ಸಂವಿಧಾನದಲ್ಲಿ ಮೀಸಲಾತಿಯನ್ನು ಜಾರಿಗೊಳಿಸಿರುವುದು ಸಾಮಾಜಿಕ ನ್ಯಾಯ ಮತ್ತು ಪ್ರಾತಿನಿಧ್ಯವನ್ನು ಖಾತ್ರಿಪಡಿಸುವುದಕ್ಕಾಗಿಯೇ ಹೊರತು ಬಡತನ ನಿರ್ಮೂಲನೆಗಾಗಿ ಅಲ್ಲ. ಹಾಗಾಗಿ ಆರ್ಥಿಕವಾಗಿ ದುರ್ಬಲರಾದವರಿಗೆ EWS ಮೀಸಲಾತಿ ನೀಡುವುದು ಸಂವಿಧಾನಬಾಹಿರವಾದುದು ಎಂದು ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯ ಮುಖಂಡರಾದ ಮಾವಳ್ಳಿ ಶಂಕರ್ ಅಭಿಪ್ರಾಯಪಟ್ಟರು.
ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇಕಡಾ 10ರಷ್ಟು ಮೀಸಲಾತಿ ನೀಡುವ ಕೇಂದ್ರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದ್ದು ಸಾಮಾಜಿಕ ನ್ಯಾಯಕ್ಕೆ ಆದ ಬಹುದೊಡ್ಡ ಹಿನ್ನಡೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಇಡಬ್ಲ್ಯೂಎಸ್ ತೀರ್ಪು ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಅದು ಮೀಸಲಾತಿ ಪರಿಕಲ್ಪನೆಯನ್ನೆ ಬುಡಮೇಲು ಮಾಡುತ್ತದೆ. ಈ ಇಡಬ್ಲ್ಯೂಎಸ್ ತೀರ್ಪು ಸಂವಿಧಾನದ ಮೇಲಿನ ನೇರ ದಾಳಿ” ಎಂದು ಅಭಿಪ್ರಾಯಪಟ್ಟರು.
“ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕೊಡಬೇಕು ಎನ್ನುವಾಗ ಮಾತ್ರ, ಯಾವ ಆಧಾರದ ಮೇಲೆ ಕೊಡುತ್ತೀರಿ, ಜಾತಿ ಸಮೀಕ್ಷೆ ಮಾಡಿದ್ದೀರಾ? ಅವರ ಆರ್ಥಿಕ ಸ್ಥಿತಿಗತಿ ಅಧ್ಯಯನ ನಡೆಸಿದ್ದೀರಾ ಎಂಬ ಪ್ರಶ್ನೆಗಳು ಮುನ್ನೆಲೆಗೆ ಬರುತ್ತವೆ. ಆದರೆ ಮೀಸಲಾತಿ ವಿರುದ್ಧವೆ ಮಾತಾಡಿಕೊಂಡ ಬಂದ ಸಮುದಾಯಗಳು, ಇಂದು ಏಕಾಏಕಿ ಮೀಸಲಾತಿಯನ್ನು ಪಡೆಯುತ್ತಿವೆ. ಒಂದು ದಿನ ಹೋರಾಟ ಮಾಡದವರಿಗೆ ಈ ಸೌಲಭ್ಯ ಸಿಗುತ್ತಿದೆ? ಇದಕ್ಕೆ ಯಾವ ಆಧಾರಗಳಿವೆ ಎಂದು ಅವರು ಕಿಡಿಕಾರಿದರು.
ನಮ್ಮ ಉನ್ನತ ನ್ಯಾಯಾಂಗದಲ್ಲಿಯೂ ಹಿಂದುಳಿದ ಸಮುದಾಯಗಳ ಪ್ರಾತಿನಿಧ್ಯ ಇಲ್ಲದ ಕಾರಣ ಈ ರೀತಿಯ ತೀರ್ಪುಗಳು ಬರುತ್ತವೆ. ನಾವು ಅದನ್ನು ಸರಿಪಡಿಸಿ ತಳಸಮುದಾಯಗಳು ಅಲ್ಲಿ ಪಾಲುದಾರರಾಗುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಸಹ ಮೀಸಲಾತಿ ಜಾರಿಗಾಗಿ ಹೋರಾಡಬೇಕು ಎಂದು ಕರೆ ನೀಡಿದರು.
ಡಿಸೆಂಬರ್ 06 ರಂದು ದಲಿತ ಸಾಂಸ್ಕೃತಿಕ ಪ್ರತಿರೋಧ ಸಮಾವೇಶ
ರಾಜ್ಯದಲ್ಲಿ ಮತ್ತು ದೇಶದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಜನ ವಿರೋಧಿ ಆಡಳಿತದ ಮೂಲಕ ಪ್ರಜಾಪ್ರಭುತ್ವ ಸಂವಿಧಾನ, ಒಕ್ಕೂಟ ವ್ಯವಸ್ಥೆಯ ಆಶಯಗಳನ್ನು ಹೊಸಕಿ ಹಾಕುತ್ತಿದೆ. ಇಂತಹ ಸಂದರ್ಭದಲ್ಲಿ ದಲಿತ ಸಂಘಟನೆಗಳು ಒಗ್ಗಟ್ಟಾಗಬೇಕಾದ ಜರೂರು ಅತೀ ಅಗತ್ಯವಾಗಿದೆ. ಅದಕ್ಕಾಗಿ ನಾವೆಲ್ಲರೂ ಒಂದಾಗಿ 12 ಬಣಗಳು ಒಗ್ಗೂಡಿ ‘ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ’ ರಚಿಸಲಾಗಿದೆ ಎಂದು ಮುಖಂಡರಾದ ಇಂದೂಧರ ಹೊನ್ನಾಪುರ ತಿಳಿಸಿದರು.
ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯಲ್ಲಿ “ರಾಜ್ಯ ದಲಿತ ಸಂಘರ್ಷ ಸಮಿತಿಯ ಎನ್ ವೆಂಕಟೇಶ್, ಡಾ. ಡಿ ಜಿ ಸಾಗರ್, ಎನ್ ಮುನಿಸ್ವಾಮಿ, ಮಾವಳ್ಳಿ ಶಂಕರ್, ಲಕ್ಷ್ಮೀನಾರಾಯಣ ನಾಗವಾರ, ಎಂ ಸೋಮಶೇಖರ್, ಗುರುಪ್ರಸಾದ್ ಕೆರಗೋಡು, ಅಣ್ಣಯ್ಯ ಜಿಗಣಿ ಶಂಕರ್, ವಿ ನಾಗರಾಜ್, ಅರ್ಜುನ ಭದ್ರೆ, ಎಸ್ ಆರ್ ಕೊಲ್ಲೂರು” ಅವರೆಲ್ಲರೂ ಸೇರಿದ್ದಾರೆ ಎಂದರು.
ಚಾಲನಾ ಸಮಿತಿಯ ವತಿಯಿಂದ ಡಾ. ಬಿ ಆರ್ ಅಂಬೇಡ್ಕರ್ ಅವರ 66ನೇ ಪರಿನಿಬ್ಬಾಣ ದಿನದ ಅಂಗವಾಗಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಡಿ. 6ರಂದು “ದಲಿತ ಸಾಂಸ್ಕೃತಿಕ ಪ್ರತಿರೋಧ” ಸಮಾವೇಶ ಏರ್ಪಡಿಸಲಾಗಿದೆ ಎಂದರು.
“ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ, ಸ್ವಾತಂತ್ರ ಸಮಾನತೆ, ಸಹೋದರತೆ, ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯ ಆಶಯಗಳನ್ನು ನಾಶ ಮಾಡುತ್ತಿರುವ ಆರ್.ಎಸ್ಎಸ್ ಮತ್ತು ಬಿಜೆಪಿಯ ಸರ್ವಾಧಿಕಾರಿ ದುರಾಡಳಿತದ” ವಿರುದ್ಧ ಸಮಾವೇಶ ಆಯೋಜಿಸಲಾಗಿದೆ.
ಇದನ್ನೂ ಓದಿ; ಸುಳ್ಯ: 2 ಹಳ್ಳಿಗಳ 4 ಕಿ.ಮಿ. ಅಂತರದಲ್ಲಿ 2 ಬಾರ್ ಓಪನ್; ಗ್ರಾಮಸ್ಥರ ಪ್ರತಿಭಟನೆ ಕೇಳುವವರಿಲ್ಲ!