ಕೇರಳದಲ್ಲಿ ನಡೆಯುತ್ತಿರುವ ಸರ್ಕಾರ ವರ್ಸಸ್ ರಾಜ್ಯಪಾಲರ ಸಂಘರ್ಷದ ಸರಣಿ ಮುಂದುವರೆದಿದ್ದು, ರಾಜ್ಯ ಸರ್ಕಾರವು ರಾಜ್ಯದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಕೇರಳ ಕಲಾಮಂಡಲಂ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಸ್ಥಾನದಿಂದ ತೆಗೆದುಹಾಕಿದೆ.
2019ರ ಕಾರ್ಯಕ್ರಮವೊಂದರಲ್ಲಿ ಸರ್ಕಾರ ಅವಮಾನಿಸಿತ್ತು ಎಂದು ಆರೋಪಿಸಿರುವ ಆರಿಫ್ ಖಾನ್ ಹಲವಾರು ವಿಷಯಗಳಲ್ಲಿ ಪ್ರಸ್ತುತ ರಾಜ್ಯದಲ್ಲಿ ಪಿಣರಾಯಿ ವಿಜಯನ್ ಸರ್ಕಾರದೊಂದಿಗೆ ಸಂಘರ್ಷದಲ್ಲಿದ್ದಾರೆ. ಕೇರಳ ಸರ್ಕಾರವು ಆರಿಫ್ ಖಾನ್ ಅವರು ಆರ್ಎಸ್ಎಸ್ ಕೈಯಲ್ಲಿರುವ ಸಾಧನ ಎಂದು ಆರೋಪಿಸಿದೆ.
ಈ ಹಿಂದೆ ಕೇರಳ ವಿಶ್ವವಿದ್ಯಾಲಯದ ಸೆನೆಟ್ಗೆ ನಾಮನಿರ್ದೇಶನಗೊಂಡಿದ್ದ 15 ಸದಸ್ಯರನ್ನು ವಜಾಗೊಳಿಸಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಆದೇಶ ಹೊರಡಿಸಿದಾಗಿನಿಂದ ಸಂಘರ್ಷ ಜೋರಾಗಿದೆ. ರಾಜ್ಯಪಾಲರ ಸೂಚನೆಯಂತೆ ಉಪಕುಲಪತಿ ಆಯ್ಕೆ ಸಮಿತಿಗೆ ಪ್ರತಿನಿಧಿಯನ್ನು ನಾಮನಿರ್ದೇಶನ ಮಾಡಲು ಸೆನೆಟ್ ಹಿಂಜರಿದ ಕಾರಣ ರಾಜ್ಯಪಾಲರು ನಾಮನಿರ್ದೇಶನಗೊಂಡ ಸೆನೆಟ್ ಸದಸ್ಯರನ್ನು ವಜಾಗೊಳಿಸಿದ್ದರು.
ಆನಂತರ ತಮ್ಮ ಸ್ಥಾನಗಳಿಗೆ ಕೂಡಲೆ ರಾಜಿನಾಮೆ ನೀಡುವಂತೆ ಕೇರಳದ ಒಂಬತ್ತು ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳಿಗೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ನಿರ್ದೇಶನ ನೀಡಿದ್ದರು. ಈ ನಿರ್ದೇಶನದ ವಿರುದ್ಶ ಕೇರಳ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿತ್ತು.
ಅಲ್ಲದೆ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಎರಡು ಮಲಯಾಳಂ ಸುದ್ದಿ ವಾಹಿನಿಗಳ ಪತ್ರಕರ್ತರು ಹೊರ ಹೋಗುವವರೆಗೂ ಗೋಷ್ಠಿಯಲ್ಲಿ ಮಾತನಾಡಲು ನಿರಾಕರಿಸಿದ್ದರು. ಸಿಪಿಐಎಂ ಬೆಂಬಲಿತ ಕೈರಲಿ ಟಿವಿ ಮತ್ತು ಮೀಡಿಯಾ ಒನ್ ಚಾನೆಲ್ ಪತ್ರಕರ್ತರು ಹೊರ ಹೋಗುವಂತೆ ರಾಜ್ಯಪಾಲರು ಸಿಡಿಮಿಡಿಗೊಂಡಿದ್ದರು.
ಈ ಎಲ್ಲಾ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯಪಾಲರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ಕೇರಳ ಸಿಎಂ ಪಿಣರಾಯಿ ವಿಜಯನ್ ರಾಜ್ಯಪಾಲರನ್ನು ಆರ್ಎಸ್ಎಸ್ನ ಕೈಗೊಂಬೆ ಎಂದು ಟೀಕಿಸಿದ್ದಾರೆ.
ಕೇರಳ ಮಾತ್ರವಲ್ಲದೇ ತಮಿಳುನಾಡು ಮತ್ತು ತೆಲಂಗಾಣದಲ್ಲಿಯೂ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ತಿಕ್ಕಾಟ ಆರಂಭವಾಗಿದೆ. ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರನ್ನು ವಾಪಸ್ ಕರೆಸಿಕೊಳ್ಳುವಂತೆ ಕೋರಿ ಸಿಎಂ ಸ್ಟಾಲಿನ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಇನ್ನೊಂದೆಡೆ ‘ನನ್ನ ಫೋನ್ ಅನ್ನು ಟ್ಯಾಪ್ ಮಾಡಲಾಗಿದ್ದು, ಖಾಸಗಿತನವನ್ನು ಉಲ್ಲಂಘಿಸಲಾಗಿದೆ’ ಎಂದು ತೆಲಂಗಾಣ ರಾಜ್ಯಪಾಲರಾದ ತಮಿಳಿಸೈ ಸೌಂದರಾಜನ್ ಅವರು ರಾಜ್ಯ ಸರ್ಕಾರದ ವಿರುದ್ಧ ಬುಧವಾರ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ವಿವಿ ಅಧಿಕಾರ: ರಾಜ್ಯಪಾಲರ ಯಜಮಾನಿಕೆ ಮತ್ತು ರಾಜ್ಯ ಸರ್ಕಾರಗಳ ವಿರೋಧದ ಸುತ್ತ ಚರ್ಚೆ