ಕೇಂದ್ರ ಸರಕಾರ ನಿನ್ನೆ ಅಧಿಸೂಚನೆಯ ಮೂಲಕ ‘ಅಸಂವಿಧಾನಿಕ’ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿದೆ. ಸಂಸತ್ತಿನಲ್ಲಿ ಸಿಎಎ ಬಿಲ್ ಪರವಾಗಿ ಎಐಎಡಿಎಂಕೆ ಸಂಸದರು ಮತವನ್ನು ಚಲಾಯಿಸಿದ್ದರು. ಆದರೆ ಇದೀಗ ಬಿಲ್ ಕುರಿತು ಅಧಿಸೂಚನೆ ಹೊರ ಬರುತ್ತಿದ್ದಂತೆ ಎಐಎಡಿಎಂಕೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿದೆ.
2019ರಲ್ಲಿ ಸಂಸತ್ತಿನಲ್ಲಿ ಸಿಎಎ ಮಸೂದೆಯನ್ನು ಮಂಡಿಸಿದ ವೇಳೆ ಎಐಎಡಿಎಂಕೆಯನ್ನು ಪ್ರತಿನಿಧಿಸುವ ಎಲ್ಲಾ 12 ಸಂಸತ್ ಸದಸ್ಯರು ಮಸೂದೆಯ ಪರವಾಗಿ ಮತ ಚಲಾಯಿಸಿದ್ದರು. ಈ ಬಗ್ಗೆ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷವು, ಎಐಎಡಿಎಂಕೆ ವಿರುದ್ಧ ಬಾರೀ ಟೀಕೆಯನ್ನು ಮಾಡಿತ್ತು. ನೂತನವಾಗಿ ಸ್ಟ್ಯಾಲಿನ್ ನೇತೃತ್ವದ ಡಿಎಂಕೆ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸಿಎಎ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯವನ್ನು ಕೂಡ ಅಂಗೀಕರಿಸಿತ್ತು.
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಸಿಎಎ ನಿಯಮಗಳ ಕುರಿತ ಅಧಿಸೂಚನೆಯನ್ನು ಕಟುವಾಗಿ ಟೀಕಿಸಿದ್ದು, ಕೇಂದ್ರ ಸರ್ಕಾರವು ಸಿಎಎ ಅನುಷ್ಠಾನದ ಮೂಲಕ ಐತಿಹಾಸಿಕ ಪ್ರಮಾದವನ್ನು ಮಾಡಿದೆ. ರಾಜಕೀಯ ಲಾಭಕ್ಕಾಗಿ ಕೇಂದ್ರದ ಆಡಳಿತಾರೂಢ ಬಿಜೆಪಿಯು ಸಿಎಎಯನ್ನು ಜಾರಿಗೊಳಿಸಿದೆ ಎಂದು ಆರೋಪಿಸಿದ್ದಾರೆ.
ಕಳೆದ ಐದು ವರ್ಷಗಳಿಂದ ಜಾರಿಯಾಗದೆ ನೆನೆಗುದಿಗೆ ಬಿದ್ದಿದ್ದ ಮಸೂದೆಯನ್ನು ಲೋಕಸಭೆ ಚುನಾವಣೆ ವೇಳೆ ಜನರನ್ನು ಒಡೆದು ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಜಾರಿಗೆ ತರಲಾಗಿದೆ, ಈ ಕ್ರಮವನ್ನು ಎಐಎಡಿಎಂಕೆ ತೀವ್ರವಾಗಿ ಖಂಡಿಸುತ್ತದೆ ಎಂದು ಎಡಪ್ಪಾಡಿ ಕೆ ಪಳನಿಸ್ವಾಮಿ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಈ ಮೂಲಕ ಐತಿಹಾಸಿಕ ಪ್ರಮಾದವನ್ನು ಎಸಗಿದೆ, ಎಐಎಡಿಎಂಕೆ ಸ್ಥಳೀಯ ಮುಸ್ಲಿಮರು ಮತ್ತು ಶ್ರೀಲಂಕಾ ತಮಿಳರ ವಿರುದ್ಧ ಇದನ್ನು ಜಾರಿಗೊಳಿಸುವ ಯಾವುದೇ ಪ್ರಯತ್ನವನ್ನು ಎಂದಿಗೂ ಅನುಮತಿಸುವುದಿಲ್ಲ. ಎಐಎಡಿಎಂಕೆ ಇದನ್ನು ಪ್ರಜಾಸತ್ತಾತ್ಮಕವಾಗಿ ವಿರೋಧಿಸಲು ದೇಶದ ಜನರೊಂದಿಗೆ ಸೇರಿಕೊಳ್ಳುತ್ತದೆ ಎಂದು ಎಡಪ್ಪಾಡಿ ಕೆ ಪಳನಿಸ್ವಾಮಿ ಹೇಳಿದ್ದಾರೆ.
ನೂತನ ಪೌರತ್ವ (ತಿದ್ದುಪಡಿ) ಕಾಯಿದೆ- 2019 ಭಾರತಕ್ಕೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಡಿಸೆಂಬರ್ 31, 2014ರ ಮೊದಲು ವಲಸೆ ಬಂದ ಮುಸ್ಲಿಮರನ್ನು ಹೊರತು ಪಡಿಸಿ ಹಿಂದೂಗಳು, ಸಿಖ್ಗಳು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಭಾರತೀಯ ಪೌರತ್ವವನ್ನು ನೀಡು ಗುರಿಯನ್ನು ಹೊಂದಿದೆ.
ಗೃಹ ವ್ಯವಹಾರಗಳ ಸಚಿವಾಲಯ (MHA) ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಕಿರುಕುಳಕ್ಕೊಳಗಾದ ವ್ಯಕ್ತಿಗಳಿಗಾಗಿ ವೆಬ್ ಪೋರ್ಟಲ್ (https://indiancitizenshiponline.nic.in) ನ್ನು ಪ್ರಾರಂಭಿಸಿದೆ. ಪೋರ್ಟಲ್ ಮೂಲಕ ನಿರ್ದಿಷ್ಟವಾಗಿ ಆರು ಅಲ್ಪಸಂಖ್ಯಾತ ಸಮುದಾಯಗಳು -ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಪೌರತ್ವಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಇದನ್ನು ಓದಿ: ಮುಸ್ಲಿಮರು, ತಮಿಳರಿಗೆ ದ್ರೋಹ ಮಾಡಿ ವಿಭಜನೆಯ ಬೀಜ ಬಿತ್ತಿದ ಬಿಜೆಪಿ : ಸಿಎಎ ಜಾರಿ ಬಗ್ಗೆ ತಮಿಳುನಾಡು ಸಿಎಂ ಆಕ್ರೋಶ