2017ರಲ್ಲಿ ಗೋರಖ್ ಪುರದ ಬಿಆರ್ ಡಿ ವೈದ್ಯಕೀಯ ಆಸ್ಪತ್ರೆ ದುರಂತ ಪ್ರಕರಣದಲ್ಲಿ ಅಮಾನತು ಮತ್ತು 9 ತಿಂಗಳ ಜೈಲುವಾಸಕ್ಕೆ ಒಳಗಾಗಿದ್ದ ಡಾ.ಕಫೀಲ್ ಖಾನ್ ಗೆ ಕೊನೆಗೂ ನ್ಯಾಯ ಸಿಕ್ಕಿದೆ. ಸರ್ಕಾರದ ನೇತೃತ್ವದ ತನಿಖೆಯಿಂದ ಮುಕ್ತಗೊಳಿಸಲಾಗಿದೆ. ಬಿಆರ್ಡಿ ವೈದ್ಯಕೀಯ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ ಮತ್ತು ವೈದ್ಯಕೀಯ ನಿರ್ಲಕ್ಷ್ಯದ ಆರೋಪ ಡಾ.ಕಫೀಲ್ ಅವರ ಮೇಲಿತ್ತು.
ಆದರೂ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಮತ್ತೆ ತನಿಖೆ ನಡೆಸುವುದಾಗಿ ರಾಗ ತೆಗೆದಿದ್ದಾರೆ. ಡಾ.ಕಫೀಲ್ ಖಾನ್ ಮೇಲೆ ಹೊಸ ಕೇಸುಗಳನ್ನು ಸರ್ಕಾರ ದಾಖಲಿಸಿದೆ.
ಎರಡು ದಿನ ಮುಂಚೆ ಈ ಕುರಿತು ಪ್ರತಿಕ್ರಿಯಿಸಿರುವ ಪರೇಶ್ ರಾವಲ್ “ಕ್ಷಮೆಯಾಚಿಸುವುದರಲ್ಲಿ ನಾಚಿಕೆ ಇಲ್ಲ: ಗೋರಖ್ಪುರದ ವೈದ್ಯ ಕಫೀಲ್ ಖಾನ್ ನನ್ನನ್ನು ಕ್ಷಮಿಸಿ” ಎಂದು ಟ್ವೀಟ್ ಮಾಡಿದ್ದರು. ಅವರು ಕಫೀಲ್ ಖಾನ್ ಮೇಲೆ ಆರೋಪ ಬಂದಾಗ ದೇಶದ್ರೋಹಿ ಎಂದು ನಿಂದಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಾ.ಕಫೀಲ್, ಪ್ರಕರಣದಲ್ಲಿ ಮುಕ್ತಿ ಸಿಕ್ಕಿದ್ದರಿಂದ ತುಂಬಾ ಸಂತೋಷವಾಗಿದೆ. ನನ್ನ ಕುಟುಂಬ ಮತ್ತು ಕಠಿಣ ಪರಿಶ್ರಮದಿಂದ ಸಂಕಷ್ಟದಿಂದ ಪಾರಾಗಿದ್ದೇನೆ. ದೇವರಿಗೆ ಕೃತಜ್ಞನಾಗಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು. ಅಲ್ಲದೇ ಕೊಲೆಗಾರ ಎಂದು ಯಾರು ಹಣೆಪಟ್ಟಿ ಕಟ್ಟಿದ್ದರೋ ಅವರಿಗೆ ತಕ್ಕ ಉತ್ತರ ಸಿಕ್ಕಿದೆ. ಆದರೆ ಇದನ್ನು ಸಹಿಸಿಕೊಳ್ಳದೇ ಮತ್ತೆ ವಿಚಾರಣೆಯ ಮಾತಾಡುತ್ತಿದ್ದಾರೆ. ಸತ್ಯ ನನ್ನ ಪರವಾಗಿರುವುದರಿಂದ ನಾನು ಹೆದರುವುದಿಲ್ಲ ಎಂದಿದ್ದಾರೆ.
ಇದು ಕೇವಲ ಡಾ.ಕಫೀಲ್ ಖಾನ್ ಗೆ ಸಂಬಂಧಿಸಿದ್ದಲ್ಲ, ಆಕ್ಸಿಜನ್ ಸಿಲಿಂಡರ್ ಕೊರತೆಯಿಂದ ತಾಯಂದಿರ ಎದುರೇ ಜೀವಬಿಟ್ಟ 70 ಮಕ್ಕಳ ದುರಂತ ರಾತ್ರಿ. ನನಗೆ ಇನ್ನೂ ಆ ಕರಾಳ ರಾತ್ರಿ ಕಣ್ಣ ಮುಂದಿದೆ. ತಮ್ಮ ಮಕ್ಕಳನ್ನು ಬದುಕಿಸಿ ಕೊಡುವಂತೆ ತಾಯಂದಿರು ಗೋಗರೆಯುತ್ತಿದ್ದರು ಆದರೆ ನಾವು ಅಸಹಾಯಕರಾಗಿದ್ದೆವು. ಒಂದೇ ಒಂದು ಸಿಲಿಂಡರ್ ಇತ್ತು ಹೀಗಾಗಿ ಮಕ್ಕಳನ್ನು ಕಳೆದುಕೊಂಡೆವು ಎಂದು ಘಟನೆಯನ್ನು ನೆನೆದರು.
ಇನ್ನು ಜೈಲುವಾಸವಂತೂ ಘೋರವಾಗಿತ್ತು. ಜೈಲಿನಲ್ಲಿ ಕಳೆದ ದಿನಗಳು ನರಕಮಯವಾಗಿದ್ದವು. ದಿನವೂ ಒಂದೇ ತರಹದ ಆಹಾರ ಸಿಗುತ್ತಿತ್ತು. ರೋಟಿ, ಮೂಲಂಗಿ ಪಲ್ಯ ಕೊಡುತ್ತಿದ್ದರು. ರೊಟ್ಟಿಯನ್ನು ನೀರಿನಲ್ಲಿ ಅದ್ದಿ ತಿನ್ನುತ್ತಿದ್ದೆ. ನಾನು ರಿಲೀಸ್ ಆದಾಗ ನನ್ನ ಮಗಳು ನನ್ನನ್ನು ಗುರುತಿಸಲಿಲ್ಲ ಎಂದು ಹೇಳಿದರು.
ಕಳೆದ ವರ್ಷ ಆಗಸ್ಟ್ 10 ಮತ್ತು 12ನೇ ತಾರೀಕಿನಂದು ಉತ್ತರಪ್ರದೇಶದ ಗೋರಖ್ ಪುರ ಬಿಆರ್ ಡಿ ವೈದ್ಯಕೀಯ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಇಲ್ಲದೇ ಸುಮಾರು 70 ಮಕ್ಕಳು ಅಸುನೀಗಿದ್ದವು.