ಕೇರಳದ ಕೊಟ್ಟಾಯಂ ಜಿಲ್ಲೆಯ ಪಾಲಾ ಪೊಲೀಸ್ ಠಾಣೆಯಲ್ಲಿ 17 ವರ್ಷದ ಬಾಲಕನಿಗೆ ಪೊಲೀಸ್ ದೌರ್ಜನ್ಯ ಎಸಗಿರುವ ಬಗ್ಗೆ ಕುಟುಂಬ ಆರೋಪಿಸಿದ್ದು, ಬಾಲಕ 3 ತಿಂಗಳಿನಿಂದ ಹಾಸಿಗೆ ಪಾಲಾಗಿದ್ದಾನೆ.
ಪಾರ್ತಿಪನ್ ಎಂಬ 17ವರ್ಷದ ಬಾಲಕನ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಆದರೆ ಘಟನೆ ನಡೆದು 20 ದಿನಗಳು ಕಳೆದರೂ ಪೊಲೀಸರು ಯಾಕೆ ಮಗನ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ನಮಗೆ ತಿಳಿದಿಲ್ಲ. ಘಟನೆಯಿಂದ ಮಗನಿಗೆ ಆಘಾತವಾಗಿದೆ. ಇನ್ನೊಂದು ಮಗುವಿಗೆ ಹೀಗಾಗುವುದನ್ನು ನಾನು ಬಯಸುವುದಿಲ್ಲ. ಪೊಲೀಸರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಪಾರ್ತಿಪನ್ ತಂದೆ ಮಧು ಹೇಳಿದ್ದಾರೆ.
ಪಾರ್ತಿಪನ್ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಸಬ್ ಇನ್ಸ್ಪೆಕ್ಟರ್ ಪ್ರೇಮ್ಸನ್ ಮತ್ತು ಸಹಾಯಕ ಸಬ್ ಇನ್ಸ್ಪೆಕ್ಟರ್ ಬಿಜು ಕೆ ಥಾಮಸ್ ಅವರನ್ನು ನ.18ರಂದು ಅಮಾನತುಗೊಳಿಸಲಾಗಿದೆ.
ಅ.29ರಂದು ಬೆಳಿಗ್ಗೆ ಪಾರ್ಥಿಪನ್ ಎರ್ನಾಕುಲಂನ ಪೆರುಂಬವೂರ್ನಲ್ಲಿರುವ ತನ್ನ ಮನೆಯಿಂದ ಸ್ನೇಹಿತನನ್ನು ಭೇಟಿ ಮಾಡಲು ಕಾರಿನಲ್ಲಿ ಹೊರಟಿದ್ದ. ದಾರಿ ಮಧ್ಯೆ ವಾಹನ ತಪಾಸಣೆಯ ಭಾಗವಾಗಿ ಪೊಲೀಸರು ಆತನಿಗೆ ಹಿಡಿದಿದ್ದಾರೆ. ಪಾರ್ಥಿಪನ್ ಡ್ರೈವಿಂಗ್ ಲೈಸೆನ್ಸ್ ಹೊಂದಿಲ್ಲದ ಕಾರಣ ಭಯದಿಂದ ಓಡಿ ಹೋಗಿದ್ದಾನೆ. ಪೊಲೀಸರು ಆತನನ್ನು ಬೆನ್ನಟ್ಟಿ ಹಿಡಿದು ಡ್ರಗ್ಸ್ ಸಾಗಾಟದ ಸಂಶಯದ ಮೇಲೆ ಠಾಣೆಗೆ ಕರೆದೊಯ್ದಿದ್ದಾರೆ ಮತ್ತು ಠಾಣೆಯಲ್ಲಿ ಆತನಿಗೆ ಅಮಾನುಷವಾಗಿ ಥಳಿಸಿದ್ದಾರೆ. ಬಳಿಕ ನಡೆದ ಘಟನೆಯ ಬಗ್ಗೆ ಯಾರಿಗೂ ಹೇಳದಂತೆ ಬೆದರಿಸಿದ್ದಾರೆ. ದೂರು ನೀಡಿದರೆ ಬೇರೆ ಕೇಸ್ನಲ್ಲಿ ಫಿಕ್ಸ್ ಮಾಡುವುದಾಗಿ ಪೊಲೀಸರು ಬೆದರಿಸಿದ್ದಾರೆ ಎಂದು ಮಧು ಆರೋಪಿಸಿದ್ದಾರೆ.
ಮಗನಿಗೆ ಪೊಲೀಸ್ ಠಾಣೆಯಿಂದ ಸಂಜೆ ಕರೆದುಕೊಂಡು ಬಂದಿದ್ದೇವೆ. ಈ ವೇಳೆ ಆತ ಗಂಭೀರವಾಗಿ ಗಾಯಗೊಂಡಿದ್ದ. ಪೊಲೀಸರ ಹಲ್ಲೆಯಿಂದ ಅವನಿಗೆ ಕಾರಿನಿಂದ ಇಳಿಯಲು ಸಾಧ್ಯವಾಗಲಿಲ್ಲ. ನಾವು ಪೆರುಂಬವೂರ್ನ ಆಸ್ಪತ್ರೆಗೆ ಕರೆದೊಯ್ದೆವು. ಅಲ್ಲಿ ವೈದ್ಯರು ಪರೀಕ್ಷಿಸಿ ಬೆನ್ನುಮೂಳೆಯ ಮೇಲೆಗೆ ಗಾಯವಾಗಿದೆ ಎಂದು ಹೇಳಿದ್ದಾರೆ. ಪರವಾನಗಿ ಇಲ್ಲದೆ ವಾಹನ ಓಡಿಸಿದ್ದಕ್ಕೆ ಪೊಲೀಸರು ದಂಡವನ್ನು ವಿಧಿಸಬಹುದು ಆದರೆ ಈ ರೀತಿ ಹಲ್ಲೆ ಮಾಡಿರುವುದು ಎಷ್ಟು ಸರಿ ಎಂದು ಮಧು ಪ್ರಶ್ನಿಸಿದ್ದಾರೆ.
ಪಾರ್ಥಿಪನ್ ಎರ್ನಾಕುಲಂನ ನೆಲ್ಲಿಕುಝಿಯಲ್ಲಿರುವ ಇಂದಿರಾಗಾಂಧಿ ಇನ್ಸ್ಟಿಟ್ಯೂಟ್ ಆಫ್ ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ಕಾಲೇಜಿನ ಮೊದಲ ವರ್ಷದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ. ಬೆನ್ನುಮೂಳೆಗೆ ಗಾಯವಾದ ಕಾರಣ ಆತನಿಗೆ ವೈದ್ಯರು 3 ತಿಂಗಳ ಕಾಲ ಸಂಪೂರ್ಣ ಬೆಡ್ ರೆಸ್ಟ್ಗೆ ಸೂಚಿಸಿದ್ದಾರೆ. ಅವನಿಗೆ ಕ್ಲಾಸ್ಗೆ ಹೋಗಲು ಆಗುತ್ತಿಲ್ಲ. ಶಿಕ್ಷಕರೊಬ್ಬರು ಮನೆಗೆ ಬಂದು ಕೆಲವು ಪುಸ್ತಕಗಳನ್ನು ಕೊಟ್ಟಿದ್ದಾರೆ. ಆದರೆ ಈ ವರ್ಷ ಅಧ್ಯಯನವನ್ನು ಮುಂದುವರಿಸಬಹುದೇ ಅಥವಾ ಇಲ್ಲವೇ ಎಂದು ನನಗೆ ತಿಳಿದಿಲ್ಲ ಮಧು ಹೇಳಿದ್ದಾರೆ.
ಪಾರ್ಥಿಪನ್ ವಿರುದ್ಧದ ಕಸ್ಟಡಿ ಹಿಂಸಾಚಾರದ ಆರೋಪಗಳನ್ನು ಪೊಲೀಸರು ನಿರಾಕರಿಸಿದ್ದು, ಪರವಾನಗಿ ಇಲ್ಲದೆ ವಾಹನ ಚಲಾಯಿಸಿದ್ದರಿಂದ ಕೇವಲ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಹೇಳಿದ್ದಾರೆ. ಈ ಕುರಿತು ಕೊಟ್ಟಾಯಂ ಪೊಲೀಸ್ ಅಧೀಕ್ಷಕ ಕೆ. ಕಾರ್ತಿಕ್ ತನಿಖೆಗೆ ಆದೇಶಿಸಿದ್ದಾರೆ.
ಇದನ್ನು ಓದಿ: ವಿಶ್ವಕಪ್ನಲ್ಲಿ ಭಾರತಕ್ಕೆ ಸೋಲು: ಮೋದಿ, ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ವಿಪಕ್ಷದ ನಾಯಕರು