ಕೊಪ್ಪಳದ ಆನೆಗೊಂದಿ ಉತ್ಸವದಲ್ಲಿ ಜರುಗಿದ ಕವಿಗೋಷ್ಠಿಯಲ್ಲಿ ಕವಿತೆ ಓದಿದ್ದಕ್ಕಾಗಿ ಕವಿ ಹಾಗೂ ಪತ್ರಕರ್ತ ಸಿರಾಜ್ ಬಿಸರಳ್ಳಿ ಹಾಗೂ ಕನ್ನಡ ನೆಟ್ ಸಂಪಾದಕರಾದ ರಾಜಬಕ್ಷಿ ವಿರುದ್ಧ ಗಂಗಾವತಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಕ್ರಮಿನಲ್ ಪ್ರಕರಣವನ್ನು ರಾಜ್ಯ ಸರ್ಕಾರ ಈ ಕೂಡಲೇ ಹಿಂಪಡೆಯಬೇಕೆಂದು ಅಖಿಲ ಭಾರತೀಯ ವಕೀಲರ ಒಕ್ಕೂಟ ಆಗ್ರಹಿಸಿದೆ.
ಇಂದು ಕೊಪ್ಪಳದ ಸಿರಾಜ್ ಮತ್ತು ರಾಜಭಕ್ಷಿಯವರ ಮನೆಗೆ ತೆರಳಿ ಸತ್ಯಶೋಧನೆ ನಡೆಸಿದ ವಕೀಲರ ತಂಡವು
ಸುದ್ದಿಗೋಷ್ಠಿಯಲ್ಲಿ ಕವಿತೆಯ ಮೇಲೆ ಕೇಸ್ ಹಾಕುವುದು ಸಂವಿಧಾನ ವಿರೋಧಿಯಾದುದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಗತಿಪರ ವಕೀಲರಾದ ಆರ್ ಜಗನ್ನಾಥ್ ಮಾತನಾಡಿ, ಕವಿತೆ, ಕಾದಂಬರಿ ಥರದ ಸೃಜನಶೀಲ ಸಾಹಿತ್ಯವನ್ನು ಅಭಿವ್ಯಕ್ತಪಡಿಸುವುದು ಸಾಂವಿಧಾನಿಕವಾಗಿ ದಕ್ಕಿರುವ ಹಕ್ಕಾಗಿದೆ. ಅದು ಪ್ರತಿಯೊಬ್ಬ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯವಾಗಿದೆ. ಹಾಗಾಗಿ ಕವಿತೆ ಓದಿದ್ದಕ್ಕೆ ಕ್ರಿಮಿನಲ್ ಕೇಸು ಹಾಕಿ ವಿಚಾರಣೆಗೊಳಪಡಿಸುವುದು ಸಂವಿಧಾನ ವಿರೋಧಿ ಕೃತ್ಯವಾಗಿದೆ. ಹಾಗಾಗಿ ಸರ್ಕಾರ ಮಧ್ಯಪ್ರವೇಶಿಸಿ ತಕ್ಷಣ ಕೇಸ್ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ವಿಡಿಯೋ ನೋಡಿ
ಅಖಿಲ ಭಾರತ ವಕೀಲ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಕುಮಾರ್ ಮಾತನಾಡಿ, ಸಿರಾಜ್ ಬಿಸರಳ್ಳಿ ಹಾಗೂ ರಾಜಬಕ್ಷಿ ಅವರ ಪ್ರಕರಣದಲ್ಲಿ ಮೇಲ್ನೋಟಕ್ಕೆ ರಾಜಕೀಯ ಒತ್ತಡ ಹೇರಲಾಗುತ್ತಿದೆ. ಪೊಲೀಸರು ರಾಜಕೀಯ ಪಕ್ಷದ ಪ್ರತಿನಿಧಿಗಳಂತೆ ವರ್ತಿಸಿ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂವಿಧಾನ ಹಾಗೂ ಕಾನೂನು ವಿರುದ್ಧವಾಗಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರ್ಯದ ಅಂಶಗಳು ಸಂವಿಧಾನ ಮತ್ತು ಸುಪ್ರಿಂ ಕೋರ್ಟ್ ನ ರಕ್ಷಣೆಗೆ ಒಳಪಟ್ಟಿವೆ. ಗಂಗಾವತಿ ಠಾಣೆಯಲ್ಲಿ ಕ್ರೈ.ನಂ 23/2020 ರಲ್ಲಿ ಭಾರತೀಯ ದಂಡ ಸಂಹಿತೆ ಕಲಂ 505(2) ರಡಿ ಪ್ರಕರಣ ದಾಖಲಿಸಿರುವುದು ದುರದೃಷ್ಟಕರ ವಿಚಾರ. ಅಲ್ಲದೇ ಈ ಕೇಸ್ ಕೋರ್ಟಿನಲ್ಲಿ ಬಿದ್ದು ಹೋಗುವಂತ ಕೇಸ್ ಎಂದು ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಆರ್ ಕೆ ದೇಸಾಯಿ, ರಾಜ್ಯ ಸಮಿತಿಯ ಸದಸ್ಯೆ ವಿಜಯ ಲಕ್ಷ್ಮಿ, ಪೀಪಲ್ಸ್ ಲಾಯರ್ಸ್ ಗಿಲ್ಡ್ನ ಅಧ್ಯಕ್ಷರಾದ ಅನೀಶ್ ಪಾಷಾ ಹಾಜರಿದ್ದರು.
ನಂತರ ಪತ್ರಕರ್ತ ಬಿಸರಳ್ಳಿ, ಕನ್ನಡ ನೆಟ್ ನ ಸಂಪಾದಕ ರಾಜಬಕ್ಷಿ ಅವರ ಮನೆಗೆ ಭೇಟಿ ನೀಡಿದ ಅಖಿನ ಭಾರತ ವಕೀಲರ ಒಕ್ಕೂಟದ ಸದಸ್ಯರು ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದರು. ನಾವು ನಿಮ್ಮ ಜೊತೆಗಿದ್ದೇವೆ ಎಂದು ತಿಳಿಸಿದರು.
ವಕೀಲರ ಒಕ್ಕೂಟದ ಈ ಆಗ್ರಹ ಸ್ವಾಗತಾರ್ಹ.