ಏಳು ವರ್ಷಗಳ ಹಿಂದೆ ಕೆಳ ನ್ಯಾಯಾಲಯ ಅಪರಾಧಿ ಎಂದು ತೀರ್ಪು ನೀಡಿದ್ದ ವ್ಯಕ್ತಿಯನ್ನು ಖುಲಾಸೆಗೊಳಿಸಿದ ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠ, ಮಹಿಳೆಯನ್ನು ಕೆಲವೊಮ್ಮೆ ಹಿಂಬಾಲಿಸುವುದು, ಆಕೆಗೆ ನಿಂದಿಸುವುದು ಆಕೆಯ ಸಭ್ಯತೆಯನ್ನು ಘಾಸಿಗೊಳಿಸುವಂತಹ (ಘನತೆಯನ್ನು ಕುಂದಿಸುವ) ಕೃತ್ಯ ಎನ್ನಲಾಗದು ಎಂದಿದೆ.
ಇಂತಹ ನಡವಳಿಕೆಗಳಿಂದ ಕಿರಿಕಿರಿ ಉಂಟಾಗಬಹುದು. ಆದರೆ, ಮಹಿಳೆಯ ಘನತೆಯನ್ನು ಕುಂದಿಸುತ್ತದೆ ಎನ್ನಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಅನಿಲ್ ಪನ್ಸಾರೆ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಡಿಸೆಂಬರ್ 16ರಂದು ನೀಡಿದ ಆದೇಶದಲ್ಲಿ ತಿಳಿಸಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
ಹಿಂಬಾಲಿಸುವುದು, ನಿಂದಿಸುವುದು ಮಹಿಳೆಯ ಘನತೆಗೆ ಧಕ್ಕೆ ತರುವ ಅಪರಾಧವಾಗದು: ಬಾಂಬೆ ಹೈಕೋರ್ಟ್ #BombayHighCourt https://t.co/zamcxRJS3Q
— ಬಾರ್ & ಬೆಂಚ್ – Kannada Bar & Bench (@Kbarandbench) January 1, 2024
ಆರೋಪಿ ಸೈಕಲ್ನಲ್ಲಿ ಪ್ರಯಣಿಸುತ್ತಿದ್ದ ವೇಳೆ ದೂರುದಾರೆಯನ್ನು ತಳ್ಳಿದ ಅಥವಾ ದಬ್ಬಿದ ಕೃತ್ಯವನ್ನು, ಆಕೆಯನ್ನು ಹಿಂಬಾಲಿಸುವ ಮತ್ತು ಕಿರುಕುಳ ನೀಡುವ ಆತನ ನಡೆಯನ್ನು ಗಮನದಲ್ಲಿಟ್ಟುಕೊಂಡು ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಾಲಯ ವಿವರಿಸಿದೆ.
ಆರೋಪಿ ತನ್ನನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ ಅಥವಾ ತನ್ನ ದೇಹದ ನಿರ್ದಿಷ್ಟ ಭಾಗವನ್ನು ಸ್ಪರ್ಶಿಸುವ ಮೂಲಕ ತಳ್ಳಿದ್ದಾನೆ ಎಂದು ದೂರುದಾರೆ ಆರೋಪಿಸಿಲ್ಲ ಎಂಬ ಅಂಶವನ್ನು ನ್ಯಾಯಮೂರ್ತಿಗಳು ತೀರ್ಪು ನೀಡುವ ವೇಳೆ ಉಲ್ಲೇಖಿಸಿದ್ದಾರೆ.
ಆದ್ದರಿಂದ, ಐಪಿಸಿ ಸೆಕ್ಷನ್ 354ರ (ಗೌರವಕ್ಕೆ ಧಕ್ಕೆ) ಅಡಿಯಲ್ಲಿ ಮೇಲ್ಮನವಿದಾರನನ್ನು ದೋಷಿ ಎಂದು ಪರಿಗಣಿಸುವಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮತ್ತು ಸೆಷನ್ಸ್ ನ್ಯಾಯಾಲಯ ಎಡವಿವೆ ಎಂಬುದಾಗಿ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
ಪ್ರಾಸಿಕ್ಯೂಷನ್ ವಾದದ ಪ್ರಕಾರ, ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ ಆರೋಪಿ ತನ್ನನ್ನು ಹಿಂಬಾಲಿಸಿ ನಿಂದಿಸಿದ್ದಾಗಿ ದೂರುದಾರೆ ಆರೋಪಿಸಿದ್ದರು. ಘಟನೆ ನಡೆದ ದಿನ ನಾನು ಮಾರುಕಟ್ಟೆಗೆ ತೆರಳುತ್ತಿದ್ದಾಗ ಬೈಸಿಕಲ್ನಲ್ಲಿ ಹಿಂಬಾಲಿಸಿಕೊಂಡು ಬಂದ ಆರೋಪಿ, ನನ್ನನ್ನು ತಳ್ಳಿದ. ನಾನು ಕೋಪಗೊಂಡರೂ ಹಿಂಬಾಲಿಸುವುದನ್ನು ಮುಂದುವರೆಸಿದ್ದ. ಆದ್ದರಿಂದ ನಾನು ಆತನ ಮೇಲೆ ಕೈ ಮಾಡಿದೆ ಎಂದು ದೂರುದಾರೆ ಹೇಳಿದ್ದರು.
ಈ ಸಾಕ್ಷ್ಯ ಆಧರಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಐಪಿಸಿ ಸೆಕ್ಷನ್ 354ರ ಅಡಿಯಲ್ಲಿ ಮೇ 9,2016ರಂದು ಆರೋಪಿಯನ್ನು ದೋಷಿ ಎಂದು ಘೋಷಿಸಿತ್ತು. ಆತನಿಗೆ ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹2,000 ದಂಡ ವಿಧಿಸಿತ್ತು. ಇದನ್ನು ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿದಾರ ಪ್ರಶ್ನಿಸಿದರೂ, ಜುಲೈ 10, 2023ರಂದು ಅರ್ಜಿ ವಜಾಗೊಂಡಿತ್ತು.
ಈ ಪ್ರಕರಣದಲ್ಲಿ ದೂರುದಾರೆಯ ಹೇಳಿಕೆ ಹೊರತುಪಡಿಸಿ ಬೇರೆ ಯಾವುದೇ ಪುರಾವೆಗಳಿಲ್ಲ. ಇದು ಅಪರಾಧವನ್ನು ಸಾಬೀತುಪಡಿಸಲು ಸಾಕಾಗುವುದಿಲ್ಲ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಹೇಳಿದೆ. ಮ್ಯಾಜಿಸ್ಟ್ರೇಟ್ ಮತ್ತು ಸೆಷನ್ಸ್ ನ್ಯಾಯಾಲಯಗಳ ತೀರ್ಪುಗಳನ್ನು ರದ್ದುಗೊಳಿಸಿದೆ.
ಇದನ್ನೂ ಓದಿ: ಲಿಂಗ ಪರಿವರ್ತಿತ ಶಿಕ್ಷಕಿಯನ್ನು ಕೆಲಸದಿಂದ ಕೈಬಿಟ್ಟ ಶಾಲೆ; ಕೇಂದ್ರ, ರಾಜ್ಯ ಸರ್ಕಾರಕ್ಕೆ ಸುಪ್ರೀಂ ನೋಟಿಸ್