Homeಅಂಕಣಗಳುಬಹುಜನ ಭಾರತ: ಪಾರುಲ್ ಖಕ್ಕಡ್ ಎಂಬ ಗೃಹಿಣಿ ಬರೆದ ರಾಜಕೀಯ ಕವಿತೆ!

ಬಹುಜನ ಭಾರತ: ಪಾರುಲ್ ಖಕ್ಕಡ್ ಎಂಬ ಗೃಹಿಣಿ ಬರೆದ ರಾಜಕೀಯ ಕವಿತೆ!

- Advertisement -
- Advertisement -

ಐವತ್ತೊಂದರ ಹರೆಯದ ಆ ಗೃಹಿಣಿಯ ಹೆಸರು ಪಾರುಲ್ ಖಕ್ಕಡ್. ಅಹ್ಮದಾಬಾದ್‌ನಿಂದ 200 ಕಿ.ಮೀ.ದೂರದಲ್ಲಿರುವ ಅಮ್ರೇಲಿಯ ನಿವಾಸಿ. ಕವಿತೆಯೊಂದನ್ನು ಬರೆದು ವಿವಾದದ ಬಿರುಗಾಳಿಗೆ ಸಿಕ್ಕಿದ್ದಾರೆ. ಆದರೂ ಧೃತಿಗೆಡದೆ ನಿಂತಿದ್ದಾರೆ ಈ ದಿಟ್ಟ ಹೆಣ್ಣುಮಗಳು.

ಬೆಂಬಲ ನೀಡಿದ ಬರೆಹಗಾರ ಲೋಕಕ್ಕೆ ಅವರು ನೀಡಿರುವ ಜವಾಬು- ’ಯಾವುದೇ ಒತ್ತಡ ಕಿರುಕುಳ ನನ್ನನ್ನು ಬಾಧಿಸಿಲ್ಲ, ನಿಮಗೆ ಸರಿತೋಚಿದ್ದನ್ನು ನೀವು ಮಾಡಿರಿ’.

ಇತ್ತೀಚೆಗೆ ತಮ್ಮನ್ನು ಸಂಪರ್ಕಿಸಲು ಬಯಸಿದ ಬಿ.ಬಿ.ಸಿ. ಸುದ್ದಿ ಸಂಸ್ಥೆಯ ಬಾತ್ಮೀದಾರನಿಗೆ ಮಿಂಚಂಚೆಯ ಮೂಲಕ ಪಾರುಲ್ ನೀಡಿರುವ ಪ್ರತಿಕ್ರಿಯೆ- ’ನಿಮ್ಮ ಸದ್ಭಾವನೆಗೆ ಋಣಿಯಾಗಿದ್ದೇನೆ. ಆದರೆ ಈಗ ನಾನು ಯಾರ ಕೂಡವೂ ಮಾತಾಡಲಾರೆ’.

ತಮ್ಮ ಕವಿತೆಯನ್ನು ಟೀಕಿಸಿ ಬೈಗುಳದ ಮಳೆ ಸುರಿಸಿದವರಿಗೆ ಉತ್ತರವಾಗಿ ಕಳೆದ ವಾರ ಅವರು ಮತ್ತೊಂದು ಕವಿತೆ ಬರೆದಿದ್ದಾರೆ. ಅದರಲ್ಲಿ ತಮ್ಮನ್ನು ಮತ್ತು ತಮ್ಮ ವಿವಾದಿತ ಕವಿತೆಯನ್ನು ಹಾಡಿ ಹೊಗಳಿದವರನ್ನೂ ದೂರವಿರಿಸಿ ಮಾತಾಡಿದ್ದಾರೆ. ಈ ಕವಿತೆಯ ಶೀರ್ಷಿಕೆ ’ತಾರೆ ಬೋಲ್ವಾನೂ ನಹೀ’ (ನೀನು ಮಾತಾಡುವಂತಿಲ್ಲ). ’ನಿರೀಕ್ಷಕ್’ ಎಂಬ ಗುಜರಾತಿ ಪಾಕ್ಷಿಕ ಈ ಕವಿತೆಯನ್ನು ಪ್ರಕಟಿಸಿದೆ. ಪ್ರಗತಿಪರರು ಮತ್ತು ಉದಾರವಾದಿಗಳು ತಮ್ಮ ಅನಿಸಿಕೆಗಳನ್ನು ಹೇಳಲು ಗುಜರಾತಿನಲ್ಲಿ ಉಳಿದಿರುವ ಕೆಲವೇ ಉದಾರವಾದೀ ಮಾಧ್ಯಮ ಆವರಣಗಳಲ್ಲೊಂದು ನಿರೀಕ್ಷಕ್.

’ಯಾತನೆಯು ಸಹನೆಯ ಸರಹದ್ದು ದಾಟಿದರೂ ತುಟಿ ಬಿಚ್ಚುವುದಿಲ್ಲ ನೀವು- ಹೃದಯ ವಿಲಪಿಸಿ ಚೀರಿದರೂ ಸೊಲ್ಲೆತ್ತುವವರಲ್ಲ ನೀವು’ ಎಂಬುದು ಈ ಹೊಸ ಕವಿತೆಯ ಸಾಲುಗಳಲ್ಲೊಂದು.

ತಿಂಗಳ ಹಿಂದೆ ಫೇಸ್ಬುಕ್ಕಿನಲ್ಲಿ ಆಕೆ ತಮ್ಮದೊಂದು ಕವಿತೆಯನ್ನು ಹಾಕಿದರು. ಹದಿನಾಲ್ಕು ಸಾಲುಗಳ ಈ ಕವಿತೆ ಮಿಂಚಿನ ಸಂಚಲನ ಸೃಷ್ಟಿಸಿತು. ಹತ್ತಾರು ಭಾಷೆಗಳಿಗೆ ತರ್ಜುಮೆಯಾಯಿತು. ಸಾಮಾಜಿಕ ಮಾಧ್ಯಮಗಳು ಮತ್ತು ಸೈಬರ್ ಲೋಕದಲ್ಲಿ ಕೋಲಾಹಲ ಎಬ್ಬಿಸಿತು.

ಕೋವಿಡ್ ಮಹಾಸಾಂಕ್ರಾಮಿಕದ ಕ್ರೂರ ಮತ್ತು ಸಿದ್ಧತೆಯೇ ಇಲ್ಲದೆ ಈ ದಾಳಿಗೆ ಶರಣಾಗಿ, ಆಳುವವರು ಸೃಷ್ಟಿಸಿದ ಮಾರಣಹೋಮವನ್ನು ಪ್ರತಿಫಲಿಸಿದ್ದ ಕವಿತೆಯಿದು. ಚಿಕಿತ್ಸೆ ಪಡೆಯಲು ಆಸ್ಪತ್ರೆಯಲ್ಲಿ ಜಾಗವಿಲ್ಲದೆ, ಜಾಗ ಸಿಕ್ಕರೆ ಆಮ್ಲಜನಕ ದೊರೆಯದೆ, ಸತ್ತರೆ ಅಂತ್ಯಸಂಸ್ಕಾರಕ್ಕೂ ದಿಕ್ಕಿಲ್ಲದ ದುರ್ಗತಿಯಲ್ಲಿ ಬೆಂದ ಜನಮನಗಳು ಈ ಕವಿತೆಗೆ ಮಿಡಿದು ಮರುಗಿದವು.

ಆದರೆ ರಾಜಕೀಯ ಪಕ್ಷವೊಂದರ ಟ್ರೋಲ್ ಸೇನೆ ಅಂತರ್ಜಾಲ ಸಾಮಾಜಿಕ ತಾಣಗಳಲ್ಲಿ ಖಕ್ಕಡ್ ಅವರ ಮೇಲೆ ಸಮರವನ್ನೇ ಸಾರಿತು. ಅಶ್ಲೀಲ ಬೈಗುಳಗಳ ಸುರಿಮಳೆಯಾಯಿತು. ಸ್ತ್ರೀದ್ವೇಷದ ಕಾರ್ಕೋಟಕ ಹೊಳೆಯೇ ಹರಿಯಿತು. ಜೊತೆಗೆ ವ್ಯಾಪಕ ಬೆಂಬಲವೂ ದೊರೆಯಿತು.

ಹಾಗೆ ನೋಡಿದರೆ ಪಾರುಲ್ ವ್ಯವಸ್ಥೆಯನ್ನು ವಿರೋಧಿಸುವ ಇಲ್ಲವೇ ಯಥಾಸ್ಥಿತಿಯನ್ನು ಪ್ರಶ್ನಿಸುವ ಕವಿಯೇನೂ ಆಗಿರಲಿಲ್ಲ. ಬಹುತೇಕ ಭಾರತೀಯ ಸಂಪ್ರದಾಯಸ್ಥ ಕುಟುಂಬಗಳ ಹೆಣ್ಣುಮಕ್ಕಳ ಪಾಲಿಗೆ ವಿವಾಹವೇ ಪರಮ. ಒಳ್ಳೆಯ ’ಗಂಡು’ ಸಿಕ್ಕರೆ ಓದಿನ ಆಸೆಗೆ ಎಳ್ಳುನೀರು ಬಿಟ್ಟಂತೆಯೇ ಲೆಕ್ಕ. ಪಾರುಲ್ ಪರಿಸ್ಥಿತಿ ಭಿನ್ನವೇನಲ್ಲ. ಕಾಲೇಜು ಶಿಕ್ಷಣವನ್ನು ಎರಡನೆಯ ವರ್ಷಕ್ಕೇ ಮೊಟಕಾಗಿಸಿತ್ತು ಮದುವೆ. ಬ್ಯಾಂಕ್ ಉದ್ಯೋಗಿ ಪತಿಯೊಂದಿಗೆ ಮದುವೆಯ ’ಭದ್ರತೆ’ಗೆ ಅಡಿಯಿಟ್ಟರು.

ಹೈಸ್ಕೂಲಿನಲ್ಲಿದ್ದಾಗಲೇ ರೂಢಿಸಿಕೊಂಡಿದ್ದ ಕವಿತೆ ಬರೆವ ಹವ್ಯಾಸವನ್ನು ವಿವಾಹದ ನಂತರ ದೀರ್ಘ ರಜೆಯ ಮೇಲೆ ಕಳಿಸಬೇಕಾಯಿತು. ಹತ್ತು ವರ್ಷಗಳ ಹಿಂದೆ ಅಂತರ್ಜಾಲ ಸಾಮಾಜಿಕತಾಣ ಪಾರುಲ್ ಪಾಲಿಗೆ ಅನಾವರಣಗೊಳಿಸಿದ್ದು ಅವರ ಮುದ್ದಿನ ಮಗ.

’ಸದ್ದುಗದ್ದಲವಿಲ್ಲದೆ ನನ್ನ ಬದುಕಿಗೆ ಇಂಬಾಗಿ ನಿಂತದ್ದು ಕಾವ್ಯವೇ. ಅದುವೇ ನನ್ನ ಚೊಚ್ಚಲ ಪ್ರೀತಿ. ಬದುಕಿನ ಸಮುದ್ರದಲ್ಲಿ ಈಜಲು ಕಲಿಸಿದ್ದೇ ಕವಿತೆ. ಗುಜರಾತಿ, ಹಿಂದಿ ಉರ್ದುವಿನಲ್ಲಿ ಬರೆಯುತ್ತೇನೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಮನಸ್ಥಿತಿ ನನ್ನದು. ಘಜಲುಗಳ ಬರೆವುದು ಅಚ್ಚುಮೆಚ್ಚು. ಭಗವಂತನ ಅತ್ಯುತ್ತಮ ಸೃಷ್ಟಿ ನಾನು ಎಂಬುದು ನನ್ನ ಭಾವನೆ’ ಎಂಬ ಮಾತುಗಳನ್ನು ಅವರ ಬ್ಲಾಗಿನ ಮುನ್ನುಡಿಯಲ್ಲಿ ಓದಬಹುದು.

ಕುಟುಂಬಪ್ರೀತಿ ಮತ್ತು ಮನೆಗೆಲಸವೇ ತಮ್ಮ ಪಾಲಿನ ಬಹುದೊಡ್ಡ ಸಂತೋಷ ಎಂದಿದ್ದಾರೆ. ಗುಜರಾತಿನ ವೈಷ್ಣವ ಪಂಥ ಪೂಜಿಸುವ ಶ್ರೀಕೃಷ್ಣನ ಮತ್ತೊಂದು ರೂಪ ಶ್ರೀನಾಥಜೀ ಕುರಿತು ಆರು ಕವಿತೆಗಳನ್ನು ಬರೆದಿದ್ದಾರೆ. ಕೃಷ್ಣ ಮತ್ತು ರಾಧೆಯ ಕುರಿತು ಆಕೆ ಬರೆದಿರುವ ಕವಿತೆಗಳು ಗುಜರಾತಿ ಭಕ್ತಿಗೀತೆಗಳಾಗಿ ಜನಪ್ರಿಯವಾಗಿವೆ.

ಅವರ ಮನೆಯ ಮುಂದಿನ ಗುಲ್ಮೊಹರ್ ಮರವೊಂದನ್ನು ಕಡಿದು ಹಾಕಿದಾಗ ದುಗುಡಭರಿತ ಶೋಕಗೀತೆಯೊಂದನ್ನು ಬರೆದವರೀಕೆ.

ಅಂತರ್ಮುಖಿ ಸ್ವಭಾವದ ಪಾರುಲ್ ತಮ್ಮ ಹಿಂದೂ ಧರ್ಮಮೂಲ ಕುರಿತು ಹೆಮ್ಮೆಪಡುವ ವ್ಯಕ್ತಿ. ಮೋದಿಯವರು ಪ್ರಧಾನಿಯಾದ ನಂತರ ಅವರ ಮೇಲೆ ಮೆಚ್ಚುಗೆಯ ಸುರಿಮಳೆ ಕರೆದವರು. ಬಿಜೆಪಿಯನ್ನು ಬೆಂಬಲಿಸುವ ಕುಟುಂಬ ಆಕೆಯದು. ಎಂದೆಂದೂ ಬಿಜೆಪಿ ವಿರುದ್ಧ ದನಿ ಎತ್ತಿದವರಲ್ಲ. ಆದರೆ ಗಂಗೆಯಲ್ಲಿ ತೇಲಿದ ಶವಗಳನ್ನು ಕಂಡು ಆಕೆಯ ಮನಸು ಖಿನ್ನಗೊಂಡು ದ್ರವಿಸಿತ್ತು. ಕೋವಿಡ್ ದಾಳಿಯ ಮುಂದೆ ಜನರ ಕಷ್ಟ ಕಣ್ಣೀರುಗಳು ಅಕೆಯನ್ನು ಮಮ್ಮಲ ಮರುಗಿಸಿದ್ದವು. ಆಕೆಯಲ್ಲಿನ ಕವಯತ್ರಿ ಎಚ್ಚರಗೊಂಡಿದ್ದಳು.

ಆಕೆ ಬರೆದ ಈ ಕವಿತೆಗೆ ರಾಜಕಾರಣದ ಉದ್ದೇಶವೇ ಇರಲಿಲ್ಲ. ಸಾವಿನ ದುರಂತಕ್ಕೆ ಸಂವೇದನಾಶೀಲ ಮನಸ್ಸೊಂದು ಮಿಡಿದ ಸರಳ ಕ್ರಿಯೆಯಿದು ಎಂದು ಪಾರುಲ್ ಮತ್ತು ಅವರ ಕವಿತೆಯನ್ನು ಬಲ್ಲವರು ಹೇಳಿದ್ದಾರೆ. ಇಲ್ಲಿಯತನಕ ಗುಜರಾತಿನ ಬಲಪಂಥೀಯರು ಮೆಚ್ಚಿಕೊಂಡಿದ್ದ ಕವಿ ಆಕೆ.

ಖುದ್ದು ಗುಜರಾತಿನ ಆರೆಸ್ಸೆಸ್ ಮುಖವಾಣಿ ಸಾಧನಾ ನಿಯತಕಾಲಿಕದ ಸಂಪಾದಕರಾಗಿದ್ದ ವಿಷ್ಣು ಪಾಂಡ್ಯ ಗುಜರಾತೀ ಕಾವ್ಯದ ಉಜ್ವಲ ಭವಿಷ್ಯ ಎಂದು ಆಕೆಯ ಪ್ರತಿಭೆಯನ್ನು ಈ ಹಿಂದೆ ಕೊಂಡಾಡಿದ್ದುಂಟು. ಇದೀಗ ಆಕೆ ಏಕಾಏಕಿ ಹಿಂದೂ ವಿರೋಧಿ, ಸಡಿಲ ಶೀಲದ ಹೆಂಗಸು, ನೈತಿಕ ಮೌಲ್ಯಗಳೇ ಇಲ್ಲದವಳು ಎಂಬ ಹಿಂಸಾತ್ಮಕ ಟೀಕೆಗಳ ದಾಳಿಯನ್ನು ಎದುರಿಸಿದ್ದಾರೆ. ಸಾವಿರಕ್ಕೂ ಹೆಚ್ಚು ಮಂದಿ ಕವಿಗಳು-ಬರೆಹಗಾರರನ್ನು ಒಳಗೊಂಡ ಗುಜರಾತಿ ಲೇಖಕ ಮಂಡಲ ಅವರ ಬೆಂಬಲಕ್ಕೆ ನಿಂತಿರುವುದು ಹೌದು.

ಗಂಗೆಯು ಶವವಾಹಿನಿಯಾಗಿ ಮಾರ್ಪಟ್ಟಿರುವ ರಾಮರಾಜ್ಯದ ಬೆತ್ತಲೆ ಅರಸ ಎಂದು ಕವಿತೆಯಲ್ಲಿ ಬಣ್ಣಿಸಿದ್ದರೂ ಆಕೆ ಯಾರನ್ನೂ ಹೆಸರಿಸಿಲ್ಲ. ಗಂಗೆಯಲ್ಲಿ ತೇಲಿದ ಶವಗಳು ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಸುದ್ದಿ ಮಾಡಿದ್ದವು. ಗಂಗಾ-ಯಮುನಾ ನದಿಗಳ ತಟದ ಮರಳಿನ ವಿಸ್ತಾರದಲ್ಲಿ ಹುಗಿಯಲಾಗಿದ್ದ ಸಹಸ್ರಾರು ಕೋವಿಡ್ ಪೀಡಿತರ ಕಳೇಬರಗಳ ಛಾಯಾಚಿತ್ರಗಳು, ಡ್ರೋನ್ ಮೂಲಕ ಸೆರೆಹಿಡಿದ ವಿಡಿಯೋಗಳು ವಿದೇಶೀ ಸಮೂಹ ಮಾಧ್ಯಮಗಳಲ್ಲಿ ವ್ಯಾಪಕ ಪ್ರಸಾರ ಕಂಡವು. ಬಿಳಿ ಮರಳಿನ ವಿಸ್ತಾರದಲ್ಲಿ ಹುಗಿದು ರಾಮನಾಮ ಅಚ್ಚು ಮಾಡಿದ ಕಾವಿ ವಸ್ತ್ರಗಳನ್ನು ಹೊದಿಸಿ, ಗುರುತಿಗಾಗಿ ಸುತ್ತ ಬಿದಿರು ದಬ್ಬೆಗಳನ್ನು ಸಿಕ್ಕಿಸಿದ್ದ ಘೋರ ದುರಂತದ ಚಿತ್ರಗಳು ಕೋವಿಡ್ ಸಾಂಕ್ರಾಮಿಕದ ಮುಂದೆ ಪ್ರಭುತ್ವದ ಅಸಹಾಯಕತೆಯನ್ನೂ, ಜನಸಮುದಾಯ ಎದುರಿಸಿದ ಸಾವುನೋವುಗಳ ದುರಂತವನ್ನೂ, ಶವಸಂಸ್ಕಾರಕ್ಕೆ ಸಾವಿರಾರು ರುಪಾಯಿಗಳನ್ನು ವೆಚ್ಚ ಮಾಡಲಾಗದೆ ಬಂಧುಗಳ ಶವಗಳನ್ನು ಗಂಗೆಯಲ್ಲಿ ತೇಲಿಬಿಟ್ಟ ಇಲ್ಲವೇ ಮರಳಿನಲ್ಲಿ ಹುಗಿದ ಬಡಜನರ ತಬ್ಬಲಿತನದ ಕಠೋರ ಬಿಂಬಗಳಾಗಿ ಪ್ರಸಾರವಾದವು.

ಗುಜರಾತಿ ಸಾಹಿತ್ಯ ಆಕಾಡೆಮಿಯ ನಿಯತಕಾಲಿಕ ಶಬ್ದಸೃಷ್ಟಿಯ ಸಂಪಾದಕೀಯದ ವಿರುದ್ಧ ಆ ರಾಜ್ಯದ ಉದ್ದಗಲಕ್ಕೆ ಬುದ್ಧಿಜೀವಿಗಳು ಸಿಡಿದೆದ್ದಿದ್ದಾರೆ. ’ಶಬ್ದಸೃಷ್ಟಿ’ ಎಂಬುದು ಗುಜರಾತ್ ಸಾಹಿತ್ಯ ಆಕಾಡೆಮಿಯ ಮುಖವಾಣಿ. ಈ ನಿಯತಕಾಲಿಕ ಪ್ರಕಟಿಸಿರುವ ಸಂಪಾದಕೀಯವೊಂದು ಆ ರಾಜ್ಯದ ಸಾಹಿತ್ಯ ಜಗತ್ತಿನಲ್ಲಿ ಕೋಲಾಹಲ ಎಬ್ಬಿಸಿದೆ. ಈ ಹಿಂದೆ ಆರೆಸ್ಸೆಸ್ ನಿಯತಕಾಲಿಕದ ಸಂಪಾದಕರಾಗಿದ್ದ ವಿಷ್ಣು ಪಾಂಡ್ಯ ಅವರು ಈಗ ಗುಜರಾತ್ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು.

’ಅಲ್ಲ, ಇದು ಕವಿತೆಯಲ್ಲ, ಅರಾಜಕತೆಯ ಸೃಷ್ಟಿಗೆ ಕವಿತೆಯೊಂದರ ದುರುಪಯೋಗ’ ಎಂಬುದು ಈ ಸಂಪಾದಕೀಯದ ತಲೆಬರೆಹ. ಪ್ರಸ್ತಾಪಿತ ಕವಿತೆಯನ್ನು ರಚಿಸಿದ ಕವಯತ್ರಿಯನ್ನು ಬೆಂಬಲಿಸಿ ಕವಿತೆಯನ್ನು ಹಂಚಿಕೊಂಡವರು ’ಸಾಹಿತ್ಯ ನಕ್ಸಲೀಯರು’ ಎಂದು ಬಣ್ಣಿಸಲಾಗಿದೆ. ಮೋದಿ ಆಡಳಿತವನ್ನು ವಿಮರ್ಶೆಗೆ ಗುರಿ ಮಾಡಿದ ಸಾಮಾಜಿಕ ಕಾರ್ಯಕರ್ತರು ಮತ್ತು ಚಿಂತಕರಿಗೆ ಈಗಾಗಲೆ ’ಅರ್ಬನ್ ನಕ್ಸಲರು’ ಎಂಬ ಹಣೆಪಟ್ಟಿ ಹಚ್ಚಿ ಸೆರೆಮನೆಗೆ ತಳ್ಳಲಾಗಿದೆ. ಅರ್ಬನ್ ನಕ್ಸಲರು ಪದಪುಂಜ ಸರಣಿಗೆ ಇದೀಗ ಸೇರಿಸಲಾಗಿರುವ ಹೊಸ ಶಬ್ದಾವಳಿ ’ಸಾಹಿತ್ಯ ನಕ್ಸಲೀಯರು’.

ಸೃಜನಶೀಲ ಲೇಖಕರು ಏನನ್ನು ಬರೆಯಬೇಕು, ಏನನ್ನು ಬರೆಯಕೂಡದು ಎಂದು ವಿಧಿಸುವ ಪಾಂಡ್ಯ ಸಂಪಾದಕೀಯವು ಇಂದಿರಾಗಾಂಧಿ 1975ರಲ್ಲಿ ಹೇರಿದ್ದ ತುರ್ತುಪರಿಸ್ಥಿತಿಯನ್ನು ನೆನಪಿಸುತ್ತದೆ. ಲೇಖನಿಯನ್ನು ಸುತ್ತಿಗೆಯಿಂದ ಜಜ್ಜಿ ಹಾಕಿದಂತೆ ಮತ್ತು ಗುಜರಾತಿ ಲೇಖಕರ ಅಭಿವ್ಯಕ್ತಿ ಸ್ವಾತಂತ್ರ್ಯದ ಮರಣಶಾಸನ. ದೇಶದಲ್ಲಿ ಅರಾಜಕತೆ ಹರಡುವ ರಾಷ್ಟ್ರವಿರೋಧಿ ಸಾಹಿತ್ಯ ನಕ್ಸಲೀಯರನ್ನು ಮತ್ತು ವಿಧ್ವಂಸಕ ಶಕ್ತಿಗಳನ್ನು ಕವಿತೆಯು ಉತ್ತೇಜಿಸಿದೆ ಎಂಬ ಪಾಂಡ್ಯ ಹೇಳಿಕೆ ಅತೀವ ಆಘಾತಕಾರಿ ಮತ್ತು ತೀವ್ರ ಖಂಡನೀಯ ಎಂದು ಸಾಹಿತಿಗಳು ನೀಡಿರುವ ಸಂಯುಕ್ತ ಹೇಳಿಕೆ ಕಳವಳ ಪ್ರಕಟಿಸಿದೆ.

ಈ ಪುಟ್ಟ ಕವಿತೆಯು ಸಂಪ್ರದಾಯವಾದಿ ಗುಜರಾತಿ ಹಿಂದೂ ಸಂವೇದನೆಯೊಂದರ ವಿಸ್ಫೋಟ ಎಂದೂ ಹಿಂದೀ ಚಿಂತಕ ಅಪೂರ್ವಾನಂದ್ ಬಣ್ಣಿಸಿದ್ದಾರೆ.

ಬರೆದಿದ್ದ ಕವಿತೆಯಲ್ಲಿ ಅಡಗಿದ್ದ ದೇಶದ್ರೋಹ ಅದಾವುದು? ಮೂಲ ಕವಿತೆಯ ಶಕ್ತಿಯನ್ನು ಅನುವಾದದಲ್ಲಿ ಸೆರೆಹಿಡಿಯುವುದು ಕಡು ಕಠಿಣ ಕಸರತ್ತು.

ಈ ವರದಿಗಾರ ಮಾಡಿದ ಮೂಲ ಕವಿತೆಯ ಒರಟು ತರ್ಜುಮೆಯ ಪ್ರಯತ್ನ ಈ ಕೆಳಕಂಡಂತಿದೆ-

ಕಳೇಬರಗಳೆಲ್ಲ ಒಮ್ಮೆಗೇ ದನಿ ತೆರೆದು ಮಾತಾಡಿದವು- ಸರ್ವವೂ ಸುಭಗ ಸುಮುಖ ಸುಭಿಕ್ಷ ಅಂದ ಚೆಂದವಯ್ಯಾ
ಪ್ರಭುವೇ, ನಿನ್ನ ರಾಮರಾಜ್ಯದಲಿ ಸಾಕ್ಷಾತ್ ಗಂಗೆಯೇ ಶವವಾಹಿನಿ.
ಧಣಿಯೇ ಸಾಲುವುದಿಲ್ಲವಯ್ಯಾ ನಿನ್ನ ಚಿತಾಗಾರಗಳು, ಸೌದೆಯೇ ಇರದ ಚಿತೆಗಳು
ಪ್ರಭುವೇ ಹೆಣಗಳಿಗೆ ಹೆಗಲು ನೀಡಿ ಸೋತಿವೆಯಯ್ಯಾ ನಮ್ಮ ಭುಜಗಳು, ಇಂಗಿ ಹೋಗಿವೆ ಕಣ್ಣೀರು
ಧಣಿಯೇ ಕಾಣದೇನಯ್ಯಾ ಮನೆ ಮನೆಗೆ ನುಗ್ಗಿದ ಯಮದೂತನ ಮೃತ್ಯು ನರ್ತನ
ಪ್ರಭುವೇ ನಿನ್ನ ರಾಮರಾಜ್ಯದಲಿ ಸಾಕ್ಷಾತ್ ಗಂಗೆಯೇ ಶವವಾಹಿನಿ
ಧಣಿಯೇ ಹಗಲಿರುಳು ಉರಿದುರಿದು ದಣಿದು ಒರಗಿವೆಯಯ್ಯಾ ಚಿತೆಗಳು
ಒಡೆಯನೇ ಒಡೆಯತೊಡಗಿವೆ ನಮ್ಮ ಕೈಬಳೆಗಳು ನಿತ್ಯ ನಿರಂತರ, ಚೂರು, ಚೂರಾಗಿವೆ ಹೃದಯಗಳು
ಊರೂರುಗಳು ಹೊತ್ತಿ ಉರಿವಾಗ ನುಡಿಯತೊಡಗಿದೆ ಪಿಟೀಲು- ’ವಾಹ್ ಬಿಲ್ಲಾ ರಂಗಾ’
ಪ್ರಭುವೇ ನಿನ್ನ ರಾಮರಾಜ್ಯದಲಿ ಸಾಕ್ಷಾತ್ ಗಂಗೆಯೇ ಶವವಾಹಿನಿ.

ಧಣಿಯೇ ದೈವೀಕ ನಿನ್ನ ಉಡುಪುಗಳು, ದೈದೀಪ್ಯ ನಿನ್ನ ಪ್ರಭಾವಳಿ
ಊರಿಗೆ ಊರೇ ಕಾಣತೊಡಗಿದೆ ನಿನ್ನ ನಿಜರೂಪವನು
ನಿಜದನಿಯ ಮಾನವನಿದ್ದರೆ ಮುಂದೆ ಬರಲಿ, ಹೇಳಲಿ ಬಾಯಿ ತೆರೆದು
’ನನ್ನ ಅರಸ ನಿಂತಿರುವನು ಬರಿ ಬತ್ತಲಾಗಿ’
ಪ್ರಭುವೇ ನಿನ್ನ ರಾಮರಾಜ್ಯದಲಿ ಸಾಕ್ಷಾತ್ ಗಂಗೆಯೇ ಶವವಾಹಿನಿ.

ಬೈಗುಳಗಳ ಸುರಿಮಳೆಯ ನಂತರ ತಮ್ಮ ಫೇಸ್ಬುಕ್ ಖಾತೆಗೆ ಆಕೆ ಬೀಗ ಹಾಕಿದ್ದಾರೆ. ಆದರೆ ವಿವಾದಕ್ಕೆ ದಾರಿ ಮಾಡಿದ ಕವಿತೆಯನ್ನು ತೆಗೆದು ಹಾಕಿಲ್ಲ. ಈ ಕವಿತೆಯನ್ನು ಸಾಮಾಜಿಕ ಜಾಲತಾಣ ಖಾತೆಯಿಂದ ತೆಗೆದು ಹಾಕದೆ ಇರುವುದಕ್ಕೆ ಅಭಿನಂದಿಸಿದ ಗುಜರಾತಿ ಕವಿ ಮೇಹುಲ್ ದೇವಕಲಾ ಅವರಿಗೆ ಪಾರುಲ್ ಪ್ರಶ್ನೆ- ಕವಿತೆಯಲ್ಲಿ ನಾನು ತಪ್ಪೇನನ್ನೂ ಹೇಳಿಲ್ಲ. ಹೀಗಿದ್ದಾಗ ಅದನ್ನು ಯಾಕೆ ತೆಗೆದು ಹಾಕಲಿ?


ಇದನ್ನೂ ಓದಿ: ನೂತನ ಐಟಿ ನಿಯಮಗಳ ಮೊದಲ ಟಾರ್ಗೆಟ್ ಕಾರ್ಟೂನಿಸ್ಟ್‌ಗಳೇ ಏಕಿರಬಹುದು?

ಇದನ್ನೂ ಓದಿ: ತಬ್ಲೀಘಿಗಳನ್ನು ಕೆಟ್ಟದಾಗಿ ಬಿಂಬಿಸಿದ್ದಕ್ಕೆ ಕ್ಷಮೆ ಕೇಳಿದ ‘ನ್ಯೂಸ್‌18 ಕನ್ನಡ’!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...