ಟ್ವಿಟ್ಟರ್ನಲ್ಲಿ ರೈತರ ಬಗ್ಗೆ ‘ತಪ್ಪು ಮಾಹಿತಿ’ ಹರಡುತ್ತಿರುವ ಅನೇಕ ಹ್ಯಾಂಡಲ್ಗಳನ್ನು ನಿರ್ಬಂಧಿಸುವಂತೆ ಕೇಂದ್ರ ಸರ್ಕಾರವು ಟ್ವಿಟ್ಟರ್ ಅಧಿಕಾರಿಗಳ ಸಭೆ ನಡೆಸಿದ ಬೆನ್ನಿಗೆ, ಅಮೆರಿಕ ಟ್ವಿಟರ್ ಬೆಂಬಲಕ್ಕೆ ನಿಂತಿದೆ. ವಿಶ್ವದಾದ್ಯಂತ ಪ್ರಜಾಪ್ರಭುತ್ವ ಮೌಲ್ಯಗಳನ್ನು ಬೆಂಬಲಿಸಲು ಬದ್ಧವಾಗಿದ್ದೇವೆ ಎಂದು ಅಮೆರಿಕ ಬುಧವಾರ ಹೇಳಿದೆ.
“ನಾನು ಸಾಮಾನ್ಯವಾಗಿ ಹೇಳುವುದೇನೆಂದರೆ, ಪ್ರಪಂಚದಾದ್ಯಂತ ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿದಂತೆ ಪ್ರಜಾಪ್ರಭುತ್ವ ಮೌಲ್ಯಗಳನ್ನು ಬೆಂಬಲಿಸಲು ನಾವು ಬದ್ಧರಾಗಿದ್ದೇವೆ. ಟ್ವಿಟರ್ನ ನೀತಿಗಳಿಗೆ ಬಂದಾಗ ನಾವು ನಿಮಗೆ ಟ್ವಿಟರ್ ಅನ್ನೇ ಉಲ್ಲೇಖಿಸಬೇಕಾಗುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಅಮೆರಿಕ ರಾಜ್ಯ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಹೇಳಿದ್ದಾಗಿ ಸುದ್ದಿ ಸಂಸ್ಥೆ ಎಎನ್ಐ ಉಲ್ಲೇಖಿಸಿದೆ.
250 ಕ್ಕೂ ಹೆಚ್ಚು ಖಾತೆಗಳನ್ನು ನಿರ್ಬಂಧಿಸಿರುವ ಬಗ್ಗೆ ಸರ್ಕಾರ ಮತ್ತು ಟ್ವಿಟರ್ ನಡುವಿನ ಜಗಳದ ಹಿನ್ನೆಲೆಯಲ್ಲಿ ಈ ಹೇಳಿಕೆಗಳು ಬಂದಿದ್ದು, ಗಣರಾಜ್ಯೋತ್ಸವದಂದು ರೈತರ ಟ್ರಾಕ್ಟರ್ ರ್ಯಾಲಿಯಲ್ಲಿ ದೆಹಲಿಯಲ್ಲಿ ನಡೆದ ಅಹಿತಕರ ಘಟನೆಯ ನಂತರ ಕೇಂದ್ರ ಸರ್ಕಾರವು ಎರಡು ಆದೇಶಗಳಲ್ಲಿ 1,300 ಖಾತೆಗಳನ್ನು ಮತ್ತು ಪೋಸ್ಟ್ಗಳ ಪಟ್ಟಿಯನ್ನು ಹಸ್ತಾಂತರಿಸಿ ಅದನ್ನು ತೆಹಿಡಿಯುವಂತೆ ಕೇಳಿಕೊಂಡಿದೆ.
ಇದನ್ನೂ ಓದಿ: ರೈತರನ್ನು ಬೆಂಬಲಿಸುವ ಖಲಿಸ್ತಾನಿ-ಪಾಕಿಸ್ತಾನಿ ಟ್ವಿಟ್ಟರ್ ಖಾತೆಗಳನ್ನು ಕಿತ್ತುಹಾಕಿ: ಟ್ವಿಟರ್ಗೆ ಕೇಂದ್ರ ತಾಕೀತು
ಬುಧವಾರ, ಟ್ವಿಟರ್ ತನ್ನ ಹೇಳಿಕೆಯನ್ನು ಪ್ರಕಟಿಸಿ, ಕೆಲವು ಹ್ಯಾಂಡಲ್ಗಳನ್ನು ನಿರ್ಬಂಧಿಸದಿರುವ ತನ್ನ ಕ್ರಮವನ್ನು ವಿವರಿಸಿದೆ. ಅದು ತನ್ನ ಹೇಳಿಕೆಯಲ್ಲಿ, “… ನಮಗೆ ಖಾತೆಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ನಿರ್ದೇಶಿಸಿದ ಕ್ರಮವು ಭಾರತೀಯ ಕಾನೂನಿಗೆ ಅನುಗುಣವಾಗಿರುತ್ತವೆ ಎಂದು ನಾವು ನಂಬುವುದಿಲ್ಲ” ಎಂದು ಹೇಳಿದೆ.
“ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವ ತತ್ವಗಳನ್ನು ಅನುಸರಿಸಿ ಸುದ್ದಿ ಮಾಧ್ಯಮ ಸಂಸ್ಥೆಗಳು, ಪತ್ರಕರ್ತರು, ಕಾರ್ಯಕರ್ತರು ಮತ್ತು ರಾಜಕಾರಣಿಗಳನ್ನು ಒಳಗೊಂಡಿರುವ ಖಾತೆಗಳ ಮೇಲೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಹಾಗೆ ಮಾಡಿದರೆ, ಭಾರತೀಯ ಕಾನೂನಿನಡಿಯಲ್ಲಿ ಅವರ ಮುಕ್ತ ಅಭಿವ್ಯಕ್ತಿ ಸ್ವಾತಂತ್ಯ್ರವನ್ನು ಉಲ್ಲಂಘಿಸಿದಂತಾಗುತ್ತದೆ” ಎಂದು ಟ್ವಿಟರ್ ಹೇಳಿತ್ತು.
ಇದನ್ನೂ ಓದಿ: ರೈತ ಹೋರಾಟದ ಬೆಂಬಲಿಗರ ಖಾತೆ ಅನ್ಬ್ಲಾಕ್: ಟ್ವಿಟ್ಟರ್ಗೆ ನೋಟಿಸ್ ಕಳುಹಿಸಿದ ಕೇಂದ್ರ
ಟ್ವಿಟರ್ ಈ ಹೇಳಿಕೆಯನ್ನು ನೀಡಿದ ಕೂಡಲೇ, ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಸ್ವದೇಶಿ ಸಾಮಾಜಿಕ ಜಾಲತಾಣವಾದ ’ಕೂ’ ಆಪ್ನಲ್ಲಿ, ಟ್ವಿಟ್ಟರ್ ಹೇಳಿಕೆಯನ್ನು “ಅಸಾಮಾನ್ಯ” ಎಂದು ಕರೆದಿದೆ. ’ಕೂ’ ಆಪ್ನಲ್ಲಿ ಪ್ರತಿಕ್ರಿಯೆ ನೀಡಿದ ಕೆಲವೆ ಗಂಟೆಗಳ ನಂತರ, ಸಚಿವಾಲಯದ ಪ್ರತಿನಿಧಿಗಳು ಮತ್ತು ಟ್ವಿಟರ್ನ ಜಾಗತಿಕ ನೀತಿ ಮತ್ತು ಸುರಕ್ಷತಾ ತಂಡಗಳು ಸಭೆ ನಡೆಸಿದೆ.
ಸಭೆಯಲ್ಲಿ ಟ್ವಿಟರ್ನ ಪ್ರತಿಕ್ರಿಯೆಯ ಬಗ್ಗೆ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ತೀವ್ರ ನಿರಾಶೆಯನ್ನು ವ್ಯಕ್ತಪಡಿಸಿದೆ. “ಭಾರತದಲ್ಲಿ, ಅದರ ಸಂವಿಧಾನ ಮತ್ತು ಕಾನೂನುಗಳು ಸರ್ವೋಚ್ಚವಾಗಿವೆ. ಇದನ್ನು ಜವಾಬ್ದಾರಿಯುತ ಘಟಕಗಳು ದೃಡೀಕರಿಸುವುದು ಮಾತ್ರವಲ್ಲದೆ ನೆಲದ ಕಾನೂನಿಗೆ ಅನುಸಾರವಾಗಿ ಬದ್ಧವಾಗಿರುತ್ತವೆ ಎಂದು ನಿರೀಕ್ಷಿಸುತ್ತೇವೆ” ಎಂದು ಸಚಿವಾಲಯವು ಸಭೆಯ ನಂತರ ಹೇಳಿಕೆಯಲ್ಲಿ ತಿಳಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಟ್ವಿಟರ್ ತಾನು ಕಾನೂನು ಆಯ್ಕೆಯನ್ನು ನೋಡುತ್ತಿದ್ದೇನೆ ಎಂದು ಹೇಳಿದೆ. “ನಾವು ಸೇವೆ ಸಲ್ಲಿಸುವ ಜನರ ಪರವಾಗಿ ಮುಕ್ತ ಅಭಿವ್ಯಕ್ತಿ ಸ್ವಾತಂತ್ಯ್ರ ಪ್ರತಿಪಾದಿಸುವುದನ್ನು ಮುಂದುವರಿಸುತ್ತೇವೆ. ನಾವು ಭಾರತೀಯ ಕಾನೂನಿನಡಿಯಲ್ಲಿ ನಮಗೆ ಇರುವ ಆಯ್ಕೆಗಳನ್ನು ಹುಡುಕುತ್ತಿದ್ದೇವೆ” ಅದು ಹೇಳಿದೆ.
ಇದನ್ನೂ ಓದಿ: ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು & ರಾಜಕಾರಣಿಗಳ ವಿರುದ್ಧ ಕ್ರಮ ಸಾಧ್ಯವಿಲ್ಲ: ಟ್ವಿಟರ್