ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆಯ ವಿವಿಧ ನಿಬಂಧನೆಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಕೇಂದ್ರ ಗೃಹ ಸಚಿವಾಲಯವು ಎಫ್ಸಿಆರ್ಎ ಅಡಿಯಲ್ಲಿ ಕನಿಷ್ಠ ಐದು ಸರ್ಕಾರೇತರ ಸಂಸ್ಥೆಗಳ (ಎನ್ಜಿಒಗಳ) ನೋಂದಣಿಯನ್ನು ರದ್ದುಗೊಳಿಸಿದೆ.
ಎಫ್ಸಿಆರ್ಎ ನೋಂದಣಿಯನ್ನು ರದ್ದುಗೊಳಿಸುತ್ತಿರುವ ಕಾರಣ ಈ ಎನ್ಜಿಒಗಳು ಇನ್ನು ಮುಂದೆ ವಿದೇಶಿ ದೇಣಿಗೆಗಳನ್ನು ಸ್ವೀಕರಿಸಲು ಅಥವಾ ಅಸ್ತಿತ್ವದಲ್ಲಿರುವ ಲಭ್ಯವಿರುವ ಹಣವನ್ನು ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ನೋಂದಣಿ ರದ್ದುಗೊಂಡ ಐದು ಎನ್ಜಿಒಗಳು: ವಾಲಂಟರಿ ಹೆಲ್ತ್ ಅಸೋಸಿಯೇಷನ್ ಆಫ್ ಇಂಡಿಯಾ, ಸಿಎನ್ಐ ಸಿನೊಡಿಕಲ್ ಬೋರ್ಡ್ ಆಫ್ ಸೋಶಿಯಲ್ ಸರ್ವಿಸಸ್, ಇಂಡೋ-ಗ್ಲೋಬಲ್ ಸೋಶಿಯಲ್ ಸರ್ವಿಸ್ ಸೊಸೈಟಿ, ಚರ್ಚ್ಸ್ ಆಕ್ಸಿಲಿಯರಿ ಫಾರ್ ಸೋಶಿಯಲ್ ಆಕ್ಷನ್, ಮತ್ತು ಇವಾಂಜೆಲಿಕಲ್ ಫೆಲೋಶಿಪ್ ಆಫ್ ಇಂಡಿಯಾ
ಕೇಂದ್ರ ಸರಕಾರ ಐದು ಎನ್ಜಿಒಗಳನ್ನು ರದ್ದು ಮಾಡಿದೆ, ಆದರೆ ಯಾವುದೇ NGOಗಳು ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆಯನ್ನು ಮಾಡಿಲ್ಲ. ಮೂಲಗಳ ಪ್ರಕಾರ, ಎನ್ಜಿಒಗಳು ಎಫ್ಸಿಆರ್ಎಯ ನಿಬಂಧನೆಗಳಿಗೆ ವಿರುದ್ಧವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಕಾನೂನುಗಳನ್ನು ಉಲ್ಲಂಘಿಸಿವೆ ಎಂದು ಆರೋಪಿಸಲಾಗಿದೆ.
ವಾಲಂಟರಿ ಹೆಲ್ತ್ ಅಸೋಸಿಯೇಷನ್ ಆಫ್ ಇಂಡಿಯಾ (VHAI) 1970ರಲ್ಲಿ ಸ್ಥಾಪಿತವಾಗಿದೆ. ದೇಶಾದ್ಯಂತ 4,500ಕ್ಕೂ ಹೆಚ್ಚು ಆರೋಗ್ಯ ಮತ್ತು ಅಭಿವೃದ್ಧಿ ಸಂಸ್ಥೆಗಳನ್ನು ಈ ಎನ್ಜಿಒ ಹೊಂದಿದೆ ಎಂದು ವರದಿ ಉಲ್ಲೇಖಿಸಿದೆ.
‘ಸಿನೊಡಿಕಲ್ ಬೋರ್ಡ್ ಆಫ್ ಸೋಶಿಯಲ್ ಸರ್ವೀಸಸ್’ ‘ಚರ್ಚ್ ಆಫ್ ನಾರ್ತ್ ಇಂಡಿಯಾ’ದ (CNI) ಅಭಿವೃದ್ಧಿ ಮತ್ತು ನ್ಯಾಯ ಮಂಡಳಿಯಾಗಿದೆ. ಇದು ಬಡವರಿಗೆ ಸಹಾಯ ಮಾಡಲು ಮತ್ತು ತುಳಿತಕ್ಕೊಳಗಾದವರನ್ನು ವಿಮೋಚನೆಗೊಳಿಸಲು ಚರ್ಚ್ನ ಭಾಗವಾಗಿ ಆರಂಭಗೊಂಡಿತ್ತು. ದಲಿತರು, ಆದಿವಾಸಿಗಳು ಮತ್ತು ಮಹಿಳೆಯರ ಕಲ್ಯಾಣಕ್ಕೆ ಇದು ಕೆಲಸ ಮಾಡುತ್ತಿತ್ತು ಎನ್ನಲಾಗಿದೆ.
ಒಟ್ಟಾರೆಯಾಗಿ, 2012ರಿಂದ 20,721 ಎಫ್ಸಿಆರ್ಎ ನೋಂದಣಿಯನ್ನು ರದ್ದುಗೊಳಿಸಲಾಗಿದೆ. 2012ರಲ್ಲಿ 3,924 ಎಫ್ಸಿಆರ್ಎ ರದ್ದುಗೊಂಡಿದೆ, 2013ರಲ್ಲಿ 4, 2014ರಲ್ಲಿ 59, 2015ರಲ್ಲಿ 10,002, 2016ರಲ್ಲಿ 6, 2017ರಲ್ಲಿ 4,863, 2018ರಲ್ಲಿ ಒಂದು, 2019ರಲ್ಲಿ 1,839, 2021ರಲ್ಲಿ 3, 2022ರಲ್ಲಿ 15, 2023ರಲ್ಲಿ 4 ಎನ್ಜಿಒಗಳ ನೋಂದಣಿ ರದ್ದುಗೊಳಿಸಲಾಗಿದೆ ಎಂದು ಗೃಹ ಸಚಿವಾಲಯದ ಅಂಕಿ-ಅಂಶಗಳು ತಿಳಿಸಿದೆ.
ಫೆಬ್ರವರಿ 1ರವರೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ, ತಮಿಳುನಾಡಿನಲ್ಲಿ 2012ರಿಂದ 2,580 ಎಫ್ಸಿಆರ್ಎ ನೋಂದಣಿಗಳು ರದ್ದುಗೊಂಡಿದ್ದು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ತಲಾ 2,025, ಉತ್ತರ ಪ್ರದೇಶದಲ್ಲಿ 1,820 ಮತ್ತು ಪಶ್ಚಿಮ ಬಂಗಾಳ 1,717ರಷ್ಟಿದೆ.
ಕಳೆದ ವರ್ಷ ಸಂಸತ್ತಿನಲ್ಲಿ ಬಹಿರಂಗಪಡಿಸಿದ ಮಾಹಿತಿಯ ಪ್ರಕಾರ, 2019-2020 ಮತ್ತು 2021-2022 ಹಣಕಾಸು ವರ್ಷಗಳ ನಡುವೆ 13,520 ಎಫ್ಸಿಆರ್ಎ-ನೋಂದಾಯಿತ ಎನ್ಜಿಒಗಳು ವಿದೇಶಿ ದೇಣಿಗೆ ಮೂಲಕ 55,741.51 ಕೋಟಿ ರೂಪಾಯಿಗಳನ್ನು ಸ್ವೀಕರಿಸಿದೆ.
ಇದನ್ನು ಓದಿ: ಮಾಲೆಗಾಂವ್ ಸ್ಫೋಟ ಪ್ರಕರಣ: ನಿರಂತರವಾಗಿ ಕೋರ್ಟ್ಗೆ ಗೈರು ಹಾಜರಾಗುತ್ತಿರುವ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್