Homeಮುಖಪುಟಉತ್ತರಖಂಡ: UCC ಮಸೂದೆ ಮಂಡನೆ ವೇಳೆ ಸದನದಲ್ಲಿ ಜೈಶ್ರೀರಾಮ್‌ ಘೋಷಣೆ

ಉತ್ತರಖಂಡ: UCC ಮಸೂದೆ ಮಂಡನೆ ವೇಳೆ ಸದನದಲ್ಲಿ ಜೈಶ್ರೀರಾಮ್‌ ಘೋಷಣೆ

- Advertisement -
- Advertisement -

ಉತ್ತರಖಂಡ ವಿಧಾನ ಸಭೆಯ ವಿಶೇಷ ಅಧಿವೇಶನದಲ್ಲಿ ವಿವಾದಾತ್ಮಕ ಏಕರೂಪ ನಾಗರಿಕ ಸಂಹಿತೆ ಕುರಿತು ಮಸೂದೆಯನ್ನು ಮಂಡಿಸಲಾಗಿದ್ದು, ಏಕರೂಪ ನಾಗರಿಕ ಸಂಹಿತೆ ಉತ್ತರಾಖಂಡ- 2024 ಮಸೂದೆಯನ್ನು ಮಂಡಿಸುತ್ತಿದ್ದಂತೆ ರಾಜ್ಯ ವಿಧಾನಸಭೆಯೊಳಗೆ ಶಾಸಕರು ವಂದೇ ಮಾತರಂ ಮತ್ತು ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗಿದ್ದಾರೆ.

ಇತ್ತೀಚೆಗೆ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತ್ವತ್ವದ ಐವರು ಸದಸ್ಯರ ಸಮಿತಿ ಸಲ್ಲಿಸಿದ ಯುಸಿಸಿ ಕುರಿತ ಕರಡು ಸಮಿತಿ ವರದಿಯನ್ನು ಉತ್ತರಖಂಡ ಸರಕಾರ ಸಂಪುಟ ಸಭೆಯಲ್ಲಿ ಅನುಮೋದನೆ  ಪಡೆದುಕೊಂಡಿತ್ತು.

ಏಕರೂಪ ನಾಗರಿಕ ಸಂಹಿತೆ ಪ್ರಸ್ತುತ ಸಮಾಲೋಚನೆಯಲ್ಲಿದೆ ಮತ್ತು ಭಾರತದ ಕಾನೂನು ಆಯೋಗವು ಈ ಬಗ್ಗೆ ಪರಿಶೀಲಿಸುತ್ತಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಸೋಮವಾರ ಹೇಳಿದ್ದರು. ಇದು ಕೇವಲ ಕೇಂದ್ರದ ವಿಷಯವಲ್ಲ, ಸಂವಿಧಾನವನ್ನು ರಚನೆ ವೇಳೆಯೂ ಈ ಬಗ್ಗೆ ಚರ್ಚಿಸಿದ್ದರು. ಇದೀಗ ಈ ವಿಷಯವು ಭಾರತದ ಕಾನೂನು ಆಯೋಗದ ಪರಿಗಣನೆಯಲ್ಲಿದೆ ಮತ್ತು ಸಮಾಲೋಚನೆ ಪ್ರಕ್ರಿಯೆಯಲ್ಲಿದೆ ಎಂದು ಹೇಳಿದ್ದರು.

ಮಸೂದೆಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಮದುವೆ ಮತ್ತು ವಿಚ್ಛೇದನ, ಉತ್ತರಾಧಿಕಾರ, ಲಿವ್-ಇನ್ ಸಂಬಂಧಗಳು, ವಿವಿಧ ಈ ರೀತಿಯಾಗಿ ವಿಂಗಡಿಸಲಾಗಿದೆ. ದಂಪತಿಗಳು ತಮ್ಮ ಲೀವ್‌-ಇನ್ ಸಂಬಂಧದ ಬಗ್ಗೆ  ನೋಂದಾಯಿಸದಿದ್ದರೆ, ಅವರು ಗರಿಷ್ಠ ಆರು ತಿಂಗಳ ಜೈಲು ಶಿಕ್ಷೆ ಅಥವಾ ರೂ 25,000ರೂ.ದಂಡ ಅಥವಾ ಎರಡನ್ನೂ ಎದುರಿಸಬೇಕಾಗುತ್ತದೆ. ಲಿವ್-ಇನ್ ಸಂಬಂಧದಿಂದ ಜನಿಸಿದ ಮಕ್ಕಳನ್ನು ದಂಪತಿಗಳ ಕಾನೂನುಬದ್ಧ ಮಗು ಎಂದು ಪರಿಗಣಿಸಲಾಗುತ್ತದೆ ಮತ್ತು ಮದುವೆಯಿಂದ ಜನಿಸಿದ ಮಕ್ಕಳಿಗೆ ಅನ್ವಯವಾಗುವ ಎಲ್ಲಾ ಕಾನೂನು ಹಕ್ಕುಗಳನ್ನು ಅಂತಹ ಮಕ್ಕಳಿಗೆ ನೀಡಲಾಗುತ್ತಿದೆ.

ಮಸೂದೆಯನ್ನು ಮಂಡಿಸಿದ ಸಿಎಂ ಧಾಮಿ, ನಮ್ಮಲ್ಲಿ ಪ್ರತಿಯೊಬ್ಬರಿಗೂ ಇದು ಐತಿಹಾಸಿಕ ಕ್ಷಣವಾಗಿದೆ. ಸಮಾಜದಲ್ಲಿ ಏಕರೂಪತೆಯನ್ನು ತರಲು ನಾವೆಲ್ಲರೂ ಸುದೀರ್ಘ ಮತ್ತು ಆರೋಗ್ಯಕರ ಚರ್ಚೆ ನಡೆಸೋಣ ಎಂದು ಹೇಳಿದ್ದಾರೆ.

ಕರಡು ಅಂಗೀಕರಿಸಿದ್ದ ಉತ್ತರಖಂಡ ಸಂಪುಟ:

ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ಐವರು ಸದಸ್ಯರ  ಸಮಿತಿಯು ಶುಕ್ರವಾರ ಕರಡನ್ನು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಸಲ್ಲಿಸಿದೆ. ಸಮಿತಿಯು ಸಲ್ಲಿಸಿದ 800 ಪುಟಗಳ ವರದಿಯು ಪ್ರಸ್ತಾವಿತ ಶಾಸನದ ವ್ಯಾಪ್ತಿಯಿಂದ ಬುಡಕಟ್ಟು ಸಮುದಾಯಗಳಿಗೆ ವಿನಾಯಿತಿ ನೀಡುವುದು, ಮಹಿಳಾ ಸಮಾನತೆಗೆ ಆದ್ಯತೆ ನೀಡುವುದು, ಬಹುಪತ್ನಿತ್ವ ನಿಷೇಧಿಸುವುದು, ತ್ರಿವಳಿ ತಲಾಖ್‌ಗೆ ಕಠಿಣ ಶಿಕ್ಷೆ ವಿಧಿಸುವುದನ್ನು ಸೂಚಿಸುತ್ತದೆ.

UCC ಕರಡು ನಾಲ್ಕು ಸಂಪುಟಗಳಲ್ಲಿ ಸುಮಾರು 750 ಪುಟಗಳನ್ನು ಒಳಗೊಂಡಿದೆ. ಇದನ್ನು ‘ಪೂರ್ಣ’ ಹಿಂದಿಯಲ್ಲಿ ಬರೆಯಲಾಗಿದೆ ಮತ್ತು ‘ಉರ್ದು’ ಅಥವಾ ಯಾವುದೇ ಇತರ ಭಾಷೆಯ ಒಂದು ಪದವನ್ನು ಹೊಂದಿಲ್ಲ. ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ಸಮಿತಿಯು ವರದಿಯನ್ನು ಸಿದ್ದಪಡಿಸಿದ್ದು, ಬಹುಪತ್ನಿತ್ವ ಸಂಪೂರ್ಣವಾಗಿ ನಿಷೇಧ, ಮುಸ್ಲಿಂ ವೈಯಕ್ತಿಕ ಕಾನೂನುಗಳಿಗೆ ಸಂಬಂಧಿಸಿದ ತ್ರಿವಳಿ ತಲಾಖ್ ಮತ್ತು ನಿಕಾಹಲಾಲಾ ಆಚರಣೆಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು, ಲಿವ್-ಇನ್ ಸಂಬಂಧದಲ್ಲಿರುವ ದಂಪತಿಗಳು ನೋಂದಾವಣೆ ಮಾಡಿಸಬೇಕು. ವಿವಾಹ ನೋಂದಣಿಗಳು ಕಡ್ಡಾಯವಾಗಿದೆ ಮತ್ತು ಬುಡಕಟ್ಟು ಸಮುದಾಯವನ್ನು ಯುಸಿಸಿ ವ್ಯಾಪ್ತಿಯಿಂದ ಹೊರಗಿಡಲು ಸಲಹೆ ನೀಡಿತ್ತು.

ಏಕರೂಪ ನಾಗರಿಕ ಸಂಹಿತೆ:

ಏಕರೂಪ ನಾಗರಿಕ ಸಂಹಿತೆ ಎಂದರೆ ಇಡೀ ದೇಶದಲ್ಲಿ ಪ್ರತಿಯೊಂದು ಧರ್ಮ, ಜಾತಿ, ಪಂಗಡ, ವರ್ಗಕ್ಕೆ ಒಂದೇ ನಿಯಮ ಜಾರಿಗೆ ತರುವುದು. ಪ್ರಸ್ತುತ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಪಾರ್ಸಿ ಸಮುದಾಯಗಳು ವಿಭಿನ್ನ ಧಾರ್ಮಿಕ ಕಾನೂನುಗಳನ್ನು ಹೊಂದಿವೆ. ಏಕರೂಪ ನಾಗರಿಕ ಸಂಹಿತೆ ಅನುಷ್ಠಾನವಾದರೆ ಬೇರೆಲ್ಲಾ ಧರ್ಮಗಳ ವೈಯಕ್ತಿಕ ಕಾನೂನುಗಳು ಅಂತ್ಯಗೊಳ್ಳುತ್ತವೆ.

ಏಕರೂಪ ಎನ್ನುವುದು ಭಾರತದ ಬಹುತ್ವ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು. ಏಕರೂಪ ನಾಗರಿಕ ಸಂಹಿತೆಯು ಪ್ರಜಾಸತ್ತಾತ್ಮಕ ಜಾತ್ಯತೀತ ಮತ್ತು ಸಮಾಜವಾದಿ ತತ್ವಗಳ ಆಧಾರದ ಮೇಲೆ ಭಾರತೀಯ ಗಣರಾಜ್ಯವನ್ನು ಬಲಪಡಿಸುವ ಸಾಂವಿಧಾನಿಕ ಬದ್ಧತೆಯನ್ನು ಸೋಲಿಸುತ್ತದೆ.

2019ರ ಚುನಾವಣೆ ವೇಳೆ ಬಿಜೆಪಿ ಪ್ರಣಾಳಿಕೆಯಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿ ಮಾಡುವ ಆಶ್ವಾಸನೆ ನೀಡಿತ್ತು. ದೇಶದ ಎಲ್ಲರಿಗೂ ಒಂದೇ ಕಾನೂನು ಇರಬೇಕು ಎಂದು ಬಿಜೆಪಿ ಹೇಳಿತ್ತು. ಒಂದು ವೇಳೆ ಈ ಕಾಯ್ದೆ ಜಾರಿಗೆ ಬಂದರೆ, ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಯಾವುದೇ ಧರ್ಮಾಧಾರಿತ ಕಾನೂನುಗಳಿಗೆ ಬೆಲೆ ಇರುವುದಿಲ್ಲ. ವೈಯಕ್ತಿಕ ಕಾನೂನು, ಸಿವಿಲ್ ಕಾನೂನುಗಳು ರದ್ದುಗೊಳ್ಳುತ್ತದೆ.  ಹಿಂದೂ ವಿವಾಹ ಕಾಯ್ದೆ, ಮುಸ್ಲಿಂ ವಿವಾಹ ಕಾನೂನು ಹೀಗೆ ಆಯಾ ಧರ್ಮಕ್ಕೆ ಅವರದ್ದೇ ಆದ ಕಾನೂನು ಇದೆ. ವಿವಾಹ, ವಿಚ್ಛೇದನ, ಆಸ್ತಿ ಹಂಚಿಕೆ ಸೇರಿದಂತೆ ಹಲವು ಕಾನೂನುಗಳು ಹಿಂದೂಗಳಿಗೆ ಒಂದು ರೀತಿ ಇದ್ದರೆ, ಮುಸ್ಲಿಮರಿಗೆ ಮತ್ತೊಂದು ರೀತಿ ಇದೆ. ಏಕರೂಪ ನಾಗರಿಕ ನೀತಿ ಸಂಹಿತೆ ಜಾರಿಗೆ ಬಂದರೆ ಇದು ಬದಲಾಗುತ್ತದೆ.

ಸಂವಿಧಾನದ ಆರ್ಟಿಕಲ್ 25 ಹಾಗೂ 28ರ ಅಡಿ ದೇಶದ ಯಾವುದೇ ಪ್ರಜೆಗೆ ತನ್ನ ಧಾರ್ಮಿಕ ಆಚರಣೆಗಳನ್ನು ಪಾಲಿಸಲು ಸಂವಿಧಾನ ಅವಕಾಶ ನೀಡುತ್ತೆ. ಒಂದು ವೇಳೆ ಎಲ್ಲ ಧರ್ಮದವರಿಗೂ ಒಂದೇ ಕಾನೂನು ಜಾರಿ ಮಾಡಿದರೆ ವೈವಿಧ್ಯತೆಗೆ ಧಕ್ಕೆ ಬರಲಿದೆ.

ಇದನ್ನು ಓದಿ: ಕಾಲೇಜುಗಳಿಗೆ ರಜೆ ನೀಡಿ ವಿದ್ಯಾರ್ಥಿಗಳನ್ನು ಮೋದಿಯ ಕಾರ್ಯಕ್ರಮಕ್ಕೆ ಕಳುಹಿಸುವಂತೆ ಸುತ್ತೋಲೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...