ರಾಜ್ಯದ ಜನರಿಗೆ ಖಾಸಗಿ ವಲಯದ ಉದ್ಯೋಗಗಳಲ್ಲಿ 75% ಮೀಸಲಾತಿ ಒದಗಿಸುವ ಕಾನೂನನ್ನು ರದ್ದುಗೊಳಿಸಿ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಆದೇಶ ನೀಡಿದ್ದು, ಇದರ ವಿರುದ್ಧ ಹರ್ಯಾಣ ಸರ್ಕಾರವು ಸುಪ್ರೀಂಕೋರ್ಟ್ ಮೊರೆ ಹೋಗಲು ಮುಂದಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಹರ್ಯಾಣದ ಉಪಮುಖ್ಯಮಂತ್ರಿ ದುಶ್ಯಂತ್ ಚೌಟಾಲಾ, ನಾವು ಹೈಕೋರ್ಟ್ ತೀರ್ಪನ್ನು ಪರಿಶೀಲಿಸುತ್ತೇವೆ ಮತ್ತು ಶೀಘ್ರದಲ್ಲೇ ಸುಪ್ರೀಂಕೋರ್ಟ್ಗೆ ಹೋಗುತ್ತೇವೆ. ಈ ಕಾನೂನು ರಾಜ್ಯ ಮತ್ತು ಉದ್ಯಮದ ಹಿತಾಸಕ್ತಿಯನ್ನು ಕಾಪಾಡುತ್ತದೆ. ಸ್ಥಳೀಯ ಯುವಕರಿಗೆ ಉದ್ಯೋಗ ಹಾಗೂ ಕೈಗಾರಿಕೆಗಳಿಗೆ ಕೌಶಲ್ಯ ಹೊಂದಿದ ಕೆಲಸಗಾರರನ್ನು ಒದಗಿಸಿಕೊಡುವುದು ರಾಜ್ಯ ಸರ್ಕಾರದ ಉದ್ದೇಶವಾಗಿತ್ತು ಎಂದು ಹೇಳಿದ್ದಾರೆ.
2019ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ರಾಜ್ಯದ ಖಾಸಗಿ ವಲಯದ ಉದ್ಯೋಗಗಳಲ್ಲಿ 75 ಪ್ರತಿಶತ ರಾಜ್ಯದ ಜನರಿಗೆ ಮೀಸಲಾತಿ ನೀಡುವುದು ಜನನಾಯಕ ಜನತಾ ಪಾರ್ಟಿ (ಜೆಜೆಪಿ)ಯ ಪ್ರಮುಖ ಚುನಾವಣಾ ಭರವಸೆಯಾಗಿತ್ತು. ಹೈಕೋರ್ಟ್ ಆದೇಶದಿಂದ ದುಶ್ಯಂತ್ ಚೌಟಾಲಾ ಅವರಿಗೆ ಮತ್ತು ಪಕ್ಷಕ್ಕೆ ಹಿನ್ನಡೆಯಾಗಿದೆ.
ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ತನ್ನ 83 ಪುಟಗಳ ತೀರ್ಪಿನಲ್ಲಿ, ಹರಿಯಾಣ ರಾಜ್ಯ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಕಾಯಿದೆ-2020 ಅಸಂವಿಧಾನಿಕ ಎಂದು ಹೇಳಿದೆ ಮತ್ತು ಅದು ನಿಷ್ಪರಿಣಾಮಕಾರಿಯಾಗುತ್ತದೆ ಎಂದು ಹೇಳಿದೆ.
ಕಾಯ್ದೆಯ ಅನುಷ್ಠಾನದ ವಿರುದ್ಧ ಹಲವಾರು ಕೈಗಾರಿಕಾ ಸಂಘಗಳು ಸಲ್ಲಿಸಿದ ಅರ್ಜಿಗಳ ವಿಚಾರಣೆ ಬಳಿಕ ಈ ತೀರ್ಪು ಬಂದಿದೆ.
ಹರ್ಯಾಣದಲ್ಲಿ ಚುನಾವಣೆಯ ನಂತರ ಜೆಜೆಪಿಯು ಭಾರತೀಯ ಜನತಾ ಪಕ್ಷಕ್ಕೆ ಬೆಂಬಲವನ್ನು ನೀಡಿತು. ರಾಜ್ಯದಲ್ಲಿ ಬಿಜೆಪಿ ಸರಳ ಬಹುಮತವನ್ನು ಸಾಧಿಸಲು ವಿಫಲವಾದ ಕಾರಣ ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನು ರಚಿಸಿದೆ.
ಜನವರಿ 15, 2022ರಂದು ಜಾರಿಗೆ ಬಂದ ಕಾನೂನಿನ ಪ್ರಕಾರ, ರಾಜ್ಯದ ಅಭ್ಯರ್ಥಿಗಳಿಗೆ ಖಾಸಗಿ ವಲಯದ ಉದ್ಯೋಗಗಳಲ್ಲಿ 75 ಪ್ರತಿಶತ ಮೀಸಲಾತಿಯನ್ನು ಒದಗಿಸಲಾಗಿದೆ. ಖಾಸಗಿ ವಲಯದ ಕಂಪನಿಗಳು, ಸೊಸೈಟಿಗಳು, ಟ್ರಸ್ಟ್ಗಳು, ಪಾಲುದಾರಿಕೆಯ ಸಂಸ್ಥೆಗಳು ಮತ್ತು 10 ಅಥವಾ ಅದಕ್ಕಿಂತ ಹೆಚ್ಚು ಜನರಿಗೆ ವೇತನ ಅಥವಾ ಇತರ ಸಂಭಾವನೆಯಲ್ಲಿ ಉತ್ಪಾದನೆ, ವ್ಯಾಪಾರ ಮಾಡುವ ಉದ್ಯೋಗದಾತರಿಗೆ ಈ ಕಾಯಿದೆ ಅನ್ವಯಿಸುತ್ತದೆ.
ಇದನ್ನು ಓದಿ: ಉತ್ತರಪ್ರದೇಶ: ಹಲಾಲ್ ಉತ್ಪನ್ನಗಳ ಮಾರಾಟ ನಿಷೇಧ