Homeಗೌರಿ ಲಂಕೇಶ್ಗೌರಿ ಕಾರ್ನರ್: ಗೌರಿ ಲಂಕೇಶರ ಮೇಲೆ ಮತ್ತೆ ನೀಚಮಟ್ಟದ ದಾಳಿ- ನಾವು ಪ್ರತಿಕ್ರಿಯೆ ನೀಡುವುದು ಸರಿಯೇ?

ಗೌರಿ ಕಾರ್ನರ್: ಗೌರಿ ಲಂಕೇಶರ ಮೇಲೆ ಮತ್ತೆ ನೀಚಮಟ್ಟದ ದಾಳಿ- ನಾವು ಪ್ರತಿಕ್ರಿಯೆ ನೀಡುವುದು ಸರಿಯೇ?

ಗೌರಿ ಲಂಕೇಶರಿಗೆ ನೇರವಾಗಿ ಗುಂಡಿಕ್ಕಿದ ಪರಶುರಾಮ ವಾಘ್ಮೋರೆ ಸಿಂಧಗಿಯಲ್ಲಿ ಪಾಕಿಸ್ತಾನದ ಬಾವುಟ ಹಾರಿಸಿದ ಕುಖ್ಯಾತಿ ಹೊಂದಿರುವವನು. ಅವನು ಮುತಾಲಿಕ್ ಸೇನೆಯ ಕಾರ್ಯಕರ್ತ.

- Advertisement -
- Advertisement -

ಗೌರಿ ಲಂಕೇಶರನ್ನು ಹತ್ಯೆಗೈಯ್ಯಲಾದ ಸೆಪ್ಟೆಂಬರ್ 5ರಂದು ಟ್ವಿಟ್ಟರ್‌ನಲ್ಲಿ ಒಂದು ಟ್ರೆಂಡ್ ಕಾಣಿಸಿತು. #truefaceofGaurilankesh ಹ್ಯಾಷ್‍ಟ್ಯಾಗ್‍ನ ಜೊತೆ ಆದ ಟ್ರೆಂಡ್. ಅದೇ ಸಂದರ್ಭದಲ್ಲಿ ಸಂಘಟನೆಯೊಂದರ ಮುಖಂಡ ಮುತಾಲಿಕ್ ಎಂಬ ವ್ಯಕ್ತಿ ಗೌರಿಲಂಕೇಶ್ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂಬ ಮಾತನ್ನು ಹೇಳಿದ್ದು ವರದಿಯಾಯಿತು. ಕೆಲವು ದಿನಗಳ ನಂತರ ಅದೇ ಸಂಘಟನೆಗೆ ಸೇರಿದ ಇನ್ನೊಬ್ಬ ವ್ಯಕ್ತಿ ಗೌರಿ ಲಂಕೇಶರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಮತ್ತು ಅದು ಪಾಕಿಸ್ತಾನದಿಂದ ಸರಬರಾಜಾಗುತ್ತಿತ್ತು ಎಂದು ಹೇಳಿದ.

ಮುತಾಲಿಕ್ photo courtesy: Scroll.in

ಈ ರೀತಿ ಆರೋಪ ಮಾಡಿದವರಿಗೂ ಗೌರಿಯವರು ಡ್ರಗ್ಸ್ ತೆಗೆದುಕೊಳ್ಳುತ್ತಿರಲಿಲ್ಲ ಎಂಬುದು ಖಚಿತವಾಗಿ ಗೊತ್ತಿತ್ತು; ಆದರೂ ಆ ರೀತಿ ಆರೋಪ ಮಾಡಿದುದಕ್ಕೆ ಎರಡು ಕಾರಣಗಳಿರಬಹುದು. ಒಂದು, ಅವರಿಬ್ಬರೂ ಡ್ರಗ್ಸ್ ತೆಗೆದುಕೊಂಡಿರುವ ಸಾಧ್ಯತೆ ಇದೆ. ಬೇರೆ ಬೇರೆ ದಿನಗಳಲ್ಲಿ ಬೇರೆ ಬೇರೆ ಊರುಗಳಿಂದ ಅವರು ಮಾತಾಡಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಅದರ ಅರ್ಥ, ಅವರ ಸಂಘಟನೆಯಲ್ಲಿ ಡ್ರಗ್ಸ್ ತೆಗೆದುಕೊಳ್ಳುವುದು ಬಿಡಲಾಗದ ಚಟವಾಗಿ ಅಂಟಿಕೊಂಡಿದ್ದು, ಎಲ್ಲರೂ ಎಲ್ಲಿದ್ದರೂ ಡ್ರಗ್ಸ್ ತೆಗೆದುಕೊಳ್ಳುವವರಾಗಿರಬೇಕು. ಇಲ್ಲವೇ ದುರುದ್ದೇಶವಿದ್ದು, ಉದ್ದೇಶಪೂರ್ವಕವಾಗಿ ಸುಳ್ಳು ಹೇಳುತ್ತಿರಬೇಕು. ವಾಸ್ತವವೇನು ಗೊತ್ತೇ? ಇವೆರಡೂ ನಿಜ. ಅವರು ದುರುದ್ದೇಶಪೂರ್ವಕವಾಗಿ ಸುಳ್ಳು ಹೇಳುತ್ತಿದ್ದಾರೆ ಮತ್ತು ಆ ರೀತಿ ಸುಳ್ಳು ಹೇಳುವುದು ಅವರಿಗೆ ನಶೆಯಂತೆ ಅಂಟಿದೆ. ಮುತಾಲಿಕ್ ಎಂಬ ವ್ಯಕ್ತಿ ಎಂತೆಂತಹ ಅಪಾಯಕಾರಿ ಸುಳ್ಳು ಮತ್ತು ಕುಕೃತ್ಯಗಳಲ್ಲಿ ತೊಡಗಿದ್ದು ಮತ್ತೆ ಮತ್ತೆ ಸಾಬೀತಾಗುತ್ತಿದ್ದರೂ ಆತ ಪದೇ ಪದೇ ಅದನ್ನು ಹೇಳುತ್ತಾನೆ ಮತ್ತು ಆತನ ಮಾತುಗಳನ್ನು ಹುಚ್ಚ ವೆಂ…ನ ಸುದ್ದಿ ಪ್ರಕಟಿಸಿದಷ್ಟೇ ನಿಷ್ಠೆಯಿಂದ ಗೌರವಾನ್ವಿತ ಪತ್ರಿಕೆಗಳು ಪ್ರಕಟಿಸುತ್ತವೆ ಮತ್ತು ಮನೋರೋಗವನ್ನು ಸಾಂಕ್ರಾಮಿಕವಾಗಿ ಹಬ್ಬಿಸುವ ಟಿವಿ ಚಾನೆಲ್‍ಗಳ ಕುರಿತು ಹೆಚ್ಚೇನೂ ಹೇಳುವ ಅಗತ್ಯವಿಲ್ಲ.

ಈಗಿನ ಪ್ರಶ್ನೆ ಇದಾವುದೂ ಅಲ್ಲ. ಮುತಾಲಿಕ್ ಹೇಳಿದ ಮಾತಿಗೆ ನಾವು ಪ್ರತಿಕ್ರಿಯಿಸಬೇಕಾ, ಬೇಡವಾ? ಕೆಲವರ ಅನಿಸಿಕೆಯೇನೆಂದರೆ – ನೋಡಿ ಇದೊಂದು ಟ್ರ್ಯಾಪ್. ಏಕೆಂದರೆ, ಗೌರಿ ಲಂಕೇಶರ ಉನ್ನತ ವ್ಯಕ್ತಿತ್ವ ಏನೆಂದು ಎಲ್ಲರಿಗೂ ಗೊತ್ತಿದೆ. ಆದರೆ ನೀವು ಗೌರಿಯವರು ಡ್ರಗ್ಸ್ ತೆಗೆದುಕೊಳ್ಳುತ್ತಿರಲಿಲ್ಲ ಎಂದು ಹೇಳಿದರೂ ಪದೇ ಪದೇ ಅದು ಚರ್ಚೆಗೆ ಬರುತ್ತದೆ ಮಾತ್ರವಲ್ಲ, ಅವರೂ ಅದಕ್ಕೆ ಪ್ರತಿಕ್ರಿಯೆ ಕೊಟ್ಟು ತಮ್ಮ ಟಿಆರ್‌ಪಿ ಹೆಚ್ಚಿಸಿಕೊಳ್ಳುತ್ತಾರೆ ಹಾಗೂ ತಮ್ಮದೇ ಐಟಿ ಸೆಲ್ಲುಗಳಲ್ಲಿ ಇದನ್ನು ವಿಸ್ತೃತವಾಗಿ ಹರಿಯಬಿಡುತ್ತಾರೆ. ಅಂತಿಮವಾಗಿ ಒಂದಷ್ಟು ಜನರು ಗೌರಿಯವರು ಡ್ರಗ್ಸ್ ತೆಗೆದುಕೊಳ್ಳುತ್ತಿರಬಹುದು ಎಂದು ನಂಬಿಯೂ ಬಿಡಬಹುದು. ಹಾಗಾಗಿ ಈ ಕುರಿತು ಪ್ರತಿಕ್ರಿಯಿಸದೇ ಸುಮ್ಮನಾಗಿಬಿಡೋಣ ಎಂಬುದು ಒಂದು ವಾದ.

ಈ ಸೇನೆ – ಪೇನೆಗಳಿಗೆಲ್ಲಾ ಐಟಿ ಸೆಲ್ ಇದೆಯಾ ಎಂದು ನೀವು ಅಚ್ಚರಿ ಪಡಬಹುದು. ಬಿಜೆಪಿ ಐಟಿ ಸೆಲ್ ಇವರ ಪರವಾಗಿಯೂ ಕೆಲಸ ಮಾಡುತ್ತದೆಯೇ ಎಂಬ ಪ್ರಶ್ನೆಯೂ ಏಳಬಹುದು. ಇವರೆಲ್ಲರೂ ಒಂದೇ ಹೊಲಸಿನ ತುಂಡುಗಳೇ. ಇದೇ ವಿದ್ಯಮಾನ ನೋಡಿ. ಗೌರಿಯವರ ಹತ್ಯೆಯಂತಹ ಅಮಾನವೀಯ, ವಿಕೃತ ಹಾಗೂ ಜೀವವಿರೋಧಿ ಕೃತ್ಯ ಎಸಗಿದವರು ಅವರು ಸತ್ತ 3 ವರ್ಷಗಳ ನಂತರ ಗೌರಿ ಲಂಕೇಶರ ಅಸಲಿ ಮುಖ ಎಂಬ ಕ್ಯಾಂಪೇನ್ ನಡೆಸಿದರೋ ಇಲ್ಲವೋ? ಇದು ಕ್ಯಾಂಪೇನ್ ಎಂದು ಹೇಗೆ ಹೇಳುತ್ತೀರಿ? ಬಹಳ ಸ್ಪಷ್ಟ. ಅಂದು ನಡೆದ ಟ್ವಿಟ್ಟರ್ ಅಭಿಯಾನದಲ್ಲಿ ಆಗಿರುವ ಟ್ವೀಟ್‍ಗಳನ್ನು ಗಮನಿಸಿ. ಅವೆಲ್ಲಾ ಒಂದೇ ಮೂಲದಿಂದ ಬಂದಿವೆ. ಒಂದೇ ಟ್ವೀಟ್ ಶೀಟ್‍ಅನ್ನು ಐಟಿ ಸೆಲ್ಲು ತಯಾರಿಸಿಕೊಟ್ಟಿದೆ. ನಾಲ್ಕು ಸಾಲು ತಾವೇ ಬರೆಯಲು ಬಾರದವರು, ತಮಗೆ ಬಂದ ಟ್ವೀಟ್ ಶೀಟ್‍ನಿಂದ ಕಾಪಿ ಮಾಡಿ ಒಂದೇ ಹ್ಯಾಷ್‍ಟ್ಯಾಗ್ ಹಾಕಿ ಟ್ವೀಟ್ ಮಾಡಿ 2 ರೂ. ಸಂಪಾದಿಸುತ್ತಾ ಹೋಗಿದ್ದರು. ಅಂದರೆ ಸಮರ್ಥ ಐಟಿ ಸೆಲ್ ಇರುವ ಪಕ್ಷದ/ಸಂಘಟನೆಯ ಜಾಲವನ್ನು ಇದರಲ್ಲಿ ತೊಡಗಿಸಲಾಗಿತ್ತು.

photo courtesy: Oneindia

ಇರಲಿ, ಒಟ್ಟಾರೆ ಇದರ ಅರ್ಥ ಇಷ್ಟೇ. ಇದೊಂದು ವ್ಯವಸ್ಥಿತ ಕ್ಯಾಂಪೇನ್ ಆಗಿತ್ತು. ಅಂದರೆ ಗೌರಿಲಂಕೇಶರು ಸತ್ತ ನಂತರವೂ ಅವರ ವ್ಯಕ್ತಿತ್ವಹರಣವನ್ನು ಮಾಡಲು ಒಂದು ಯೋಜನೆ ತಯಾರಾಗಿದೆ. ಕಾರಣಗಳು ಹಲವಿರಬಹುದು. ಒಂದು, ತಾವು ಕೊಂದ ವ್ಯಕ್ತಿಯು ದುಷ್ಟ ಅಥವಾ ದುಷ್ಟೆಯಾಗಿದ್ದಳು ಎಂಬುದನ್ನು ಬಿಂಬಿಸುವುದು. ಎರಡು, ಈಗಾಗಲೇ ಗೌರಿಯವರ ವ್ಯಕ್ತಿತ್ವದ ಔನ್ನತ್ಯವು ದೇಶವಿದೇಶಗಳಲ್ಲಿ ವ್ಯಾಪಿಸಿರುವಾಗ ಅವರನ್ನು ಡೆಮನೈಸ್ ಮಾಡದಿದ್ದರೆ ಕಷ್ಟವಾಗುವ ಅನಿವಾರ್ಯತೆ. ಮೂರು, ಗೌರಿಯವರ ಕೊಲೆ ಆರೋಪಿಗಳ ಮೇಲಿನ ಆರೋಪವು ದೃಢವಾಗುತ್ತಾ ಬಂದಂತೆ ವಿಚಾರಣೆಯನ್ನು ಮತ್ತು ನಂತರದ ಪರಿಣಾಮಗಳನ್ನು ದುರ್ಬಲಗೊಳಿಸುವುದು. ನಾಲ್ಕು, ಗೌರಿಯವರ ಆಶಯವನ್ನು ಮುಂದುವರಿಸುತ್ತಿರುವ ಹಲವು ಬಗೆಯ ಪ್ರಯತ್ನಗಳನ್ನು ಡಿಮಾರಲೈಸ್ ಮಾಡುವುದು. ಹಾಗಾಗಿ ಈ ಸಾರಿಯ ಸುಪಾರಿಯನ್ನು ಸೇನೆಯೊಂದಕ್ಕೆ ಕೊಡಲಾಗಿದ್ದು, ಅದಕ್ಕೆ ಬ್ಯಾಕಪ್ ಕೆಲಸವನ್ನು ಐಟಿ ಸೆಲ್ ಮೂಲಕ ಮಾಡಿಸಲಾಗುತ್ತಿದೆ.

ಇದು ಅರ್ಥವಾಗಬೇಕೆಂದರೆ, ಇನ್ನೊಂದು ಉದಾಹರಣೆ ನೋಡೋಣ. ಎಚ್.ಎಸ್.ದೊರೆಸ್ವಾಮಿಯವರ ಮೇಲೆ ಒಮ್ಮೆ ಇದ್ದಕ್ಕಿದ್ದಂತೆ ಸಂದರ್ಭವೇ ಇಲ್ಲದೇ, ಯತ್ನಾಳ್ ಎಂಬೊಬ್ಬ ಚಿಲ್ಲರೆ ವ್ಯಕ್ತಿ ಸಗಟು ಆರೋಪವೊಂದನ್ನು ಮಾಡಿದ. ಅದಕ್ಕೆ ದೊಡ್ಡ ಮಟ್ಟದ ವಿರೋಧ ಬಂದಿತು. ಸಾಮಾನ್ಯವಾಗಿ ಅಂತಹ ಆರೋಪಕ್ಕೆ ಪ್ರತಿರೋಧ ಬಂದರೆ, ಆರೋಪ ಮಾಡಿದವರು ಧೃತಿಗೆಡುತ್ತಾರೆ. ಆದರೆ, ಇಲ್ಲಿ ಆತ ಮತ್ತೆ ಆರೋಪವನ್ನು ಪುನರುಚ್ಚರಿಸಿದ. ಇನ್ನಿಬ್ಬರು ಸಚಿವರು ಅದನ್ನು ಸಮರ್ಥಿಸಿದರು. ಹೀಗಿರುವಾಗ ಬಿಜೆಪಿ ಪಕ್ಷದಲ್ಲೇ ಇರುವ ‘ಸಜ್ಜನ’ರಿಂದ ನೀವೇನು ನಿರೀಕ್ಷಿಸುತ್ತಿರುತ್ತೀರಿ? ಸಜ್ಜನರೆಂದು ಬಿಂಬಿಸಿಕೊಳ್ಳಲು ಹಾತೊರೆಯುವ ಸುರೇಶ್‍ಕುಮಾರ್ ಅವರೂ ದೊರೆಸ್ವಾಮಿಯವರನ್ನು ಖಂಡಿಸಿದರು. ಇನ್ನು ಮುಖ್ಯಮಂತ್ರಿ? ಈ ಮುಖ್ಯಮಂತ್ರಿಯವರು ಮುಸ್ಲಿಮರನ್ನು ಅನ್ಯಾಯವಾಗಿ ದೂಷಿಸಲಾಗುತ್ತಿದೆ ಎನಿಸಿದಾಗ ಅದನ್ನು ಖಂಡಿಸಿ ಎಚ್ಚರಿಕೆ ಕೊಟ್ಟವರು. ಅಂಥವರು ದೊರೆಸ್ವಾಮಿಯವರ ವಿಚಾರದಲ್ಲಿ ಇನ್ನೂ ಜೋರಾಗಿ ಖಂಡಿಸಬೇಕಿತ್ತಲ್ಲವೇ? ಊಹುಂ. ಅವರು ಬಾಯೇ ಬಿಡಲಿಲ್ಲ. ಸ್ವತಃ ವಿರೋಧ ಪಕ್ಷದ ನಾಯಕರ ನೇತೃತ್ವದಲ್ಲಿ ಸದನದ ಹೊರಗೆ ಮತ್ತು ಒಳಗೆ ಪ್ರತಿಭಟನೆಗಳಾದಾಗಲೂ ಈ ಕುರಿತು ತುಟಿಕ್‍ಪಿಟಕ್ ಎನ್ನಲಿಲ್ಲ. ಇದೇ ಅವಧಿಯಲ್ಲಿ ಐಟಿ ಸೆಲ್ ಒಂದೇಸಮನೆ ಅಸಹ್ಯವನ್ನು ಉಗುಳುತ್ತಿತ್ತು. ಟಿವಿ ಚಾನೆಲ್ಲೊಂದು ಯತ್ನಾಳ್‍ಗಿಂತ ಕೆಟ್ಟದಾಗಿ ದೊರೆಸ್ವಾಮಿಯವರ ಕುರಿತು ಕಾರ್ಯಕ್ರಮ ಪ್ರಸಾರ ಮಾಡಿತು.

ಅಂದರೆ, ಇದೆಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿತ್ತು; ‘ಸಜ್ಜನ’ರು, ದುರ್ಜನರು ಮತ್ತು ಯಡಿಯೂರಪ್ಪನವರು ಎಲ್ಲರಿಗೂ ಸ್ಪಷ್ಟ ಸಂದೇಶ ಕಳಿಸಿ, ‘ನಾವೀಗ ಈ ವ್ಯಕ್ತಿಯನ್ನು ನೈತಿಕವಾಗಿ ಕುಗ್ಗಿಸಬೇಕೆಂದು ತೀರ್ಮಾನಿಸಿದ್ದೇವೆ ಮತ್ತು ನಿಮ್ಮ ಪಾತ್ರ ಇಂಥದ್ದು’ ಎಂದು ಸೂಚಿಸಲಾಗಿತ್ತು. ಈಗ ಗೌರಿ ಲಂಕೇಶರ ವಿರುದ್ಧ ಅಂತಹುದೇ ವ್ಯವಸ್ಥಿತ ದಾಳಿ ಶುರುವಾಗಿದೆ. ಇದು ಹೀಗೆಯೇ ಮುಂದುವರಿದರೆ ಏನಾಗುತ್ತದೆ? ಜೈಲಿನಲ್ಲಿರುವ ಗೌರಿಯವರ ಕೊಲೆಗಡುಕರು ಮತ್ತು ಸಂಚುಕೋರರು ಒಂದು ವೇಳೆ ಶಿಕ್ಷೆಗೊಳಪಟ್ಟರೆ ಹುತಾತ್ಮರೆಂಬಂತೆ ಬಿಂಬಿಸಲ್ಪಡುತ್ತಾರೆ; ಬಿಡುಗಡೆಯಾದರೆ ವೀರೋಚಿತ ಸ್ವಾಗತ ಸಿಗುತ್ತದೆ.

ಇವೆಲ್ಲಾ ಕಾರಣಗಳಿಂದ ನಾವಿದಕ್ಕೆ ಪ್ರತಿಕ್ರಿಯಿಸಲೇಬೇಕು. ಪ್ರತಿಕ್ರಿಯಿಸದೇ ಇದ್ದಲ್ಲಿ ಸುಮ್ಮನಾಗುವ ಕೇಸು ಇದಲ್ಲ. ಹಾಗಾಗಿದ್ದರೆ, ಅವರು ಇಂತಹ ಯೋಜಿತ ಆಟ ಆಡುತ್ತಿರಲಿಲ್ಲ. ಆದರೆ ಯಾವ ರೀತಿ ಪ್ರತಿಕ್ರಿಯಿಸಬೇಕೆಂದರೆ, ಅವರ ಟ್ರ್ಯಾಪ್‍ನೊಳಗೆ ಸಿಕ್ಕಿಕೊಳ್ಳುವ ರೀತಿ ಅಲ್ಲ. ಬದಲಿಗೆ ಅವರ ವಿಕೃತಿ, ಯೋಜಿತ ಹುನ್ನಾರ ಮತ್ತು ಕೊಲೆಗಡುಕತನ ಬಯಲಾಗುವ ರೀತಿಯಲ್ಲಿ.

photo courtesy: Deccan Chronicle

ಗೌರಿ ಲಂಕೇಶರಿಗೆ ನೇರವಾಗಿ ಗುಂಡಿಕ್ಕಿದ ಪರಶುರಾಮ ವಾಘ್ಮೋರೆ ಸಿಂಧಗಿಯಲ್ಲಿ ಪಾಕಿಸ್ತಾನದ ಬಾವುಟ ಹಾರಿಸಿದ ಕುಖ್ಯಾತಿ ಹೊಂದಿರುವವನು. ಅವನು ಮುತಾಲಿಕ್ ಸೇನೆಯ ಕಾರ್ಯಕರ್ತ. ಆದರೆ ಮುತಾಲಿಕ್ ಹೇಳಿದ್ದು, ಪಾಕಿಸ್ತಾನದ ಬಾವುಟ ಹಾರಿಸಿದ ಪ್ರಕರಣದಲ್ಲಿ ಸಿಲುಕಿಕೊಂಡವರು ಆರೆಸ್ಸೆಸ್ ಕಾರ್ಯಕರ್ತರು ಎಂದು. ಈಗ ಆ ವಿಚಾರವೇಕೆ ಜನರ ಕಾಮನ್‍ಸೆನ್ಸ್ ಭಾಗವಾಗಿಲ್ಲ? ಏಕೆ ಆರೆಸ್ಸೆಸ್ ಮತ್ತು ಮುತಾಲಿಕ್ ಸೇನೆ ಇಬ್ಬರೂ ಈ ವಿಚಾರದಲ್ಲಿ ಮೌನವಾಗಿದ್ದಾರೆ?

ಗೌರಿ ಲಂಕೇಶರ ಬಗ್ಗೆ ಅವರ ಕೊಲೆಗಡುಕನು ಭಾಗವಾಗಿರುವ ಸಂಘಟನೆಯ ಮುಖಂಡ ಮಾತಾಡುವುದನ್ನು ನಾವು ಸಹಿಸಿಕೊಳ್ಳುವುದಿಲ್ಲ ಮತ್ತು ಆ ರೀತಿ ಮಾತಾಡುವಾಗ ಹಾಗೂ ಕೊಲೆಗೈಯ್ಯುವ ವ್ಯಕ್ತಿಗೆ ಅವರ ಮುಖಂಡನೇ ಡ್ರಗ್ಸ್ ಸರಬರಾಜು ಮಾಡಿದ್ದನ್ನು ಖಂಡಿಸುತ್ತೇವೆ ಎಂದು ಹೇಳಬೇಕು. ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ‘ಮಸೀದಿಗೆ ಹೋಗಿ ಹಂದಿ ಹಾಕಿ’ ಎಂದು ಮುತಾಲಿಕ್ ಹೇಳಿದ ಕೆಲವೇ ದಿನಗಳಲ್ಲಿ ಹಂದಿಯನ್ನು ಹಾಕಲಾಯಿತು ಮತ್ತು ಕೋಮುಗಲಭೆ ಉಂಟಾಯಿತು. ಬೇಕಾದರೆ ಆ ಕೇಸಿನ ಚಾರ್ಜ್‍ಶೀಟ್ ನೋಡಬಹುದು. ಪಾಕಿಸ್ತಾನದ ಧ್ವಜ ಅವರೇ ಹಾರಿಸಿ, ಮರುದಿನ ಅದರ ವಿರುದ್ಧ ಅವರೇ ಪ್ರತಿಭಟನೆ ಮಾಡುತ್ತಾರೆ. ತೀರಾ ಇತ್ತೀಚೆಗೆ ಮಂಡ್ಯದಲ್ಲಿ ದೇವಸ್ಥಾನದ ಮೂವರು ಅರ್ಚಕರ ಕೊಲೆಯಾಗುತ್ತದೆ; ತಕ್ಷಣವೇ ಈ ಮುತಾಲಿಕ್‍ಯಿಂದ ಅವರನ್ನು ಇಸ್ಲಾಮಿಕ್ ಜಿಹಾದಿಗಳು ಕೊಂದಿದ್ದಾರೆಂಬ ಹೇಳಿಕೆ ಹೊರಬರುತ್ತದೆ. ಮರುದಿನ ಮೂವರು ಮುಸ್ಲಿಮೇತರರು ಸಿಕ್ಕಿಬೀಳುತ್ತಾರೆ. ಇಸ್ಲಾಮಿಕ್ ಜಿಹಾದಿಗಳೇ ಮಾಡಿದ್ದಾರೆಂಬ ಮುತಾಲಿಕ್ ಹೇಳಿಕೆಯನ್ನು ಪ್ರಕಟಿಸಿದ ಮಾಧ್ಯಮಗಳು ಮತ್ತೆ ಆತನನ್ನು ಪ್ರಶ್ನೆ ಮಾಡುವುದಿಲ್ಲ. ಅಷ್ಟೇ ಅಲ್ಲದೇ ಇಂತಹುದೇ ತಲೆಕೆಟ್ಟ ಹೇಳಿಕೆಯನ್ನು ಆತ ಇನ್ನೊಮ್ಮೆ, ಮತ್ತೊಮ್ಮೆ ಹೇಳಿದರೆ ಅದನ್ನೂ ಪ್ರಕಟಿಸುತ್ತಾರೆ.

ಈ ವಿಚಾರಗಳ ಕುರಿತು ನಾವ್ಯಾವಾಗಾದರೂ ಕ್ಯಾಂಪೇನ್ ನಡೆಸಿದ್ದೇವೆಯೇ?

ಐಟಿ ಸೆಲ್ಲುಗಳು ಕೊಲೆಗಡುಕರ ಪರವಾಗಿ ಖುದ್ದಾಗಿ ಕ್ಯಾಂಪೇನ್ ನಡೆಸುವುದನ್ನು ನಾವು ಬಯಲುಗೊಳಿಸುವುದಲ್ಲದೇ, ಗೌರಿಯವರ ಕೊಲೆಯನ್ನು ಸಂಭ್ರಮಿಸಿದವನ ಟ್ವಿಟ್ಟರ್ ಫಾಲೋಯರ್ ಆಗಿ ಪ್ರಧಾನಿ ಮೋದಿಯಿರುವುದನ್ನು ಮತ್ತೆ ಮತ್ತೆ ನೆನಪಿಸಬೇಕು. ಇವೆಲ್ಲದರ ಜೊತೆಗೆ ಕಾನೂನು ಕ್ರಮಗಳನ್ನೂ ತೆಗೆದುಕೊಳ್ಳಬೇಕು. ಇಂತಹ ಹತ್ತಾರು ಸಂಗತಿಗಳನ್ನು ನಿರಂತರವಾಗಿ, ವ್ಯವಸ್ಥಿತವಾಗಿ ಸತ್ಯದ ಪರ, ಮಾನವೀಯತೆಯ ಪರ ತೆಗೆದುಕೊಳ್ಳದಿದ್ದರೆ, ಜೀವ ವಿರೋಧಿಗಳು ಮತ್ತು ಸುಳ್ಳಿನ ಪ್ರಚಾರಕರು ವಿಜೃಂಭಿಸುತ್ತಿರುತ್ತಾರೆ ಮತ್ತು ನಾವು ಅವರು ಮಾಡುವ ಕ್ಷುದ್ರ ಆರೋಪಗಳಿಗೆ ಉತ್ತರ ಕೊಡುವುದರಲ್ಲಿ ಕಳೆದುಹೋಗುತ್ತೇವೆ.

ಈ ವಿಚಾರದಲ್ಲಿ ಒಂದು ವಾಲಂಟಿಯರ್ ಗುಂಪನ್ನು ಗೌರಿ ಮೀಡಿಯಾ ಸಂಘಟಿಸುತ್ತಿದೆ. ಪ್ರತಿಯೊಬ್ಬರಿಗೂ ಅದರಲ್ಲಿ ಒಂದು ಪಾತ್ರವಿದ್ದೇ ಇರುತ್ತದೆ. ವಾಲಂಟಿಯರ್ ಮಾಡಬಯಸುವವರು ಸಂಪರ್ಕಿಸಬೇಕೆಂದು ಕೋರುತ್ತೇವೆ. ಇಂತಹ ದುಷ್ಟರ ಹುನ್ನಾರಗಳಿಗೆ ಇನ್ನು ಅವಕಾಶ ನೀಡಬಾರದು. ಸತ್ಯ ಮತ್ತು ಸುಳ್ಳಿನ ನಡುವಿನ ಸಂಗ್ರಾಮದಲ್ಲಿ ಸತ್ಯವು ಸೋಲುತ್ತಾ ಇರುವುದನ್ನು ನೋಡಿಕೊಂಡು ಕುಳಿತಿರಲಾಗದು.


ಇದನ್ನೂ ಓದಿ: ಸುಲಿಗೆ, ವಸೂಲಿ ದಂಧೆ ಆರೋಪ: ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ವಿರುದ್ಧ ಕ್ರಿಮಿನಲ್ ದೂರು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...