ಗುಂಪೊಂದು ಕೆಲ ಅಂಗಡಿಗಳು ಮತ್ತು ದೇವಾಲಯದ ಮೇಲೆ ದಾಳಿ ಮಾಡಿರುವ ವಿಡಿಯೋವೊಂದು ವೈರಲ್ ಆಗಿದ್ದು, ದೆಹಲಿಯಲ್ಲಿ ಪ್ರತಿಭಟಿಸುತ್ತಿರುವ ರೈತರು ದೇವಾಲಯದ ಮೇಲೆ ದಾಳಿ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗ್ತಿದೆ.
ಫ್ಯಾಕ್ಟ್ಚೆಕ್ : ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಕುರಿತು ನಾನುಗೌರಿ.ಕಾಂ ಸತ್ಯಾಸತ್ಯತೆ ಪರಿಶೀಲನೆ ನಡೆಸಿದೆ. ಗೂಗಲ್ ರಿವರ್ಸ್ ಇಮೇಜ್ನಲ್ಲಿ ವಿಡಿಯೋದ ಸ್ಕ್ರೀನ್ ಶಾಟ್ ಹಾಕಿ ನೋಡಿದಾಗ, ಅವಧೇಶ್ ಪಾರಿಖ್ ಎಂಬ ವ್ಯಕ್ತಿ ತನ್ನ ಫೇಸ್ಬುಕ್ ಪೇಜ್ನಲ್ಲಿ 29 ಏಪ್ರಿಲ್ 2022 ರಂದು ಈ ವಿಡಿಯೋ ಪೋಸ್ಟ್ ಮಾಡಿರುವುದು ಕಂಡು ಬಂದಿದೆ. ಪೋಸ್ಟ್ ಪ್ರಕಾರ, ಇದು ಪಂಜಾಬ್ನ ಪಟಿಯಾಲಾದ ಕಾಳಿ ಮಾತಾ ದೇವಸ್ಥಾನದ ಮೇಲೆ ಖಲಿಸ್ತಾನ್ ಬೆಂಬಲಿಗರು ದಾಳಿ ಮಾಡಿರುವ ವಿಡಿಯೋ ಆಗಿದೆ.
ಫೇಸ್ಬುಕ್ ಪೋಸ್ಟ್ಗೆ ಸಂಬಂಧಿಸಿದಂತೆ ವಿಡಿಯೋ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕಲು ನಾವು ಘಟನೆಯ ಮಾಧ್ಯಮಗಳನ್ನು ವರದಿಗಳನ್ನು ಹುಡುಕಿದ್ದೇವೆ. ಈ ವೇಳೆ, ಏಪ್ರಿಲ್ 30, 2022ರಂದು (ಫೇಸ್ಬುಕ್ ಪೋಸ್ಟ್ ಹಾಕಿದ ದಿನ) ಇಂಡಿಯ್ ಎಕ್ಸ್ ಪ್ರೆಸ್ ‘Curfew in Patiala, violence breaks out over ‘anti-Khalistan’ march’ ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಿಸಿದೆ. ವರದಿಯ ಪ್ರಕಾರ, ’29 ಏಪ್ರಿಲ್ 2022 ರಂದು ಶಿವಸೇನೆ ಬೆಂಬಲಿಗರು ಪಟಿಯಾಲಾದಲ್ಲಿ ಖಲಿಸ್ತಾನ್ ವಿರೋಧಿ ರ್ಯಾಲಿಯನ್ನು ಹಮ್ಮಿಕೊಂಡಿದ್ದರು. ರ್ಯಾಲಿಯು ಪಟಿಯಾಲಾದ ಮಂಜೀತ್ ನಗರದಲ್ಲಿರುವ ಕಾಳಿ ದೇವಸ್ಥಾನದ ಬಳಿಗೆ ತಲುಪಿದಾಗ ಖಾಲಿಸ್ತಾನ್ ಬೆಂಬಲಿಗರು ಶಿವಸೇನೆ ಬೆಂಬಲಿಗರ ಮೇಲೆ ಚಾಕು ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ.
ಏಪ್ರಿಲ್ 29,2022 ರಂದು ಎಎನ್ಐ ಈ ಘಟನೆಯ ವಿಡಿಯೋವನ್ನು ಎಕ್ಸ್ನಲ್ಲಿ ಪೋಸ್ಟ್ ಮಾಡಿತ್ತು. ಪಂಜಾಬ್ನ ಪಟಿಯಾಲಾದ ಕಾಳಿ ದೇವಿ ಮಂದಿರದ ಬಳಿ ಇಂದು ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಬರೆದುಕೊಂಡಿತ್ತು. ವೈರಲ್ ವಿಡಿಯೋ ಮತ್ತು ಸುದ್ದಿ ಮಾಧ್ಯಮಗಳ ವರದಿಗಳನ್ನು ಹೋಲಿಸಿದಾಗ ಎರಡೂ ಒಂದೇ ಘಟನೆಯದ್ದು ಎಂದು ಖಚಿತವಾಗಿದೆ.
#WATCH | Punjab: A clash broke out between two groups near Kali Devi Mandir in Patiala today.
Police personnel deployed at the spot to maintain law and order situation. pic.twitter.com/yZv2vfAiT6
— ANI (@ANI) April 29, 2022
ಇದರ ಆಧಾರದ ಮೇಲೆ ಹೇಳುವುದಾದರೆ, ರೈತರು ದೇವಾಲಯದ ಮೇಲೆ ದಾಳಿ ಮಾಡಿದ್ದಾರೆ ಎಂದು ಶೇರ್ ಮಾಡಲಾಗುತ್ತಿರುವ ವಿಡಿಯೋ, ಏಪ್ರಿಲ್ 2022ರಲ್ಲಿ ಪಟಿಯಾಲಾದ ಕಾಳಿ ಮಾತಾ ದೇವಸ್ಥಾನದ ಬಳಿ ನಡೆದ ಘರ್ಷಣೆಯ ದೃಶ್ಯಗಳಾಗಿವೆ. ಇದಕ್ಕೂ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಯಾವುದೇ ಸಂಬಂಧವಿಲ್ಲ ಎಂದು ಖಚಿತಪಡಿಸಬಹುದು.
ಇದನ್ನೂ ಓದಿ : Fact Check: ಸ್ವತಃ ಅಂಬೇಡ್ಕರ್ ಮಾತನಾಡಿರುವುದು ಎಂದು ಸಿನಿಮಾ ವಿಡಿಯೋ ಹಂಚಿಕೆ