Homeಮುಖಪುಟರಾಜಕೀಯ ನಿರ್ಧಾರಕ್ಕೆ ಅಣಿಯಾಗಬೇಕಿರುವ ರೈತ ಚಳವಳಿ

ರಾಜಕೀಯ ನಿರ್ಧಾರಕ್ಕೆ ಅಣಿಯಾಗಬೇಕಿರುವ ರೈತ ಚಳವಳಿ

- Advertisement -
- Advertisement -

ಕಳೆದ ವಾರ ರೈತ ಚಳವಳಿಯ ಭವಿಷ್ಯದ ಎರಡು ಮಹತ್ವಪೂರ್ಣ ಮುನ್ಸೂಚನೆಗಳು ಕಾಣಿಸಿಕೊಂಡಿವೆ. ಮೊದಲನೆಯದ್ದು, 19 ನೆಯ ನವೆಂಬರ್‌ನಂದು ಸಂಯುಕ್ತ ಕಿಸಾನ್ ಮೋರ್ಚಾ ದೇಶಾದ್ಯಂತ ‘ಫತೆಹ್ ದಿವಸ’ (ಗೆಲುವಿನ ದಿನ) ಆಚರಿಸಿತು ಹಾಗೂ ರೈತ ಚಳವಳಿಯ ಮುಂದಿನ ಕಾರ್ಯಕ್ರಮಗಳನ್ನು ಘೋಷಿಸಿತು. ಎರಡನೆಯದು, ಒಂದು ಆರ್‌ಟಿಐ ಮೂಲಕ ಸರಕಾರವು ಬಹಳಷ್ಟು ಪ್ರಚಾರ ಮಾಡಿ ತಂದ ‘ಕಿಸಾನ್ ಸಮ್ಮಾನ್ ನಿಧಿ’ಯ ಅಸಲಿಯತ್ತನ್ನು ಬಯಲುಗೊಳಿಸಲಾಯಿತು. ಒಂದೆಡೆ ರೈತರ ಬಗೆಗೆ ಸರಕಾರದ ನಿಷ್ಕ್ರಿಯತೆ ಮತ್ತು ಸಂವೇದನೆರಹಿತ ಧೋರಣೆ ಹಾಗೂ ಇನ್ನೊಂದೆಡೆ ರೈತ ಚಳವಳಿಯ ಸಕ್ರಿಯತೆ ಮತ್ತು ಸಂಕಲ್ಪವು ಮುಂಬರುವ ದಿನಗಳಲ್ಲಿ ರೈತ ರಾಜಕೀಯದ ಹೊಸ ನಡೆಯೊಂದರ ಕಡೆಗೆ ಬೊಟ್ಟು ಮಾಡಿದೆ.

ಈ ವಾರ ಒಂದು ಆರ್‌ಟಿಐ ಮೂಲಕ ಬಹಿರಂಗಗೊಂಡ ವಿಷಯವೇನೆಂದರೆ, ಬಹಳಷ್ಟು ಪ್ರಚಾರ ಮಾಡಿ ಕಳೆದ ಲೋಕಸಭೆ ಚುನಾವಣೆಗೂ ಮುನ್ನ ಶುರು ಮಾಡಿದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳ ಸಂಖ್ಯೆಯಲ್ಲಿ ಆಘಾತಕಾರಿ ಕುಸಿತ ಕಂಡು ಬಂದಿರುವುದು. ‘ದಿ ಹಿಂದೂ’ ಪತ್ರಿಕೆಲ್ಲಿ ಪ್ರಕಟವಾದ ವರದಿಯ ಪ್ರಕಾರ ಲೋಕಸಭೆ ಚುನಾವಣೆಗೂ ಮುನ್ನ ಅಂದರೆ ಈ ಯೋಜನೆಯ ಆರಂಭಿಕ ಕಂತುಗಳಲ್ಲಿ 11.48 ಕೋಟಿ ರೈತರ ಖಾತೆಗಳಲ್ಲಿ ದುಡ್ಡು ವರ್ಗಾವಣೆ ಮಾಡಲಾಗಿತ್ತು. ಸರಕಾರ ಆಗ ಹೇಳಿದ್ದೇನೆಂದರೆ, ಎಲ್ಲಾ 14 ಕೋಟಿ ರೈತ ಕುಟುಂಬಳಿಗೆ ಈ ಯೋಜನೆಯನ್ನು ತಲುಪಿಸಲಾಗುವುದೆಂದು. ಆದರೆ ಈ ವರ್ಷ 11ನೆಯ ಕಂತು ಬರುವ ತನಕ ಫಲಾನುಭವಿಗಳ ಸಂಖ್ಯೆಯು ಕಡಿಮೆಯಾಗುತ್ತಲೇ ಹೋಗಿ 3.87 ಕೋಟಿಗೆ ಬಂದಿಳಿದಿದೆ. ಈ ಕುಸಿತ ಯಾವುದೇ ಒಂದು ಕಂತಿನಲ್ಲಿ ಆಗಿಲ್ಲ; ಆರನೆಯ ಕಂತಿನಲ್ಲಿ 9.87 ಕೋಟಿ ರೈತರಿಗೆ ನಿಧಿ ಸಿಕ್ಕಿತ್ತು, 7 ನೆಯ ಕಂತಿನಲ್ಲಿ 9.30 ಕೋಟಿ ರೈತರಿಗೆ, 8ನೆಯ ಕಂತಿನಲ್ಲಿ 8.59 ಕೋಟಿ, 9 ನೆಯ ಕಂತಿನಲ್ಲಿ 7.66 ಕೋಟಿ, 10 ನೆಯ ಕಂತಿನಲ್ಲಿ 6.34 ಕೋಟಿ ಹಾಗೂ ಈ ವರ್ಷ ಎಪ್ರಿಲ್ ಜೂನ್‌ನ 11ನೆಯ ಕಂತಿನಲ್ಲಿ ಕೇವಲ 3.87 ಕೋಟಿ ರೈತ ಕುಟುಂಬಗಳಿಗೆ 2,000 ರೂಪಾಯಿಗಳ ಚೌಮಾಸಿಕ- ನಾಲ್ಕು ತಿಂಗಳಿಗೊಮ್ಮೆ ಸಿಗುವ ಪರಿಹಾರವನ್ನು ವಿತರಿಸಲಾಗಿದೆ. ಒಂದು ವೇಳೆ ಈ ಆರ್‌ಟಿಐ ಅನ್ನು ನಂಬಬಹುದಾದರೆ, ಪ್ರಧಾನ ಮಂತ್ರಿಗಳ ಅತ್ಯಂತ ಪ್ರತಿಷ್ಠಿತ ಯೋಜನೆಯಿಂದ ರೈತರು ಕಣ್ಮರೆಯಾಗುತ್ತಿದ್ದಾರೆ ಹಾಗೂ ಸರಕಾರ ನಿದ್ರಿಸುತ್ತಿದೆ.

‘ದಿ ಹಿಂದೂ’ ಪತ್ರಿಕೆಯು ಹೀಗಾಗಿರುವುದಕ್ಕೆ ಕಾರಣಗಳನ್ನು ಬಹಿರಂಗಪಡಿಸಬೇಕು ಎಂದು ಕೇಳಿದಾಗ ಸರಕಾರವು ಉತ್ತರಿಸಲಿಲ್ಲ. ಆದರೆ ವರದಿ ಪ್ರಕಟವಾದ ನಂತರ ಬಂದ ಪ್ರತಿಕ್ರಿಯೆಗಳಿಗೆ, ಸರಕಾರವು ಒಂದು ಪತ್ರಿಕಾ ಜಾಹಿರಾತು ಬಿಡುಗಡೆಗೊಳಿಸಿ ಬೇರೆ ಅಂಕಿಅಂಶಗಳನ್ನು ನೀಡಿದೆ, ಹಾಗೂ ಎಲ್ಲಾ ದೋಷವನ್ನು ರಾಜ್ಯ ಸರಕಾರಗಳ ಮೇಲೆ ಹಾಕಿಬಿಟ್ಟಿದೆ. ಇಲ್ಲಿ ಏಳುವ ಪ್ರಶ್ನೆ ಏನೆಂದರೆ, ಒಂದು ವೇಳೆ ಈ ಅಂಕಿಅಂಶಗಳು ತಪ್ಪಾಗಿದ್ದರೆ, ಸರಕಾರವೇ ಆರ್‌ಟಿಐ ನಲ್ಲಿ ಇಂತಹ ಅಂಕಿ ಅಂಶಗಳನ್ನು ಏಕೆ ನೀಡಿತು ಎಂದು. ಸರಕಾರ ಸೂಚಿಸುತ್ತಿರುವುದೇನೆಂದರೆ ಇವು ನಿರಂತರವಾಗಿ ಎಲ್ಲಾ ಕಂತುಗಳನ್ನು ಪಡೆದುಕೊಂಡು ರೈತರ ಅಂಕಿಅಂಶಗಳಷ್ಟೇ ಆಗಿವೆ ಎಂದು. ಹೀಗಿದ್ದರೂ ಇದು ಈ ಯೋಜನೆಯ ಗಂಭೀರ ವಿಫಲತೆಯನ್ನು ಎತ್ತಿಹಿಡಿಯುತ್ತದೆ. ಒಂದು ವೇಳೆ ತಪ್ಪು ರಾಜ್ಯ ಸರಕಾರಗಳದ್ದಾಗಿದ್ದರೆ, ಆಗಲೂ ಪ್ರಧಾನ ಮಂತ್ರಿಗಳು ಇದರಿಂದ ಕೈಕೊಡವಿಕೊಳ್ಳುವಂತಿಲ್ಲ ಏಕೆಂದರೆ ಯಾವ ರಾಜ್ಯಗಳಲ್ಲಿ ಫಲಾನುಭವಿಗಳ ಸಂಖ್ಯೆಯಲ್ಲಿ ಎಲ್ಲಕ್ಕಿಂತ ಹೆಚ್ಚು ಕಡಿತ ಕಂಡುಬಂದಿದೆಯೋ (ಮಧ್ಯಪ್ರದೇಶ, ಗುಜರಾತ್, ಬಿಹಾರ ಹಾಗೂ ಮಹಾರಾಷ್ಟ್ರ ಅಲ್ಲಿ ಬಹುತೇಕ ಸಮಯ ಬಿಜೆಪಿಯೇ ಅಧಿಕಾರ ನಡೆಸಿದೆ.

ಇದು ಕೇವಲ ಒಂದು ಯೋಜನೆಯ ವಿಷಯವಲ್ಲ. ಸರಕಾರದ ಎರಡನೆಯ ಬಹುಪ್ರಚಾರಿತ ಕೃಷಿ ಯೋಜನೆ ‘ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ’ಯೂ ಇಂತಹದ್ದೇ ಪರಿಸ್ಥಿತಿಯಲ್ಲಿದೆ. 2016ರಲ್ಲಿ ಈ ಯೋಜನೆಯ ಘೊಷಣೆ ಆಗುವುದಕ್ಕಿಂತಲೂ ಮುನ್ನ ಹಳೆಯ ಫಸಲ್ ಬೀಮಾ ಯೋಜನೆಯ ಅಡಿಯಲ್ಲಿ 4.86 ಕೋಟಿ ರೈತರ 5.32 ಕೋಟಿ ಹೆಕ್ಟೇರ್ ಭೂಮಿಯ ಫಸಲ್ (ಬೆಳೆ)ಯ ವಿಮೆ ಆಗಿತ್ತು. ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಜಾರಿಯಾದ ನಂತರ ಮೊದಲ ಎರಡು ವರ್ಷ ಈ ಸಂಖ್ಯೆಯು ಹೆಚ್ಚಿತು ಆದರೆ ಅದು ನಂತರ ನಿರಂತರವಾಗಿ ಕುಸಿಯುತ್ತಿದೆ. 2021ರ ಹೊಸ ಅಂಕಿಅಂಶಗಳ ಪ್ರಕಾರ ಕಳೆದ ವರ್ಷ ಕೇವಲ 2.49 ಕೋಟಿ ರೈತರಿಗೆ 3.87 ಕೋಟಿ ಹೆಕ್ಟೇರ್ ಭೂಮಿಯ ಬೆಳೆ ವಿಮೆ ಆಗಿದೆ. ಅದರರ್ಥ ಇಷ್ಟೊಂದು ಪ್ರಚಾರದೊಂದಿಗೆ ಶುರುವಾದ ಈ ಫಸಲ್ ಬೀಮಾ ಯೋಜನೆಯ ಪರಿಣಾಮವಾಗಿ ವಿಮೆ ಕಂಪನಿಗಳ ಆದಾಯ ನಿಸ್ಸಂಶಯವಾಗಿ ಹೆಚ್ಚಿದೆ, ಆದರೆ ಬೆಳೆ ವಿಮೆಯ ಲಾಭ ಪಡೆಯುವ ರೈತರ ಸಂಖ್ಯೆ ಅರ್ಧಕ್ಕೆ ಇಳಿದಿದೆ.

ರೈತರ ಆದಾಯವನ್ನು ದ್ವಿಗುಣಗೊಳಿಸುವ ಪ್ರಧಾನ ಮಂತ್ರಿಗಳ ಘೋಷಣೆಯ ಪರಿಸ್ಥಿತಿಯೂ ಇದೇ ಆಗಿದೆ. ವಾಸ್ತವವೇನೆಂದರೆ, ಈ ಘೋಷಣೆಯು ಎಂದಿಗೂ ಯೋಜನೆಯ ಸ್ವರೂಪ ಪಡೆದುಕೊಳ್ಳಲೇ ಇಲ್ಲ. 6 ವರ್ಷಗಳ ತನಕ ಪ್ರಧಾನಮಂತ್ರಿ ಮತ್ತು ಅವರ ಭಟ್ಟಂಗಿಗಳು ಹಗಲೂ-ರಾತ್ರಿ ಡಬಲ್ ಆದಾಯದ ಡಂಗರು ಸಾರುತ್ತಲೇ ಇದ್ದರು, ಆದರೆ ಈ ವರ್ಷ ಫೆಬ್ರುವರಿಯಲ್ಲಿ 6 ವರ್ಷಗಳ ಅವಧಿ ಪೂರ್ಣಗೊಂಡ ತರುವಾಯ ಸರಕಾರದ ಬಾಯಿಕಚ್ಚಿದಂತಿದೆ. ರೈತರ ಆದಾಯದ ಹೆಚ್ಚಳದ ಬಗ್ಗೆ ಒಂದು ಅಂಕಿಅಂಶಗಳ ವರದಿಯನ್ನೂ ನೀಡಲಾಗಿಲ್ಲ. ಇತರ ಅಂಕಿಅಂಶಗಳ ಆಧಾರದ ಮೇಲೆ ನಾವು ಅಂದಾಜು ಹಾಕಿದರೆ ಹೊರಬರುವ ಕಟು ಸತ್ಯವೇನೆಂದರೆ, ಕೃಷಿಯಿಂದ ರೈತ ಕುಟುಂಬಗಳು ಗಳಿಸುವ ಆದಾಯದಲ್ಲಿ ಇಳಿತವೇ ಆಗಿದೆ. ಪ್ರಧಾನಮಂತ್ರಿಯ ಕೃಷಿಯ ಸಲುವಾಗಿ ಒಂದು ಲಕ್ಷ ಕೋಟಿ ರೂಪಾಯಿಗಳ ನಿಧಿಯ ಘೋಷಣೆಯೂ ಇನ್ನೂ ಹಾಳೆಯ ಮೇಲೆಯೇ ಇದೆ.

ಕಳೆದ ವರ್ಷ 9ನೆಯ ಡಿಸೆಂಬರ್‌ನಂದು ದಿಲ್ಲಿಯ ಹೋರಾಟ ತೆರವುಗೊಳಿಸುವ ಸಮಯದಲ್ಲಿ ಸರಕಾರವು ಸಂಯುಕ್ತ ಕಿಸಾನ್ ಮೋರ್ಚಾಗೆ ಲಿಖಿತರೂಪದಲ್ಲಿ ಮಾಡಿದ ವಾಗ್ವಾದಗಳಿಂದ ಸಂಪೂರ್ಣವಾಗಿ ನುಣುಚಿಕೊಂಡಿದೆ. ಸ್ವತಃ ಕೇಂದ್ರ ಸರಕಾರವು ಚಳವಳಿಯ ಸಮಯದಲ್ಲಿ ರೈತರ ಮೇಲೆ ಹಾಕಿದ ಪ್ರಕರಣಗಳನ್ನು ಇನ್ನೂ ವಾಪಸ್ ಪಡೆದಿಲ್ಲ. ವಿದ್ಯುತ್ ಮಸೂದೆಯನ್ನು ಸಂಸತ್ತಿನಲ್ಲಿ ಪರಿಚಯಿಸುವುದಕ್ಕೂ ಮುನ್ನ ಸಂಯುಕ್ತ ಕಿಸಾನ್ ಮೋರ್ಚಾದೊಂದಿಗೆ ಚರ್ಚೆ ನಡೆಸುವುದಾಗಿ ಲಿಖಿತ ವಾಗ್ದಾನ ನೀಡಿದ್ದರೂ, ಹಾಗೆ ಮಾಡದೇ ಅದನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ವಾಗ್ದಾನ ನೀಡಿದ 9 ತಿಂಗಳ ನಂತರ ಎಂಎಸ್‌ಪಿಯ ಬಗ್ಗೆ ಸಮಿತಿಯನ್ನು ರಚಿಸಲಾಯಿತು ಆದರೆ ಎಂಎಸ್‌ಪಿಯನ್ನು ಕಾನೂನಾತ್ಮಕ ಗ್ಯಾರಂಟಿ ಮಾಡುವ ವಿಷಯವನ್ನು ಸಮಿತಿಯ ಅಧಿಕಾರ ಕ್ಷೇತ್ರದಲ್ಲಿ ಇಟ್ಟಿಲ್ಲ. ರೈತರಿಗೆ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದಂತೆ ಇರುವ ಲಖೀಂಪುರ ಖೇರಿ ಹತ್ಯಕಾಂಡದ ಆರೋಪಿ ಅಜಯ್ ಮಿಶ್ರ ಟೇನಿ ಇಂದಿಗೂ ಕೇಂದ್ರ ಸಚಿವಸಂಪುಟದಲ್ಲಿ ತಳವೂರಿದ್ದಾರೆ ಹಾಗೂ ಸರಕಾರವು ಅವರ ಮಗನನ್ನು ಜೈಲಿನಿಂದ ಹೊರಗೆ ತರುವ ಪ್ರಯತ್ನಗಳನ್ನು ಸತತವಾಗಿ ಮಾಡುತ್ತಿದೆ.

ಇದೆಲ್ಲದರಿಂದ ಸ್ಪಷ್ಟವಾಗುವುದೇನೆಂದರೆ, ಈ ಸರಕಾರವು ತಾನು ರೈತರಿಗಾಗಿ ಮಾಡಿದ ತನ್ನ ವಾಗ್ದಾನಗಳ ಬಗ್ಗೆ ಖಂಡಿತವಾಗಿಯೂ ಗಂಭೀರವಾಗಿಲ್ಲ ಹಾಗೂ ತನ್ನ ವಾಗ್ದಾನಗಳ ಬಗ್ಗೆ ಪ್ರಾಮಾಣಿಕವಾಗಿಯೂ ಇಲ್ಲ, ಅವುಗಳ ಬಗ್ಗೆ ನಿಜವನ್ನೂ ನುಡಿಯುವುದಿಲ್ಲ ಹಾಗೂ ಲಿಖಿತರೂಪದಲ್ಲಿರುವ ತನ್ನ ಆಶ್ವಾಸನೆಗಳ ಬಗಗ್ಗೆ ಅದಕ್ಕೆ ಬದ್ಧತೆ ಇಲ್ಲ. ಸ್ವಾಭಾವಿಕವಾಗಿಯೇ ಇಂತಹ ಸನ್ನಿವೇಶಗಳಲ್ಲಿ ರೈತರಿಗೆ ತಮ್ಮ ಸಂಘರ್ಷವನ್ನು ಮತ್ತೊಮ್ಮೆ ಶುರು ಮಾಡುವುದನ್ನು ಬಿಟ್ಟು ಬೇರೆ ಯಾವ ದಾರಿಯೂ ಇಲ್ಲ. ಇತ್ತೀಚಿಗೆ ಸಂಯುಕ್ತ ಕಿಸಾನ್ ಮೋರ್ಚಾ ಮತ್ತೆ ತನ್ನ ಒಗ್ಗಟ್ಟನ್ನು ಪ್ರದರ್ಶಿಸುತ್ತ ರೈತರ ಮುಂದೆ ಒಂದು ಹೊಸ ಕಾರ್ಯಕ್ರಮ ಇಟ್ಟಿದೆ. ಈ ಯೋಜನೆಯ ಅನುಗುಣವಾಗಿ 19ನೆಯ ನವೆಂಬರ್‌ನಂದು ಅಂದರೆ ಪ್ರಧಾನಮಂತ್ರಿಯ ಮೂಲಕ ಕರಾಳ ಕೃಷಿ ಕಾಯಿದೆಗಳನ್ನು ವಾಪಸ್ ಪಡೆದ ವಾರ್ಷಿಕೋತ್ಸವದಂದು ದೇಶಾದ್ಯಂತ ರೈತರು ‘ಫತೆಹ್ ದಿವಸ್’ಅನ್ನು ಆಯೋಜಿಸಿದ್ದರು. ದಿಲ್ಲಿ ಹೊರಡುವ ದಿನ ಅಂದರೆ 26ನೆಯ ನವೆಂಬರ್‌ನ ಎರಡನೆಯ ವಾರ್ಷಿಕೋತ್ಸವದಂದು ರೈತರು ಎಲ್ಲಾ ಪ್ರದೇಶಗಳಲ್ಲಿ ರಾಜಭವನ ಮಾರ್ಚ್ ಆಯೋಜಿಸಿ, ರಾಷ್ಟ್ರರಪತಿಗಳಿಗೆ ಜ್ಞಾಪಕ ಪತ್ರ ಸಲ್ಲಿಸುತ್ತಾರೆ, ಅದರಲ್ಲಿ ಸರಕಾರವು ತನ್ನ ವಾಗ್ದಾನ ಈಡೇರಿಸದ ಬಗ್ಗೆ ಗಮನ ಸೆಳೆಯುವಂತೆ ಮಾಡಲಾಗುವುದು. ಅದರ ನಂತರ 1ನೆಯ ಡಿಸೆಂಬರ್‌ನಿಂದ 11ನೆಯ ಡಿಸೆಂಬರ್ ತನಕ ದೇಶಾದ್ಯಂತ ಜನಪ್ರತಿನಿಧಿಗಳ ಬಳಿ ಹೋಗಿ ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಅಧಿವೇಶನಗಳಲ್ಲಿ ರೈತರ ವಿಷಯಗಳನ್ನು ಎತ್ತಿ ಚರ್ಚಿಸುವಂತೆ ಸೂಚಿಸಲಾಗುವುದು. ದೆಹಲಿಯ ಆಂದೋಲನದ ನಂತರ ಸಂಯುಕ್ತ ಕಿಸಾನ್ ಮೋರ್ಚಾದಿಂದ ಬೇರೆ ಆದ ಕೆಲವು ಸಮೂಹಗಳೂ ಈ ಕಾರ್ಯಕ್ರಮಗಳ ಸಮರ್ಥನೆ ಮಾಡಿ ಒಂದು ದೊಡ್ಡ ಹೋರಾಟಕ್ಕಾಗಿ ವಿಶಾಲಹೃದಯವನ್ನು ಪ್ರದರ್ಶಿಸುತ್ತಾರೆ ಎಂದು ಆಶಿಸಬಹುದಾಗಿದೆ.

ರೈತರ ಈ ಐತಿಹಾಸಿಕ ಹೋರಾಟವು ಈಗ ಕೇವಲ ಪ್ರತಿಭಟನೆ, ಪ್ರದರ್ಶನ ಮತ್ತು ರ‍್ಯಾಲಿಗಳಿಗೆ ಸೀಮಿತವಾಗಿರಲು ಸಾಧ್ಯವಿಲ್ಲ. ಈಗ ರೈತ ಆಂದೋಲನಕ್ಕೆ ಅಗತ್ಯವಾದ ರಾಜಕೀಯವನ್ನು ಸ್ಪಷ್ಟ ರೂಪದಲ್ಲಿ ನಿರ್ಧರಿಸಬೇಕಾಗುತ್ತದೆ. ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಜೇಬಿನಲ್ಲಿರುವ ರೈತ ಸಂಘಟನೆಗಳನ್ನು ಹೊರತುಪಡಿಸಿ ಇತರ ಎಲ್ಲಾ ರೈತರಿಗೆ ಮೋದಿ ಸರಕಾರವು ಈ ದೇಶದ ಇತಿಹಾಸದಲ್ಲಿಯೇ ಅತ್ಯಂತ ರೈತ ವಿರೋಧಿ ಸರಕಾರವೆಂದು ಸಾಬೀತಾಗಿದೆ ಎಂಬುದರ ಬಗ್ಗೆ ಯಾವ ಸಂಶಯವೂ ಇಲ್ಲ. ಈ ಸರಕಾರವನ್ನು ಪ್ರಜಾತಾಂತ್ರಿಕ ರೀತಿಯಲ್ಲಿ ಪಲ್ಲಟಿಸಲು ಈಗ ರೈತರು ತಂತ್ರವನ್ನು ರೂಪಿಸಬೇಕಿದೆ. ಆದರೆ ಅದರರ್ಥ, ರೈತರು ಕಣ್ಣುಮುಚ್ಚಿ ಬಿಜೆಪಿ ವಿರೋಧಿಗಳ ಸಮರ್ಥನೆ ಮಾಡಬೇಕು ಎಂದಲ್ಲ. ರೈತರ ಆಂದೋಲನವು ವಿರೋಧಪಕ್ಷಗಳ ಮೇಲೆ ಒತ್ತಡ ಹಾಕಿ, 2024ರಲ್ಲಿ ರೈತರಿಗಾಗಿ ಕನಿಷ್ಠ ಒಂದು ಯೋಜನೆಯನ್ನು ಸ್ವೀಕರಿಸಿ, ಅದನ್ನು ಜಾರಿಗೊಳಿಸುವ ಸಾರ್ವಜನಿಕ ಸಂಕಲ್ಪ ಕೈಗೊಳ್ಳುವಂತೆ ಮಾಡಬೇಕು. ಇಂದು ನಮ್ಮ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಸಭ್ಯತೆಯ ಪರಂಪರೆಯ ಮೇಲೆ ಎರಗಿರುವ ವಿಪತ್ತಿನಿಂದ ದೇಶವನ್ನು ರಕ್ಷಿಸುವಲ್ಲಿ ರೈತರು ಪ್ರಮುಖ ಪಾತ್ರ ವಹಿಸಿಕೊಳ್ಳಬೇಕಾಗಿದೆ. ಈ ಐತಿಹಾಸಿಕ ಹೊಣೆಗಾರಿಕೆ ಸಂಯುಕ್ತ ಕಿಸಾನ್ ಮೋರ್ಚಾದ ನೇತೃತ್ವದ ಹೆಗಲಿನ ಮೇಲಿದೆ.

– ಯೋಗೇಂದ್ರ ಯಾದವ್, ರಾಜಕೀಯ ಕಾರ್ಯಕರ್ತರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೊಸ ಕಾರ್ಮಿಕ ಕಾನೂನು ಶ್ರಮಿಕರ ಮೂಲಭೂತ ಹಕ್ಕುಗಳಿಗೆ ಕತ್ತರಿ!

"8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿಶ್ರಾಂತಿ" ಎಂಬ ತತ್ವವು ಸುಲಭವಾಗಿ ದೊರೆತದ್ದಲ್ಲ, ಇದು ದೀರ್ಘಕಾಲದ ಹೋರಾಟ, ತ್ಯಾಗ ಮತ್ತು ಏಕತೆಯ ಫಲವಾಗಿದೆ. ಕೆಲಸದ ಹೊರೆ ಅತಿಯಾಗಿ ಇದ್ದ...

ಮನರೇಗಾ ಯಶೋಗಾಥೆ: ಭಾಗ-1 ದಲಿತರು-ಮಹಿಳೆಯರಿಗೆ ಆರ್ಥಿಕ ಭದ್ರತೆ; ಗ್ರಾಮ ಸಬಲೀಕರಣಕ್ಕೆ ಮನರೇಗಾ ಕೊಟ್ಟ ಕೊಡುಗೆ ಅಪಾರ

2001-2004 ರವರೆಗಿನ ನಿರಂತರ ಬರ ಕರ್ನಾಟಕದ ಬಹುತೇಕ ಹಳ್ಳಿಗಳನ್ನು ಕಂಗಾಲಾಗಿಸಿದ್ದಂತೂ ನಿಜ. ಎಲ್ಲ ಕೆರೆಗಳು ಬತ್ತಿಹೋಗಿದ್ದರಿಂದ ದನಕರುಗಳಿಗೆ ನೀರು ಕುಡಿಸಲೂ ಜನ ಅಲೆದಾಡುತ್ತಿದ್ದರು. ಜನರಿಗೆ ಕುಡಿಯುವ ನೀರು ಪೂರೈಕೆ ಸಹ ಆ ಸಂದರ್ಭದಲ್ಲಿ...

ಮಣಿಪುರ: ಬುಡಕಟ್ಟು ಚರ್ಚ್ ನಾಯಕರ ಮೇಲೆ ಉಗ್ರ ದಾಳಿ:  ಹಲವೆಡೆ ಮೇಣದ ಬತ್ತಿಯ ಜೊತೆಗೆ ಶೋಕ ವ್ಯಕ್ತ ಪಡಿಸಿದ ಕುಕಿ ಸಮುದಾಯ 

ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಪ್ರಮುಖ ಕುಕಿ ಚರ್ಚ್ ನಾಯಕರನ್ನು ಹೊಂಚು ಹಾಕಿ ದಾಳಿ ನಡೆಸಿ ಕೊಲ್ಲಲಾಗಿದೆ. ಈ ಘಟನೆಯು ರಾಜ್ಯದಲ್ಲಿ ಜನಾಂಗೀಯ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.  ಮೇ 13ರಂದು ಬೆಳಿಗ್ಗೆ ಚುರಾಚಂದ್‌ಪುರನಲ್ಲಿ...

ಗುಜರಾತ್| ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ ದಲಿತ ವರನ ಮೇಲೆ ಹಲ್ಲೆ

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮಡಿ ಗ್ರಾಮದಲ್ಲಿ ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ದಲಿತ ವರನ ಮೇಲೆ ಮೇಲ್ಜಾತಿಯ ಪುರುಷರ ಗುಂಪೊಂದು ಜಾತಿ ನಿಂದನೆ ಮಾಡಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೇ 10 ರಂದು...

ಆತಂಕಕಾರಿಯಾದ ಆನೆ ದಾಳಿ

ಆನೆ ದಾಳಿ ಹಿಂದೆಂದಿಗಿಂತಲೂ ದುಪ್ಪಟ್ಟಾಗಿದೆ. ಅರಣ್ಯಮಂತ್ರಿ ಈಶ್ವರ್ ಖಂಡ್ರೆಯವರ ಪ್ರಕಾರ ಆನೆಗಳ ಸಂಖ್ಯೆ ದುಪ್ಪಟ್ಟಾಗಿದೆ. ಕಾಡಿನ ಪ್ರಮಾಣ ಅಷ್ಟೆ ಇದೆ. ಅಂದರೆ ಕಾಡಿನ ಪ್ರಮಾಣ ಹೆಚ್ಚು ಮಾಡಬೇಕೆಂದರೆ ಮನುಷ್ಯರ ಆವಾಸ ಇಲ್ಲದೆ ಆನೆಗಳಿಗಾಗಿ...

ವೈದ್ಯಕೀಯ ಸೀಟುಗಳ ಹಂಚಿಕೆ ಕೇಂದ್ರೀಕರಣಕ್ಕೆ ದಕ್ಷಿಣದ ವಿರೋಧ; ನೀಟ್ ಪರೀಕ್ಷೆಯನ್ನೇ ರದ್ದುಗೊಳಿಸಲು ಇದು ಸಕಾಲ

ರಾಜ್ಯಪಟ್ಟಿಯಲ್ಲಿದ್ದ ಶಿಕ್ಷಣದ ಹಕ್ಕನ್ನು ನೀಟ್‌ ಹೆಸರಿನಲ್ಲಿ ಕೇಂದ್ರದ ಜಂಟಿ ಪಟ್ಟಿಗೆ ಸೇರಿಸುವ ಒಕ್ಕೂಟ ಸರ್ಕಾರದ ನಿರ್ಧಾರದಿಂದ ದಕ್ಷಿಣದ ರಾಜ್ಯಗಳು ಭಾರಿ ನಷ್ಟ ಅನುಭವಿಸುತ್ತಿವೆ. ಜೊತೆಗೆ, ನೀಟ್ ಪಾಸ್‌ ಮಾಡುವ ಒತ್ತಡ ತಾಳಲಾರದೆ ದೇಶದಾದ್ಯಂತ...

‘ಮತ’ ವ್ಯರ್ಥ ಮಾಡದ ಮತದಾರ: 2026ರಲ್ಲಿ ಕುಸಿಯಿತು ‘ನೋಟಾ’ ಅಬ್ಬರ

2026ರ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಾದ್ಯಂತ ಸುಮಾರು 10.9 ಲಕ್ಷ ಮತಗಳು 'ನೋಟಾ' (ಯಾರಿಗೂ ಮತವಿಲ್ಲ) ಪಾಲಾಗಿವೆ. ಆದರೆ, 2016 ಮತ್ತು 2021ರ ಚುನಾವಣೆಗಳಿಗೆ ಹೋಲಿಸಿದರೆ...

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...