ಬೆಂಗಳೂರಿನಲ್ಲಿ ಮತ್ತೊಂದು ಲಾಕ್ಡೌನ್ ಬಯಸದಿದ್ದರೆ ಕೊರೊನಾ ನಿಯಂತ್ರಣಕ್ಕೆ ಜಾರಿಗೆ ತಂದಿರುವ ಕ್ರಮಗಳನ್ನು ಅನುಸರಿಸಿ ಜನರು ಸಹಕರಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಇತ್ತೀಚಿಗೆ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಮತ್ತೆ ಲಾಕ್ಡೌನ್ ಹೇರುವ ಕುರಿತು ಮಾತುಕತೆ ನಡೆಸುತ್ತಿರುವ ಮಧ್ಯೆ, ವೈರಸ್ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕಠಿಣ ಕ್ರಮಗಳ ಬಗ್ಗೆ ಗುರುವಾರ ಮತ್ತು ಶುಕ್ರವಾರ ಚರ್ಚೆ ನಡೆಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ.
“ಕೊರೊನಾ ಸಾಂಕ್ರಾಮಿಕವು ಹೆಚ್ಚುತ್ತಿದ್ದು, ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಕೆಲವು ಪ್ರದೇಶಗಳಿಗೆ ಮೊಹರು ಹಾಕಿದ್ದೇವೆ. ಇಂದು ಮಧ್ಯಾಹ್ನ ಕೃಷ್ಣ (ಸಿಎಂ ಅವರ ಗೃಹ ಕಚೇರಿ) ದಲ್ಲಿ ನಾನು ಮಂತ್ರಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ಕರೆದಿದ್ದು ಕೊರೊನಾವನ್ನು ನಿಯಂತ್ರಿಸಲು ತೆಗೆದುಕೊಳ್ಳಬೇಕಾದ ಕಠಿಣ ಕ್ರಮಗಳ ಬಗ್ಗೆ ಚರ್ಚಿಸುತ್ತೇನೆ” ಎಂದು ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾಳೆ ಮಧ್ಯಾಹ್ನ ಎಲ್ಲ ರಾಜಕೀಯ ಪಕ್ಷಗಳ ಶಾಸಕರು ಮತ್ತು ಮಂತ್ರಿಗಳ ಸಭೆಯನ್ನು ಕರೆದಿದ್ದು, ಅವರೊಂದಿಗೆ ಚರ್ಚಿಸಿ, ಅವರ ಅಭಿಪ್ರಾಯವನ್ನು ಪಡೆದು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇನೆ” ಎಂದು ಹೇಳಿದರು.
ಮಂಗಳವಾರದಂದು ಕೊರೊನಾ ಪ್ರಕರಣಗಳ ಹೆಚ್ಚಳವನ್ನು ಉಲ್ಲೇಖಿಸಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಪರಿಸ್ಥಿತಿ ಮುಂದುವರಿದರೆ ನಗರದಲ್ಲಿ ಲಾಕ್ಡೌನ್ ಮಾಡುವ ಬಗ್ಗೆ ಸರ್ಕಾರ ಯೋಚಿಸಬೇಕಾಗಬಹುದು ಎಂದು ಹೇಳಿದ್ದಾರೆ.
ಇದನ್ನು ಅನುಸರಿಸಿ ಬುಧವಾರ ಹಲವಾರು ಸಚಿವರು ತಜ್ಞರೊಂದಿಗೆ ಸಮಾಲೋಚಿಸಿದ ನಂತರವೇ ನಗರದಲ್ಲಿ ಮತ್ತೆ ಲಾಕ್ಡೌನ್ ಹೇರುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದಿದ್ದರು.
ಇಂದು ನಿಗದಿಯಾದ ಕ್ಯಾಬಿನೆಟ್ ಸಭೆಯಲ್ಲಿ ಲಾಕ್ ಡೌನ್ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಕೆಲವು ವರದಿಗಳು ಸೂಚಿಸಿವೆ.
ಈಗಾಗಲೇ ನಗರದ ಪ್ರಮುಖ ಮಾರುಕಟ್ಟೆಗಳಾದ ಕೆ ಆರ್ ಮಾರುಕಟ್ಟೆ ಮತ್ತು ಕಲಾಸಿಪಾಲ್ಯ ಮಾರುಕಟ್ಟೆಯನ್ನು 15 ದಿನಗಳ ಕಾಲ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೀಲ್ಡೌನ್ ಮಾಡಿದೆ.
ನಿನ್ನೆ ಸಂಜೆಯವರೆಗೆ ನಗರದಲ್ಲಿ ಒಟ್ಟು 1,678 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 78 ಜನರು ಸಾವಿಗೀಡಾಗಿದ್ದು, 475 ಜನರು ಗುಣಮುಖರಾಗಿದ್ದಾರೆ.
ಜೂನ್ 1 ರ ವೇಳೆಗೆ ರಾಜ್ಯದಲ್ಲಿ 3,408 ರಷ್ಟಿದ್ದ ಕೊರೊನಾ ಪ್ರಕರಣಗಳ ಸಂಖ್ಯೆ ಬುಧವಾರ 10,000 ದಾಟಿದೆ, ಸೋಂಕಿನ ಸಂಖ್ಯೆಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ.