ಕನ್ನಡದ ನಟ ಸುದೀಪ್ ಬಿಜೆಪಿ ಪಕ್ಷ ಸೇರುತ್ತಾರೆ ಎಂಬ ವದಂತಿಗಳನ್ನು ಅಲ್ಲಗೆಳೆದಿರುವ ಅವರು, ಯಾವ ಪಕ್ಷದಿಂದಲೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಸ್ನೇಹಿತರ ಪರ, ಆತ್ಮೀಯರ ಪರ ಪ್ರಚಾರ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಇಂದು ಮಧ್ಯಾಹ್ನ ಸಿಎಂ ಬಸವರಾಜ ಬೊಮ್ಮಾಯಿಯವರು ಕರೆದಿರುವ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸುತ್ತೇನೆ. ಅಲ್ಲಿ ನನ್ನ ನಿಲುವು ತಿಳಿಸುತ್ತೇನೆ” ಎಂದಿದ್ದಾರೆ.
ನಾನು ಯಾರಿಗೂ ಟಿಕೆಟ್ ಕೊಡಿಸುವಷ್ಟು ದೊಡ್ಡವನಲ್ಲ. ನನಗೆ ಸಹಾಯ ಮಾಡಿದವರಿಗೆ ಪ್ರಚಾರ ಮಾಡುವ ಮೂಲಕ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದಿದ್ದಾರೆ.
ನನಗೆ ರಾಜಕೀಯಕ್ಕೆ ಬನ್ನಿ ಎಂಬ ಒತ್ತಡ ಇರುವುದು ನಿಜ. ನನಗೆ ಮಾತ್ರವಲ್ಲ, ಬಹುತೇಕ ಕಲಾವಿದರಿಗೆ ಇರುತ್ತದೆ. ನನಗೆ ಎಲ್ಲಾ ಪಕ್ಷದಲ್ಲಿಯೂ ಆತ್ಮೀಯರಿದ್ದಾರೆ. ಹಾಗಾಗಿ ಯಾವ ಪಕ್ಷಕ್ಕೂ ಹೋಗೊಲ್ಲ. ಕೆಲವರ ಪರವಾಗಿ ನಾನು ನಿಲುವು ತೆಗೆದುಕೊಂಡಿದ್ದೇನೆ. ಅದನ್ನು ಪತ್ರಿಕಾಗೋಷ್ಟಿಯಲ್ಲಿ ತಿಳಿಸುತ್ತೇನೆ. ನಾನು ಮೂರು ಸಿನಿಮಾಗಳನ್ನು ಒಪ್ಪಿಕೊಂಡಿದ್ದು ಆ ಕಡೆ ಹೆಚ್ಚಿನ ಗಮನ ಕೊಡುತ್ತೇನೆ ಎಂದು ಸುದೀಪ್ ಹೇಳಿದ್ದಾರೆ.
ಇದನ್ನೂ ಓದಿ: ಚುನಾವಣೆ ಸಮಯದಲ್ಲಿ ಸಿನಿಮಾ ನಟರು ರಾಜಕಾರಣಕ್ಕೆ ಬರುವುದು ಎಷ್ಟು ಸರಿ?