ದೆಹಲಿ ಗಡಿಗಳಲ್ಲಿ ಅನ್ನದಾತರು ನಡೆಸುತ್ತಿರುವ ಅಪ್ರತಿಮ ಹೋರಾಟಕ್ಕೆ ಮಸಿ ಬಳಿಯುವ ಯತ್ನಗಳು ನಿರಂತರವಾಗಿ ಪ್ರಚಲಿತದಲ್ಲಿದ್ದು, ಬಿಜೆಪಿ ಐಟಿ ಸೆಲ್ ಇದರಲ್ಲಿ ಸಕ್ರಿಯ ಪಾತ್ರ ನಿರ್ವಹಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳ ಸೈನ್ಬೋರ್ಡ್ಗಳನ್ನು ತಪ್ಪಾಗಿ ತಿದ್ದುವ ಕೆಲಸದಲ್ಲಿ ಹಲವರು ನಿರತರಾದ ಎಂಟು ಫೋಟೊಗಳ ಸಮ್ಮಿಶ್ರಣ (ಕೊಲ್ಯಾಜ್) ಒಂದು ನಿನ್ನೆ-ಮೊನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಹೀಗೆ ಸೈನ್ ಬೋರ್ಡ್ ತಿದ್ದುತ್ತಿರುವವರು ಪ್ರತಿಭಟನಾನಿರತ ರೈತರು ಎಂದು ಅಪಾದಿಸಲಾಗುತ್ತಿದೆ.
ಈಗ ವೈರಲ್ ಆಗಿರುವ ಹಿಂದಿ ಸಂದೇಶದಲ್ಲಿ, ‘ಪ್ರತಿಭಟನಾಕಾರರಿಗೆ ಅಭಿವೃದ್ಧಿಯೇ ಬೇಕಿಲ್ಲ. ಅವರು ಕೇವಲ ವಿನಾಶವನ್ನು ಬಯಸುವವರು. ಅವರಿಗೆ ಸ್ವಾತಂತ್ರ್ಯದ ಮೇಲೆ ನಂಬಿಕೆ ಇಲ್ಲ, ಅವರು ಅರಾಜಕತಾವಾದಿಗಳು’ ಎಂದು ಟೀಕಿಸಲಾಗಿದೆಯಲ್ಲದೇ, ಇಡೀ ಹೋರಾಟವನ್ನು ‘ಫೇಕ್ ಕಿಸಾನ್ ಮೂವ್ಮೆಂಟ್’ ಎಂದು ಅವಹೇಳನ ಮಾಡಲಾಗಿದೆ.
ಮೊದಲಿಗೆ ಬಿಜೆಪಿ ಸದಸ್ಯ ಜವಾಹರ್ ಯಾದವ್ ಎನ್ನುವವನು 2017ರ ಈ ಫೋಟೊಗಳನ್ನು ಹಾಕಿ ಸುಳ್ಳು ಹರಡುವ ಟ್ವೀಟ್ ಮಾಡಿದ್ದಾನೆ. ನಂತರ ಇದೇ ಫೋಟೊಗಳನ್ನು ಬಳಸಿ, ‘ಐ ಸಪೋರ್ಟ್ ನರೇಂದ್ರ ಮೋದಿ’ ಎಂಬ ಫೇಸ್ಬುಕ್ ಗ್ರೂಪ್ನಲ್ಲಿ ಕೃಷ್ಣಕಾಂತ್ ಸಿಂಗ್ ಎನ್ನುವವನು ಪೋಸ್ಟ್ ಮಾಡಿದ್ದಾನೆ.
ಫ್ಯಾಕ್ಟ್ಚೆಕ್
ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಈ ಫೋಟೊಗಳು ಇತ್ತೀಚಿನವಲ್ಲ, 2017ರ ಫೋಟೊಗಳು ಎಂದು ದೃಢಪಟ್ಟಿದೆ.
ಮೊದಲ ಪರಿಶೀಲನೆ: ಕೊಲ್ಯಾಜ್ನಲ್ಲಿರುವ 4 ಇಮೇಜ್ಗಳು ಮತ್ತು ಕೆಳದ ಎಡ ತುದಿಯಲ್ಲಿರುವ ಒಂದು ಇಮೇಜ್ ಅನ್ನು 2017ರ ಅಕ್ಟೋಬರ್ನಲ್ಲಿ ಬ್ಲಾಗ್ ಒಂದರಲ್ಲಿ ಪ್ರಕಟಿಸಲಾಗಿದೆ. ಬ್ಲಾಗ್ ಪ್ರಕಾರ ಈ ಇಮೇಜ್ಗಳು ಪಂಜಾಬ್ಗೆ ಸಂಬಂಧಿಸಿವೆ.
ಎರಡನೆ ಪರಿಶೀಲನೆ: ಮೇಲಿನ ಸಾಲಿನ ಬಲತುದಿಯಲ್ಲಿರುವ ಇಮೇಜ್ ಅನ್ನು ಹಿಂದೂಸ್ತಾನ್ ಟೈಮ್ಸ್ 2017ರ ಅಕ್ಟೋಬರ್ನಲ್ಲಿ ಪ್ರಕಟಿಸಿದೆ. ಲೇಖನದ ಪ್ರಕಾರ, ದಳ್ ಖಲ್ಸಾ, ಶಿರೋಮಣಿ ಅಕಾಲಿ ದಳ (ಅಮೃತಸರ), ಭಾರತೀಯ ಕಿಸಾನ್ ಯೂನಿಯನ್ (ಕ್ರಾಂತಿಕಾರಿ), ಮಾಲ್ವಾ ಯೂತ್ ಫೆಡರೇಶನ್ ಮತ್ತು ಇತರ ಸಂಸ್ಥೆಗಳು, ಟ್ರಾಫಿಕ್ ಸೈನ್ಬೋರ್ಡ್ಗಳಲ್ಲಿ ಹಿಂದಿ, ಇಂಗ್ಲಿಷ್ ನಂತರ ಕೆಳಗಿನ ಸಾಲಿನಲ್ಲಿ ಪಂಜಾಬಿ ಭಾಷೆಯನ್ನು ನಮೂದಿಸುವ ಮೂಲಕ ಪಂಜಾಬಿ ಭಾಷೆಗೆ “ಅಗೌರವ” ತೋರಿಸಲಾಗಿದೆ ಎಂದು ಆರೋಪಿಸಿ ಟ್ರಾಫಿಕ್ ಚಿಹ್ನೆಗಳನ್ನು ಧ್ವಂಸಗೊಳಿಸಿದರು ಎಂದು ವಿವರಿಸಲಾಗಿದೆ.
ಹೀಗಾಗಿ ಸದ್ಯ ಜಾಲತಾಣದಲ್ಲಿ ರೈತರ ಹೆಸರಿನಲ್ಲಿ ಓಡಾಡುತ್ತಿರುವ ಇಮೇಜ್ಗಳಿಗೂ ರೈತ ಪ್ರತಿಭಟನಾಕಾರರಿಗೂ ಸಂಬಂಧವೇ ಇಲ್ಲ. ಅವು 2017ರಲ್ಲಿ ಪಂಜಾಬಿ ಭಾಷೆಗೆ ಅಗೌರವ ಸಲ್ಲಿಸಲಾಗಿದೆ ಎಂದು ದಳ್ ಖಲ್ಸಾ, ಶಿರೋಮಣಿ ಅಕಾಲಿ ದಳ (ಅಮೃತಸರ), ಭಾರತೀಯ ಕಿಸಾನ್ ಯೂನಿಯನ್ (ಕ್ರಾಂತಿಕಾರಿ), ಮಾಲ್ವಾ ಯೂತ್ ಫೆಡರೇಶನ್ ಮತ್ತು ಇತರ ಸಂಸ್ಥೆಗಳು ನಡೆಸಿದ ಪ್ರತಿಭಟನೆಯ ಫೋಟೊಗಳಾಗಿವೆ.
ನಮ್ ಪ್ರಶ್ನೆ: ಅಷ್ಟಕ್ಕೂ ಹಿಂದಿ ಮತ್ತು ಇಂಗ್ಲಿಷ್ ಹೇರಿಕೆಯನ್ನು ವಿರೋಧಿಸುವುದು ಅದ್ಹೇಗೆ ಅರಾಜಕತೆ ಆಗುತ್ತದೆ?
(ಕೃಪೆ: ಅಲ್ಟ್ ನ್ಯೂಸ್)
ಇದನ್ನೂ ಓದಿ: ಉತ್ತರ ಪ್ರದೇಶ: ಈ ಗ್ರಾಮಕ್ಕೆ ರೈತ ಹೋರಾಟ ಬೆಂಬಲಿಸದ ರಾಜಕಾರಣಿಗಳಿಗೆ ಪ್ರವೇಶವಿಲ್ಲ!