ಮುಸ್ಲಿಂ ವ್ಯಕ್ತಿಯೊಬ್ಬರು ಸಿಖ್ ಸಮುದಾಯದ ಟರ್ಬನ್ (ಪೇಟ) ಧರಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, “ಮುಸ್ಲಿಮರು ಸಿಖ್ಖರ ವೇಷ ಧರಿಸಿ ರೈತ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಇದು ರೈತ ಹೋರಾಟದ ನಿಜಸ್ಥಿತಿ” ಎಂದು ಪ್ರತಿಪಾದಿಸಲಾಗಿದೆ.
‘Sunanda Roy'(@SaffronSunanda) ಎಂಬ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಿ, “ಅಬ್ದುಲ್ ಸಿಖ್ ವೇಷದಲ್ಲಿ, ಇದು ರೈತ ಹೋರಾಟದ ಹಿಂದಿನ ನಿಜಾಂಶ” ಎಂದು ಬರೆಯಲಾಗಿದೆ.
Abdul in the guise of Sikh.
That's the reality behind #farmerprotests2024Disgusting!! pic.twitter.com/Bvgwy3uhW7
— Sunanda Roy 👑 (@SaffronSunanda) February 17, 2024
ಫ್ಯಾಕ್ಟ್ಚೆಕ್ : ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಕುರಿತು ‘ನಾನುಗೌರಿ.ಕಾಂ’ ಸತ್ಯಾಸತ್ಯತೆ ಪರಿಶೀಲನೆ ನಡೆಸಿದೆ.
ಮೊದಲಿಗೆ ನಾವು ವೈರಲ್ ವಿಡಿಯೋದ ಮೇಲೆ ಬರೆಯಲಾದ ಪಠ್ಯವನ್ನು ಗೂಗಲ್ ಲೆನ್ಸ್ ಬಳಸಿ ಭಾಷಾಂತರ ಮಾಡಿದ್ದೇವೆ. ಗುರುಮುಖಿ (Gurumukhi) ಭಾಷೆಯಲ್ಲಿ ಬರೆಯಲಾದ ಈ ಪಠ್ಯದಲ್ಲಿ “ಸಹೋದರ ಸಿದ್ದು ಮೂಸೆವಾಲ ಅವರ ಅಂತಿಮ ಪ್ರಾರ್ಥನೆ” ಎಂದು ಹೇಳಲಾಗಿದೆ. ಈ ಮೂಲಕ ಇದು ಮೇ 29, 2022ರಂದು ಪಂಜಾಬ್ನಲ್ಲಿ ಹತ್ಯೆಯಾದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಸಾವಿಗೆ ಸಂಬಂಧಿಸಿದ್ದು ಎಂದು ನಮಗೆ ಖಚಿತವಾಗಿದೆ.
ಹೆಚ್ಚಿನ ಮಾಹಿತಿಗಾಗಿ ವಿಡಿಯೋದ ಸ್ಕ್ರೀನ್ ಶಾಟ್ ಅನ್ನು ನಾವು ಗೂಗಲ್ ರಿವರ್ಸ್ ಇಮೇಜ್ನಲ್ಲಿ ಸರ್ಚ್ ಮಾಡಿದ್ದೇವೆ. ಈ ವೇಳೆ, ಜೂನ್,12, 2022ರಂದು ಫೇಸ್ಬುಕ್ನಲ್ಲಿ ಹಾಕಲಾದ ಪೋಸ್ಟ್ ಒಂದರಲ್ಲಿ ವಿಡಿಯೋದಲ್ಲಿರುವ ವ್ಯಕ್ತಿಯ ಫೋಟೋ ಇರುವುದು ಮಾಡಿರುವುದು ನಮಗೆ ಕಂಡು ಬಂದಿದೆ.
‘Sardarian Trust Punjab’ಎಂಬ ಫೇಸ್ಬುಕ್ ಪೇಜ್ನಲ್ಲಿ ಪೋಸ್ಟ್ ಮಾಡಲಾದ ಪೋಟೋದ ಜೊತೆಗೆ, “ಮೂಸೆವಾಲಾ ಅವರ ಅಂತಿಮ ಪ್ರಾರ್ಥನೆ – ಸರ್ದಾರಿಯನ್ ಟ್ರಸ್ಟ್ ಟರ್ಬನ್ ಸ್ಟಾಲ್ ಹಾಕಿತ್ತು. ಹಿಂದೂಗಳು ಮತ್ತು ಮುಸ್ಲಿಮರು ಪೇಟ ಧರಿಸಿದರು” ಎಂದು ಬರೆದುಕೊಳ್ಳಲಾಗಿದೆ.
‘Sardarian Trust Punjab’ಫೇಸ್ಬುಕ್ ಪೇಜ್ನಲ್ಲಿ ಜೂನ್ 10, 2022 ರಂದು ನಾವು ಮೇಲೆ ತಿಳಿಸಿದ ವೈರಲ್ ವಿಡಿಯೋವನ್ನು ಕೂಡ ಹಂಚಿಕೊಳ್ಳಲಾಗಿದ್ದು, “ಮೂಸೆವಾಲಾ ಅವರ ಅಂತಿಮ ಪ್ರಾರ್ಥನಾ ಸಮಾರಂಭವನ್ನು ಜೂನ್ 8,2022 ರಂದು ಅವರು ತವರು ಪಂಜಾಬ್ನ ಮಾನ್ಸಾ ಜಿಲ್ಲೆಯಲ್ಲಿ ನಡೆಸಲಾಯಿತು. ಸಾವಿರಾರು ಅಭಿಮಾನಿಗಳು ಸಮಾರಂಭಕ್ಕೆ ಸೇರಿದ್ದರು” ಎಂದು ತಿಳಿಸಲಾಗಿದೆ.
ಮೇಲ್ಗಡೆ ಉಲ್ಲೇಖಿಸಿದ ಮೂಲಗಳ ಪರಿಶೀಲನೆ ನಡೆಸಿದ ಬಳಿಕ, ಇದು ಹತ್ಯೆಯಾದ ಪಂಜಾಬಿ ಗಾಯಕ ಸಿಧು ಮೂಸೆವಾಲ ಅವರ ಅಂತಿಮ ದರ್ಶನದ ಸಮಯದಲ್ಲಿ ಹಿಂದೂ-ಮುಸ್ಲಿಮರು ಸಿಧು ಧರಿಸುತ್ತಿದ್ದ ನೀಲಿ ಬಣ್ಣದ ಟರ್ಬನ್ ಧರಿಸಿ ಅವರಿಗೆ ಗೌರವ ಸಲ್ಲಿಸಿರುವ ದೃಶ್ಯ ಎಂಬುವುದು ನಮಗೆ ಖಚಿತವಾಗಿದೆ.
ಗಮನಾರ್ಹವಾಗಿ, ಇದೇ ವೈರಲ್ ವಿಡಿಯೊವನ್ನು 2023ರಲ್ಲಿ ಸುಳ್ಳು ಆರೋಪಗಳೊಂದಿಗೆ ದೆಹಲಿಯಲ್ಲಿ ಕುಸ್ತಿಪಟುಗಳ ಪ್ರತಿಭಟನೆಯ ಸಮಯದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು. ಆ ಸಮಯದಲ್ಲಿ ಇಂಡಿಯಾ ಟುಡೇ ಮಲಯಾಳಂ ಇದರ ಸತ್ಯಾಸತ್ಯತೆ ಬಿಚ್ಚಿಟ್ಟಿತ್ತು.