ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಬಗ್ಗೆ ಸಚಿವ ರಾಜಣ್ಣ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ.
ಬಲ ಪಂಥೀಯ ಎಕ್ಸ್ ಬಳಕೆಗಾರ್ತಿ ಶಕುಂತಲ ನಟರಾಜ್ (@ShakunthalaHS) ವಿಡಿಯೋ ಹಂಚಿಕೊಂಡಿದ್ದು, “ದೇಶವೇ ಹೆಮ್ಮೆ ಪಡುವ ಹಿರಿಯ ರಾಜಕೀಯ ಮುತ್ಸದ್ದಿಗೆ ಇಂತ ಕೀಳು ಮಟ್ಟದ ಹೇಳಿಕೆ ನೀಡಿರುವ ಸಚಿವ ರಾಜಣ್ಣ” ಎಂದು ಬರೆದುಕೊಂಡಿದ್ದಾರೆ.
ವಿಡಿಯೋದಲ್ಲಿ “ದೇವೇಗೌಡರು ಇಬ್ಬರ ಮೇಲೆ ಕೈ ಹಾಕಿಕೊಂಡು ಹೋಗುತ್ತಾರೆ, ನಾಲ್ವರ ಮೇಲೆ ಹೋಗುವುದು ಹತ್ತಿರದಲ್ಲೇ ಇದೆ” ಎಂದು ರಾಜಣ್ಣ ಅವರು ಹೇಳುವುದು ಕಾಣಿಸುತ್ತದೆ.
ಫ್ಯಾಕ್ಟ್ಚೆಕ್ : ಶಂಕುತಲ ಅವರು ಹಂಚಿಕೊಂಡಿರುವ ರಾಜಣ್ಣ ಅವರ ಹೇಳಿಕೆಯ ವಿಡಿಯೋದ ಸತ್ಯಾತ್ಯತೆಯನ್ನು ಪರಿಶೀಲಿಸಿದಾಗ, ಅದು 2022ರ ಹಳೆ ವಿಡಿಯೋ ಎಂದು ತಿಳಿದು ಬಂದಿದೆ.
ಜುಲೈ 1, 2022ರಂದು ರಾಜಣ್ಣ ಅವರ ಹೇಳಿಕೆಗೆ ಸಂಬಂಧಪಟ್ಟಂತೆ ಪ್ರಜಾವಾಣಿ ಪತ್ರಿಕೆಯಲ್ಲಿ “ನಾಲ್ವರ ಮೇಲೆ ದೇವೇಗೌಡ ಹೋಗುತ್ತಾರೆ: ಕೆ.ಎನ್. ರಾಜಣ್ಣ ವಿವಾದಾತ್ಮಕ ಹೇಳಿಕೆ” ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿತ್ತು. ಈ ವರದಿಯಲ್ಲಿ ‘ಜೆಡಿಎಸ್ ವರಿಷ್ಠ ಹೆ.ಚ್ ದೇವೇಗೌಡ ಅವರು ಈಗ ಇಬ್ಬರ ಮೇಲೆ ಕೈ ಹಾಕಿಕೊಂಡು ಹೋಗುತ್ತಿದ್ದಾರೆ. ನಾಲ್ವರ ಮೇಲೆ ಹೋಗುವುದು ಹತ್ತಿರದಲ್ಲೇ ಇದೆ’ ಎಂದು ಕಾಂಗ್ರೆಸ್ ಮುಖಂಡ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿಕೆ ವಿವಾದಕ್ಕೆ ಸಿಲುಕಿದೆ” ಹೇಳಿತ್ತು.
“ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕಾವಣದಾಲ ಕಾರ್ಯಕ್ರಮದಲ್ಲಿ ಗುರುವಾರ ಸಾರ್ವಜನಿಕರೊಂದಿಗೆ ಮಾತನಾಡುವಾಗ ಮೇಲಿನಂತೆ ಹೇಳಿದ್ದಾರೆ” ಎಂದು ವರದಿಯಲ್ಲಿ ತಿಳಿಸಲಾಗಿತ್ತು.
ಒನ್ ಇಂಡಿಯಾ ಕನ್ನಡ ವೆಬ್ಸೈಟ್ನಲ್ಲಿ ಜುಲೈ 1, 2022ರಂದು ಪ್ರಕಟಗೊಂಡ ” ದೇವೇಗೌಡರು 4 ಜನರ ಹೆಗಲ ಮೇಲೆ ಹೋಗುವ ಕಾಲ ಹತ್ತಿರವಿದೆ: ರಾಜಣ್ಣ ವಿವಾದಾತ್ಮಕ ಹೇಳಿಕೆ” ಎಂಬ ಶೀರ್ಷಿಕೆಯ ಸುದ್ದಿಯಲ್ಲಿ ” ಮಾಜಿ ಪ್ರಧಾನಿ ದೇವೇಗೌಡರು ಈಗ ಇಬ್ಬರ ಮೇಲೆ ಕೈ ಹಾಕಿಕೊಂಡು ಹೋಗುತ್ತಿದ್ದಾರೆ. ನಾಲ್ವರ ಮೇಲೆ ಹೋಗುವ ಕಾಲ ಹತ್ತಿರದಲ್ಲೇ ಇದೆ ಎಂದು ಮಾಜಿ ಶಾಸಕ , ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್ ರಾಜಣ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ” ಎಂದು ಹೇಳಲಾಗಿತ್ತು.
ಜುಲೈ 1, 2022ರಂದು “K N Rajanna: ಹೆಚ್.ಡಿ.ದೇವೇಗೌಡರ ಬಗ್ಗೆ ಹೇಳಿಕೆಗೆ ಕೆ.ಎನ್.ರಾಜಣ್ಣ ವಿಷಾದ” ಎಂಬ ಶೀರ್ಷಿಕೆಯಲ್ಲಿ ಟಿವಿ9 ಕನ್ನಡ ಯೂಟ್ಯೂಬ್ನಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದು, ಅದರಲ್ಲಿ ರಾಜಣ್ಣ ಅವರು “ಯಾವುದೋ ವಿಡಿಯೋದಲ್ಲಿ ನಾನೂ ಕೇಳಿದೆ. ಹಿಂದಿನದ್ದೂ ಇಲ್ಲ, ಮುಂದಿನದ್ದೂ ಇಲ್ಲ. ನಮಗೆ ಕಳಂಕ ತರಲು, ನಮನ್ನು ರಾಜಕೀಯವಾಗಿ ಮುಗಿಸಲು ಇದನ್ನು ಅಪಪ್ರಚಾರ ಮಾಡಿ, ಪಿತೂರಿ ಮಾಡಲು ಹೊರಟಿದ್ದಾರೆ. ದೇವೇಗೌಡರು ಮಾಜಿ ಪ್ರಧಾನಿಗಳು, ಅವರ ಮೇಲೆ ನಮಗೆ ಗೌರವ ಇದೆ. ಅವರ ಸೋಲು ನಾವು ನಿರೀಕ್ಷೆ ಮಾಡಿರಲಿಲ್ಲ. ಅವರ ಬಗ್ಗೆ ಗೌರವಯುತವಾಗಿ ಹಲವಾರು ಸಂದರ್ಭಗಳಲ್ಲಿ ನಾವು ಮಾತನಾಡಿದ್ದು ಇದೆ. ನಾವು ನೀಡಿರುವ ಹೇಳಿಕೆಯಿಂದ ದೇವೇಗೌಡರಿಗೆ, ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ನೋವಾಗಿದ್ದರೆ” ಎಂದು ಹೇಳಿದ್ದು ಇದೆ. ವಿಡಿಯೋದಲ್ಲಿ ರಾಜಣ್ಣ ಅವರು ತನ್ನ ಹೇಳಿಕೆಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿರುವುದು ಇಲ್ಲ. ಆದರೂ, ವಿಡಿಯೋದ ಶೀರ್ಷಿಕೆಯಲ್ಲಿ ಹೇಳಿದಂತೆ ಅವರು ದೇವೇಗೌಡರ ಕುರಿತ ತನ್ನ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ನಾವು ನಡೆಸಿದ ಪರಿಶೀಲನೆಯಲ್ಲಿ ಶಂಕುತಲ ನಟರಾಜ್ ಹಂಚಿಕೊಂಡಿರುವ ವಿಡಿಯೋ 2022ರಲ್ಲಿ ರಾಜಣ್ಣ ಅವರು ದೇವೇಗೌಡರ ಕುರಿತು ಹೇಳಿರುವಂತದ್ದು, ಇತ್ತೀಚಿನದ್ದಲ್ಲ ಎಂದು ತಿಳಿದು ಬಂದಿದೆ. ಮಾಧ್ಯಮ ವರದಿಗಳ ಪ್ರಕಾರ ರಾಜಣ್ಣ ಅವರು ತನ್ನ ಹೇಳಿಕೆ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ. ಗಮನಾರ್ಹವಾಗಿ, ದೇವೇಗೌಡರ ಕುರಿತು ಹೇಳಿಕೆ ನೀಡುವಾಗ ರಾಜಣ್ಣ ಅವರು ಸಚಿವರಾಗಿರಲಿಲ್ಲ. ಪ್ರಸ್ತುತ ಅವರ ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದಾರೆ.
ಇದನ್ನೂ ಓದಿ : FACT CHECK : ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಕೇಂದ್ರದ ಅನುದಾನ ಕೇಳುತ್ತಿದೆ ಎಂಬುವುದು ಸುಳ್ಳು