ನಾಳೆ ನಡೆಯಲಿರುವ ಗ್ರಾಮ ಪಂಚಾಯತ್ ಚುನಾವಣೆಯ ಎಣಿಕೆಯನ್ನು ವಿಳಂಬಗೊಳಿಸುವಂತೆ ಸುಪ್ರೀಂಕೋರ್ಟ್ ಶನಿವಾರ ಉತ್ತರ ಪ್ರದೇಶದ ರಾಜ್ಯ ಚುನಾವಣಾ ಆಯೋಗವನ್ನು ಕೇಳಿದೆ. ರಾಜ್ಯದಲ್ಲಿ ಕೊರೊನಾ ಹೆಚ್ಚಳವನ್ನು ಉಲ್ಲೇಖಿಸಿರುವ ನ್ಯಾಯಾಲಯವು, “ಈ ಪರಿಸ್ಥಿತಿಯ ಹೊರತಾಗಿಯೂ, ನೀವು ಎಣಿಕೆ ನಡೆಸಬೇಕೆ? ಎರಡು ವಾರಗಳ ನಂತರ ವೈದ್ಯಕೀಯ ಸೌಲಭ್ಯಗಳನ್ನು ಸುಧಾರಿಸಿ ಅದನ್ನು ನಡೆಸಬಹುದಲ್ಲವೆ?” ಎಂದು ಚುನಾವಣಾ ಆಯೋಗವನ್ನು ಕೇಳಿದೆ.
“ಈ ವಿಷಮ ಪರಿಸ್ಥಿತಿಯ ಹೊರತಾಗಿಯೂ ನೀವು ಮುಂದುವರಿಯಲು ಬಯಸುವಿರಾ? ಎಣಿಕೆಯನ್ನು ಮೂರು ವಾರಗಳವರೆಗೆ ಮುಂದೂಡಿದರೆ ಸ್ವರ್ಗವೇನು ಬೀಳುವುದಿಲ್ಲ” ಎಂದು ನ್ಯಾಯಾಲಯವು ತೀಕ್ಷ್ಣವಾಗಿ ತಿಳಿಸಿದೆ.
ಇದನ್ನೂ ಓದಿ: ಕರ್ನಾಟಕ ನಗರ ಸ್ಥಳೀಯ ಸಂಸ್ಥೆಗಳ ಫಲಿತಾಂಶ: ಕಾಂಗ್ರೆಸ್ಗೆ ಭರ್ಜರಿ ಜಯ – ಬಿಜೆಪಿಗೆ ಮುಖಭಂಗ
ಆದಾಗ್ಯೂ, ಯುಪಿ ಚುನಾವಣಾ ಆಯೋಗವು “ನಾವು ಚುನಾವಣಾ ಎಣಿಕೆಯನ್ನು ನಡೆಸಲು ನಿರ್ಧಾರ ತೆಗೆದುಕೊಂಡಿದ್ದೇವೆ” ಎಂದು ತಿಳಿಸಿದೆ.
“ತಾವು ಕೆಲಸ ಮಾಡಲು ಸಿದ್ದರಿಲ್ಲ ಎಂದು ಶಿಕ್ಷಕರ ಸಂಘವು ಅರ್ಜಿಯನ್ನು ಸಲ್ಲಿಸಿದೆ. ಮತದಾನದ ಸಮಯದಲ್ಲಿ ಹೆಚ್ಚಿನ ಸಂಖ್ಯೆ ಶಿಕ್ಷಕರು ಸಾವನ್ನಪ್ಪಿದ್ದಾರೆ. ಈ ಪರಿಸ್ಥಿತಿಯನ್ನು ನೀವು ಹೇಗೆ ನಿಭಾಯಿಸುತ್ತೀರಿ?. ” ಎಂದು ನ್ಯಾಯಾಲಯವು ಆಯೋಗವನ್ನು ಪ್ರಶ್ನಿಸಿದೆ.
ನ್ಯಾಯಾಲಯದ ವಿಚಾರಣೆಯ ಆರಂಭದಲ್ಲಿ, ಎಣಿಕೆ ಪ್ರಕ್ರಿಯೆಗೆ ಕೊರೊನಾ ಮಾರ್ಗಸೂಚಿಯನ್ನು ಅನುಸರಿಸುವುದಾಗಿ ರಾಜ್ಯ ಚುನಾವಣಾ ಆಯೋಗವು ಸುಪ್ರೀಂಕೋರ್ಟ್ಗೆ ಭರವಸೆ ನೀಡಿತ್ತು.
ಇದನ್ನೂ ಓದಿ: ‘ಬಡವರ ಕಷ್ಟಗಳನ್ನು ಲೆಕ್ಕಿಸದೆ ಲಾಕ್ಡೌನ್’: ಬೀದಿ ವ್ಯಾಪಾರಿಗಳ ಸಂಘದಿಂದ ಸರ್ಕಾರಕ್ಕೆ ಪತ್ರ
“ಮತ ಎಣಿಕೆ ಕೇಂದ್ರಗಳ ಪ್ರವೇಶದ್ವಾರದಲ್ಲಿ ಆಕ್ಸಿಮೀಟರ್ ಪರೀಕ್ಷೆಗಳನ್ನು ಮಾಡಲಾಗುವುದು. ಎಣಿಕೆ ಕೇಂದ್ರ ಮತ್ತು ಹೊರಗಡೆ ಯಾವುದೇ ಜನಸಂದಣಿಯನ್ನು ಅನುಮತಿಸಲಾಗುವುದಿಲ್ಲ. ಪ್ರತಿ ಪಾಳಿಯ ನಂತರ ಕೇಂದ್ರಗಳನ್ನು ಸ್ವಚ್ಛಗೊಳಿಸಲಾಗುವುದು. ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಲಾಗುವುದು ಮತ್ತು ಉಷ್ಣ ತಪಾಸಣೆ ಮಾಡಲಾಗುವುದು” ಎಂದು ಆಯೋಗವು ತಿಳಿಸಿದೆ.
ವಿಜಯೋತ್ಸವ ಮೆರವಣಿಗೆಗಳನ್ನು ನಿಷೇಧಿಸಲಾಗಿದೆ ಎಂದು ಕೂಡಾ ಚುನಾವಣಾ ಆಯೋಗ ನ್ಯಾಯಾಲಯಕ್ಕೆ ಹೇಳಿದೆ.
ಉತ್ತರಪ್ರದೇಶದಲ್ಲಿ ನಾಲ್ಕು ಹಂತದ ಪಂಚಾಯತ್ ಚುನಾವಣೆಯು ಗುರುವಾರವಷ್ಟೇ ಕೊನೆಗೊಂಡಿತ್ತು.
ಇದನ್ನೂ ಓದಿ: ಅಕ್ಕಿ ಕೊಡಿ ಎಂದ ರೈತನಿಗೆ ‘ಸತ್ತೊಗು’ ಎಂದ ಆಹಾರ ಸಚಿವ ಉಮೇಶ್ ಕತ್ತಿ