ಹರ್ಯಾಣ ಪೊಲೀಸರು ಬಂಧಿಸಿರುವ ಮೂವರು ರೈತರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ರೈತರು ಪಂಜಾಬ್ನ ಪಟಿಯಾಲ ಜಿಲ್ಲೆಯ ಶಂಭು ರೈಲು ನಿಲ್ದಾಣದಲ್ಲಿ ನಾಲ್ಕನೇ ದಿನವೂ ಹಳಿಗಳ ಮೇಲೆ ಕುಳಿತು ಪ್ರತಿಭಟನೆಯನ್ನು ಮುಂದುವರಿಸಿದ್ದು, ಅಂಬಾಲಾ-ಅಮೃತಸರ ಮಾರ್ಗದಲ್ಲಿ ಒಟ್ಟು 54 ರೈಲುಗಳನ್ನು ಏಪ್ರಿಲ್ 20ರಂದು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿಭಟನೆಯಿಂದಾಗಿ ಕಳೆದ ಮೂರು ದಿನಗಳಲ್ಲಿ 380 ರೈಲುಗಳ ಸಂಚಾರಕ್ಕೆ ತೊಂದರೆಯಾಗಿದ್ದು, ಪ್ರಯಾಣಿಕರ ಮೇಲೆ ಪ್ರತಿಭಟನೆ ಹೆಚ್ಚು ಪರಿಣಾಮ ಬೀರಿದೆ.
ಪಟಿಯಾಲ ಜಿಲ್ಲೆಯ ಶಂಭುವಿನಲ್ಲಿ ರೈತರು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಂಧಿತ ರೈತರ ಬಿಡುಗಡೆಗಾಗಿ ಏಪ್ರಿಲ್ 17ರಂದು ಪಂಜಾಬ್-ಹರಿಯಾಣ ಗಡಿಯ ಸಮೀಪವಿರುವ ಶಂಭುವಿನಲ್ಲಿ ಅಂಬಾಲಾ-ಲುಧಿಯಾನ-ಅಮೃತಸರ ಮಾರ್ಗದಲ್ಲಿ ಹಳಿಗಳ ಮೇಲೆ ಕುಳಿತು ರೈತರು ತಮ್ಮ ಪ್ರತಿಭಟನೆಯನ್ನು ಪ್ರಾರಂಭಿಸಿದ್ದರು.
ಮೂವರು ರೈತರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಮತ್ತು ಹರ್ಯಾಣ ಪೊಲೀಸರು ರೈತರನ್ನು ಬಿಡುಗಡೆ ಮಾಡುವವರೆಗೂ ಪ್ರತಿಭಟನೆಯನ್ನು ಮುಂದುವರಿಸಲಾಗುವುದು ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಹೇಳಿದ್ದಾರೆ. ರಾಜ್ಯದ ಹಲವೆಡೆ ಸುರಿದ ಆಲಿಕಲ್ಲು ಮಳೆಯಿಂದ ರೈತರು ಅನುಭವಿಸಿದ ಬೆಳೆ ನಷ್ಟವನ್ನು ನಿರ್ಣಯಿಸಿ ಸಂತ್ರಸ್ತ ರೈತರಿಗೆ ಮಧ್ಯಂತರ ಪರಿಹಾರವನ್ನು ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾನಿರತ ರೈತ ಮುಖಂಡರು ಆಗ್ರಹಿಸಿದ್ದಾರೆ.
ಫೆಬ್ರವರಿ ಮತ್ತು ಮಾರ್ಚ್ನಲ್ಲಿ ಹರಿಯಾಣ ಪೊಲೀಸರು ಬಂಧಿಸಿದ ಮೂವರು ರೈತರಾದ ನವದೀಪ್ ಸಿಂಗ್, ಅನೀಶ್ ಖಟ್ಕರ್ ಮತ್ತು ಗುರುಕಿರತ್ ಸಿಂಗ್ ಅವರನ್ನು ಬಿಡುಗಡೆ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಏಪ್ರಿಲ್ 21 ರೊಳಗೆ ಮೂವರು ರೈತರನ್ನು ಬಿಡುಗಡೆ ಮಾಡದಿದ್ದಲ್ಲಿ, ಏಪ್ರಿಲ್ 22ರಂದು ಜಿಂದ್ ಜಿಲ್ಲೆಯಲ್ಲಿ ಈ ಕುರಿತು ಪಂಚಾಯಿತಿಯನ್ನು ಆಯೋಜಿಸಲಾಗುವುದು ಎಂದು ರೈತ ಮುಖಂಡರು ತಿಳಿಸಿದ್ದಾರೆ. ರೈತರನ್ನು ಬಿಡುಗಡೆ ಮಾಡುವವರೆಗೂ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಹೇಳಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ(ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ, ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಕಾನೂನು ಖಾತ್ರಿ, ರೈತರ ಮೇಲಿನ ಪ್ರಕರಣಗಳ ರದ್ಧತಿ ಸೇರಿದಂತೆ ತಮ್ಮ ಬೇಡಿಕೆಗಳನ್ನು ಅಂಗೀಕರಿಸುವಂತೆ ಸರ್ಕಾರವನ್ನು ಒತ್ತಾಯಿಸಲು ‘ದೆಹಲಿ ಚಲೋ’ ಮೆರವಣಿಗೆಯನ್ನು ಮುನ್ನಡೆಸಿತ್ತು. ಫೆಬ್ರವರಿ 13ರಿಂದ ಪಂಜಾಬ್ ಮತ್ತು ಹರ್ಯಾಣ ನಡುವಿನ ಶಂಭು ಮತ್ತು ಖಾನೌರಿ ಗಡಿಗಳಲ್ಲಿ ರೈತರು ಪ್ರತಿಭಟನೆಯನ್ನು ನಡೆಸಿದ್ದರು.
ಇದನ್ನು ಓದಿ:ಬಿಜೆಪಿಗೆ ಅನುಕೂಲವಾಗಲು ಏಳು ಹಂತಗಳಲ್ಲಿ ಮತದಾನ: ಚುನಾವಣಾ ಆಯೋಗದ ವಿರುದ್ಧ ಮಮತಾ ಬ್ಯಾನರ್ಜಿ ಆರೋಪ