Homeಮುಖಪುಟ’ಬಂಗಾರದ ಮನುಷ್ಯ'ನ ಅಡಿಪಾಯದಿಂದ ಹೊಸತನ ಮತ್ತು ಸದಭಿರುಚಿಯನ್ನು ತಮ್ಮದಾಗಿಸಿಕೊಂಡಿದ್ದ ಚಂದ್ರು

’ಬಂಗಾರದ ಮನುಷ್ಯ’ನ ಅಡಿಪಾಯದಿಂದ ಹೊಸತನ ಮತ್ತು ಸದಭಿರುಚಿಯನ್ನು ತಮ್ಮದಾಗಿಸಿಕೊಂಡಿದ್ದ ಚಂದ್ರು

- Advertisement -
- Advertisement -

ಕನ್ನಡ ಚಿತ್ರರಂಗದ ಬೆಳವಣಿಗೆಯ ಹಾದಿಯಲ್ಲಿ ಕೆ.ಸಿ.ಎನ್ ಕುಟುಂಬದ ಹೆಜ್ಜೆ ಗುರುತುಗಳು ದಟ್ಟವಾಗಿ ಕಾಣಿಸುತ್ತವೆ. ಚಿತ್ರನಿರ್ಮಾಣ, ಹಣಕಾಸಿನ ನೆರವು, ವಿತರಣೆ ಜೊತೆ ಪ್ರದರ್ಶಕರಾಗಿ ಸಿನಿಮಾರಂಗದೊಂದಿಗೆ ಈ ಕುಟುಂಬದ್ದು ಸುಮಾರು ಆರೇಳು ದಶಕಗಳ ಒಡನಾಟ. ಸರ್ವಮಂಗಳ, ಕಸ್ತೂರಿ ನಿವಾಸ, ಶರಪಂಜರ, ಬೆಳ್ಳಿಮೋಡ, ಬಬ್ರುವಾಹನ, ಹುಲಿಯ ಹಾಲಿನ ಮೇವು, ಬಂಗಾರದ ಮನುಷ್ಯ, ರಂಗನಾಯಕಿ, ಸತ್ಯ ಹರಿಶ್ಚಂದ್ರ, ದೂರದ ಬೆಟ್ಟ, ಅಂತ, ಮುತ್ತಿನಹಾರ-ಹೀಗೆ ಮೈಲುಗಲ್ಲಾದ ಕನ್ನಡ ಚಿತ್ರಗಳ ನಿರ್ಮಾಣ, ಫೈನಾನ್ಸ್, ವಿತರಣೆಯೊಂದಿಗೆ ಸದಭಿರುಚಿಯ ಸಿನಿಮಾಗಳ ಹರಿವಿಗೆ ತಮ್ಮದೇ ಆದ ಕೊಡುಗೆ ನೀಡಿದೆ ಕೆಸಿಎನ್ ಮೂವೀಸ್. ಪ್ರಮುಖವಾಗಿ ಕನ್ನಡ ಚಿತ್ರಗಳನ್ನು ನಿರ್ಮಿಸಿದ ಕುಟುಂಬ ಹಿಂದಿ, ತೆಲುಗು, ತಮಿಳು, ಬೆಂಗಾಲಿ ಭಾಷೆಗಳಲ್ಲೂ ಸಿನಿಮಾಗಳನ್ನು ತಯಾರಿಸಿದ್ದಾರೆ.

ತಂದೆ ಕೆ.ಸಿ.ಎನ್.ಗೌಡರು ಹಾಕಿಕೊಟ್ಟ ಭದ್ರ ಅಡಿಪಾಯದಲ್ಲಿ ಪುತ್ರ ಕೆ.ಸಿ.ಎನ್.ಚಂದ್ರಶೇಖರ್ ಉತ್ತಮ ಸಿನಿಮಾ ಬೆಳೆ ತೆಗೆದರು. ಈ ಕುಟುಂಬದ ಬಗ್ಗೆ ಬರೆಯುವಾಗ ಕೆ.ಸಿ.ಎನ್.ಗೌಡರ ಕುರಿತು ಮೊದಲು ಹೇಳಬೇಕು. ದೊಡ್ಡಬಳ್ಳಾಪುರ ತಾಲೂಕಿನ ಕೊನೇನಹಳ್ಳಿ ಕೆ.ಸಿ.ಎನ್.ಗೌಡರ ಹುಟ್ಟೂರು. ಮೂಲತಃ ರೇಷ್ಮೆ ಉದ್ದಿಮೆದಾರರು. ಅವರ ಸಿನಿಮಾ ನಂಟು ಶುರುವಾಗಿದ್ದು 1963ರಲ್ಲಿ. ರಾಜಾಜಿನಗರದ ’ನವರಂಗ್’ ಚಿತ್ರಮಂದಿರದ ನಿವೇಶನ ಹರಾಜಾದಾಗ ಅದನ್ನು ಕೊಂಡು ಅಲ್ಲಿ ಸುಂದರ ಚಿತ್ರಮಂದಿರ ನಿರ್ಮಿಸಿದರು.

ಅಲ್ಲಿಂದ ಶುರುವಾದ ಗೌಡರ ಸಿನಿಮಾಸಕ್ತಿ ಕ್ರಮೇಣ ಚಿತ್ರವಿತರಣೆಯತ್ತ ಹೊರಳಿತು. ಅಷ್ಟರಲ್ಲಿ ಅವರಿಗೆ ಸಿನಿಮಾರಂಗದ ಒಳಹೊರಗುಗಳ ಪರಿಚಯವಾಗಿತ್ತು. ಭಾವಮೈದುನ ಎಚ್.ಎನ್.ಮುದ್ದುಕೃಷ್ಣ ಅವರೊಂದಿಗೆ ಸೇರಿ ’ಪಾರಿಜಾತ ಫಿಲಂಸ್’ ಸ್ಥಾಪಿಸಿ ಹಂಚಿಕೆ ಆರಂಭಿಸಿದರು. ಹಂಚಿಕೆ ಮಾಡಿದ ಮೊದಲ ಚಿತ್ರ ’ಬೆಳ್ಳಿಮೋಡ’ದಲ್ಲೇ ಅವರು ಯಶಸ್ಸು ಕಂಡರು. ಮುಂದೆ ಸಹೋದರ ಮೂರ್ತಿ ಅವರೊಡಗೂಡಿ ’ಕೆ.ಸಿ.ಎನ್. ಮೂವೀಸ್’ ಸ್ಥಾಪಿಸಿದರು. ಈ ಹೊಸ ಸಂಸ್ಥೆಯ ಮೂಲಕ ಗೌಡರು ವಿತರಿಸಿದ ಮೊದಲ ಸಿನಿಮಾ ’ಸರ್ವಮಂಗಳ’. ಮುಂದೆ ಚಿತ್ರ ನಿರ್ಮಾಣಕ್ಕಿಳಿದು ’ಭಲೇ ಜೋಡಿ’ ನಿರ್ಮಿಸಿ ಯಶಸ್ಸು ಗಳಿಸಿದರು. ’ಶರಪಂಜರ’ ಚಿತ್ರಕ್ಕೆ ಆಗಿನ ಕಾಲಕ್ಕೆ ಬಹುದೊಡ್ಡ ಮೊತ್ತವೆನಿಸಿದ 10 ಲಕ್ಷ ರೂಪಾಯಿ ತೊಡಗಿಸಿ ಗಾಂಧಿನಗರದ ಗಮನ ಸೆಳೆದಿದ್ದರು.

ಕನ್ನಡದ ಮಹೋನ್ನತ ಚಿತ್ರಗಳಲ್ಲೊಂದಾದ ’ಬಂಗಾರದ ಮನುಷ್ಯ ಸಿನಿಮಾಗೆ ಹಣಕಾಸಿನ ನೆರವು ಒದಗಿಸಿದ್ದೇ ಗೌಡರು. ಮುಂದಿನ ದಿನಗಳಲ್ಲಿ ಅವರ ಸಂಸ್ಥೆಯಡಿ ತಯಾರಾದ ’ಬಬ್ರುವಾಹನ’, ’ಹುಲಿಯ ಹಾಲಿನ ಮೇವು’ ಚಿತ್ರಗಳೂ ದೊಡ್ಡ ಯಶಸ್ಸು ಕಂಡದ್ದಲ್ಲದೆ, ಇತರೆ ನಿರ್ಮಾಪಕರಿಗೂ ಇಂತಹ ಚಿತ್ರನಿರ್ಮಾಣಕ್ಕೆ ಸ್ಫೂರ್ತಿಯಾದವು. ಈ ವೇಳೆಗಾಗಲೇ ಅವರ ಹಿರಿಯ ಪುತ್ರ ಕೆ.ಸಿ.ಎನ್.ಚಂದ್ರು ಸಿನಿಮಾ ವ್ಯವಹಾರದಲ್ಲಿ ತಂದೆಗೆ ಬೆನ್ನೆಲುಬಾಗಿ ನಿಂತಿದ್ದರು. ಇದು ಗೌಡರಿಗೆ ಹೆಚ್ಚಿನ ಬಲ ತಂದಿತ್ತು. ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ರಾಜಕುಮಾರ್ ಅಭಿನಯದ ’ಸತ್ಯ ಹರಿಶ್ಚಂದ್ರ’ ಚಿತ್ರವನ್ನು ಬಣ್ಣದಲ್ಲಿ ತೆರೆಗೆ ತಂದದ್ದರಲ್ಲಿ ಕೆ.ಸಿ.ಎನ್.ಚಂದ್ರಶೇಖರ್ ಅವರ ಒತ್ತಾಸೆಯೂ ಇತ್ತು.

ಬಿಕಾಂ ಪದವೀಧರರಾದ ಕೆ.ಸಿ.ಎನ್.ಚಂದ್ರಶೇಖರ್ ತಂದೆಯವರ ಸಿನಿಮಾ ವ್ಯವಹಾರವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದರು. ಸಹೋದರ ಮೋಹನ್ ಅವರೊಡಗೂಡಿ ಚಿತ್ರನಿರ್ಮಾಣ, ವಿತರಣೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡರು. ಉದ್ಯಮದಲ್ಲಿ ತಂದೆಯವರಿಗಿದ್ದ ಒಳ್ಳೆಯ ಹೆಸರು ಅವರಿಗೆ ವರವಾಯ್ತು. ಕೆ.ಸಿ.ಎನ್. ಸಂಸ್ಥೆಯನ್ನು ಕನ್ನಡ ಚಿತ್ರರಂಗದ ಪ್ರಾತಿನಿಧಿಕ ಸಂಸ್ಥೆಯಂತೆ ಬೆಳೆಸಿದ್ದರಲ್ಲಿ ಚಂದ್ರಶೇಖರ್ ಅವರ ಚತುರತೆ ಇದೆ. ರಾಜಕುಮಾರ್ ಅಭಿನಯದ ’ದಾರಿ ತಪ್ಪಿದ ಮಗ’ ಚಿತ್ರದ ಸಹನಿರ್ಮಾಪಕರಾಗಿ ಚಿತ್ರರಂಗ ಪ್ರವೇಶಿಸಿದ ಚಂದ್ರಶೇಖರ್ ಮುಂದೆ ’ಜಯಸಿಂಹ’, ’ನಮ್ಮೂರ ರಾಜ’, ’ಇಂದಿನ ಭಾರತ’ ಮತ್ತಿತರ ಕನ್ನಡ ಚಿತ್ರಗಳು ಸೇರಿದಂತೆ ’ಮುಖ್ಯಮಂತ್ರಿ, ’ಸಂಚಲನಂ’ (ತೆಲುಗು), ’ಮೇರಿ ಅದಾಲತ್’ (ಹಿಂದಿ) ಇತರೆ ಭಾಷೆಗಳಲ್ಲೂ ಸಿನಿಮಾಗಳನ್ನು ನಿರ್ಮಿಸಿ ಯಶಸ್ಸು ಕಂಡರು. ಚಂದ್ರಶೇಖರ್ ಅವರ ಪತ್ನಿ ಮಹಾಲಕ್ಷ್ಮಿ. ಕಾವ್ಯ, ಸ್ಫೂರ್ತಿ, ಶ್ರೇಯಸ್ ಮೂವರು ಮಕ್ಕಳು.

ಚಿತ್ರ ಕೃಪೆ: ಪ್ರಗತಿ ಅಶ್ವಥ್‍ನಾರಾಯಣ್

ಕೆ.ಸಿ.ಎನ್.ಚಂದ್ರಶೇಖರ್ ಅವರು ಭಾರತೀಯ ಫಿಲಂ ಫೆಡರೇಷನ್ ಸದಸ್ಯರಾಗಿ, ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಕನ್ನಡ ಚಿತ್ರನಿರ್ಮಾಪಕರ ಸಂಘದ ಉಪಾಧ್ಯಕ್ಷರಾಗಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಚಲನಚಿತ್ರೋದ್ಯಮ ಸಹಕಾರ ಸಂಘದ ಅಧ್ಯಕ್ಷರು, ಚಲನಚಿತ್ರ ಸೆನ್ಸಾರ್ ಮಂಡಳಿಯ ಸದಸ್ಯರಾಗಿ ಕೂಡ ತೊಡಗಿಸಿಕೊಂಡಿದ್ದವರು. ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಮಂಡಳಿ ವತಿಯಿಂದ ಸಾಹಿತ್ಯ ಕಮ್ಮಟವನ್ನು ಏರ್ಪಡಿಸಿ ಭಾರತೀಯ ಚಿತ್ರರಂಗದ ಹಿರಿಯ ನಿರ್ದೇಶಕ, ಚಿತ್ರಸಾಹಿತಿಗಳನ್ನು ಕರೆಸಿ ಹೊಸ ಪೀಳಿಗೆಗೆ ಚಿತ್ರಕಥೆ, ಸಂಭಾಷಣೆ ರಚನೆಗೆ ನೆರವಾಗುವಂತಹ ಯೋಜನೆಯನ್ನು ಕಾರ್ಯರೂಪಕ್ಕೆ ತಂದವರು. ಕನ್ನಡ ಚಲನಚಿತ್ರ ಇತಿಹಾಸ ಸಂಪುಟಗಳ ರಚನೆಗೆ ಪ್ರೇರಕ ಶಕ್ತಿಯಾಗಿದ್ದರು. ಪರಭಾಷಾ ಚಿತ್ರಗಳ ಹಾವಳಿ, ರೀಮೇಕ್ ಪಿಡುಗು, ತೆರಿಗೆ ವಿನಾಯ್ತಿ, ಸಬ್ಸಿಡಿ ಮೊದಲಾದ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು ಚಂದ್ರು. ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗದ ಅಂದು ಮತ್ತು ಇಂದಿನ ದಿನಗಳನ್ನು ಬೆಸೆದ ಕೊಂಡಿಯೊಂದು ಕಳಚಿದಂತಾಗಿದೆ.

ಹೊಸತನದ ಹುಡುಕಾಟ

ಚಂದ್ರಶೇಖರ್ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿದ್ದಾಗ ’ಚಿತ್ರಕಥಾ ಶಿಬಿರ’ ಆಯೋಜಿಸಿದ್ದರು. ಆಗ ನಾನು ಅವರೊಂದಿಗೆ ಒಂದು ತಿಂಗಳು ಇರಬೇಕಾಗಿ ಬಂತು. ಆಗ ಅವರು ಯುವಸಾಹಿತಿಗಳನ್ನು ಕರೆಸೋಣ ಅಂತ ಹೇಳಿದ್ರು. ಮುಂಬಯಿಯಲ್ಲಿದ್ದ ಜಯಂತ ಕಾಯ್ಕಿಣಿ ಅವರಿಗೆ ಕನ್ನಡ ಚಿತ್ರರಂಗದ ಸಂಪರ್ಕ ಬರಬೇಕೆಂದರೆ ಈ ಚಿತ್ರಕಥಾ ಶಿಬಿರ ಮತ್ತು ಕೆ.ಸಿ.ಎನ್.ಚಂದ್ರು ಕಾರಣ.

ಯಾವ ಕೆಲಸವನ್ನು ಅಕಾಡೆಮಿ ಮಾಡಬೇಕಾಗಿತ್ತೋ, ಚಂದ್ರಶೇಖರ್ ಅಧ್ಯಕ್ಷರಾಗಿದ್ದಾಗ ಛೇಂಬರ್ ಮೂಲಕ ಆ ಕೆಲಸ ಮಾಡಿಸ್ತಾ ಇದ್ರು. ಕನ್ನಡ ಸಾಹಿತ್ಯದಲ್ಲಿ ಒಳ್ಳೆಯ ಕೃತಿಗಳು ಯಾವುವು? ಅದರಲ್ಲೂ ಸಿನಿಮಾಗೆ ಹೊಂದುವ ಕೃತಿಗಳು ಯಾವುವು ಎನ್ನುವುದನ್ನು ಚರ್ಚಿಸ್ತಾ ಇದ್ರು, ಓದ್ತಾ ಇದ್ರು. ಅದು ಯಶಸ್ವಿಯಾಗುತ್ತದೆಯೇ ಅಂತ ವಾಣಿಜ್ಯ ಕಾರಣಕ್ಕೆ ಹುಡುಕ್ತಾ ಇದ್ದುದಲ್ಲ ಅದು. ಕತೆಯಲ್ಲಿ ಹೊಸತನ ಇದೆಯೇ? ಚಿತ್ರರಂಗಕ್ಕೆ ಇದು ಹೊಸತನ ಕೊಡುತ್ತಾ ಅನ್ನೋ ಕಾರಣಕ್ಕೆ ಹುಡುಕ್ತಾ ಇದ್ರು. ಹಾಗಾಗಿ ಚಿತ್ರರಂಗಕ್ಕೆ ಚಂದ್ರು ಅವರ ಕಾಣ್ಕೆ ಹೇಳುವಾಗ ಇವನ್ನೆಲ್ಲಾ ಹೇಳಬೇಕಾಗುತ್ತೆ. ಚಿತ್ರರಂಗಕ್ಕೆ ಹೊಸತನ ತರುವ ದೃಷ್ಟಿಯಿಂದ ಅವರು ಸದಾ ಹುಡುಕಾಟ ನಡೆಸ್ತಾ ಇದ್ರು.

ಗಿರೀಶ್ ಕಾಸರವಳ್ಳಿ, ಚಿತ್ರನಿರ್ದೇಶಕ

ಸ್ನೇಹಜೀವಿ, ಸಂಯಮಿ

ಚಂದ್ರು ಬಿಕಾಂ ಪದವಿಯ ಕೊನೆಯ ವರ್ಷದಲ್ಲಿ ಓದುತ್ತಿದ್ದಾಗಲೇ ನನಗೆ ಪರಿಚಯವಾಗಿದ್ದರು. ಆಗೊಮ್ಮೆ ಬೆಂಗಳೂರು ಮಲ್ಲೇಶ್ವರದ ರತನ್ ಮಹಲ್ ಹೋಟೆಲ್‌ನಲ್ಲಿ ಅವರನ್ನು ಭೇಟಿ ಮಾಡಿದ್ದ ನೆನಪು. ಮುಂದೆ ಚಂದ್ರು ’ದೂರದ ಬೆಟ್ಟ’ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಚಾಮುಂಡೇಶ್ವರಿ ಸ್ಟುಡಿಯೋಗೆ ಬರುತ್ತಿದ್ದರು. ನಾನಾಗ ಛಾಯಾಗ್ರಾಹಕ ಡಿ.ವಿ.ರಾಜಾರಾಂ ಅವರಿಗೆ ಸಹಾಯಕನಾಗಿದ್ದೆ. ವಿಕ್ರಂ ಶ್ರೀನಿವಾಸ್ ನಿರ್ಮಾಣದ ಈ ಚಿತ್ರಕ್ಕೆ ಕೆ.ಸಿ.ಎನ್.ಗೌಡ್ರು ಫೈನಾನ್ಸ್ ಮಾಡಿದ್ದರು. ಆಗೆಲ್ಲಾ ಗೌಡರು ಹಣಕಾಸಿನ ವ್ಯವಹಾರ ನೋಡಿಕೊಳ್ಳಲು ತಮ್ಮ ಪುತ್ರ ಚಂದ್ರುರನ್ನು ಕಳುಹಿಸುತ್ತಿದ್ದರು. ಆಗ ಚಂದ್ರು ಅವರೊಂದಿಗೆ ಹೆಚ್ಚಿನ ಒಡನಾಟ ಸಾಧ್ಯವಾಯ್ತು.

ಕನ್ನಡ ಚಿತ್ರರಂಗದಲ್ಲಿ ಏನೆಲ್ಲಾ ಹೊಸ ಪ್ರಯೋಗ ನಡೆಸಬಹುದು, ಸಾಧ್ಯತೆಗಳೇನು ಎಂದೆಲ್ಲಾ ನಮ್ಮೊಂದಿಗೆ ಚರ್ಚಿಸುತ್ತಿದ್ದರು. ಚಂದ್ರು ಮೆದುಮಾತಿನ ವ್ಯಕ್ತಿ, ಸಂಯಮಿ. ದೇಶದ ವಿವಿಧೆಡೆ ನಡೆಯುವ ಚಿತ್ರೋತ್ಸವಗಳ ಕುರಿತಂತೆ ಅವರಲ್ಲಿ ಸಾಕಷ್ಟು ಮಾಹಿತಿ ಇರುತ್ತಿತ್ತು. ಹಣಕಾಸಿನ ಸಮಸ್ಯೆಯಿಂದಾಗಿ ಸ್ಥಗಿತಗೊಂಡಿದ್ದ ಹತ್ತಾರು ಚಿತ್ರಗಳಿಗೆ ಅವರು ಹಣಕಾಸಿನ ನೆರವು ನೀಡಿದ್ದಾರೆ. ಆ ಚಿತ್ರಗಳು ದೊಡ್ಡ ಯಶಸ್ಸು ಕಂಡಿರುವುದಲ್ಲದೆ ಮೈಲುಗಲ್ಲಾಗಿವೆ. ಸಿನಿಮಾಗಳಲ್ಲಿ ನಟಿಯರನ್ನು ಸರಿಯಾಗಿ ನಡೆಸಿಕೊಳ್ಳದ ಸಮಯದಲ್ಲೆಲ್ಲಾ ಅವರು ನಿರ್ದೇಶಕರನ್ನು ಎಚ್ಚರಿಸುತ್ತಿದ್ದರು. ಅದು ಅವರ ಸದಭಿರುಚಿ.

ಬಿ.ಎಸ್.ಬಸವರಾಜು, ಸಿನಿಮಾ ಛಾಯಾಗ್ರಾಹಕ

ಶಶಿಧರ ಚಿತ್ರದುರ್ಗ

ಶಶಿಧರ ಚಿತ್ರದುರ್ಗ
ಹಿರಿಯ ಸಿನಿಮಾ ಪತ್ರಕರ್ತ, ಚಿತ್ರಪಥ.ಕಾಂ ಸಂಪಾದಕ. ಸಿನಿಮಾ ಇತಿಹಾಸ ದಾಖಲಿಸುವ ಬಗ್ಗೆ ಅತೀವ ಆಸಕ್ತಿ. ಚಿತ್ರಪಥ, ಬಂಗಾರದ ಮನುಷ್ಯ ಸಿದ್ದಲಿಂಗಯ್ಯ ಸೇರಿದಂತೆ ಹಲವು ಸಿನಿಮಾ ಕೃತಿಗಳನ್ನು ಪ್ರಕಟಿಸಿದ್ದಾರೆ.


ಇದನ್ನೂ ಓದಿ: ಪಿಕೆ ಟಾಕೀಸ್: ಭವಿಷ್ಯ, ಆಯ್ಕೆ, ಸ್ವಇಚ್ಛೆ ಮತ್ತು ದೇವರ ಕಲ್ಪನೆಗಳ ಸುತ್ತ ಸುತ್ತುವ ಜಾಕೊರ ಸಿನಿಮಾಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...

ಕ್ಯಾಂಪಸ್ ಜಾತಿ ತಾರತಮ್ಯ ವಿರುದ್ಧದ ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ರಾಜ್ಯ ಸಚಿವ ಸಂಪುಟ ಗುರುವಾರ (ಏ.16) ರಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ'ಗೆ ಅನುಮೋದನೆ ನೀಡಿತು. ಜೊತೆಗೆ, ಪ್ರಮುಖ ಮೂಲಸೌಕರ್ಯ ಮತ್ತು...