ಹಲಾಲ್ ಮಾಂಸವನ್ನು ಮಾತ್ರ ಸೇವಿಸುವ ಮುಸ್ಲಿಮರನ್ನು ನಾನು ಮೆಚ್ಚುತ್ತೇನೆ. ಹಿಂದೂಗಳು ಸಹ ತಮ್ಮದೇ ಆದ ಧಾರ್ಮಿಕ ಸಂಪ್ರದಾಯಗಳಿಗೆ ಇದೇ ರೀತಿಯ ಬದ್ಧತೆ ಪ್ರದರ್ಶಿಸಬೇಕು ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.
ತಮ್ಮ ಸ್ವಕ್ಷೇತ್ರ ಬೇಗುಸರಾಯ್ ಲೋಕಸಭಾ ಕ್ಷೇತ್ರದಲ್ಲಿ ಈ ಕುರಿತು ಮಾತನಾಡಿದ ಸಚಿವರು, ‘ಹಿಂದೂಗಳು ಹಲಾಲ್ ಮಾಂಸವನ್ನು ತಿನ್ನುವುದನ್ನು ಬಿಟ್ಟುಬಿಡಿ. ಕತ್ತಿಯಿಂದ ಒಂದೇ ಏಟಿಗೆ ಬಲಿಯಾದ ಪ್ರಾಣಿಗಳ ಮಾಂಸವನ್ನು, ಅಂದರೆ ‘ಜಟ್ಕಾ ಕಟ್’ ಮಾತ್ರ ಸೇವಿಸಬೇಕು ಎಂದು ಹೇಳಿದ ಅವರು, ‘ಹಲಾಲ್ ಮಾಂಸವನ್ನು ತಿನ್ನುವ ಮೂಲಕ ತಮ್ಮ ‘ಧರ್ಮ’ಕ್ಕೆ ಅಪಚಾರ ಮಾಡುವುದಿಲ್ಲ’ ಎಂದು ಅಲ್ಲಿ ನೆರೆದಿದ್ದ ತಮ್ಮ ಬೆಂಬಲಿಗರಿಗೆ ಪ್ರತಿಜ್ಞೆ ಮಾಡುವಂತೆ ಸೂಚಿಸಿದರು.
ಹಿಂದೂಗಳು ಜಟ್ಕಾ ಕಟ್ ಮೂಲಕ ಪ್ರಾಣಿ ವಧೆ ಮಾಡುತ್ತಾರೆ. ಅಂದರೆ, ಅವರು ಒಂದೇ ಹೊಡೆತದಲ್ಲಿ ಪ್ರಾಣಿಬಲಿ ಮಾಡುತ್ತಾರೆ. ಹಾಗಾಗಿ, ಅವರೆಲ್ಲಾ ಹಲಾಲ್ ಮಾಂಸ ತಿನ್ನುವ ಮೂಲಕ ತಮ್ಮನ್ನು ತಾವು ಧಾರ್ಮಿಕ ಭ್ರಷ್ಟಗೊಳಿಸಬಾರದು. ಹಿಂದೂಗಳೆಲ್ಲಾ ಸದಾ ಜಟ್ಕಾ ಕಟ್ ಮಾಂಸ ಸೇವನೆಗೆ ಮಾತ್ರ ಅಂಟಿಕೊಳ್ಳಬೇಕು ಎಂದರು.
ಜಟ್ಕಾ ಮಾಂಸ ಮಾತ್ರ ಮಾರಾಟ ಮಾಡುವ ಅಂಗಡಿಗಳ ಸ್ಥಾಪನೆಯ ಹೊಸ ವ್ಯವಹಾರ ಮಾದರಿಯ ಕುರಿತ ಅಗತ್ಯವನ್ನು ಕೇಂದ್ರ ಸಚಿವರು ತಮ್ಮ ಬೆಂಬಲಿಗರಿಗೆ ಒತ್ತಿ ಹೇಳಿದರು.
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ‘ಹಲಾಲ್’ ಪ್ರಮಾಣೀಕೃತ ಆಹಾರ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿದಂತೆ, ಬಿಹಾರದಲ್ಲೂ ಇದೇ ಮಾದರಿಯ ಕ್ರಮ ತಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಗಿರಿರಾಜ್ ಸಿಂಗ್ ಪತ್ರ ಬರೆದಿದ್ದರು.
ಕಳೆದ ತಿಂಗಳು ಉತ್ತರ ಪ್ರದೇಶ ಸರ್ಕಾರವು ‘ಹಲಾಲ್ ಪ್ರಮಾಣಪತ್ರ’ ಅಕ್ರಮ ವಿತರಣೆಯ ವಿರುದ್ಧ ನಿರ್ಣಾಯಕ ನಿರ್ಧಾರ ತೆಗೆದುಕೊಂಡಿತು. ಹಲಾಲ್ ಪ್ರಮಾಣೀಕರಣದ ಆಹಾರ ಉತ್ಪನ್ನಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಮಾರಾಟವನ್ನು ನಿಷೇಧಿಸುವ ಆದೇಶವನ್ನು ಹೊರಡಿಸಿತು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಯುಪಿ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಆಹಾರ ಪ್ರಮಾಣೀಕರಣವನ್ನು ಸರ್ಕಾರಿ ಸಂಸ್ಥೆಗಳು ಮಾತ್ರ ಮಾಡಬೇಕೇ ಹೊರತು ಸರ್ಕಾರೇತರ ಸಂಸ್ಥೆಗಳಿಂದಲ್ಲ ಎಂದು ಅವರು ಹೇಳಿದರು.
ಹಲಾಲ್ ಉತ್ಪನ್ನಗಳನ್ನು ನಿಷೇಧಿಸಿದ್ದಕ್ಕಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭಾರತೀಯ ಜನತಾ ಪಕ್ಷವನ್ನು ಕಟುವಾಗಿ ಟೀಕಿಸಿದರು. ‘ಸರ್ಕಾರದ ಈ ನಿರ್ಧಾರವು ಸಮುದಾಯಗಳ ನಡುವೆ ಬಿರುಕು ಮೂಡಿಸುತ್ತಿದೆ’ ಎಂದು ಆರೋಪಿಸಿದರು.
ಹಲಾಲ್ ವಿವಾದ: ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಕರ್ನಾಟಕ!
ಕಳೆದ ವರ್ಷ ಕರ್ನಾಟಕದಲ್ಲೂ ಶ್ರೀರಾಮಸೇನೆ ಸೇರಿದಂತೆ ಕೆಲ ಹಿಂದುತ್ವ ಸಂಘಟನೆಗಳು ಹಲಾಲ್ ಕಟ್ ವಿರುದ್ಧ ಅಭಿಯಾನ ಆರಂಭಿಸಿದ್ದರು. ಹಲಾಲ್ ಬೋರ್ಡ್ ಹಾಕಿಕೊಂಡು ವ್ಯವಹಾರ ನಡೆಸುತ್ತಿದ್ದ ಹೋಟೆಲ್ಗಳು ಹಾಗೂ ಅಂಗಡಿಗಳ ಮೇಲೆ ದಾಳಿ ಮಾಡಿದ್ದರು.
‘ಹಿಂದೂಗಳು ಈ ಬಾರಿಯ ಯುಗಾದಿಯಲ್ಲಿ ಬರುವ ಹೊಸತೊಡಕು (ವರ್ಷತೊಡಕು) ಹಬ್ಬದಲ್ಲಿ ಹಲಾಲ್ ಕಟ್ ಮಾಂಸವನ್ನು ಬಳಸಬೇಡಿ. ಜಟ್ಕಾ ಕಟ್ ಮಾಂಸವನ್ನೇ ಬಳಸಬೇಕು’ ಎಂದು ಹಿಂದುತ್ವ ಸಂಘಟನೆಯ ಕಾರ್ಯಕರ್ತರು ಮಾಡಿದ ಮನವಿಗೆ ಕರ್ನಾಟಕದ ಜನ ಅಷ್ಟಾಗಿ ಸ್ಪಂದಿಸಲಿಲ್ಲ. ಆದರೆ, ರಾಜ್ಯದಲ್ಲಿ ಭುಗಿಲೆದ್ದಿದ್ದ ಈ ವಿವಾದ ರಾಷ್ಟ್ರಮಟ್ಟದಲ್ಲಿ ಭಾರಿ ಸದ್ದು ಮಾಡಿತ್ತು.
‘ಹಲಾಲ್ ಇಸ್ಲಾಂನದ್ದು, ಹಿಂದೂಗಳಿಗೆ ಸಂಬಂಧಿಸಿರೋದು ಅಲ್ಲ. ಮುಸ್ಲಿಮರು ಹಿಂದೂಗಳು ಕಟ್ ಮಾಡಿದ ಮಾಂಸ ತಿನ್ನೋದಿಲ್ಲ, ನಾವು ಯಾಕೆ ಅವರ ಹಲಾಲ್ ಮಾಂಸವನ್ನು ತಿನ್ನಬೇಕು’ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಪ್ರಶ್ನಿಸಿದ್ದರು. ಹಲಾಲ್ ವಿರುದ್ಧದ ಅಭಿಯಾನದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದ್ದ ತುಮಕೂರು ಮೂಲದ ಕಾಳಿ ಮಠದ ರಿಶಿಕುಮಾರ ಸ್ವಾಮೀಜಿ, ಖುದ್ದು ತಾವೇ ಮಾಂಸದ ಅಂಗಡಿಯಲ್ಲಿ ಕೋಳಿ ಕತ್ತರಿಸಿದ್ದರು.
ಇದನ್ನೂ ಓದಿ; ಕೇರಳದಲ್ಲಿ ಶಾಂತಿ ಕದಡಲು ರಾಜ್ಯಪಾಲರಿಂದ ಯತ್ನ: ಸಿಎಂ ಪಿಣರಾಯಿ ವಿಜಯನ್