ಒಕ್ಕೂಟ ಸರ್ಕಾರದ ಮಾಜಿ ಸಚಿವ ಎ.ಕೆ.ಆಂಟನಿ ಅವರ ಮಗ ಅನಿಲ್ ಕೆ.ಆಂಟನಿ ಅವರು ದಿನದ ಹಿಂದೆಯಷ್ಟೆ ಬಿಬಿಸಿ ತಯಾರಿಸಿದ್ದ ‘ಭಾರತ: ಮೋದಿ ಕ್ವಶ್ಚನ್’ ಎಂಬ ಸಾಕ್ಷ್ಯಚಿತ್ರದ ವಿರುದ್ಧ ಟ್ವೀಟ್ ಮಾಡಿದ್ದರು. ಇದೀಗ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಡಿಜಿಟಲ್ ಮಾಧ್ಯಮದ ಸಂಚಾಲಕ ಸ್ಥಾನದಿಂದ ಕೆಳಗಿಳಿಯುವುದಾಗಿ ಬುಧವಾರದಂದು ಘೋಷಿಸಿದ್ದಾರೆ.
2002ರ ಗುಜರಾತ್ ಗಲಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರದ ಕುರಿತು ಬಿಬಿಸಿ ತಯಾರಿಸಿದ್ದ ‘ಭಾರತ: ಮೋದಿ ಕ್ವಶ್ಚನ್’ ಎಂಬ ಸಾಕ್ಷ್ಯಚಿತ್ರದ ವಿರುದ್ಧ ಅವರು ಟ್ವೀಟ್ ಮಾಡಿದ್ದರು. ಇದಾಗಿ ಒಂದು ದಿನದ ನಂತರ ಕಾಂಗ್ರೆಸ್ಗೆ ಅವರು ರಾಜೀನಾಮೆ ಘೋಷಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಬುಧವಾರ ತಮ್ಮ ಟ್ವೀಟ್ ಮೂಲಕ ಈ ಬಗ್ಗೆ ತಿಳಿಸಿರುವ ಅನಿಲ್, “ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಕೇರಳ ಕಾಂಗ್ರೆಸ್ನ ನನ್ನ ಜವಾಬ್ದಾರಿಗಳಿಗೆ ನಾನು ರಾಜೀನಾಮೆ ನೀಡಿದ್ದೇನೆ. ವಾಕ್ ಸ್ವಾತಂತ್ರ್ಯಕ್ಕಾಗಿ ಹೋರಾಡುವವರು ನನ್ನ ಟ್ವೀಟ್ ಅನ್ನು ಹಿಂತೆಗೆದುಕೊಳ್ಳಲು ಅಸಹಿಷ್ಣುತೆಯ ಕರೆಗಳು ಮಾಡುತ್ತಿದ್ದಾರೆ. ಆದರೆ ಇದನ್ನು ನಾನು ನಿರಾಕರಿಸಿದೆ. ಫೇಸ್ಬುಕ್ನಲ್ಲಿ ಪ್ರೀತಿಯನ್ನು ಉತ್ತೇಜಿಸುವವರ ಬೆಂಬಲಿಸುವವರಿಂದ ದ್ವೇಷ ಹಾಗೂ ನಿಂದನೆಗಳು ತುಂಬಿದೆ. ಇದಕ್ಕೆ ಬೂಟಾಟಿಕೆ ಎಂದು ಹೆಸರು! ಜೀವನ ಮುಂದುವರಿಯುತ್ತದೆ” ಎಂದು ರಾಜೀನಾಮೆ ಪತ್ರದ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
ಮಂಗಳವಾರ ಟ್ವೀಟ್ ಮಾಡಿದ್ದ ಅನಿಲ್, “ಬಿಜೆಪಿಯೊಂದಿಗೆ ದೊಡ್ಡ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಭಾರತದ ಪೂರ್ವಾಗ್ರಹಗಳ ಸುದೀರ್ಘ ಇತಿಹಾಸವನ್ನು ಹೊಂದಿರುವ ಬ್ರಿಟಿಷ್ ರಾಜ್ಯ ಪ್ರಾಯೋಜಿತ ಚಾನೆಲ್ ಆಗಿರುವ BBC ಯ ಹಾಗೂ ಇರಾಕ್ ಯುದ್ಧದ ಮಾಸ್ಟರ್ ಬ್ರೈನ್ ಆಗಿರುವ ಜಾಕ್ ಸ್ಟ್ರಾ ಅವರ ದೃಷ್ಟಿಕೋನಗಳನ್ನು ಭಾರತದಲ್ಲಿರುವವರು ಮುಂದಿಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಇದರಿಂದ ಭಾರತೀಯ ಸಂಸ್ಥೆಗಳ ಮೇಲೆ ಅಪಾಯವಿದ್ದು, ಇದು ನಮ್ಮ ಸಾರ್ವಭೌಮತ್ವವನ್ನು ದುರ್ಬಲಗೊಳಿಸುತ್ತದೆ” ಎಂದು ಹೇಳಿದ್ದರು.
I have resigned from my roles in @incindia @INCKerala.Intolerant calls to retract a tweet,by those fighting for free speech.I refused. @facebook wall of hate/abuses by ones supporting a trek to promote love! Hypocrisy thy name is! Life goes on. Redacted resignation letter below. pic.twitter.com/0i8QpNIoXW
— Anil K Antony (@anilkantony) January 25, 2023
ಡಿಜಿಟಲ್ ಮೀಡಿಯಾ ನಿಯಮಗಳು-2021 ರ ನಿಯಮ 16 ಅನ್ನು ಬಳಸಿಕೊಂಡು BBC ತಯಾರಿಸಿದ್ದ ಸಾಕ್ಷ್ಯಚಿತ್ರದ ಲಿಂಕ್ಗಳನ್ನು ಒಕ್ಕೂಟ ಸರ್ಕಾರ ತಡೆಹಿಡಿದಿದೆ. ಮಂಗಳವಾರ ಇಂಡಿಯಾ – ದ ಮೋದಿ ಕ್ವಶ್ವನ್ ಸಾಕ್ಷ್ಯಚಿತ್ರದ ಎರಡನೇ ಸಂಚಿಕೆಯನ್ನು ಬಿಡುಗಡೆ ಮಾಡಿದೆ.