ಕೊರೊನಾ ಒಂದನೆ ಅಲೆಯ ಸಮಯದಲ್ಲಿ ‘ತಬ್ಲೀಘಿ ಜಮಾಅತ್’ ವಿರುದ್ದ ಅಪಪ್ರಚಾರ ಮಾಡಿದ್ದಕ್ಕೆ ‘ನ್ಯೂಸ್ 18 ಕನ್ನಡ’ ಚಾನೆಲ್ ಬುಧವಾರ ರಾತ್ರಿ ಕ್ಷಮೆ ಕೇಳಿದೆ. ಕೊರೊನಾ ಹರಡುವಿಕೆಗೆ ‘ಒಂದು ಸಮುದಾಯ ಕಾರಣ’ ಎಂಬಂತೆ ಬಿಂಬಿಸಿ ಹಲವು ಚಾನೆಲ್ಗಳು ದ್ವೇಷ ಹರಡಿದ್ದವು. ಈ ಚಾನೆಲ್ಗಳ ವಿರುದ್ದ, ಬೆಂಗಳೂರು ಮೂಲದ ‘ಹೇಟ್ ಸ್ಪೀಚ್ ಬೇಡ’ ಎಂಬ ದ್ವೇಷ ಭಾಷಣಗಳ ವಿರುದ್ದ ಅಭಿಯಾನದ ತಂಡವು ನಡೆಸಿದ ಹೋರಾಟಕ್ಕೆ ಗೆಲುವು ಸಿಕ್ಕಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಲವಾರು ಮಂದಿ ಅಭಿನಂದನೆ ಸಲ್ಲಿಸಿದ್ದಾರೆ.
‘ಹೇಟ್ ಸ್ಪೀಚ್ ಬೇಡ’ ಅಭಿಯಾವು NBSA ಗೆ ದೂರುಗಳನ್ನು ಸಲ್ಲಿಸಿ, ಏಪ್ರಿಲ್ 1, 2020 ರಂದು ತಬ್ಲಿಘಿ ಜಮಾಅತ್ ಬಗ್ಗೆ ‘ನ್ಯೂಸ್ 18 ಕನ್ನಡ’ ಪ್ರಸಾರ ಮಾಡಿದ ಎರಡು ಕಾರ್ಯಕ್ರಮಗಳಿಗೆ ಆಕ್ಷೇಪ ವ್ಯಕ್ತಪಡಿಸಿತ್ತು.
ದೂರಿನ ವಿಚಾರಣೆ ನಡೆಸಿದ್ದ NBSA, ವಿವಾದಾತ್ಮಕ ಕಾರ್ಯಕ್ರಮವನ್ನು ಪ್ರಸಾರ ಮಾಡಿದ್ದಕ್ಕೆ ನ್ಯೂಸ್ 18 ಕನ್ನಡಕ್ಕೆ 1 ಲಕ್ಷ ದಂಡ ವಿಧಿಸಿತ್ತು. ಅಲ್ಲದೆ ನೀತಿ ಸಂಹಿತೆ ಮತ್ತು ಪ್ರಸಾರ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಜೂನ್ 23 ರಂದು ರಾತ್ರಿ 9 ಗಂಟೆಯ ಸುದ್ದಿಗೆ ಮುಂಚಿತವಾಗಿ ಕ್ಷಮೆಯಾಚಿಸುವುದನ್ನು ಪ್ರಸಾರ ಮಾಡಬೇಕು ಎಂದು ಚಾನೆಲ್ಗೆ ನಿರ್ದೇಶನ ನೀಡಿತ್ತು. ಜೊತೆಗೆ ಎಲ್ಲಾ ವೆಬ್ ಪೋರ್ಟಲ್ಗಳಿಂದ ಎರಡು ಕಾರ್ಯಕ್ರಮಗಳ ವೀಡಿಯೊಗಳನ್ನು ತೆಗೆಯುವಂತೆ ಆದೇಶಿಸಿತ್ತು.
ಇದನ್ನೂ ಓದಿ: ಸುದ್ದಿಯೇನೇ ಮನೋಲ್ಲಾಸಿನಿ: ಮಾಧ್ಯಮ ನಲ್ಲರು ಮತ್ತು ವಿಕೇಂದ್ರೀಕರಣ ಭಾಗ-1
ಈ ಹಿನ್ನಲೆಯಲ್ಲಿ ಬುಧವಾರ ರಾತ್ರಿ ನ್ಯೂಸ್18 ಕನ್ನಡ ಕಳೆದ ವರ್ಷ ನಡೆಸಿದ ಎರಡು ಕಾರ್ಯಕ್ರಮಗಳಿಗೆ ಕ್ಷಮೆಯಾಚಿಸಿದೆ.
ಅದು ತನ್ನ ವಿಷಾದ ಸಂದೇಶದಲ್ಲಿ, “ನ್ಯೂಸ್18 ಕನ್ನಡವು 1-4-2020 ರಂದು ಪ್ರಸಾರ ಮಾಡಿದ ‘ದೇಶಕ್ಕೆ ಕೊರೊನಾ ವೈರಸ್ ಹಬ್ಬಿಸಿದ ದೆಹಲಿ ನಿಝಾಮುದ್ದೀನ್ ಹೇಗಿದೆ ಗೊತ್ತಾ?’ ಮತ್ತು ‘ಕರ್ನಾಟಕದಿಂದ ದೆಹಲಿಯ ಜಮಾಅತ್ ಸಭೆಗೆ ಹೋದವರ ಸಂಖ್ಯೆ ಎಷ್ಟು?’ ಎಂಬ ಎರಡು ವರದಿಗಳನ್ನು ಪ್ರಸಾರ ಮಾಡಿದ್ದು, ನೀತಿ ಸಂಹಿತೆ ಹಾಗೂ ಪ್ರಸಾರ ಮತ್ತು ಗುಣಮಟ್ಟದ ಪ್ರಕಾರ ಪ್ರಸಾರ ಮಾಧ್ಯಮ ಪಾಲಿಸಬೇಕಾದ ನಿಷ್ಪಕ್ಷತೆ, ವಸ್ತುನಿಷ್ಠತೆ ಹಾಗೂ ತಟಸ್ಥತೆ ಕಾಪಾಡಿಕೊಳ್ಳುವುದರಲ್ಲಿ ನಾವು ನಿಯಮ ಉಲ್ಲಂಘಿಸಿದ್ದು, ಈ ಕಾರ್ಯಕ್ರಮ ಪ್ರಸಾರವಾಗಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತಿದ್ದೇವೆ” ಎಂದು ಹೇಳಿದೆ.
“ಜನಾಂಗೀಯ ಮತ್ತು ಧಾರ್ಮಿಕ ಸಾಮರಸ್ಯದ ಕುರಿತಾದ ವರದಿಗಾರಿಕೆಯಲ್ಲಿ ಪ್ರಸಾರ ಮಾಧ್ಯಮ ಪಾಲಿಸಬೇಕಾದ ನಿರ್ದಿಷ್ಟ ಮಾರ್ಗಸೂಚಿ ಅನುಸರಿಸುವುದರಲ್ಲೂ ನಿಯಮ ಉಲ್ಲಂಘನೆಯಾಗಿದೆ. ಯಾವುದೆ ಸಮುದಾಯವನ್ನು ಕೀಳುಮಟ್ಟದಲ್ಲಿ ಅಥವಾ ಸಮುದಾಯದಲ್ಲಿ ದ್ವೇಷ ಭಾವನೆಗಳನ್ನು ಹೆಚ್ಚಿಸುವ ಉದ್ದೇಶ ನಮ್ಮದಾಗಿರಲಿಲ್ಲ ಎಂದು ಸ್ಪಷ್ಟ ಪಡಿಸುತ್ತೇವೆ. ಈ ವಿಷಯವನ್ನು ಭಾವೋದ್ರಕಗೊಳಿಸುವುದು ನಮ್ಮ ಉದ್ದೇಶವಾಗಿರಲಿಲ್ಲ. ಬ್ರಾಡ್ಕಾಸ್ಟಿಂಗ್ ಮಾನದಂಡಗಳನ್ನು ಸುಧಾರಿಸುವ ಪ್ರಯತ್ನದಲ್ಲಿ NBSA ಜಾರಿಗೊಳಿಸಿದ ಕೋಡ್ ಆಫ್ ಎಥಿಕ್ಸ್ ಮತ್ತು ಬ್ರಾಡ್ ಕಾಸ್ಟಿಂಗ್ ಸ್ಟಾಂಡರ್ಡ್ಸ್ ಮತ್ತು ಗೈಡ್ ಲೈನ್ಗಳಿಗೆ ನಾವು ಬದ್ದರಾಗಿರುತ್ತೇವೆ” ಎಂದು ಚಾನೆಲ್ ಕ್ಷಮೆಯಾಚಿಸಿದೆ.
@HateSpeechBeda you did it! #News18KannadaApology
Shame on you @News18Kannada for the hateful reporting. Can we expect you to learn? pic.twitter.com/BoXA8Gvkxg
— Soundarya Iyer (@soniyer) June 23, 2021
ಇದನ್ನೂ ಓದಿ: ಡೇಟಾ ಖೋಲಿ: ಮಾಧ್ಯಮ ನಲ್ಲರು ಮತ್ತು ವಿಕೇಂದ್ರೀಕರಣ ಭಾಗ-2
ನ್ಯೂಸ್ 18 ಕನ್ನಡ ಕ್ಷಮೆಯ ವಿಚಾರದಲ್ಲಿ ಪ್ರತಿಕ್ರಿಯಿಸಿರುವ ‘ಹೇಟ್ ಸ್ಪೀಚ್ ಬೇಡ ಅಭಿಯಾನ’ವು, “ನ್ಯೂಸ್ 18 ಕನ್ನಡ NBSA ನಿರ್ದೇಶನದಂತೆ ತನ್ನ ಕ್ಷಮೆಯಾಚನೆಯನ್ನು ಪ್ರಸಾರ ಮಾಡಿದೆ. ಇದು ನಮಗೆ ಬಹಳ ಸ್ವಾಗತಾರ್ಹ ಸುದ್ದಿ. ನಾವು ಮಾಧ್ಯಮವನ್ನು ಜವಾಬ್ದಾರಿಯುತವಾಗಿ ಹಿಡಿದಿಟ್ಟುಕೊಳ್ಳಬಹುದು ಎಂದು ಈ ಮೂಲಕ ತಿಳಿಯುತ್ತದೆ. ದ್ವೇಷದ ಮಾತು ಮತ್ತು ದ್ವೇಷದ ಮಾಧ್ಯಮಗಳ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಿ ನಿಂತು ಹಿಮ್ಮೆಟ್ಟಿಸಬಹುದು” ಎಂದು ಹೇಳಿದೆ.
@News18Kannada has aired its apology as directed by the NBSA! This is very welcome news for all of us, folks. We know now that we can #HoldMediaAccountable. All of us. Together. We can push back against hate speech and hateful media!#News18KannadaApology pic.twitter.com/8VAHaYHNjc
— Hate Speech Beda (@HateSpeechBeda) June 23, 2021
ಜೊತೆಗೆ ದ್ವೇಷ ಕಾರುವ ಚಾನೆಲ್ಗಳ ವಿರುದ್ದ ಹೋರಾಟ ನಡೆಸಿ ಜಯಗಳಿಸಿದ್ದಕ್ಕೆ ‘ಹೇಟ್ ಸ್ಪೀಚ್ ಬೇಡ’ ಅಭಿಯಾನ ತಂಡಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಮಂದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
NBSA ನ್ಯೂಸ್ 18 ಕನ್ನಡ ಮಾತ್ರವಲ್ಲದೆ ಕನ್ನಡದ ಮತ್ತೊಂದು ಚಾನೆಲ್ ‘ಸುವರ್ಣ ನ್ಯೂಸ್’ಗೆ ಕೂಡಾ ತಬ್ಲೀಘಿಗಳ ವಿರುದ್ದ ಕಾರ್ಯಕ್ರಮ ಮಾಡಿದ್ದಕ್ಕೆ 50 ಸಾವಿರ ದಂಡವನ್ನು ಹಾಕಿತ್ತು. ಜೊತೆಗೆ ಆದೇಶದಲ್ಲಿ, “ಕಾರ್ಯಕ್ರಮದಲ್ಲಿ ಕೊರೊನಾ ವೈರಸ್ ಹರಡುವಿಕೆಯ ಸಂಪೂರ್ಣ ಆಪಾದನೆಯನ್ನು ತಬ್ಲಿಘಿ ಜಮಾಅತ್ ಮೇಲೆ ಹಾಕಲಾಗಿದ್ದು, ಅದನ್ನು ನಿರ್ದಿಷ್ಟ ಸಮುದಾಯದ ವಿರುದ್ದ ತಿರುಗಿಸಲಾಗಿದೆ. ಜೊತೆಗೆ ಕಾರ್ಯಕ್ರಮಗಳ ಶೀರ್ಷಿಕೆಗಳು ಕೋಮು ಹಿಂಸಾಚಾರವನ್ನು ಪ್ರಚೋದಿಸುವ ಕಪಟತೆಯನ್ನು ಹೊಂದಿವೆ” ಎಂದು ಹೇಳಿತ್ತು.
“ಈ ಕಾರ್ಯಕ್ರಮಗಳಲ್ಲಿ ಖಂಡಿತವಾಗಿಯೂ ಸಮತೋಲನ, ವಸ್ತುನಿಷ್ಠತೆ ಮತ್ತು ನಿಷ್ಪಕ್ಷಪಾತತೆಯ ಕೊರತೆಯಿದೆ. ಅಲ್ಲದೆ ಈ ಕಾರ್ಯಕ್ರಮಗಳು ಒಂದು ನಿರ್ದಿಷ್ಟ ಧರ್ಮದ ವಿರುದ್ಧ ಬಹಿರಂಗವಾಗಿ ಪೂರ್ವಾಗ್ರಹ ಪೀಡಿತವಾಗಿದ್ದವು” ಎಂದು ಸುವರ್ಣ ನ್ಯೂಸ್ಗೆ ಹೇಳಿತ್ತು.
ಜೊತೆಗೆ ಆಕ್ಷೇಪಾರ್ಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ್ದಕ್ಕೆ ಇಂಗ್ಲಿಷ್ ನ್ಯೂಸ್ ಚಾನೆಲ್ ಟೈಮ್ಸ್ ನೌ ಅನ್ನು NBSA ಖಂಡಿಸಿದೆ.
ಇದನ್ನೂ ಓದಿ: ತಬ್ಲೀಘಿ ಜಮಾತ್ ಗುರಿಯಾಗಿಸಿ ಕಾರ್ಯಕ್ರಮ: ಸುವರ್ಣ ನ್ಯೂಸ್ ಮತ್ತು ನ್ಯೂಸ್ 18 ಕನ್ನಡಕ್ಕೆ 1.5 ಲಕ್ಷ ದಂಡ