ್ಸಲೀಯರನ್ನು ಮತ್ತು ವಿಧ್ವಂಸಕ ಶಕ್ತಿಗಳನ್ನು ಕವಿತೆಯು ಉತ್ತೇಜಿಸಿದೆ ಎಂಬ ಪಾಂಡ್ಯ ಹೇಳಿಕೆ ಅತೀವ ಆಘಾತಕಾರಿ ಮತ್ತು ತೀವ್ರ ಖಂಡನೀಯ ಎಂದು ಸಾಹಿತಿಗಳು ನೀಡಿರುವ ಸಂಯುಕ್ತ ಹೇಳಿಕೆ ಕಳವಳ ಪ್ರಕಟಿಸಿದೆ.

ಈ ಪುಟ್ಟ ಕವಿತೆಯು ಸಂಪ್ರದಾಯವಾದಿ ಗುಜರಾತಿ ಹಿಂದೂ ಸಂವೇದನೆಯೊಂದರ ವಿಸ್ಫೋಟ ಎಂದೂ ಹಿಂದೀ ಚಿಂತಕ ಅಪೂರ್ವಾನಂದ್ ಬಣ್ಣಿಸಿದ್ದಾರೆ.

ಬರೆದಿದ್ದ ಕವಿತೆಯಲ್ಲಿ ಅಡಗಿದ್ದ ದೇಶದ್ರೋಹ ಅದಾವುದು? ಮೂಲ ಕವಿತೆಯ ಶಕ್ತಿಯನ್ನು ಅನುವಾದದಲ್ಲಿ ಸೆರೆಹಿಡಿಯುವುದು ಕಡು ಕಠಿಣ ಕಸರತ್ತು.

ಈ ವರದಿಗಾರ ಮಾಡಿದ ಮೂಲ ಕವಿತೆಯ ಒರಟು ತರ್ಜುಮೆಯ ಪ್ರಯತ್ನ ಈ ಕೆಳಕಂಡಂತಿದೆ-

ಕಳೇಬರಗಳೆಲ್ಲ ಒಮ್ಮೆಗೇ ದನಿ ತೆರೆದು ಮಾತಾಡಿದವು- ಸರ್ವವೂ ಸುಭಗ ಸುಮುಖ ಸುಭಿಕ್ಷ ಅಂದ ಚೆಂದವಯ್ಯಾ
ಪ್ರಭುವೇ, ನಿನ್ನ ರಾಮರಾಜ್ಯದಲಿ ಸಾಕ್ಷಾತ್ ಗಂಗೆಯೇ ಶವವಾಹಿನಿ.
ಧಣಿಯೇ ಸಾಲುವುದಿಲ್ಲವಯ್ಯಾ ನಿನ್ನ ಚಿತಾಗಾರಗಳು, ಸೌದೆಯೇ ಇರದ ಚಿತೆಗಳು
ಪ್ರಭುವೇ ಹೆಣಗಳಿಗೆ ಹೆಗಲು ನೀಡಿ ಸೋತಿವೆಯಯ್ಯಾ ನಮ್ಮ ಭುಜಗಳು, ಇಂಗಿ ಹೋಗಿವೆ ಕಣ್ಣೀರು
ಧಣಿಯೇ ಕಾಣದೇನಯ್ಯಾ ಮನೆ ಮನೆಗೆ ನುಗ್ಗಿದ ಯಮದೂತನ ಮೃತ್ಯು ನರ್ತನ
ಪ್ರಭುವೇ ನಿನ್ನ ರಾಮರಾಜ್ಯದಲಿ ಸಾಕ್ಷಾತ್ ಗಂಗೆಯೇ ಶವವಾಹಿನಿ
ಧಣಿಯೇ ಹಗಲಿರುಳು ಉರಿದುರಿದು ದಣಿದು ಒರಗಿವೆಯಯ್ಯಾ ಚಿತೆಗಳು
ಒಡೆಯನೇ ಒಡೆಯತೊಡಗಿವೆ ನಮ್ಮ ಕೈಬಳೆಗಳು ನಿತ್ಯ ನಿರಂತರ, ಚೂರು, ಚೂರಾಗಿವೆ ಹೃದಯಗಳು
ಊರೂರುಗಳು ಹೊತ್ತಿ ಉರಿವಾಗ ನುಡಿಯತೊಡಗಿದೆ ಪಿಟೀಲು- ’ವಾಹ್ ಬಿಲ್ಲಾ ರಂಗಾ’
ಪ್ರಭುವೇ ನಿನ್ನ ರಾಮರಾಜ್ಯದಲಿ ಸಾಕ್ಷಾತ್ ಗಂಗೆಯೇ ಶವವಾಹಿನಿ.

ಧಣಿಯೇ ದೈವೀಕ ನಿನ್ನ ಉಡುಪುಗಳು, ದೈದೀಪ್ಯ ನಿನ್ನ ಪ್ರಭಾವಳಿ
ಊರಿಗೆ ಊರೇ ಕಾಣತೊಡಗಿದೆ ನಿನ್ನ ನಿಜರೂಪವನು
ನಿಜದನಿಯ ಮಾನವನಿದ್ದರೆ ಮುಂದೆ ಬರಲಿ, ಹೇಳಲಿ ಬಾಯಿ ತೆರೆದು
’ನನ್ನ ಅರಸ ನಿಂತಿರುವನು ಬರಿ ಬತ್ತಲಾಗಿ’
ಪ್ರಭುವೇ ನಿನ್ನ ರಾಮರಾಜ್ಯದಲಿ ಸಾಕ್ಷಾತ್ ಗಂಗೆಯೇ ಶವವಾಹಿನಿ.

ಬೈಗುಳಗಳ ಸುರಿಮಳೆಯ ನಂತರ ತಮ್ಮ ಫೇಸ್ಬುಕ್ ಖಾತೆಗೆ ಆಕೆ ಬೀಗ ಹಾಕಿದ್ದಾರೆ. ಆದರೆ ವಿವಾದಕ್ಕೆ ದಾರಿ ಮಾಡಿದ ಕವಿತೆಯನ್ನು ತೆಗೆದು ಹಾಕಿಲ್ಲ. ಈ ಕವಿತೆಯನ್ನು ಸಾಮಾಜಿಕ ಜಾಲತಾಣ ಖಾತೆಯಿಂದ ತೆಗೆದು ಹಾಕದೆ ಇರುವುದಕ್ಕೆ ಅಭಿನಂದಿಸಿದ ಗುಜರಾತಿ ಕವಿ ಮೇಹುಲ್ ದೇವಕಲಾ ಅವರಿಗೆ ಪಾರುಲ್ ಪ್ರಶ್ನೆ- ಕವಿತೆಯಲ್ಲಿ ನಾನು ತಪ್ಪೇನನ್ನೂ ಹೇಳಿಲ್ಲ. ಹೀಗಿದ್ದಾಗ ಅದನ್ನು ಯಾಕೆ ತೆಗೆದು ಹಾಕಲಿ?


ಇದನ್ನೂ ಓದಿ: ನೂತನ ಐಟಿ ನಿಯಮಗಳ ಮೊದಲ ಟಾರ್ಗೆಟ್ ಕಾರ್ಟೂನಿಸ್ಟ್‌ಗಳೇ ಏಕಿರಬಹುದು?

ಇದನ್ನೂ ಓದಿ: ತಬ್ಲೀಘಿಗಳನ್ನು ಕೆಟ್ಟದಾಗಿ ಬಿಂಬಿಸಿದ್ದಕ್ಕೆ ಕ್ಷಮೆ ಕೇಳಿದ ‘ನ್ಯೂಸ್‌18 ಕನ್ನಡ’!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...