ಬಾಂಗ್ಲಾದೇಶದಲ್ಲಿ ಮುಸ್ಲಿಮರಿಂದ ಹಿಂದೂ ಕುಟುಂಬದ ಮೂವರ ಹತ್ಯೆ ಎಂಬ ಸುದ್ದಿ ಮತ್ತು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಭಾರತದ ಹಲವರ ಎಕ್ಸ್ ಖಾತೆಗಳಲ್ಲಿ ಕಳೆದ 10 ದಿನಗಳಿಂದ ಸುದ್ದಿಯನ್ನು ಹಂಚಿಕೊಂಡು ಮುಸ್ಲಿಮರ ವಿರುದ್ದ ದ್ವೇಷ ಕಾರುವ ಪ್ರಯತ್ನ ಮಾಡಲಾಗ್ತಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆರ್ಗನೈಸರ್ (organiser) ವೆಬ್ಸೈಟ್ನ ಎಕ್ಸ್ ಖಾತೆಯಲ್ಲೂ ಈ ಸುದ್ದಿಯನ್ನು ಹಂಚಿಕೊಳ್ಳಲಾಗಿದ್ದು, ಫೋಟೋ ಸಹಿತ ಬಾಂಗ್ಲಾದೇಶದಲ್ಲಿ ಹಿಂದೂ ಕುಟುಂಬ ಮೂವರ ಮೃತದೇಹ ಶಿರಚ್ಚೇದ ಮಾಡಿದ ರೀತಿಯಲ್ಲಿ ಪತ್ತೆ. ವಿಕಾಸ್ ಸರ್ಕಾರ್ (45), ಅವರ ಪತ್ನಿ ಸ್ವರ್ಣಾ ರಾಣಿ ಸರ್ಕಾರ್ (40) ಮತ್ತು ಪುತ್ರಿ ಪರ್ಮಿತಾ ಸರ್ಕಾರ್ (15) ಮನೆಯಲ್ಲೇ ಹತ್ಯೆಯಾಗಿದ್ದಾರೆ ಎಂದು ಬರೆದಿತ್ತು.
ಫ್ಯಾಕ್ಟ್ಚೆಕ್ : ಮೇಲೆ ತಿಳಿಸಿದ ಸುದ್ದಿಯ ಸತ್ಯಾಸತ್ಯತೆ ತಿಳಿಯುವ ಪ್ರಯತ್ನವನ್ನು ನಾನುಗೌರಿ.ಕಾಂ ಮಾಡಿದೆ.
ಗೂಗಲ್ನಲ್ಲಿ ನಾವು ಈ ಕುರಿತ ಸುದ್ದಿಯನ್ನು ಹುಡುಕಾಡಿದಾಗ, ಜನವರಿ 31, 2024 ರಂದು ಬಾಂಗ್ಲಾದೇಶದ ಸುದ್ದಿ ವೆಬ್ಸೈಟ್ ದಿ ಡೈಲಿ ಸ್ಟಾರ್ನಲ್ಲಿ ಈ ಕುರಿತು ವರದಿ ಪ್ರಕಟಗೊಂಡಿರುವುದು ಲಭ್ಯವಾಗಿದೆ. ವರದಿಯ ಪ್ರಕಾರ, ಬಾಂಗ್ಲಾದೇಶದ ಸಿರಾಜ್ಗಂಜ್ ಜಿಲ್ಲೆಯಲ್ಲಿ ಈ ತ್ರಿವಳಿ ಕೊಲೆ ನಡೆದಿದೆ. ಪ್ರಕರಣದ ಪ್ರಮುಖ ಶಂಕಿತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತರಾದ ಪರಮಿತಾ ಸರ್ಕಾರ್ ತುಶಿ, ವಿಕಾಸ್ ಸರ್ಕಾರ್ ಮತ್ತು ಸ್ವರ್ಣಾ ರಾಣಿ ಸರ್ಕಾರ್ ಅವರ ಶವಗಳನ್ನು ಮನೆಯಿಂದ ವಶಪಡಿಸಿಕೊಳ್ಳಲಾಗಿದೆ.
ದಿ ಡೈಲಿ ಸ್ಟಾರ್ ವರದಿಯ ಪ್ರಕಾರ, ಬಂಧಿತ ವ್ಯಕ್ತಿ ರಾಜೀವ್ ಭೌಮಿಕ್ ವಿಕಾಸ್ ಮೃತರ ಸಂಬಂಧಿಯಾಗಿದ್ದಾನೆ. ರಾಜೀವ್ ಹಣದ ವಿಚಾರವಾಗಿ ವಿಕಾಸ್ ಮತ್ತು ಅವರ ಕುಟುಂಬಸ್ಥರನ್ನು ಕೊಲೆ ಮಾಡಿದ್ದಾನೆ. ಆರೋಪಿ ರಾಜೀವ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಸಿರಾಜ್ಗಂಜ್ ಪೊಲೀಸ್ ವರಿಷ್ಠಾಧಿಕಾರಿ ಅರಿಫುರ್ ರೆಹಮಾನ್ ಮಂಡಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆರೋಪಿಯ ತಪ್ಪೊಪ್ಪಿಗೆ ಪ್ರಕಾರ, ಕೊಲೆಯ ಹಿಂದಿನ ಕಾರಣ ಹಣಕಾಸಿನ ವಹಿವಾಟಿಗೆ ಸಂಬಂಧಿಸಿದೆ. ಆರೋಪಿ ರಾಜೀವ್ ಮೃತ ವಿಕಾಸ್ ಅವರಿಂದ 35 ಲಕ್ಷ ರೂಪಾಯಿ ಸಾಲ ಮರುಪಾವತಿಸಲು ಸಾಧ್ಯವಾಗದೆ ಕೊಲೆ ಮಾಡಿದ್ದಾನೆ.
ನಾವು ನಡೆಸಿದ ಪರಿಶೀಲನೆಯಲ್ಲಿ ಮೇಲೆ ತಿಳಿಸಿದ ಕೊಲೆ ನಡೆದಿರುವುದು ನಿಜ. ಆದರೆ, ಅದು ಹಣದ ವಿಚಾರವಾಗಿ ಸಂಬಂಧಿಕನೇ ಒಂದು ಕುಟುಂಬವನ್ನು ಹತ್ಯೆಗೈದಿರುವುದಾಗಿದೆ. ಅಲ್ಲದೆ ಮುಸ್ಲಿಮರು ಹಿಂದೂ ಕುಟುಂಬವನ್ನು ಹತ್ಯೆ ಮಾಡಿರುವುದು ಅಲ್ಲ.
ಇದನ್ನೂ ಓದಿ : Fact Check: ಉತ್ತರ ಪ್ರದೇಶದ ಯೋಗಿ ಸರ್ಕಾರ ಮೀಸಲಾತಿಯನ್ನು ಸಂಪೂರ್ಣ ರದ್ದುಪಡಿಸಿದೆಯಾ?