ತೆಲಂಗಾಣದ ಉಚ್ಛಾಟಿತ ಬಿಜೆಪಿ ಶಾಸಕ ರಾಜಾ ಸಿಂಗ್ ನೇತೃತ್ವದ ರಾಮನವಮಿ ರ್ಯಾಲಿಯಲ್ಲಿ ಮಹಾತ್ಮ ಗಾಂಧಿಯವರನ್ನು ಕೊಂದ ನಾಥೂರಾಂ ಗೋಡ್ಸೆಯ ಚಿತ್ರ ಇದ್ದುದ್ದು ಹೊಸ ವಿವಾದಕ್ಕೆ ಕಾರಣವಾಗಿದೆ.
ರಾಜಾ ಸಿಂಗ್ ಅವರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರವಾದ ಗೋಶಾಮಹಲ್ನ ಸೀತಾರಾಂಬಾಗ್ನ ದೇವಸ್ಥಾನದಿಂದ ಆರಂಭವಾದ ಶೋಭಾ ಯಾತ್ರೆಯಲ್ಲಿ ನೂರಾರು ಜನರು ಭಾಗವಹಿಸಿದ್ದರು. ಯಾತ್ರೆ ಭಾಗವಾಗಿ ಹಾಡಿಗೆ ನೃತ್ಯ ಮಾಡುವಾಗ ಮತ್ತು ಕೇಸರಿ ಧ್ವಜಗಳನ್ನು ಬೀಸುವಾಗ ಗೋಡ್ಸೆಯ ಚಿತ್ರವನ್ನು ಹೊತ್ತುಕೊಂಡಿರುವುದು ಕಂಡುಬಂದಿದೆ.
ಕಳೆದ ವರ್ಷ ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಪ್ರಸ್ತುತ ಅಮಾನತುಗೊಂಡಿರುವ ಬಿಜೆಪಿ ಶಾಸಕ ರಾಜಾ ಸಿಂಗ್ ಗೋಡ್ಸೆ ಫೋಟೊ ತಂದಿದ್ದನ್ನು ಸಮರ್ಥಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋ ಬಿಡುಗಡೆ ಮಾಡಿ ಮಾತನಾಡಿರುವ ಅವರು, ಶೋಭಾ ಯಾತ್ರೆಯಲ್ಲಿ ಭಾಗವಹಿಸಿದ್ದವರು ಸ್ವಾತಂತ್ರ್ಯ ಹೋರಾಟಗಾರರಾದ ಛತ್ರಪತಿ ಶಿವಾಜಿ, ಮಹಾರಾಣಾ ಪ್ರತಾಪ್, ದಾಮೋದರ್ ಸಾರ್ವರ್ಕರ್ ಮತ್ತು ಇತರ ರಾಷ್ಟ್ರೀಯ ನಾಯಕರ ಛಾಯಾಚಿತ್ರಗಳನ್ನು ತಂದಿದ್ದರು. ಕೆಲವರು ನಾಥೂರಾಂ ಗೋಡ್ಸೆಯ ಫೋಟೋವನ್ನು ತಂದಿರಬಹುದು. ಇದು ಅವರು ನಂಬಿದ ಸಿದ್ಧಾಂತವನ್ನು ಅವಲಂಬಿಸಿರುತ್ತದೆ” ಎಂದಿದ್ದಾರೆ.
ಕಳೆದ ವರ್ಷ ಆಗಸ್ಟ್ನಲ್ಲಿ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ರಾಜಾ ಸಿಂಗ್ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದರು. ಪೊಲೀಸ್ ಕಮಿಷನರ್ ಪ್ರಿವೆಂಟಿವ್ ಡಿಟೆನ್ಶನ್ (ಪಿಡಿ) ಕಾಯ್ದೆಯನ್ನು ಜಾರಿಗೊಳಿಸಿದ ನಂತರ ಅವರನ್ನು ಆಗಸ್ಟ್ 25 ರಂದು ಜೈಲಿಗೆ ಕಳುಹಿಸಲಾಯಿತು. ಬಿಜೆಪಿ ಕೂಡ ಅವರನ್ನು ಪಕ್ಷದಿಂದ ಅಮಾನತುಗೊಳಿಸಿತ್ತು. ಪಿಡಿ ಆಕ್ಟ್ ಅಡಿಯಲ್ಲಿ ಬಂಧನಕ್ಕೊಳಗಾಗಿ ಎರಡು ತಿಂಗಳು ಜೈಲಿನಲ್ಲಿ ಕಳೆದ ನಂತರ ರಾಜಾ ಸಿಂಗ್ ಕಳೆದ ವರ್ಷ ನವೆಂಬರ್ 9 ರಂದು ಜೈಲಿನಿಂದ ಬಿಡುಗಡೆಯಾಗಿದ್ದರು.
ತೆಲಂಗಾಣ ಹೈಕೋರ್ಟ್ ಪೊಲೀಸ್ ಆಯುಕ್ತರ ಆದೇಶವನ್ನು ತಳ್ಳಿಹಾಕಿ ಶಾಸಕರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು, ಆದರೆ ಸಮುದಾಯಗಳ ನಡುವೆ ದ್ವೇಷವನ್ನುಂಟುಮಾಡುವ ಯಾವುದೇ ಭಾಷಣ ಮಾಡದಂತೆ ಸೂಚಿಸಿದೆ.
ಇದನ್ನೂ ಓದಿ: ಸಂಬಂಧ ಬಹಿರಂಗಪಡಿಸದಿರಲು ನೀಲಿಚಿತ್ರ ನಟಿಗೆ ಹಣ ಪಾವತಿ ಪ್ರಕರಣ: ಡೊನಾಲ್ಡ್ ಟಂಪ್ಗೆ ಬಂಧನ ಭೀತಿ