Homeಅಂಕಣಗಳುಈ ಐದು ವರ್ಷದಲ್ಲಿ ಇವರೆಲ್ಲಾ ಎಲ್ಲಿದ್ದರು ಅಂತ!

ಈ ಐದು ವರ್ಷದಲ್ಲಿ ಇವರೆಲ್ಲಾ ಎಲ್ಲಿದ್ದರು ಅಂತ!

- Advertisement -
- Advertisement -

ಸದನದಲ್ಲಿ ಕುಮಾರಣ್ಣನ ಕೂಗಾಟ ನೋಡಿದ ಕರ್ನಾಟಕದ ಜನ ಲೊಚಗರಿದು ಈ ಮಟ್ಟಕ್ಕೆ ಇಳಿಯಿತೇ ಕರ್ನಾಟಕದ ಸಂಸ್ಕೃತಿಯ ಪ್ರತೀಕವಾದ ವಿಧಾನಸೌಧದ ವಾಗ್ವಾದ ಎಂದು ಉದ್ಘಾರ ತೆಗೆದಿದ್ದಾರಲ್ಲಾ. ಕುಮಾರಣ್ಣ ಕೆರಳಿರವುದಕ್ಕೆ ಹಲವಾರು ಕಾರಣಗಳಿವೆ. ಮುಖ್ಯವಾಗಿ ಅವರ ಪರಮವೈರಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾದದು. ಎರಡನೆಯದು ತಮ್ಮ ಅಭಿಮಾನಿಗಳಂತಿದ್ದ ನಾಲ್ಕು ಜನ ಹಿಂಬಾಲಕರು ಈಗ ಸಿದ್ದು ಜೊತೆ ಇರುವುದಲ್ಲದೆ, ಅದರಲ್ಲೊಬ್ಬರು ಕೃಷಿಮಂತ್ರಿಯಾಗಿರುವುದು. ಸಾಮಾನ್ಯ ವ್ಯಕ್ತಿಯಾದ ಕುಮಾರಣ್ಣನಿಗೆ ಇಂತಹ ಅನಾಹುತಗಳನ್ನು ಸಹಿಸಲು ಸಾಧ್ಯವೇ? ಹಾಗಾಗಿ ಆ ಕೃಷಿಮಂತ್ರಿಯ ಕ್ಷೇತ್ರಕ್ಕೆ ಹೋಗಿ ಆತ್ಮಹತ್ಯೆಗೆ ಯತ್ನಿಸಿದ ಸಾರಿಗೆ ನೌಕರನ ಸಮಸ್ಯೆಯನ್ನು ಕೈಗೆತ್ತಿಕೊಂಡು ಏನಾದರೂ ಮಾಡಿ ಚಲುವರಾಯಸ್ವಾಮಿ ರಾಜೀನಾಮೆ ಕೊಡಿಸಲು ಯತ್ನಿಸಿದರು. ಆದರೇನು ಇಡೀ ಸದನವೇ ಕುಮಾರಣ್ಣನ ಎದುರು ತಿರುಗಿಬಿದ್ದಾಗ ವಿಧಾನಸಭೆಯ ಗಲಭೆ ಕಲಾಸಿಪಾಳ್ಯದ ಗಲಭೆ ರೂಪ ಪಡೆದುಕೊಂಡಾಗ, ಇನ್ನೂ ಕೆರಳಿದ ಕುಮಾರಣ್ಣ ವಿಧಾನಸೌಧ ನಿಮ್ಮಪ್ಪನದ್ದಲ್ಲ ಎಂದು ಅಬ್ಬರಿಸಿದರಂತಲ್ಲಾ, ಥೂತ್ತೇರಿ.

*****

ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಕುಮಾರಣ್ಣನನ್ನು ನಾವು ಸಾಮಾನ್ಯರೆಂದು ಕರೆದುದಕ್ಕೆ ಸ್ಪಷ್ಟನೆ ಕೊಡಬೇಡವೇ! ಮುಖ್ಯವಾಗಿ ಕುಮಾರಣ್ಣ ದೇವೇಗೌಡರ ನಾಲ್ವರು ಮಕ್ಕಳಲ್ಲೊಬ್ಬರು. ವಿದ್ವತ್ತಿನಲ್ಲಿ ಸಾಮಾನ್ಯ ವ್ಯಕ್ತಿ. ಆಡುವ ಮಾತಿನ ಮತ್ತು ಭಾಷಣ ಬಳಕೆ ವಿಷಯದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯ. ಏಕೆಂದರೆ ಅವರ ಮಾತು ಭಾಷಣ ಇತ್ಯಾದಿಗಳಲ್ಲಿ ಕೇವಲ ನಲವತ್ತೈದು ಪದಗಳೇ ಸುತ್ತುತ್ತವೆ. ಈ ಸಾಮಾನ್ಯತನ ಸಮಸ್ಯೆ ಅಲ್ಲವಾದರೂ, ಅವರ ಸುತ್ತ ಸಾಮಾನ್ಯವಾಗಿರುತ್ತಿದ್ದ ಗೆಳೆಯರು ಇವತ್ತು ಯಾರೂ ಅವರ ಬಳಿ ಇಲ್ಲ. ಎಲ್ಲಾ ಹೊರಟುಹೋಗುತ್ತಿದ್ದಾರೆ. ಇಂತಹ ಹತಾಶೆಯ ಸಮಯದಲ್ಲಿ, ತಮ್ಮ ವೈರಿಗಳೆಂದುಕೊಂಡವರು ಈಗ ಅಧಿಕಾರದ ಕುರ್ಚಿ ಮೇಲೆ ಕುಳಿತುಕೊಂಡಿರುವುದು ಸಹಿಸಲಸಾಧ್ಯ ಸಂಗತಿಯಾಗಿಹೋಗಿದೆ. ಇಂತಹ ಸಮಯದಲ್ಲಿ ಕುಮಾರಣ್ಣ ಕೆರಳಿ ಕೆಂಡವಾಗುವುದರ ಬದಲು ಸನ್ನಿವೇಶ ನಿಭಾಯಿಸುವ ಚಾಣಾಕ್ಷತೆ ತೋರಬೇಕಾಗಿದೆಯಲ್ಲಾ, ಥೂತ್ತೇರಿ.

*****

ಕೆಂಗಲ್ ಹನುಮಂತಯ್ಯನವರ ಕಾಲದಲ್ಲಿ ಕಟ್ಟಿಸಿದ ವಿಧಾನಸೌಧಕ್ಕೆ ಮೆರಗು ಬರಬೇಕಾದರೆ ಅಲ್ಲಿ ಸಾರ್ವಜನಿಕವಾಗಿ ಶಾಸಕರು ಆಡುವ ಎಲ್ಲ ಮಾತನ್ನೂ ಕೇಳುವಂತಿರಬೇಕು ಮತ್ತು ಅದು ತಿಳಿವಳಿಕೆಯಿಂದ ಕೂಡಿರಬೇಕು. ಅಲ್ಲಿ ನಡೆದ ಚರ್ಚೆಯ ಇತಿಹಾಸ ನೋಡಿದರೆ ಮಾನ್ಯ ದೇವೇಗೌಡರು ಅರಸು ಎದುರು ಸಮರ್ಥವಾಗಿ ವಿರೋಧಪಕ್ಷದ ಕೆಲಸ ನಿರ್ವಹಿಸಿದ ದಾಖಲೆ ಸಿಗುತ್ತದೆ. ಅವರೆಂದೂ ಹಗುರ ಭಾಷೆ ಬಳಸಿದವರಲ್ಲ. ಕುಮಾರಣ್ಣ ಹಳೆಯ ದಾಖಲೆಗಳನ್ನ ವಿಧಾನಸೌಧದ ಲೈಬ್ರರಿಯಲ್ಲಿ ಹುಡುಕಿ ಓದಿದರೆ, ಈ ವಿಧಾನಸೌಧ ನಮ್ಮಪ್ಪುಂದೂ ಅಲ್ಲ, ನಿಮ್ಮಪ್ಪುಂದೂ ಅಲ್ಲ ಎಂಬ ಮಾತು ಹೊರಬರಲಾರದಂತಲ್ಲಾ, ಥೂತ್ತೇರಿ.

*****

ವಿಧಾನಸೌಧದ ಒಳಗೆ ಒಂಥರದ ಗಲಭೆ ನಡೆದಿದ್ದರೆ ಹೊರಗಿನ ಗಲಭೆ ತುಂಬ ಅವ್ಯಕ್ತವಾಗಿದೆಯಂತಲ್ಲಾ. ಮುಖ್ಯವಾಗಿ ಹೊಸ ಸರಕಾರ ನೇಮಿಸಲಿರುವ ಅಕಾಡೆಮಿಗಳು, ನಿಗಮ ಮಂಡಲಿಗಳ ಕುರ್ಚಿಯ ಮೇಲೆ ಕೂರುವ ಸಂಚು ನಡೆಸಿರುವ ಜನ, ಅದರಲ್ಲೂ ಸಾಹಿತ್ಯ, ನಾಟಕ, ಪತ್ರಿಕಾ ಅಕಾಡೆಮಿಗಳನ್ನು ಕುರಿತು ಯೋಚಿಸಿರುವ ಜನರಲ್ಲಿ ಇದು ಕಾಣುತ್ತಿದೆಯಂತಲ್ಲ. ಮಂತ್ರಿ ಶಾಸಕರಿಗೆ ಮುತ್ತಿಕೊಂಡಿರುವುದಲ್ಲದೆ ಪ್ರಭಾವಿಗಳು ಮುಖ್ಯಮಂತ್ರಿ ಕಣ್ಣಿಗೆ ಬೀಳಲು ಹರಸಾಹಸ ಪಡುತ್ತಿರುವುದನ್ನು ನೋಡಿದರೆ ಸಾಮಾನ್ಯರಿಗೆ ಕನಿಕರವಾಗುತ್ತಿದೆಯಂತಲ್ಲಾ. ಏಕೆಂದರೆ ಈ ಮೇಧಾವಿಗಳು ಬಿಜೆಪಿ ಸರಕಾರದಲ್ಲಿ ಇದ್ದಾರೊ ಇಲ್ಲವೊ ಎಂಬಂತೆ ಅವಿತುಕೊಂಡಿದ್ದರು. ಬಿಜೆಪಿಗಳು ನೇರವಾಗಿ ಮುಸ್ಲಿಂ ಸಂಸ್ಕೃತಿ ಮೇಲೆ ದಾಳಿ ಮಾಡಿದಾಗ ಪಠ್ಯಪುಸ್ತಕವನ್ನು ತಿದ್ದಿದಾಗ ಮನೆಯೊಳಗಿದ್ದವರು, ಯಾವತ್ತು ಕಾಂಗ್ರೆಸ್ ಅಧಿಕಾರ ಹಿಡಿಯಿತೊ ಆ ಕೂಡಲೇ ವಿಧಾನಸೌಧದ ಕಾರಿಡಾರಿನಲ್ಲಿ ಸುತ್ತುತ್ತಿರುವುದಲ್ಲದೆ ಬಿಜೆಪಿ ಕಾಲದ ಅನಾಹುತಗಳನ್ನು ದನಿ ಎತ್ತರಿಸಿ ಚರ್ಚಿಸುತ್ತಿದ್ದಾರಲ್ಲಾ, ಥೂತ್ತೇರಿ.

*****

ಸರಕಾರ ಈಗ ಮಾಡಬೇಕಾದದ್ದು ಇಷ್ಟೆ. ಈ ಅಕಾಡೆಮಿ ನಿಗಮಮಂಡಲಿಗಳ ನೇಮಕ ನಿಧಾನವಾಗಿ ಆಗಲಿ ಎಂದು ನಿರ್ಧರಿಸುವುದು; ಇವುಗಳಿಗೆ ನೇಮಕ ತಡವಾಗುವುದರಿಂದ ಯಾವ ಅನಾಹುತಗಳೇನೂ ಸಂಭವಿಸುವುದಿಲ್ಲ. ಆ ಸಮಯದಲ್ಲಿ ಕೋಮುವಾದಿ ಸರಕಾರ ಸೃಷ್ಟಿಸಿದ ಸಮಸ್ಯೆಗಳು ಮತ್ತು ದುರಂತಗಳ ವಿರದ್ಧ ಬರೆದವರು, ಪ್ರತಿಭಟಿಸಿದವರು, ಜಾಥ ತೆಗೆದವರು ಇತ್ಯಾದಿ ಜನಗಳ ಇತಿಹಾಸ ತೆಗೆದರೆ ಯೋಗ್ಯರು ಸಿಗಬಹುದು. ಈ ಹಿಂದಿನ ಸಿದ್ದರಾಮಯ್ಯನವರ ಸರಕಾರದಲ್ಲಿ ಸ್ಥಾನಮಾನ ಪಡೆದ ಕಾರಣಕ್ಕಾಗಿಯಾದರು ಕೋಮುವಾದ ಮತ್ತು ದ್ವೇಷದ ವಾತಾವರಣದ ವಿರುದ್ಧ ಹೋರಾಡದೆ, ಹೊಟ್ಟೆತುಂಬ ಕುಡಿದುಕೊಂಡು ಕಾಲಹಾಕಿದವರು ಈಗಲೂ ವಿಧಾನಸೌಧದ ಕಾರಿಡಾರಿನಲ್ಲಿ ಹೊಸವೇಶದೊಂದಿಗೆ ಪ್ರತ್ಯಕ್ಷವಾಗಿವೆಯಲ್ಲಾ, ಥೂತ್ತೇರಿ.


ಇದನ್ನೂ ಓದಿ: ಮೋದಿಗೂ ಅರ್ಜುನನಿಗೂ ಯಾವ ಸಂಬಂಧ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಕುಟುಂಬದ ಮೂವರ ಹತ್ಯೆ ಪ್ರಕರಣ: ಪೊಲೀಸರ ವರ್ಗಾವಣೆ

0
ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯ ಸಂದೀಪನ್ ಘಾಟ್ ಪ್ರದೇಶದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿ ದಲಿತ ಕುಟುಂಬದ ಮೂವರು ಸದಸ್ಯರ ಹತ್ಯೆ ನಡೆದಿದ್ದು, ಇದೀಗ ಸ್ಥಳೀಯ ಪೊಲೀಸ್ ಠಾಣಾಧಿಕಾರಿ ಮತ್ತು ಹೊರಠಾಣೆ ಪ್ರಭಾರ ಅಧಿಕಾರಿಯನ್ನು ವರ್ಗಾಯಿಸಲಾಗಿದೆ. ಸಾಂದೀಪನ್...