ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ, ಬಿಜೆಪಿ ಸಂಸದ ಪಿ.ಸಿ. ಮೋಹನ್ ಅವರ ವಿರುದ್ಧ ಖಾಸಗಿ ದೂರು ದಾಖಲಾಗಿತ್ತು. ದೂರು ದಾಖಲಿಸಿಕೊಂಡಿದ್ದ ನ್ಯಾಯಾಲಯವು ತನಿಖೆ ನಡೆಸುವಂತೆ ಬೆಂಗಳೂರು ದಕ್ಷಿಣ ಡಿಸಿಪಿ ಅವರಿಗೆ ಸೂಚನೆ ನೀಡಿತ್ತು. ಆದರೆ ವಿಚಾರಣೆಯನ್ನು ರದ್ದು ಪಡಿಸುವಂತೆ ಸಂಸದ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಅವರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು ವಿಚಾರಣೆಯನ್ನು ಮುಂದುವರೆಸುವಂತೆ ವಿಶೇಷ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.
ಬೆಂಗಳೂರು ಕೇಂದ್ರ ಕ್ಷೇತ್ರದ ಸಂಸದರಾಗಿರುವ ಪಿ.ಸಿ. ಮೋಹನ್ ಚುನಾವಣಾ ಅಫಿಡವಿಟ್ನಲ್ಲಿ, ಅವರ ಆಸ್ತಿಗಳ ಮಾಹಿತಿಯನ್ನು ಮರೆಮಾಚಿದ್ದಾರೆಂದು ಆರೋಪಿಸಿ ಶ್ರೀರಾಂಪುರದ ಟಿ.ಆರ್. ಆನಂದ್ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
ಇದನ್ನೂ ಓದಿ: ಲಸಿಕೆ ಸಂಭ್ರಮದ ಮಧ್ಯೆ ಕುಸಿಯುತ್ತಿರುವ ಆರ್ಥಿಕತೆ ಬಗ್ಗೆ ಮರೆಯದಿರಿ: ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ
ದೂರಿನಲ್ಲಿ, “ದೇವನಹಳ್ಳಿ ತಾಲ್ಲೂಕಿನ ಲಕ್ಷ್ಮೀಪುರದ ದೇವಸ್ಥಾನ ಟ್ರಸ್ಟ್ಗೆ ಸಂಬಂಧಿಸಿದ 42 ಎಕರೆ 14 ಗುಂಟೆ ಜಾಗವನ್ನು ಪಿ.ಸಿ. ಮೋಹನ್ ಅವರು ತಮ್ಮ ಸಹಭಾಗಿತ್ವದ ಪಿ.ಸಿ. ರಿಯಾಲ್ಟಿ ಕಂಪನಿ ಹೆಸರಿನಲ್ಲಿ ಖರೀದಿಸಿದ್ದಾರೆ. 2013 ರ ಮಾರ್ಚ್ 30 ರಂದೇ 33.66 ಕೋಟಿ ರೂ. ಪಾವತಿಸಲಾಗಿದೆ. ಆದರೆ, 2014 ಮತ್ತು 2019 ರ ಲೋಕಸಭಾ ಚುನಾವಣೆ ನಾಮಪತ್ರದೊಂದಿಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ಈ ವಿಷಯ ಮುಚ್ಚಿಟ್ಟಿದ್ದಾರೆ” ಎಂದು ಆರೋಪಿಸಲಾಗಿತ್ತು.
ದೂರು ದಾಖಲಿಸಿಕೊಂಡಿದ್ದ ವಿಶೇಷ ನ್ಯಾಯಾಲಯ ತನಿಖೆ ನಡೆಸುವಂತೆ ಬೆಂಗಳೂರು ದಕ್ಷಿಣ ಡಿಸಿಪಿ ಅವರಿಗೆ ಸೂಚನೆ ನೀಡಿತ್ತು. ನ್ಯಾಯಾಲಯ ನಡೆಸುತ್ತಿರುವ ಈ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಸಂಸದ ಪಿ.ಸಿ.ಮೋಹನ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಅರ್ಜಿಯನ್ನು ವಜಾ ಮಾಡಿರುವ ಹೈಕೋರ್ಟ್, “ಸದ್ಯದ ದಾಖಲೆಗಳು ಅರ್ಜಿದಾರರ ವಿರುದ್ಧ ಕಾನೂನು ಕ್ರಮ ಮುಂದುವರಿಸಲು ಸಾಕಾಗುತ್ತವೆ” ಎಂದು ಹೇಳಿದ್ದು, ವಿಚಾರಣೆ ಮುಂದುವರೆಸಲು ಆದೇಶಿಸಿದೆ.
ಇದನ್ನೂ ಓದಿ: ಮಾಲೆಂಗಾವ್ ಸ್ಪೋಟ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ಪಡೆದ ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್