ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಸಂಪಾದಕೀಯ ಪ್ರಕಟಿಸಿದ್ದ ಮೈಸೂರಿನ ಸ್ಟಾರ್ ಆಫ್ ಮೈಸೂರು ಇಂಗ್ಲಿಷ್ ದಿನಪತ್ರಿಕೆ ವಿರುದ್ಧ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಖಂಡನೆ ವ್ಯಕ್ತಪಡಿಸಿದೆ. ಆ ಪತ್ರಿಕೆಗೆ ಸತತ ಮೂರು ತಿಂಗಳ ಕಾಲ ಯಾವುದೇ ಸರ್ಕಾರಿ ಜಾಹೀರಾತುಗಳನ್ನು ನೀಡಬಾರದು ಎಂದು ಆದೇಶಿಸಿದೆ.
ಮೈಸೂರಿನಲ್ಲಿ ಸಂಜೆ ಪ್ರಸಾರವಾಗುವ ಇಂಗ್ಲಿಶ್ ದಿನಪತ್ರಿಕೆ ಸ್ಟಾರ್ ಆಫ್ ಮೈಸೂರ್ 2020ರ ಎಪ್ರಿಲ್ 6 ರಂದು ದ್ವೇಷಪೂರಿತ ಸಂಪಾದಕೀಯ ಪ್ರಕಟಿಸಿತ್ತು. ದೇಶದಲ್ಲಿ ಒಂದು ಸಮುದಾಯದ ಜನರು ಕೊಳೆತ ಸೇಬಿನಂತೆ ಎಂದು ಬರೆದಿದ್ದಲ್ಲದೆ ಅವುಗಳನ್ನು ಸಿಂಗಾಪುರ್ ದೇಶದ ಹಿಂದಿನ ಮುಖಂಡ ಅಥವಾ ಇಸ್ರೇಲ್ನ ಪ್ರಸಕ್ತ ಸರ್ಕಾರಾದ ಮಾದರಿಯಲ್ಲಿ ಹೊರಗೆ ಎಸೆಯಬೇಕು ಎಂದು ಅಂದಿನ ಸಂಪಾದಕೀಯ ಹೇಳಿತ್ತು. ಆಗ ಕೆ.ಬಿ.ಗಣಪತಿಯವರು ಮುಖ್ಯ ಸಂಪಾದಕರಾಗಿದ್ದರು.
ಅಂದರೆ ಕೊರೊನಾ ಕುರಿತು ಜಾಗೃತಿ ಮೂಡಿಸುವ ನೆಪದಲ್ಲಿ ಮುಸ್ಲಿಂ ಸಮುದಾಯದ ಮೇಲೆ ಕೋಮುದ್ವೇಷ ಮೂಡಿಸುವ ಸಂಪಾದಕೀಯವೊಂದು ಈ ಪತ್ರಿಕೆಯಲ್ಲಿ ಪ್ರಕಟವಾಗಿ ಭಾರೀ ಟೀಕೆಗೆ ಒಳಗಾಗಿತ್ತು.
ಸಂಪಾದಕೀಯದಲ್ಲಿ ಮುಸ್ಲಿಂ ಸಮುದಾಯದ ಹೆಸರನ್ನು ಎಲ್ಲಿಯೂ ನೇರವಾಗಿ ತೆಗೆದುಕೊಳ್ಳದಿದ್ದರೂ, ದೇಶದ 18% ಜನರನ್ನು ಎಂದು ಉಲ್ಲೇಖಿಸಿ ದೂಷಿಸಿದ್ದ ಸಂಪಾದಕೀಯದ ನಿಲುವು ಮುಸ್ಲಿಮರ ವಿರುದ್ಧವಾಗಿದೆ ಎಂದು ಸ್ಪಷ್ಟವಾಗಿದೆ ಎಂದು ಹಲವು ಸಂಘಟನೆಗಳು ಆರೋಪಿಸಿದ್ದವು.
On April 6th, an editorial in an English daily called the Star of Mysore – edited by KB Ganapathy- made a Nazi style, barely camouflaged call for the genocide of Muslims in India. No action whatsoever has been taken. Just another normal day for the Indian media. pic.twitter.com/b1KGFwpJWB
— Yeh Log ! (@yehlog) April 10, 2020
‘ಫೋರಮ್ ಅಗೆನಿಸ್ಟ್ ಫೇಕ್ ನ್ಯೂಸ್’ ಎಂಬ ಮೈಸೂರು ಮೂಲದ ಸಂಘಟನೆ ಈ ಸಂಪಾದಕೀಯ ಮುಸ್ಲಿಮರ ವಿರುದ್ಧ ಇದ್ದು ಇದು ಕೋಮುಗಳ ವಿರುಧ್ದ ದ್ವೇಷಕ್ಕೆ ಪ್ರಚೋದನೆ ನೀಡುತ್ತಿದೆ ಎಂದು ಆರೋಪಿಸಿ ಸಂಪಾದಕರಿಗೆ ಪತ್ರ ಬರೆದಿತ್ತು.
ಆಗ ಸ್ಟಾರ್ ಆಫ್ ಮೈಸೂರು ಪತ್ರಿಕೆ ಕ್ಷಮಾಪಣೆಯನ್ನು ಪ್ರಕಟಿಸಿತ್ತು. ಕೋವಿಡ್-19 ಹೋರಾಟಕ್ಕೆ ಸಂಬಂಧಿಸಿದಂತೆ ಬರೆದ ಈ ಲೇಖನ ಯಾವುದಾದರೂ ಸಮುದಾಯಕ್ಕೆ ನೋವುಂಟು ಮಾಡಿದ್ದರೆ ಕ್ಷಮಿಸುವುಂತೆ ಕೇಳಿಕೊಂಡಿದ್ದು ಸಂಪಾದಕ ಮಂಡಳಿಯಿಂದ ತಪ್ಪಾಗಿರುವುದನ್ನು ಒಪ್ಪಿಕೊಂಡಿತ್ತು. ಆದರೆ 400 ಪದದ ಸಂಪಾದಕೀಯ ಬರೆದು ಕೇವಲ 50 ಪದದ ಕ್ಷಮಾಪಣೆಯನ್ನು ಈ ಪತ್ರಿಕೆ ಪ್ರಕಟಿಸಿದೆ. ಇದರಿಂದ ಉಳಿದ ಮಾಧ್ಯಮಗಳು ಪಾಠ ಕಲಿಯುವಂತಾಗಲಿ ಎಂದು ಹಲವರು ಅಭಿಪ್ರಾಯಪಟ್ಟಿದ್ದರು.
ದ್ವೇಷದ ಮಾತುಗಳ ವಿರುದ್ಧದ ಜನಾಂದೋಲನ ಸಂಘಟನೆಯು ಪತ್ರಿಕೆಯ ವಿರುದ್ಧ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಗೆ ದೂರು ನೀಡಿತ್ತು. ಅದರ ಆಧಾರದಲ್ಲಿ ಪಿಸಿಐ ವಿಚಾರಣಾ ಸಮಿತಿ ನೇಮಿಸಿತ್ತು. ತನಿಖೆಯ ನಂತರ ವಿಚಾರಣಾ ಸಮಿತಿಯು “ಪತ್ರಿಕೆಯು ಸಮಾಜದಲ್ಲಿ ಶಾಂತಿ ಕದಡುವಂತಹ ಅಥವಾ ಸಂವಿಧಾನದ ಉದ್ದೇಶಗಳ ಉಲ್ಲಂಘನೆ ಆಗುವಂತಹ ಯಾವುದೇ ರೀತಿಯ ಪ್ರಚೋದನಾಕಾರಿ ಬರವಣಿಗೆಗಳು ಪ್ರಕಟಗೊಳ್ಳದಿರುವುದನ್ನು ಖಾತ್ರಿಪಡಿಸುವಂತೆ” ಸೂಚಿಸಿದೆ.
ಮುಂದುವರಿದು ಪತ್ರಿಕೋದ್ಯಮವು ಇಂತಹ ವಿಭವಿಸುವ ವಿಚಾರಗಳಲ್ಲಿ ತೊಡಗಿಕೊಳ್ಳಬಾರದು. ಎಲ್ಲಾ ಸಮುದಾಯದವರಲ್ಲಿ ಭ್ರಾತೃತ್ವದ ಸಂದೇಶವನ್ನು ಹರಡಬೇಕೆಂದು, ಭಾರತದ ಒಗ್ಗಟ್ಟಿನಲ್ಲಿ ವೈವಿಧ್ಯತೆಯನ್ನು ಪ್ರದರ್ಶಿಸುವಂತೆಯೂ ಹಾಗೂ ಕೋಮುವಾದವನ್ನು ಉತ್ತೇಜಿಸುವ ಯಾವುದೇ ರೀತಿಯ ಬರವಣಿಗೆಗಳನ್ನು ಪ್ರಕಟಿಸದಂತೆಯೂ ಸೂಚಿಸಿದೆ.
ದ್ವೇಷದ ಮಾತುಗಳ ವಿರುದ್ಧದ ಜನಾಂದೋಲನವು ಪಿಸಿಐ ಆದೇಶವನ್ನು ಸ್ವಾಗತಿಸಿದ್ದು, ಇತರೆ ಮಾಧ್ಯಮಗಳಿಗೂ ಸಹ ಇದೊಂದು ಪಾಠವಾಗಬೇಕೆಂದು ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಚೂಪಾದ ಆಯುಧಗಳನ್ನಿಟ್ಟುಕೊಳ್ಳಿ, ವಿರೋಧಿಗಳ ತಲೆ ಕಡಿಯಿರಿ: ಕೋಮು ಪ್ರಚೋದನಾ ಭಾಷಣ ಮಾಡಿದ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್