ಮುಸ್ಲಿಂ ವ್ಯಕ್ತಿಯೆಂದು ತಪ್ಪಾಗಿ ಗ್ರಹಿಸಿದ ಹರಿದ್ವಾರ ಕನ್ವರಿಯಾಗಳ ಗುಂಪೊಂದು ಆರೆಸ್ಸೆಸ್- ಬಿಜೆಪಿ ಸದಸ್ಯನನ್ನು ಕಾರಿನಿಂದ ಹೊರಗೆಳೆದು ಹಲ್ಲೆ ನಡೆಸಿರುವ ಘಟನೆ ಹರಿದ್ವಾರ ಜಿಲ್ಲೆಯ ಮಂಗ ನಗರದಲ್ಲಿ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿ ಪ್ರತಾಪ್ ಸಿಂಗ್ (63), ತಾನು ಆರೆಸ್ಸೆಸ್-ಬಿಜೆಪಿ ಸದಸ್ಯ ಎಂದು ಅವರು ಹೇಳಿಕೊಂಡಿದ್ದಾರೆ.
ಪ್ರತಾಪ್ ಸಿಂಗ್ ಅವರ ಕಾರು ವಾಹನವು ಆಕಸ್ಮಿಕವಾಗಿ ಯಾತ್ರಿಗಳು ಪವಿತ್ರ ನೀರನ್ನು ಸಾಗಿಸುವ ಕನ್ವರ್ಗೆ ಡಿಕ್ಕಿ ಹೊಡೆದದ್ದೇ ಹಲ್ಲೆಗೆ ಕಾರಣವಾಗಿತ್ತು. ಗಡ್ಡವನ್ನು ಹೊಂದಿದ್ದ ಸಿಂಗ್ ಕಪ್ಪು ಟೋಪಿಯನ್ನು ಧರಿಸಿದ್ದರಿಂದ ಮತ್ತು ಅವರ ಜೊತೆಗೆ ಬುರ್ಕಾ ಧರಿಸಿದ್ದ ಮಹಿಳೆ ಇದ್ದಿದ್ದರಿಂದ ಅವರು ಮುಸ್ಲಿಮ್ ವ್ಯಕ್ತಿಯೆಂದು ಕನ್ವರಿಯಾಗಳು ಭಾವಿಸಿದ್ದರು ಎಂದು ವರದಿಯಾಗಿದೆ.
ಈ ಘಟನೆ ಜು.10ರಂದು ನಡೆದಿದ್ದು, ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಕನ್ವರಿಯಾಗಳು, ಕಾರಿನಲ್ಲಿದ್ದ ಪ್ರತಾಪ್ ಸಿಂಗ್ನನ್ನು ಹೊರಗೆಳೆದಿದ್ದಾರೆ, ನಂತರ ಕಾರನ್ನು ಉರುಳಿಸಿ ದೊಣ್ಣೆಗಳಿಂದ ಅದರ ಮೇಲೆ ದಾಳಿ ನಡೆಸುತ್ತಿರುವುದನ್ನೂ ತೋರಿಸಿದೆ.
ಈ ಬಗ್ಗೆ ಮಾತನಾಡಿರುವ ಪ್ರತಾಪ್ ಸಿಂಗ್, ”ನನ್ನೊಂದಿಗಿದ್ದ ಮಹಿಳೆ ಸ್ಥಳೀಯ ಬಿಜೆಪಿ ಅಲ್ಪಸಂಖ್ಯಾತ ಘಟಕದ ಮಹಿಳೆಯಾಗಿದ್ದು ಆಕೆ ತನ್ನ ಮಗನನ್ನು ಮದರಸಕ್ಕೆ ಬಿಡಲು ನಾನು ಅವರೊಂದಿಗೆ ಹೋಗಿದ್ದೆ. ಮರಳಿ ಬರುವಾಗ ಊಟಕ್ಕೆಂದು ರಸ್ತೆಯ ಬದಿಯಲ್ಲಿ ಕಾರು ನಿಲ್ಲಿಸುವಾಗ ಅಲ್ಲಿ ಏನೂ ಇರಲಿಲ್ಲ ಆದರೆ ನಾನು ಮರಳಿ ಬಂದಾಗ ಕಾರಿನ ಎದುರು ಯಾರೋ ಕಾವಡಿಯನ್ನು ಇರಿಸಿದ್ದರು. ನಾನು ಕಾರನ್ನು ಚಲಾಯಿಸಿದಾಗ ಅದು ಆಕಸ್ಮಿಕಗಾಗಿ ಕಾವಡಿಗೆ ತಾಗಿತ್ತು ನಾನು ಮುಸ್ಲಿಮ್ ಎಂದು ಜರಿದ ಅವರು ನನ್ನ ಮೇಲೆ ಹಲ್ಲೆ ನಡೆಸಿದ್ದರು. ನಾನು ಹಿಂದು ಮತ್ತು ಆರೆಸ್ಸೆಸ್ ಬಿಜೆಪಿ ಸದಸ್ಯ ಎಂದು ಹೇಳಿಕೊಂಡರೂ ಬಿಡಲಿಲ್ಲ. ಪುಣ್ಯಕ್ಕೆ ಮಹಿಳೆಗೆ ಏನೂ ಮಾಡದೆ ಅಲ್ಲಿಂದ ಕಳುಹಿಸಿದ್ದರು” ಎಂದು ಅವರು ತಿಳಿಸಿದ್ದಾರೆ.
ಬಿಜೆಪಿಯ ರಾಜ್ಯ ಮಾಧ್ಯಮ ಉಸ್ತುವಾರಿ ಮನ್ವೀರ್ ಚೌಹಾಣ್ ಮತ್ತು ಪಕ್ಷದ ಹರಿದ್ವಾರ ಜಿಲ್ಲಾಧ್ಯಕ್ಷ ಸಂದೀಪ್ ಗೋಯಲ್ ಅವರು, ”ಕನ್ವರಿಯಾಗಳು ಮತ್ತು ಬಿಜೆಪಿಯ ಯಾವುದೇ ಸದಸ್ಯರ ನಡುವೆ ವಾಗ್ವಾದ ನಡೆದ ಯಾವುದೇ ಘಟನೆಯ ಬಗ್ಗೆ ನಮಗೆ ತಿಳಿದಿಲ್ಲ” ಎಂದು ಹೇಳಿದರು.
ಕೆಲವು ಸುದ್ದಿವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಕನ್ವಾರಿಯಾಗಳು, ”ಮುಸ್ಲಿಂ ದಂಪತಿ” ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿಕೊಂಡ ನಂತರ, ಹರಿದ್ವಾರ ಪೊಲೀಸರು ಘಟನೆಯಲ್ಲಿ ಯಾವುದೇ ಕೋಮು ದೃಷ್ಟಿಕೋನವಿಲ್ಲ ಎಂದು ಹೇಳಿದ್ದಾರೆ.
A group of #Kawariyas were caught on camera overturning a car and thrashing a Muslim man who was behind the wheel, in Uttarakhand's #Haridwar. The man driving the car allegedly bumped his car into a Kawar, a holy pot used to keep water, while reversing the car. pic.twitter.com/uYdnAEp90I
— The Quint (@TheQuint) July 12, 2023
ಈ ಘಟನೆಗೆ ಸಂಬಂಧಿಸಿದಂತೆ ಸಿಂಗ್ ಅವರು ಮಂಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಧ್ಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 147 (ಗಲಭೆ), 148 (ಗಲಭೆ, ಮಾರಕ ಆಯುಧದಿಂದ ಶಸ್ತ್ರಸಜ್ಜಿತ), 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), ಮತ್ತು 427 (ಹಾನಿ ಉಂಟುಮಾಡುವ ಕಿಡಿಗೇಡಿತನ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಮತ್ತೊಂದು ಎಫ್ಐಆರ್ಅನ್ನು ಐಪಿಸಿ ಸೆಕ್ಷನ್ 153 ಎ (ಧರ್ಮ, ಜನಾಂಗ, ಜನ್ಮ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸಾಮರಸ್ಯವನ್ನು ಕಾಪಾಡಲು ಪೂರ್ವಾಗ್ರಹ ಪೀಡಿತ ಕೃತ್ಯಗಳನ್ನು ಮಾಡುವುದು) ನಕಲಿ ಮಾಹಿತಿಯನ್ನು ಹರಡಲು ಪ್ರಯತ್ನಿಸುತ್ತಿರುವವರ ವಿರುದ್ಧ ದಾಖಲಿಸಲಾಗಿದೆ.
ಘಟನೆಯಲ್ಲಿ ಅವರು ಕಾರಿನಲ್ಲಿದ್ದ ತಮ್ಮ ಫೋನ್ ಕಳೆದುಕೊಂಡಿದ್ದಾರೆ. ತಾನು ಆರೆಸ್ಸೆಸ್ ಮತ್ತು ಬಿಜೆಪಿ ಸದಸ್ಯನಾಗಿದ್ದೇನೆ, ಆದರೆ ಘಟನೆಯ ಕುರಿತು ವಿಚಾರಿಸಲು ಆರ್ಸ್ಎಸ್ ಅಥವಾ ಬಿಜೆಪಿಯ ಯಾರೂ ತನ್ನನ್ನು ಸಂಪರ್ಕಿಸಲಿಲ್ಲ ಎಂದು ಸಿಂಗ್ ಬೇಸರ ಹೊರಹಾಕಿದ್ದಾರೆ.
ಇದನ್ನೂ ಓದಿ: ದಲಿತ ಅಪ್ರಾಪ್ತ ಬಾಲಕಿ ಮೇಲೆ ಸವರ್ಣಿಯ ಯುವಕರಿಂದ ಸಾಮೂಹಿಕ ಅತ್ಯಾಚಾರ: ಮೂವರ ಬಂಧನ