Homeಮುಖಪುಟಕಾಣೆಯಾದ ಸಂಕೀರ್ಣತೆ, ವಿವರಗಳ ಕೊರತೆ, ಗ.ಗ.ವೃ.ವಾ.ದಲ್ಲಿ ಹಿಂಸೆಯೇ ಬಂಡವಾಳ

ಕಾಣೆಯಾದ ಸಂಕೀರ್ಣತೆ, ವಿವರಗಳ ಕೊರತೆ, ಗ.ಗ.ವೃ.ವಾ.ದಲ್ಲಿ ಹಿಂಸೆಯೇ ಬಂಡವಾಳ

- Advertisement -
- Advertisement -

‘ಒಂದು ಮೊಟ್ಟೆಯ ಕಥೆ’ ಸಿನಿಮಾ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ರಾಜ್ ಬಿ ಶೆಟ್ಟಿ ಅವರ ‘ಗರುಡ ಗಮನ ವೃಷಭ ವಾಹನ’ ಈಗ ಬಿಡುಗಡೆಯಾಗಿದೆ. ಬಹುತೇಕ ಜನಪ್ರಿಯ ಸುದ್ದಿ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹೊಗಳಿಕೆ-ಪ್ರಶಂಸೆಯ ಭರಪೂರದೊಂದಿಗೆ ಚರ್ಚೆಯಾಗುತ್ತಿದೆ. ಭಾರತೀಯ ಚಿತ್ರರಂಗದಲ್ಲಿ ಸಾಂಪ್ರದಾಯಿಕ ಎಂಬಂತೆ ಬರುವ ‘ಫಾರ್ಮುಲಾ’ ಸಿನಿಮಾಗಳಿಂದ ತುಸು ಡೀವಿಯೇಟ್ ಆಗುವ ಸಿನಿಮಾಗಳನ್ನು ಕನ್ನಡ ಪ್ರೇಕ್ಷಕರು ಬರದಪ್ಪಿಕೊಳ್ಳುವುದು ಸಾಮಾನ್ಯವಾದ ಸಂಗತಿ. ಕನ್ನಡದಲ್ಲಿ ಸಿನಿಮಾ ಬೆಳೆಯಲು ಇಂತಹ ನಡೆ ಅತಿಮುಖ್ಯ ಎಂಬುದು ಸರ್ವೇಸಾಧಾರಣ ವಾದ. ಖಂಡಿತಾ ಕನ್ನಡ ಸಿನಿಮಾರಂಗ ಇನ್ನೂ ಬೃಹತ್ತಾಗಿ ಬೆಳೆಯಬೇಕು ಎನ್ನುವುದರಲ್ಲಿ ಎರಡುಮಾತಿಲ್ಲ. ಆದರೆ, ಕಾಲದ ಬದಲಾವಣೆಗೆ ಸ್ಪಂದಿಸುವಂತೆ, ನಮ್ಮ ಸುತ್ತಲಿನ ಜಗತ್ತಿನ ನೋವು-ನಲಿವುಗಳನ್ನು ವೈಚಾರಿಕ ದೃಷ್ಟಿಕೋನದಲ್ಲಿ ಕಂಡುಕೊಳ್ಳಲು ಅನುವಾಗುವಂತೆ, ಸಮಸ್ಯೆಗಳಿಗೆ ಕ್ರಿಯಾತ್ಮಕವಾಗಿ-ಸೃಜನಾತ್ಮಕವಾಗಿ ಪ್ರತಿಕ್ರಿಯಿಸುವ ಮಾಧ್ಯಮವಾಗಿ, ಎಲ್ಲರ ಒಳಿತಿಗೆ ಕಾರಣವಾಗುವ ಸಾರ್ವತ್ರಿಕವಾದ ಮೌಲ್ಯಗಳನ್ನು ಪ್ರತಿನಿಧಿಸುವಂತೆ ಕನ್ನಡ ಸಿನಿಮಾರಂಗದಲ್ಲಿ ದೃಶ್ಯ ಕಥೆಗಳು ಮೂಡಿದಾಗ ಮಾತ್ರ ಗುಣಮಟ್ಟದ ದೃಷ್ಟಿಯಿಂದಲೂ ಅದು ಬೆಳೆಯುವುದಕ್ಕೆ ಸಾಧ್ಯವಾದೀತು. ಆ ನಿಟ್ಟಿನಲ್ಲಿ ಹಲವು ಕೋನಗಳಿಂದ ತೆರೆದುಕೊಳ್ಳುವ ಪ್ರಶ್ನೆಗಳಿಗೆ ಕನ್ನಡ ಸಿನಿಮಾ ಮುಖಾಮುಖಿಯಾಗಬೇಕಿದೆ.

ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿರುವ ಕ್ರೌರ್ಯ ಮತ್ತು ಹಿಂಸೆಗಳನ್ನು ದೃಶ್ಯಮಾಧ್ಯಮದಲ್ಲಿ ಯಾವ ಬಗೆಯಲ್ಲಿ ತೋರಿಸಬೇಕು, ಸಿನಿಮಾದಲ್ಲಿ ಕಟ್ಟಿಕೊಡಲಾಗುವ ಹಿಂಸೆಯ ದೃಶ್ಯಗಳು, ಆ ಸಿನಿಮಾ ನೋಡುವ ಪ್ರಕ್ರಿಯೆಯಲ್ಲಿ ಪ್ರೇಕ್ಷಕನಿಗೆ ಯಾವ ಭಾವನೆ ಕಟ್ಟಿಕೊಡಲು ಸಾಧ್ಯವಾಗಬೇಕು ಎಂಬೆಲ್ಲಾ ಚರ್ಚೆಗಳು ಹಲವು ದಶಕಗಳಿಂದ ನಡೆದುಕೊಂಡು ಬಂದಿರುವಂತವೇ. ಅಮೆರಿಕದ ಸ್ವತಂತ್ರ ನಿರ್ದೇಶಕ ಸ್ಟಾನ್ಲಿ ಕುಬ್ರಿಕ್‌ನ ‘ಎ ಕ್ಲಾಕ್‌ವರ್ಕ್ ಆರೆಂಜ್’ಗಿಂತ ಮುಂಚಿನಿಂದಲೂ, ಇತ್ತೀಚಿನ ‘ಜೈ ಭೀಮ್’ವರೆಗೂ ಇಂತಹ ಚರ್ಚೆಗಳು ಮರುಕಳಿಸಿವೆ. ಆಂಥನಿ ಬರ್ಗೆಸ್‌ನ ಕಾದಂಬರಿಯನ್ನು ಕುಬ್ರಿಕ್ ತನ್ನ ಸಿನಿಮಾಗಾಗಿ ಅಳವಡಿಸಿಕೊಳ್ಳುವಾಗ, ಪ್ರಭುತ್ವದ-ಸಮಾಜದ ಹಿಂಸೆಗೆ ಅಷ್ಟು ಪ್ರಾಮುಖ್ಯತೆ ಕೊಡದೆ, ಮುಖ್ಯ ಪಾತ್ರಧಾರಿ ಅಲೆಕ್ಸ್ ನಡೆಸುವ ದೌರ್ಜನ್ಯಗಳ ಹಿಂಸೆಯನ್ನು ಹೆಚ್ಚು ಅದ್ದೂರಿಯಾಗಿಸುತ್ತಾನೆ, ಆ ಮೂಲಕ ಪ್ರಭುತ್ವದ ಹಿಂಸೆ-ಕ್ರೌರ್ಯಕ್ಕೆ, ಅಲೆಕ್ಸ್ ನಡೆಸುವ ಹಿಂಸೆಯನ್ನು ಪ್ರೇಕ್ಷಕ ಹೋಲಿಸಿಕೊಳ್ಳಬಹುದಾದ ಸಾಧ್ಯತೆಯನ್ನು ತಗ್ಗಿಸುತ್ತಾನೆ ಎಂಬ ವಿಮರ್ಶೆ ಆತನ ಸಿನಿಮಾಗೆ ಬಂದಿತ್ತು. ಇಂತಹ ಎಷ್ಟೋ ಚರ್ಚೆಗಳ ಹಿನ್ನೆಲೆಯಲ್ಲಿ, ಜಗತ್ತಿನ ಅತ್ಯುತ್ತಮ ನಿರ್ದೇಶಕರು ತಮ್ಮ ಚಿತ್ರಕಥೆಯಲ್ಲಿ ಹಿಂಸೆಯನ್ನು ಹಿಡಿದಿಡುವ ಅಗತ್ಯ ಎದುರಾದಾಗ, ‘ಹಿಂಸೆಯ ದೃಶ್ಯಗಳನ್ನು ಪ್ರೇಕ್ಷಕರು ಸ್ರವಿಸುತ್ತಾರೆ’ ಎಂಬ ‘ಜನಪ್ರಿಯ ಧಾಟಿ’ಯನ್ನು ದಾಟಿ, ತಾನು ಹೇಳುವ ಕಥೆಯ ಸಂಕೀರ್ಣತೆಗೆ ಅಗತ್ಯವಿರುವ ರೀತಿಯಲ್ಲಿ ಅದನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ತಮಿಳು ನಿರ್ದೇಶಕ ಮಾರಿ ಸೆಲ್ವರಾಜ್ ಅವರ ಮೊದಲ ಸಿನಿಮಾ ‘ಪರಿಯೇರುಂ ಪೆರುಮಾಳ್’ ಗಮನಿಸಿದರೆ, ಮುಖ್ಯಪಾತ್ರಧಾರಿಯನ್ನು ಕಟ್ಟುವಾಗ ಹಿಂಸೆಯನ್ನು ತ್ಯಜಿಸುವ ಪಾತ್ರವಾಗಿ ಕಟ್ಟುತ್ತಾರೆ. ತನ್ನ ಮೇಲಾದ ದೌರ್ಜನ್ಯಕ್ಕೆ ಪ್ರತಿಯಾಗಿ ಆತ ಹಿಂಸೆಯ ದಾರಿ ತುಳಿಯುವುದೇ ಇಲ್ಲ. ಅದು ಅಂದಿನ ಕಾಲಘಟ್ಟದ ಸೂಚನೆ ಕೂಡ. ಅದೇ ‘ಕರ್ಣನ್’ ಸಿನಿಮಾದಲ್ಲಿ ಕರ್ಣನಿಗೆ ಹಿಂಸೆ ಅನಿವಾರ್ಯವಾಗುತ್ತದೆ. ಇಲ್ಲಿ ಪ್ರಭುತ್ವ-ಸಮಾಜ ತಳಸಮುದಾಯದ ಮೇಲೆ ಹೇರುವ ಹಿಂಸೆಲ್ವಯಿಂದ ರಕ್ಷಿಸಿಕೊಳ್ಳಲು ಪ್ರತಿಹಿಂಸೆಯ ಹೊರತಾದ ಅವಕಾಶವೇ ಅಲ್ಲಿಲ್ಲ. ಅದನ್ನು ಅವರು ಪ್ರೇಕ್ಷಕರಿಗೆ ದಾಟಿಸಬೇಕಿದೆ. ಅದರಲ್ಲಿ ಯಶಸ್ವಿಯೂ ಆಗುತ್ತಾರೆ. ವಿಸಾರಣೈ ಮತ್ತು ಜೈಭೀಮ್ ಸಿನಿಮಾಗಳಲ್ಲಿ ಆಡಳಿತ ವ್ಯವಸ್ಥೆ/ಪೊಲೀಸ್ ವ್ಯವಸ್ಥೆ ನಡೆಸುವ ಹಿಂಸೆಯನ್ನು ಭೀಕರವಾಗಿ ಕಟ್ಟಿಕೊಡುವಾಗ ಕೂಡ, ಆ ಕಟ್ಟುವಿಕೆ ದೇಶ-ಕಾಲದ ಅಗತ್ಯವಾಗಿ ಪ್ರೇಕ್ಷಕನಿಗೆ ಕಾಡುತ್ತದೆ. ಅಂತಹ ವ್ಯವಸ್ಥೆಯ ವಿರುದ್ಧ ಪ್ರೇಕ್ಷಕನಿಗೆ ಮೂಡಿಸಬೇಕಾದ ತಿಳಿವಳಿಕೆ ಮತ್ತು ಅದನ್ನು ಸರಿಪಡಿಸದೆ ಅದರ ಭಾಗವಾಗಿರುವ ಕಾರಣಕ್ಕೆ, ‘ಗಿಲ್ಟ್’ ಭಾವನೆಯನ್ನು ಮೂಡಿಸುವುದಕ್ಕೂ ಅದು ಮುಖ್ಯ. ಗ.ಗ.ವೃ.ವಾ ಸಿನಿಮಾದಲ್ಲಿ ಹಿಂಸೆಯನ್ನು ಅತಿರಂಜಿತವಾಗಿ ಕಟ್ಟಿಕೊಡುವಾಗ, ನಿರ್ದೇಶಕರಿಗೆ ಇಂತಹ ಯಾವುದಾದರೂ ಪ್ರಶ್ನೆ ಮೂಡಿರಬಹುದೇ ಎಂಬ ಸಂದೇಹ ಹುಟ್ಟುವುದರಿಂದ ಇಂತಹ ಒಂದು ಪೀಠಿಕೆಗೆ ಮುಂದಾಗಬೇಕಾಯಿತು.

ಗ.ಗ.ವೃ.ವಾ ಮುಖ್ಯಪಾತ್ರಧಾರಿ ಶಿವ (ರಾಜ್ ಬಿ ಶೆಟ್ಟಿ) ತನ್ನ ಅನಾಥ ಬಾಲ್ಯದಲ್ಲಿ ಹಲವು ದೌರ್ಜನ್ಯಗಳಿಗೆ ಒಳಗಾಗಿದ್ದಾನೆ ಎಂಬ ಕಾರಣಕ್ಕೆ, ತನಗೆ ಸರಿಕಾಣದ, ತನ್ನ ಪ್ರಿಯ ಗೆಳೆಯ ಹರಿಯ (ರಿಷಭ್ ಶೆಟ್ಟಿ) ವ್ಯವಹಾರಗಳಿಗೆ ಅಡ್ಡಬರುವ ಎಲ್ಲರನ್ನೂ ಕಲ್ಲಿನಲ್ಲಿ ಚಚ್ಚಿ ಅಥವಾ ಚಾಕುವಿನಲ್ಲಿ ಚುಚ್ಚಿ ಕೊಲ್ಲುವ ಮೃಗವಾಗಿ ಬದಲಾಗಿದ್ದಾನೆ. ಇಡೀ ಸಿನಿಮಾದಲ್ಲಿ ಹಲವು ಜನರನ್ನು ಈ ರೀತಿ ಕೊಲ್ಲುವುದನ್ನು ವಿಜೃಂಭಿಸಲಾಗಿದೆ. ಉದಾ: ಆತ ಮಾಡಿದ ಮೊದಲನೇ ಕೊಲೆಯನ್ನು ಪ್ರೇಕ್ಷಕರಿಗೆ ನರೇಟ್ ಮಾಡುತ್ತಿರುವ ಎಸ್‌ಐ, ‘ಆತ ಯಾವ ರೀತಿ ಹೊಡೆದಿದ್ದ ಅಂದರೆ, 17 ಹಲ್ಲುಗಳನ್ನು ಬಾಚಿಕೊಳ್ಳಬೇಕಾಯಿತು’ ಎಂದು ಶಿವ ಚಚ್ಚಿ ಕೊಲ್ಲುತ್ತಿರುವ ದೃಶ್ಯದ ಹಿನ್ನೆಲೆಯಲ್ಲಿ ಹೇಳುತ್ತಾನೆ. ಶಿವ ತಾನು ಕೊಂದವರ ಚಪ್ಪಲಿ-ಬೂಟ್‌ಗಳನ್ನು ಹಾಕಿಕೊಂಡು ಒಡಾಡುತ್ತಾನೆ ಎಂಬ ಸಂಗತಿ ಸಿನಿಮಾದಲ್ಲಿ ಹಲವು ಬಾರಿ ಪುನರಾವರ್ತಿತವಾಗಿ ವಿಜೃಂಭಿಸುತ್ತದೆ. ಒಂದು ಸೀನ್‌ನಲ್ಲಿ ಆತ ತನ್ನ ವಿರೋಧಿ ಕೇಬಲ್ ಆಪರೇಟರ್‌ನನ್ನು ಕೊಚ್ಚಿಕೊಲ್ಲುವಾಗ ‘ಮಾದೇವ’ ಹಾಡನ್ನು ಹಾಕಲಾಗುತ್ತದೆ. (ಹಿಂಸೆಯನ್ನು ‘ಕೂಲ್’ ಎನಿಸುವಂತೆ ಮಾಡುವ ಜನಪ್ರಿಯ ಹಪಾಹಪಿ). ಹೀಗೆ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಯೊಬ್ಬನ ಹಿಂಸಾತ್ಮಕ ಕೃತ್ಯಗಳನ್ನು ವೈಭವೀಕರಿಸಿ ‘ಸ್ಟೈಲಿಶ್’ ಎಂಬಂತೆ ಕಟ್ಟಿಕೊಡುವುದೇ ‘ವಿವರ’ವಾಗಿ ಕಟ್ಟಿಕೊಡುವುದು ಎಂದು ತಿಳಿದು ಈ ಸಿನಿಮಾವನ್ನು ಪ್ರಶಂಸಿಸಿದ್ದೂ ಇದೆ.

ನಮ್ಮ ಸುತ್ತಲಿನ ಪರಿಸರದಲ್ಲಿ ಎಷ್ಟೊಂದು ಕೊಲೆಯಾಗುವುದಿಲ್ಲವೇ? ಹಿಂಸೆ ಇಲ್ಲವೇ? ಕೊಂದು ಉದಾಸೀನ ತಳೆದು ಬದುಕುವವರಿಲ್ಲವೇ? ಸಿನಿಮಾದಲ್ಲಿ ಮಾತ್ರ ಅದರ ಬಗ್ಗೆ ಆಕ್ಷೇಪ ಏಕೆ ಎಂಬಿತ್ಯಾದಿ ಪ್ರಶ್ನೆಗಳು ತೂರಿಬರುವುದು ಸಹಜ. ಖಂಡಿತಾ ಸಮಾಜದಲ್ಲಿ ಹಿಂಸೆ ಸಾಕಷ್ಟಿದೆ. ಕಲಾವಿದ ಆ ಹಿಂಸೆಗೆ ಕನ್ನಡಿ ಹಿಡಿಯುವುದು ಕೂಡ ಮುಖ್ಯವೇ. ಆದರೆ ಅತ್ಯುತ್ತಮ ಕಲಾವಿದ ಹಿಡಿದ ಕನ್ನಡಿ, ಪ್ರೇಕ್ಷಕನಿಗೆ ಆ ಹಿಂಸೆಯನ್ನಷ್ಟೇ ತೋರಿಸದೆ ಅದಕ್ಕೂ ಮೀರಿದ್ದನ್ನು ಕಾಣಿಸುತ್ತದೆ. ಆಗ ವಿವರಗಳಿಗೆ ಪ್ರಾಮುಖ್ಯತೆ ಮೂಡುತ್ತದೆ. ಪ್ರಸ್ತುತ ಸಿನಿಮಾದಲ್ಲಿಯೂ ನಿಜವಾದ ವಿವರಗಳನ್ನು (ಶಿವ ತಾನು ಕೊಂದವರ ಬೂಟ್‌ಗಳನ್ನು ಹಾಕಿಕೊಳ್ಳುತ್ತಿದ್ದ ಎಂಬುದನ್ನು ವಿಜೃಂಭಿಸಿ ಪುನರಾವರ್ತಿಸುವ ತಾಂತ್ರಿಕ ವಿವರಗಳು ಮಾತ್ರವಲ್ಲ) ಕಟ್ಟಿಕೊಡಲು ನಿರ್ದೇಶಕನಿಗೆ ಅನಂತ ಸಾಧ್ಯತೆ ಇತ್ತು. ಶಿವ ಬಾಲ್ಯದಲ್ಲಿ ದೌರ್ಜನ್ಯಕ್ಕೆ ಒಳಗಾಗಿದ್ದ ಎಂದು ನಿರೂಪಕ ಹೇಳುವ ಮಾತುಗಳಿಗಿಂತಲೂ, ತೋರಿಸುವ ಒಂದೆರಡು ಸಣ್ಣಪುಟ್ಟ ದೃಶ್ಯಗಳಿಗಿಂತಲೂ, ಸಮಾಜದಲ್ಲಿರುವ ಯಾವಯಾವ ಸಂಗತಿಗಳು ಅವನು ಬದಲಾಗುವುದಕ್ಕೆ ಅವಕಾಶ ನೀಡುತ್ತಿಲ್ಲ ಎಂಬುದನ್ನು ದೃಶ್ಯಗಳ ಮೂಲಕ ಎಕ್ಸ್ಪ್ಲೋರ್ ಮಾಡಿದ್ದರೆ, ಅಂತಹ ಸಂಘರ್ಷಗಳನ್ನು ಕಟ್ಟಿಕೊಡುವ ಡೀಟೇಲಿಂಗ್ ಮೂಲಕ ಮನಗಾಣಿಸಿದ್ದರೆ ಇದು ಒಳ್ಳೆಯ ಸಿನಿಮಾವಾಗಿ ಬೆಳೆಯುವ ಸಾಧ್ಯತೆಯಿತ್ತು. ಶಿವ-ಹರಿಯರ ಸುತ್ತ ಇರುವ ಜನರ, ವ್ಯವಸ್ಥೆಯ ಸಾಮಾಜಿಕ-ಆರ್ಥಿಕ-ರಾಜಕೀಯದ ವಿವಿಧ ಆಯಾಮಗಳ ಪರಿಸರವನ್ನು ಇನ್ನೂ ನಿಖರವಾಗಿ ಕಟ್ಟಿಕೊಡಲು ಸಾಧ್ಯವಾಗಿದ್ದರೆ ಆ ಪಾತ್ರಗಳಿಗೆ ಇನ್ನಷ್ಟು ಸ್ಪಷ್ಟತೆಯನ್ನು ತಂದುಕೊಡುತ್ತಿತ್ತು. ಇದನ್ನೆಲ್ಲಾ ಮಾಡುವ ಗೋಜಿಗೆ ಹೋಗದೆ, ಸರಣಿ ಕೊಲೆಗಳನ್ನು ‘ರಿಚ್’ ಆಗಿ ತೋರಿಸುವ, ಅದನ್ನು ಪ್ರೇಕ್ಷಕ ‘ಎಂಜಾಯ್’ ಮಾಡುವಂತೆ ಮಾಡುವುದಕ್ಕೇ ನಿರ್ದೇಶಕ ಬಹುತೇಕ ಸ್ಕ್ರೀನ್ ಸಮಯವನ್ನು ಮೀಸಲಿಡುತ್ತಾರೆ. ಅದೇ ಹಳೆಯ ಶೈಲಿಯ, ಸಾಹುಕಾರನ ದರ್ಪ, ನಿಷ್ಟೆ ತೋರಿಸುವವನ ಮೇಲೆ ಅಸಡ್ಡೆ, ರಾಜಕೀಯ ವಿರೋಧಕ್ಕಾಗಿ ರೌಡಿಯಿಸಂ, ವ್ಯವಹಾರ ವಿಸ್ತರಣೆಗಾಗಿ ಹೊಡೆದಾಟ ಇಂತಹ ಕೆಲವು ಸಂಗತಿಗಳು ಇಲ್ಲೂ ಇವೆ. ಇಂತಹ ಚರ್ವಿತಚರ್ವಣ ಸಂಘರ್ಷಗಳ ಜೊತೆಗೆ, ಹೊಸ ಕಾಲಘಟ್ಟದ ಸಂದರ್ಭವನ್ನು, ಸವಾಲುಗಳನ್ನು, ಸಮಸ್ಯೆಗಳನ್ನು ವಿವರವಾಗಿ ಹಿಡಿಯುವ ಯಾವುದೇ ಪ್ರಯತ್ನ ಸಿನಿಮಾದಲ್ಲಿ ಇಲ್ಲ. ಈ ಇಬ್ಬರು ಗೆಳೆಯರು ದೊಡ್ಡ ರೌಡಿಗಳಾಗಿ ಬೆಳೆದಿದ್ದನ್ನು ಮೆರೆಸಲು, ‘ಡಮ್ಮಿ’ಯಂತೆ ಕಾಣುವ ಪೊಲೀಸ್ ಸ್ಟೇಷನ್ ಸೃಷ್ಟಿಸುವ, ತರ್ಕವಿಲ್ಲದಂತೆ ಗೃಹ ಸಚಿವ ಒಬ್ಬ ಎಸ್‌ಐಅನ್ನು ಮಂಗಳೂರು ಪೊಲೀಸ್ ಠಾಣೆಗೆ ವರ್ಗಾಯಿಸುವ, ಕಪಾಳಕ್ಕೆ ಹೊಡೆಸಿಕೊಂಡು ಕ್ಷಣಮಾತ್ರದಲ್ಲಿ ಬದಲಾಗುವ ಪೊಲೀಸ್ ಪೇದೆ/ಡ್ರೈವರ್ ಇಂತಹ ಸುಲಭ ಕಥಾ ಬೆಳವಣಿಗೆಗೆ ನಿರ್ದೇಶಕ ಜೋತುಬೀಳುತ್ತಾರೆ.

ಇನ್ನು ಮುಖ್ಯಪಾತ್ರಧಾರಿಗಳಾದ ಶಿವ ಮತ್ತು ಹರಿಯ ನಡುವೆ ಮೂಡುವ ಸಂಘರ್ಷ, ಅದನ್ನು ಬಗೆಹರಿಸುವ ರೀತಿ, ಈ ಯಾವೊಂದೂ ಉತ್ತಮ ಸಿನಿಮಾ/ಕಥೆಗೆ ನಿದರ್ಶನದಂತಿಲ್ಲ. ಅಲ್ಲಿ ಆ ಪಾತ್ರಗಳಿಗೆ ರಿಫ್ಲೆಕ್ಟ್ ಮಾಡಿಕೊಳ್ಳುವ, ಬದಲಾವಣೆಗೆ ಅವಕಾಶ ನೀಡುವ, ಆ ಮೂಲಕ ಪ್ರೇಕ್ಷಕನಿಗೂ ಚಿಂತನೆಗೆ ಹಚ್ಚಬಹುದಾದ ರೀತಿಯಲ್ಲಿ ಕಥೆ ಬೆಳೆಯುವುದೇ ಇಲ್ಲ. ಬದಲಿಗೆ ಯಾರಾದರೂ ಪ್ರೆಡಿಕ್ಟ್ ಮಾಡಬಹುದಾದಂತೆ ಅವರಿಬ್ಬರ ನಡುವೆ ದ್ವೇಷ, ಸೇಡು, ಕೊಲೆ, ಸಾವು ಇವುಗಳಿಂದ ಕಥೆ ಅಂತ್ಯವಾಗುತ್ತದೆ. ಕಥಾ ಸಂವಿಧಾನದಲ್ಲಿ ಪಾತ್ರಗಳ ಬೆಳೆವಣಿಗೆಗೆ ಯಾವ ಅವಕಾಶವನ್ನೂ ನೀಡದೆ, ‘ಕ್ಲೈಮ್ಯಾಕ್ಸ್’ನಲ್ಲಿ ಮಾತ್ರ ತಮ್ಮ ಗುಂಡಿಯನ್ನು ತಾವೇ ತೋಡಿಕೊಳ್ಳುತ್ತಿರುವ ‘ಫಿಲಾಸಫಿಕಲ್’ ಅಂತ್ಯಕ್ಕೆ ಸಿನಿಮಾ ಶರಣಾಗುತ್ತದೆ.

ಹೀಗೆ, ದೌರ್ಜನ್ಯ, ಅನಾಥತೆ, ಸ್ನೇಹ, ನಿಷ್ಠೆ, ದ್ವೇಷ, ಸೇಡು, ಹಿಂಸೆಯ 70-80ರ ದಶಕದ ಕಥೆಗಳನ್ನು ನೆನಪಿಸುವ ‘ಗ.ಗ.ವೃ.ವಾ’ನದಲ್ಲಿ ಕೆಲವು ದೃಶ್ಯಗಳಿಗೆ ನೀಡಿರುವ ಟ್ರೀಟ್‌ಮೆಂಟ್‌ನ ಚುರುಕುತನವೇ ಇದ್ದುದರಲ್ಲಿ ಹೆಚ್ಚುಗಾರಿಕೆ. ಅದು ತಾಂತ್ರಿಕತೆಗೆ ಸಂಬಂಧಿಸಿದ್ದು. ಉದಾಹರಣೆಗೆ ತುರೇಮಣೆಯಲ್ಲಿ ಮೀನುಕೊಯ್ಯುತ್ತಾ, ವಾಸನೆಯ ಬಗ್ಗೆ ಗೊಂದಲವಾಗಿ, ಬಾವಿಯಲ್ಲಿ ಬಿದ್ದಿರುವ ಹೆಣ ಹುಡುಕುವುದು, ಹಾಗೆಯೇ, ಮೊದಲೇ ಹೇಳಿದಂತೆ, ಅಂತ್ಯದಲ್ಲಿ ತಮ್ಮ ಗುಂಡಿಯನ್ನು ತಾವೇ ತೋಡಿಕೊಂಡಂತೆ ಮೂಡುವ ದೃಶ್ಯಗಳು ಹೀಗೆ. ಆದರೆ ತಾಂತ್ರಿಕತೆಯೇ ಒಂದು ಸಿನಿಮಾವನ್ನು ಮೇಲೆತ್ತಲು ಸಾಧ್ಯವಿಲ್ಲ. ಮಾದೇವ ಹಾಡನ್ನು ಬಳಸಿರುವ ದೃಶ್ಯ ಹೇಗೆ ತಾಂತ್ರಿಕತೆ ‘ಮ್ಯಾನಿಪುಲೇಶನ್’ಗಾಗಿ ಬಳಸಲಾಗಿದೆ ಎಂಬುದನ್ನೂ ಎತ್ತಿತೋರಿಸುತ್ತದೆ. ಸದಾ ಬೆದರುವ ಎಸ್‌ಐ ಪಾತ್ರ ಸೃಷ್ಟಿ ಮಾಡಿದ್ದು ಮುಖ್ಯವಾದರೂ, ಅದನ್ನು ಸೃಷ್ಟಿಸಲೋಸ್ಕರ, ಪೊಲೀಸ್ ವ್ಯವಸ್ಥೆಯ ವಿವರಗಳನ್ನು ಸಾಧ್ಯವಾದಷ್ಟು ಮರೆಮಾಚಿ ಅದನ್ನು ಪೇಲವಗೊಳಿಸಲಾಗಿದೆ.

ಆಕಸ್ಮಿಕವಾಗಿ ಗೆಳೆಯರಾಗುವ ಹರಿ ಮತ್ತು ಶಿವನ ನಡುವಿನ ಸಂಬಂಧ, ಅವರಿಬ್ಬರಿಗೆ ಸಮಾಜ-ವ್ಯವಸ್ಥೆಯ ಜೊತೆಗೆ ಇರುವ ಸಂಬಂಧದ ಸಂಕೀರ್ಣತೆಯ ಯಾವ ಮಜಲುಗಳೂ ಸಿನಿಮಾದಲ್ಲಿ ಕಾಣಿಸುವುದಿಲ್ಲ. ಸಿನಿಮಾದಲ್ಲಿ ಕಟ್ಟಿಕೊಡುವ ಸರಣಿ ಕೊಲೆಗಳು ಕೂಡ ಅಂತಹ ಸಂಬಂಧವನ್ನು ಶೋಧಿಸುವುದಕ್ಕೆ ಕಾರಣವಾಗುವ ರೀತಿಯಲ್ಲಿ ಮೂಡಿಲ್ಲ. ಸುಲಭ ಗ್ರಹಿಕೆಯಲ್ಲಿ ಪ್ರೇಕ್ಷಕರನ್ನು ಉದ್ರೇಕತೆಯ ಮೂಲಕ ರಂಜಿಸಲೆಂಬಂತೆ ನಿರ್ದೇಶಿಸಿರುವ ಈ ಸಿನಿಮಾ ಅದೇ ನಿಟ್ಟಿನಲ್ಲಿ ಪ್ರಶಂಸೆಗೂ ಕಾರಣವಾಗಿರುವುದನ್ನು ಢಾಳವಾಗಿ ಗಮನಿಸಬಹುದಾಗಿದೆ.

ಕೊನೆಗೆ: ಫಿಲ್ಮ್ ಶೀರ್ಷಿಕೆಯ ಬಗ್ಗೆ ಹಲವರಿಗೆ ಗೊಂದಲ ಇದೆ. ಹರಿ ಮತ್ತು ಶಿವನ ಅನ್ವರ್ಥವಾಗಿ ಸಿನಿಮಾದ ಶೀರ್ಷಿಕೆಯಿದೆ ಅಷ್ಟೇ ಎನ್ನುತ್ತಾರೆ ಪುರಾಣ ಕಥೆಗಳನ್ನು ಬಲ್ಲವರು!

– ಗುರುಪ್ರಸಾದ್ ಡಿ ಎನ್

ನ್ಯಾಯಪಥ ಸಂಪಾದಕರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

5 COMMENTS

  1. ನಾನು ಭಾರತೀಯ ಸಂಸ್ಥಾನಗಳ ಏಕೀಕರಣ ಪುಸ್ತಕವನ್ನು ಆನ್ಲೈನ್ ಮುಖಾಂತರ ಆರ್ಡರ್ ಮಾಡಿದ್ದೆ.ಇನ್ನೂ ವರೆಗೆ ನನಗೆ ಪುಸ್ತಕ ತಲುಪಿರುವುದು ಇಲ್ಲ.ಪೇಮೆಂಟ್ ಕೂಡಾ successful ಅಂತ ಆಗಿದೆ.ಕಾರಣ ತಿಳಿಸಿ ಮೇಡಂ.ಧನ್ಯವಾದಗಳು

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...