ಗಾಝಾ ಮೇಲೆ ಇಸ್ರೇಲ್ ಸೇನೆಯ ದಾಳಿ ಮುಂದುವರೆದಿದ್ದು, ಆಸ್ಪತ್ರೆಗಳು ಮೃತದೇಹ ಮತ್ತು ಗಾಯಾಳುಗಳಿಂದ ತುಂಬಿ ತುಳುಕುತ್ತಿವೆ. ಇಂಧನ, ಆಮ್ಲಜನಕ ಮತ್ತು ವೈದ್ಯಕೀಯ ಸರಬರಾಜುಗಳ ಕೊರತೆಯು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ.
ಪರಿಸ್ಥಿತಿ ಗಂಭೀರ ಮಟ್ಟಕ್ಕೆ ತಲುಪಿರುವ ಹಿನ್ನೆಲೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಹೆಚ್ಒ) ಕದನ ವಿರಾಮಕ್ಕೆ ಆಗ್ರಹಿಸಿದೆ. ಇಸ್ರೇಲ್ ಬೆಂಬಲಿಸುವ ಫ್ರಾನ್ಸ್ ಕೂಡ ತುರ್ತು ಕದನ ವಿರಾಮಕ್ಕೆ ಮನವಿ ಮಾಡಿದೆ.
ಉತ್ತರ ಗಾಝಾದ ಅಲ್-ಶಿಫಾ ಆಸ್ಪತ್ರೆಯ ತುರ್ತು ವಿಭಾಗದಲ್ಲಿ “ರಕ್ತಸ್ನಾನ” ನಡೆಯುತ್ತಿದೆ. ಅಲ್ಲಿ ಪರಿಸ್ಥಿತಿ ಸುಧಾರಿಸಲು ತುರ್ತು ಸೌಲಭ್ಯ ಒದಗಿಸುವ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ನೂರಾರು ಸ್ಥಳಾಂತರಗೊಂಡ ಜನರು ಆಸ್ಪತ್ರೆಯ ಕಟ್ಟಡ ಮತ್ತು ಮೈದಾನವನ್ನು ಆಶ್ರಯಕ್ಕಾಗಿ ಬಳಸುತ್ತಿದ್ದಾರೆ. ಇದರಿಂದ ಕುಡಿಯುವ ನೀರು ಮತ್ತು ಆಹಾರದ ತೀವ್ರ ಕೊರತೆ ಉಂಟಾಗಿದೆ.
ಇಂಧನ ಮತ್ತು ಆಮ್ಲಜನಕದ ಕೊರತೆಯಿಂದಾಗಿ ಆಪರೇಷನ್ ಥಿಯೇಟರ್ಗಳು ಇನ್ನು ಮುಂದೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಡಬ್ಲ್ಯುಹೆಚ್ಒ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ ಶಿಫಾ ಆಸ್ಪತ್ರೆಗೆ ಪ್ರತಿ ನಿಮಿಷಕ್ಕೆ ಹೊಸ ರೋಗಿಗಳು ಬರುತ್ತಿದ್ದಾರೆ. ಅವರ ಅಗತ್ಯಗಳನ್ನು ಪೂರೈಸಲು ಮತ್ತು ಅವರಿಗೆ ಚಿಕಿತ್ಸೆ ನೀಡಲು ಅಸಾಧ್ಯವಾಗಿದೆ, ಎಂದು ಡಬ್ಲ್ಯುಹೆಚ್ಒ ಹೇಳಿದೆ.
ಗಾಯಗೊಂಡವರಿಗೆ ನೆಲದ ಮೇಲೆ ಮಲಗಿಸಿ ಹೊಲಿಗೆ ಹಾಕಲಾಗುತ್ತಿದೆ. ಆಸ್ಪತ್ರೆಯಲ್ಲಿ ಯಾವುದೇ ನೋವು ನಿವಾರಕ ಅನಸ್ತೇಶಿಯ ಸೌಲಭ್ಯವಿಲ್ಲ. ಅಲ್-ಶಿಫಾ ಆಸ್ಪತ್ರೆಯನ್ನು ಮೊದಲಿನಂತೆ ಮಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ಏಕೆಂದರೆ, ಇದು ಗಾಝಾ ಅತಿದೊಡ್ಡ ಆಸ್ಪತ್ರೆ ಎಂದು ಡಬ್ಲ್ಯುಹೆಚ್ಒ ತಿಳಿಸಿದೆ.
ಅಲ್ ಶಿಫಾ ಆಸ್ಪತ್ರೆಗೆ ಮೂಲಭೂತ ಸೌಲಭ್ಯ ಒದಗಿಸುವುದು ಡಬ್ಲ್ಯುಹೆಚ್ಒನ ಆದ್ಯತೆ. ಗಾಜಾ ಪಟ್ಟಿಯ ಸಂಪೂರ್ಣ ಉತ್ತರದಲ್ಲಿ, ಅಲ್-ಅಹ್ಲಿ ಅರಬ್ ಆಸ್ಪತ್ರೆ ಮಾತ್ರ ಭಾಗಶಃ ಕಾರ್ಯನಿರ್ವಹಿಸುತ್ತಿದೆ. ಅಲ್-ಶಿಫಾ, ಅಲ್ ಅವ್ದಾ ಮತ್ತು ಅಲ್ ಸಹಬಾ ವೈದ್ಯಕೀಯ ಸಂಕೀರ್ಣಗಳು ಕನಿಷ್ಠ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಎಎಫ್ಪಿ ವರದಿ ಮಾಡಿದೆ.
ಅಲ್-ಶಿಫಾದಲ್ಲಿ, ನಿಯಮಿತ ವೈದ್ಯಕೀಯ ಸರಬರಾಜು ಒದಗಿಸಿದರೆ 20 ಆಪರೇಷನ್ ಥಿಯೇಟರ್ಗಳನ್ನು ಸಕ್ರಿಯಗೊಳಿಸಬಹುದು. ಹಾಗೆಯೇ ಶಸ್ತ್ರಚಿಕಿತ್ಸಾ ನಂತರದ ಆರೈಕೆ ಸೇವೆಗಳು, ಇಂಧನ, ಆಮ್ಲಜನಕ, ಔಷಧಿಗಳು, ಆಹಾರ ಮತ್ತು ನೀರಿನ ನಿಯಮಿತ ಪೂರೈಕೆಗಳನ್ನು ಒದಗಿಸಬೇಕಿದೆ.
ಈ ನಡುವೆ, ಪಶ್ಚಿಮ ದಂಡೆಯ ತುಲ್ಕರ್ಮ್ ಮೇಲೆ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಕನಿಷ್ಠ ಐದು ಮಂದಿ ಪ್ಯಾಲೆಸ್ತೀನಿಯರು ಭಾನುವಾರ ಕೊಲ್ಲಲ್ಪಟ್ಟರು ಎಂದು ಪ್ಯಾಲೆಸ್ತೀನ್ ಆರೋಗ್ಯ ಸಚಿವಾಲಯ ತಿಳಿಸಿದೆ.
ಯುದ್ಧ ಇನ್ನಿಬ್ಬರು ಇಸ್ರೇಲಿ ಸೈನಿಕರು ಸಾವನ್ನಪ್ಪಿದ್ದು, ಸೈನಿಕರ ಸಾವಿನ ಸಂಖ್ಯೆ 121 ಕ್ಕೆ ಏರಿದೆ. ‘ಸಂಪೂರ್ಣ ಗೆಲುವು’ ಸಿಗುವವರೆಗೆ ಇಸ್ರೇಲ್ ಯುದ್ಧ ನಡೆಸಲಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ತೀವ್ರಗೊಳ್ಳುತ್ತಿರುವ ದಾಳಿಗಳ ಮಧ್ಯೆ, ಫ್ರಾನ್ಸ್ ತುರ್ತು ಕದನ ವಿರಾಮಕ್ಕೆ ಕರೆ ನೀಡಿದೆ. ಫ್ರಾನ್ಸ್ನ ವಿದೇಶಾಂಗ ಮಂತ್ರಿ ಕ್ಯಾಥರೀನ್ ಕೊಲೊನ್ನಾ ಇಸ್ರೇಲ್ಗೆ ಆಗಮಿಸಿದ್ದು, ಕದನ ವಿರಾಮ ಆಗ್ರಹಿಸಿದ್ದಾರೆ. ನಾಗರಿಕರು ಕೊಲ್ಲಲ್ಪಡುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಯುದ್ಧ ಸೃಷ್ಟಿಸಿದ ಅವಾಂತರ: ಗಾಝಾ ರೋಗಕ್ಕೆ ಫಲವತ್ತತೆಯ ನೆಲ!