ತಮಿಳುನಾಡಿನ ನಾಥಂಪಟ್ಟಿ ಸಮೀಪದ ಕಳತ್ತೂರು ಗ್ರಾಮದ ಪಟಾಕಿ ತಯಾರಿಕಾ ಘಟಕದಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ ಸ್ಫೋಟದಲ್ಲಿ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ. ಮೂಲಗಳ ಪ್ರಕಾರ, ಪಟಾಕಿ ಘಟಕವು 38 ವರ್ಷದ ಸಿ ವಜಿವಿಡು ಮುರುಗನ್ ಅವರಿಗೆ ಸೇರಿದೆ. ಘಟಕದಲ್ಲಿ ಸುಮಾರು ಹತ್ತು ಕೊಠಡಿಗಳಿದ್ದು, ಶನಿವಾರ ಬೆಳಗ್ಗೆ ಕಾರ್ಮಿಕರು ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದರು.
ಬೆಳಗ್ಗೆ 8.30ರ ಸುಮಾರಿಗೆ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ ಸಂಭವಿಸಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ. ತಕ್ಷಣವೇ ಅವರು ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಹರಿಯಾಣ ಗಣಿಗಾರಿಕೆ ವಲಯದಲ್ಲಿ ಭೂಕುಸಿತ: 1 ಸಾವು; ಮಣ್ಣಿನಡಿಯಲ್ಲಿ ಇನ್ನೂ 20 ಜನರು
ಸ್ಪೋಟದಿಂದ ಕಟ್ಟಡ ಕುಸಿದು ಬಿದ್ದಿದ್ದು, ಕಾರ್ಮಿಕರನ್ನು ರಕ್ಷಿಸಲು ಬುಲ್ಡೋಝರ್ ಬಳಸಲಾಗಿದೆ. 30 ಕಾರ್ಮಿಕರಲ್ಲಿ ಮೂವರು –ಎಸ್ ಕುಮಾರ್ (38), ಪಿ ಪೆರಿಯಸಾಮಿ (65) ಮತ್ತು ಎಸ್ ವೀರಕುಮಾರ್ (40)–ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಕಾರ್ಮಿಕ ಪಿ ಮುರುಗೇಶನ್ (38) ಅವರನ್ನು ಚಿಕಿತ್ಸೆಗಾಗಿ ಶಿವಕಾಶಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದೂ, ದಾರಿಯಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಇದಲ್ಲದೇ ಎಂಟು ವರ್ಷದ ಬಾಲಕ ಸೇರಿದಂತೆ ಏಳು ಮಂದಿ ಗಾಯಗೊಂಡಿದ್ದು, ಶಿವಕಾಶಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
“ಪಟಾಕಿ ಘಟಕದ ತಯಾರಿಕಾ ಕೋಣೆಯಲ್ಲಿ ರಾಸಾಯನಿಕಗಳನ್ನು ಮಿಶ್ರಣ ಮಾಡುವಾಗ ಸ್ಫೋಟ ಸಂಭವಿಸಿದೆ. ಕಟ್ಟಡದ ಸುಮಾರು ಮೂರು ಕೊಠಡಿಗಳು ಸ್ಫೋಟದಲ್ಲಿ ಸಂಪೂರ್ಣವಾಗಿ ಕುಸಿದಿವೆ” ಎಂದು ಅವರು ಹೇಳಿದ್ದಾರೆ.
ದುರ್ಘಟನೆಯ ಸಂಬಂಧ ನಾಥಂಪಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಉತ್ತರಾಖಂಡ ದಲಿತ ಮಹಿಳೆ ಬಿಸಿಯೂಟ ತಯಾರಿಸುವ ಕೆಲಸಕ್ಕೆ ಮರುನೇಮಕ