ಉತ್ತರ ಪ್ರದೇಶ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ ಡಿಸೆಂಬರ್ 6 ರಂದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ರಿಜ್ವಿಯ ಮತಾಂತರದ ನಂತರ ಉತ್ತರ ಪ್ರದೇಶದ 34 ಮುಸ್ಲಿಂ ಕುಟುಂಬಗಳು ಹಿಂದೂ ಧರ್ಮಕ್ಕೆ ಮತಾಂತರಗೊಂಡರು ಎಂಬ ಹೇಳಿಕೆಯೊಂದಿಗೆ ಹಿಂದೂ ಪೂಜಾರಿಯ ಸುತ್ತ ಮುಸ್ಲಿಂ ಜನರು ಸುತ್ತವರೆದಿರುವ ಫೋಟೋವೊಂದನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಫೆಬ್ರವರಿ 2022 ರಲ್ಲಿ ನಡೆಯಲಿರುವ ಯುಪಿ ವಿಧಾನಸಭಾ ಚುನಾವಣೆಗೂ ಮುಂಚಿತವಾಗಿ ಈ ಹೇಳಿಕೆಯೊಂದಿರುವ ಪೋಸ್ಟ್ ವೈರಲ್ ಆಗುತ್ತಿದೆ.
[ವೈರಲ್ ಪಠ್ಯ: ಯುಪಿಯಲ್ಲಿ 34 ಮುಸ್ಲಿಂ ಕುಟುಂಬಗಳು ಹಿಂದೂ ಧರ್ಮಕ್ಕೆ ಮತಾಂತರಗೊಂಡರು. ಜೈ ಶ್ರೀ ರಾಮ್, ಸನಾತನ ಸತ್ಯ ]
ಹಲವಾರು ಫೇಸ್ಬುಕ್ ಬಳಕೆದಾರರು ಬಿಜೆಪಿ ಅಥವಾ ಹಿಂದುತ್ವವಾದಿ ಫೇಸ್ಬುಕ್ ಗುಂಪುಗಳಲ್ಲಿ ಈ ಹೇಳಿಕೆಯನ್ಜು ಪೋಸ್ಟ್ ಮಾಡಿದ್ದಾರೆ – ಮೋದಿ 2.0; ವೋಟ್ ಮೋದಿ ಕೋ; ಫಿರ್ ಏಕ್ ಬಾರ್ ಯೋಗಿ ಸರ್ಕಾರ್ ಮತ್ತು ಸುದರ್ಶನ್ ನ್ಯೂಸ್ನಲ್ಲಿ ಈ ಹೇಳಿಕೆಗಳನ್ನು ಪೋಸ್ಟ್ ಮಾಡಲಾಗಿದೆ. ಅದೇ ರೀತಿ, ಎಫ್ಬಿ ಪೇಜ್ಗಳಾದ ಬ್ರಹ್ಮ ರಾಷ್ಟ್ರ ಏಕಂ ಮತ್ತು ಜಾಗೋ ಭಾರತ್ ಜಾಗೋದಲ್ಲಿ ಕೂಡ ಇದೇ ಹೇಳಿಕೆಯನ್ನು ಹಂಚಿಕೊಳ್ಳಲಾಗಿದೆ.
ಬಿಜೆಪಿ ರಾಜಕಾರಣಿ ಅನುಪೇಂದ್ರ ಸಿಂಗ್ ಕೂಡ ಇದೇ ಹೇಳಿಕೆಯನ್ನು ಫೋಟೋ ಇಲ್ಲದೆ ಹಂಚಿಕೊಂಡಿದ್ದಾರೆ.
ಫ್ಯಾಕ್ಟ್ ಚೆಕ್:
ವೈರಲ್ ಆದ ಚಿತ್ರವನ್ನು ರಿವರ್ಸ್ ಇಮೇಜ್ ಮೂಲಕ Google ನಲ್ಲಿ ಹುಡುಕಿದಾಗ, ಹಿಂದಿ ಭಾಷೆಯ ಸುದ್ದಿ ಔಟ್ಲೆಟ್ ಅಮರ್ ಉಜಾಲಾ ಈ ಚಿತ್ರವನ್ನು 2016 ರಲ್ಲಿ ಪ್ರಕಟಿಸಿರುವುದು ಕಂಡುಬಂದಿದೆ. ವೆಬ್ಸೈಟ್ನ ವರದಿಯ ಪ್ರಕಾರ, ಚಿತ್ರವು ಸೆಪ್ಟೆಂಬರ್ 23, 2016 ರಂದು ಮಥುರಾದ ಜಾಮಾ ಮಸೀದಿಯಲ್ಲಿ ಸೆರೆಹಿಡಿಯಲಾಗಿದೆ. ಇದು ಹಿಂದಿನ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಉರಿ ಪಟ್ಟಣದ ಸಮೀಪವಿರುವ ಭಾರತೀಯ ಸೇನಾ ಬ್ರಿಗೇಡ್ ಪ್ರಧಾನ ಕಚೇರಿಯ ಮೇಲೆ ಭಯೋತ್ಪಾದಕ ದಾಳಿ ನಡೆದ ನಂತರ ಪಾಕಿಸ್ತಾನದ ವಿರುದ್ದ ಪ್ರತಿಭಟನೆ ನಡೆಸಿದ ಸಂದರ್ಭದ್ದು ಎಂದು ವಿವರಿಸಿದೆ. ಈ ಘಟನೆಯ ವೀಡಿಯೊವನ್ನು ಅಮರ್ ಉಜಾಲಾ ಅವರ ವೆಬ್ಸೈಟ್ನಲ್ಲಿಯೂ ನೋಡಬಹುದು.
ನಂತರ, ಹೆಚ್ಚಿನ ಮಾಹಿತಿಗಾಗಿ ಡಿಸೆಂಬರ್ 6ರ ನಂತರ ಅಥವಾ 34 ಮುಸ್ಲಿಂ ಕುಟುಂಬಗಳು ಹಿಂದೂ ಧರ್ಮಕ್ಕೆ ಮತಾಂತರಗೊಂಡಿವೆಯೇ ಎಂದು ಹುಡುಕಲಾಗಿದ್ದು, ಇದಕ್ಕೆ ಸಂಬಂಧಿದ ಅಥವಾ ಮತಾಂತರವನ್ನು ದೃಢೀಕರಿಸುವ ಯಾವುದೇ ಒಂದೇ ಒಂದು ವರದಿಯೂ ಕಂಡುಬಂದಿಲ್ಲ.
ಆದ್ದರಿಂದ, ಐದು ವರ್ಷಗಳ ಹಳೆಯ ಚಿತ್ರವನ್ನು ಬಳಸಿಕೊಂಡು ಸುಳ್ಳು ಹೇಳಿಕೆಯೊಂದಿಗೆ ಪ್ರಚಾರ ಮಾಡಲಾಗಿದೆ ಎಂದು ಖಚಿತವಾಗಿದೆ.