ಗುಜರಾತ್ನ ಖೇಡಾ ಜಿಲ್ಲೆಯ ಹಳ್ಳಿಯೊಂದರಲ್ಲಿ 2022ರಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಐವರನ್ನು ಸಾರ್ವಜನಿಕವಾಗಿ ಥಳಿಸಿದ್ದ ಗುಜರಾತ್ ಪೊಲೀಸರನ್ನು ಸುಪ್ರೀಂ ಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿದ್ದು, “ಜನರನ್ನು ಕಂಬಕ್ಕೆ ಕಟ್ಟಿ ಥಳಿಸುವ ಅಧಿಕಾರ ನಿಮಗೆ ಎಲ್ಲಿಂದ ಬಂತು? ಎಂದು ಪ್ರಶ್ನಿಸಿದೆ.
ಅಕ್ಟೋಬರ್ 19,2023ರ ಗುಜರಾತ್ ಹೈಕೋರ್ಟ್ ಆದೇಶದ ವಿರುದ್ಧ ಆರೋಪಿಗಳಾದ ಇನ್ಸ್ಪೆಕ್ಟರ್ ಎವಿ ಪರ್ಮಾರ್, ಸಬ್ ಇನ್ಸ್ಪೆಕ್ಟರ್ ಡಿಬಿ ಕುಮಾವತ್, ಹೆಡ್ ಕಾನ್ಸ್ಟೆಬಲ್ ಕೆಎಲ್ ದಾಭಿ ಮತ್ತು ಕಾನ್ಸ್ಟೇಬಲ್ ಆರ್ಆರ್ ದಾಭಿ ಎಂಬ ನಾಲ್ವರು ಪೊಲೀಸ್ ಸಿಬ್ಬಂದಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ವಿಚಾರಣೆ ನಡೆಸಿತು.
ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುವ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಹೈಕೋರ್ಟ್ ಪೊಲೀಸರಿಗೆ 14 ದಿನಗಳ ಸರಳ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಒಂದು ಹಂತದಲ್ಲಿ ಸುಪ್ರೀಂ ಕೋರ್ಟ್ ಎತ್ತಿ ಹಿಡಿಯಿತು.
“ಜನರನ್ನು ಕಂಬಕ್ಕೆ ಕಟ್ಟಿ ಥಳಿಸಲು ಕಾನೂನಿನಡಿಯಲ್ಲಿ ನಿಮಗೆ ಅಧಿಕಾರವಿದೆಯೇ? ‘ಹೋಗಿ ಜೈಲು ಶಿಕ್ಷೆ ಆನಂದಿಸಿ’ ಎಂದು ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಗವಾಯಿ ಪೊಲೀಸರಿಗೆ ಖಾರವಾಗಿ ಹೇಳಿದರು.
ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಮತ್ತೊಬ್ಬ ನ್ಯಾಯಮೂರ್ತಿ ಮೆಹ್ತಾ ಅವರು, “ಜನರನ್ನು ಕಂಬಕ್ಕೆ ಕಟ್ಟಿ ಹಾಕಿವುದು, ಸಾರ್ವಜನಿಕವಾಗಿ ಅವರಿಗೆ ಥಳಿಸುವುದು ಮತ್ತು ವಿಡಿಯೋ ರೆಕಾರ್ಡ್ ಮಾಡೋದು ಇದು ಯಾವ ರೀತಿಯ ದೌರ್ಜನ್ಯ? ಎಂದು ಪ್ರಶ್ನಿಸಿದರು. ಇಷ್ಟೆಲ್ಲಾ ಆದ ನಂತರ ನೀವು ಈ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬೇಕೆಂದು ಬಯಸ್ತೀರಿ ಎಂದರು.
ಪೊಲೀಸರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ದವೆ, ಪೊಲೀಸರು ಈಗಾಗಲೇ ಕ್ರಿಮಿನಲ್ ಮೊಕದ್ದಮೆ, ಇಲಾಖಾ ಪ್ರಕ್ರಿಯೆಗಳು ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ (ಎನ್ಹೆಚ್ಆರ್ಸಿ) ವಿಚಾರಣೆಯನ್ನು ಎದುರಿಸುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಇಲ್ಲಿ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ನ ಅಧಿಕಾರ ವ್ಯಾಪ್ತಿಯನ್ನು ಪ್ರಶ್ನಿಸಿದ್ದೇವೆ ಎಂದು ದವೆ ನ್ಯಾಯಾಲಯದ ಗಮನಕ್ಕೆ ತಂದರು. ಪೊಲೀಸರು ಉದ್ದೇಶಪೂರ್ವಕವಾಗಿ ನ್ಯಾಯಾಂಗ ನಿಂದನೆಯ ಯಾವುದೇ ಅಪರಾಧವನ್ನು ಮಾಡಿಲ್ಲ. ಶಂಕಿತ ಆರೋಪಿಗಳನ್ನು ಬಂಧಿಸುವಾಗ ಮಾರ್ಗಸೂಚಿಗಳನ್ನು ಪಾಲಿಸುವಂತೆ ಮಾತ್ರ ಸುಪ್ರೀಂಕೋರ್ಟ್ ಹೇಳಿದೆ ಎಂದು 1996 ರ ಡಿಕೆ ಬಸು ಪ್ರಕರಣದ ತೀರ್ಪನ್ನು ದವೆ ಉಲ್ಲೇಖಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಗವಾಯಿ ಅವರು, ಡಿಕೆ ಬಸು ಪ್ರಕರಣದ ತೀರ್ಪು ಏನೆಂದು ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯೂ ತಿಳಿದುಕೊಳ್ಳಬೇಕು. ಕಾನೂನು ವಿದ್ಯಾರ್ಥಿಗಳಾದ ನಾವು ಡಿಕೆ ಬಸು ತೀರ್ಪಿನ ಬಗ್ಗೆ ಅಧ್ಯಯನ ಮಾಡಿದ್ದೇವೆ ಎಂದು ಹೇಳಿದರು.
ಈ ವೇಳೆ ಪ್ರತಿವಾದ ಮಂಡಿಸಿದ ವಕೀಲ ದವೆ, ಹೈಕೋರ್ಟ್ನ ನ್ಯಾಯಾಂಗ ನಿಂದನೆ ನ್ಯಾಯ ವ್ಯಾಪ್ತಿಯಲ್ಲಿ ಆರೋಪಿ ಪೊಲೀಸರ ವಿರುದ್ದ ಕಾನೂನು ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದರು.
ನ್ಯಾಯಮೂರ್ತಿ ಗವಾಯಿ ಅವರು ಆರೋಪಿ ಪೊಲೀಸರ ವಿರುದ್ಧ ದಾಖಲಾಗಿರುವ ಖಾಸಗಿ ದೂರಿನ ಸ್ಥಿತಿಯನ್ನು ಪ್ರಶ್ನಿಸಿದರು. ಇದು ಬಾಕಿ ಇದೆ ಎಂದು ದೂರುದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಐ.ಎಚ್.ಸೈಯದ್ ಹೇಳಿದರು. ಬಳಿಕ ನ್ಯಾಯಮೂರ್ತಿ ಗವಾಯಿ ಅವರು ಪೊಲೀಸರ ವಿರುದ್ದ ಶಿಕ್ಷೆಗೆ ತಡೆಯಾಜ್ಞೆ ನೀಡಿದರು.
ಅಕ್ಟೋಬರ್ 2022ರಲ್ಲಿ ಗುಜರಾತ್ನ ಖೇಡಾ ಜಿಲ್ಲೆಯ ಉಂಧೇಲಾ ಗ್ರಾಮದಲ್ಲಿ ನಡೆದ ಗರ್ಬಾ ಕಾರ್ಯಕ್ರಮಕ್ಕೆ ಕಲ್ಲು ಎಸೆದ ಪ್ರಕರಣದ ಆರೋಪಿಗಳೆಂದು 13 ಜನರನ್ನು ಗುರುತಿಸಲಾಗಿತ್ತು. ಈ ಪೈಕಿ ಅರ್ಜಿದಾರರಾದ ಐವರು ಮುಸ್ಲಿಮರು ಸೇರಿದ್ದರು. ಪೊಲೀಸರು ಇವರನ್ನು ಸಾರ್ವಜನಿಕವಾಗಿ ಕಂಬಕ್ಕೆ ಕಟ್ಟಿ ಅಮಾನವೀಯವಾಗಿ ಥಳಿಸಿದ್ದರು.
ಈ ಪ್ರಕರಣ ಸಂಬಂಧ ಅಕ್ಟೋಬರ್ 19,2023 ರಂದು ತೀರ್ಪು ನೀಡಿದ್ದ ಗುಜರಾತ್ ಹೈಕೋರ್ಟ್, ನಾಲ್ವರು ಪೊಲೀಸರನ್ನು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಪರಿಗಣಿಸಿತ್ತು. 14 ದಿನಗಳ ಕಾಲ ಜೈಲಿನಲ್ಲಿ ಕಳೆಯಲು ಆದೇಶಿಸಿತ್ತು. ಹೈಕೋರ್ಟ್ ಆದೇಶದ ವಿರುದ್ದ ಪೊಲೀಸರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಇದನ್ನೂ ಓದಿ : ರಾಮಮಂದಿರ ಉದ್ಘಾಟನೆಯಂದು ಸಂವಿಧಾನದ ಪೀಠಿಕೆ ಹಂಚಿಕೊಂಡ ನಟ, ನಟಿಯರು