ಭಾರತೀಯ ಸಂವಿಧಾನದಲ್ಲಿ ದೇಶದ್ರೋಹದ ಕಾನೂನನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಇದನ್ನು ಯಾಕೆ ರದ್ದುಗೊಳಿಸುತ್ತಿಲ್ಲ ಎಂದು ನ್ಯಾಯಾಲಯವು ಒಕ್ಕೂಟ ಸರ್ಕಾರವನ್ನು ಪ್ರಶ್ನಿಸಿದೆ. ಕಾನೂನಿನ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ, 2014 ಮತ್ತು 2019 ರ ನಡುವೆ ದೇಶದಲ್ಲಿ 326 ದೇಶದ್ರೋಹದ ಪ್ರಕರಣಗಳು ದಾಖಲಾಗಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದರಲ್ಲಿ 141 ಪ್ರಕರಣಗಳಲ್ಲಿ ಚಾರ್ಜ್ಶೀಟ್ಗಳನ್ನು ದಾಖಲಿಸಲಾಗಿತ್ತಾದರೂ, ಕೇವಲ ಆರು ಮಂದಿ ಮಾತ್ರ ಶಿಕ್ಷೆಗೊಳಗಾಗಿದ್ದಾರೆ.
ಜುಲೈ 15 ರಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಐಪಿಸಿಯಲ್ಲಿ ಸೆಕ್ಷನ್ 124 ಎ (ದೇಶದ್ರೋಹ) ದ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಸಲ್ಲಿಸಿದ್ದ ಮನವಿಯನ್ನು ಪರಿಶೀಲಿಸಲು ಒಪ್ಪಿಕೊಂಡಿತ್ತು.
ಇದನ್ನೂ ಓದಿ: ವಿನೋದ್ ದುವಾ ವಿರುದ್ಧ ಎಫ್ಐಆರ್ ರದ್ದು; ದೇಶದ್ರೋಹ ಕಾನೂನಿನ ಮೂಲಭೂತ ನಿಯಮಗಳನ್ನು ನೆನಪಿಸಿದ ಕೋರ್ಟ್
ದೇಶದ್ರೋಹದ ಅಡಿಯಲ್ಲಿ ಅಸ್ಸಾಂನಲ್ಲಿ ಅತಿ ಹೆಚ್ಚು ಸಂಖ್ಯೆಯ ಪ್ರಕರಣ ದಾಖಲಾಗಿದೆ. ಅಲ್ಲಿ 54 ದೇಶದ್ರೋಹ ಅಪರಾಧಗಳು ದಾಖಲಿಸ್ಪಟ್ಟಿವೆ. ಇವುಗಳಲ್ಲಿ, ಕೇವಲ 26 ಪ್ರಕರಣಗಳಲ್ಲಿ ಮಾತ್ರ ಚಾರ್ಜ್ಶೀಟ್ಗಳು ದಾಖಲಾಗಿದ್ದು, ಅದರಲ್ಲಿ 25 ಪ್ರಕರಣಗಳ ವಿಚಾರಣೆಗಳು ಪೂರ್ಣಗೊಂಡಿವೆ. ಆದರೆ ಇದುವರೆಗೂ ಒಂದೇ ಒಂದು ಪ್ರಕರಣದ ಅಪರಾಧ ಸಾಬೀತಾಗಿಲ್ಲ.
ಜಾರ್ಖಂಡ್ನಲ್ಲಿ 40 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 29 ಪ್ರಕರಣಗಳಲ್ಲಿ ಚಾರ್ಜ್ಶೀಟ್ ದಾಖಲಾಗಿದೆ. 16 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದ್ದು, ಅಲ್ಲಿ ಒಬ್ಬ ವ್ಯಕ್ತಿಯನ್ನು ಮಾತ್ರ ಶಿಕ್ಷಿಸಲಾಗಿದೆ. 31 ಪ್ರಕರಣಗಳು ದಾಖಲಾದ ಹರಿಯಾಣದಲ್ಲಿ ಕೂಡಾ ಇದೇ ರೀತಿಯಾಗಿ ಮುಂದುವರೆದಿದೆ. ಅಲ್ಲಿ 19 ಪ್ರಕರಣಗಳಲ್ಲಿ ಚಾರ್ಜ್ಶೀಟ್ಗಳನ್ನು ಸಲ್ಲಿಸಲಾಗಿದ್ದು, ಆರು ಪ್ರಕರಣಗಳ ವಿಚಾರಣೆಯನ್ನು ಪೂರ್ಣಗೊಂಡಿದ್ದು, ಒಬ್ಬ ವ್ಯಕ್ತಿಯನ್ನು ಮಾತ್ರ ಶಿಕ್ಷೆಗೊಳಪಡಿಸಲಾಗಿದೆ.
ಬಿಹಾರ, ಜಮ್ಮು ಕಾಶ್ಮೀರ ಮತ್ತು ಕೇರಳದಲ್ಲಿ ತಲಾ 25 ಪ್ರಕರಣಗಳು ದಾಖಲಾಗಿವೆ. ಆದರೆ ಬಿಹಾರ ಮತ್ತು ಕೇರಳದಲ್ಲಿ ಇದುವರೆಗೂ ಯಾವುದೇ ಚಾರ್ಜ್ಶೀಟ್ಗಳು ದಾಖಲಾಗಲಿಲ್ಲ. ಜಮ್ಮು ಕಾಶ್ಮೀರದಲ್ಲಿ ಮೂರು ಪ್ರಕರಣಗಳಲ್ಲಿ ಚಾರ್ಜ್ಶೀಟ್ ಸಲ್ಲಿಕೆಯಾಗಿದ್ದು, ಇದುವರೆಗೂ ಯಾರೂ ಶಿಕ್ಷೆಗೊಳಗಾಗಿಲ್ಲ.
ಇದನ್ನೂ ಓದಿ: ವಶಾಹತುಶಾಹಿ ದೇಶದ್ರೋಹದ ಕಾನೂನು ಸ್ವಾತಂತ್ರ್ಯದ 75 ವರ್ಷಗಳ ನಂತರವೂ ಅಗತ್ಯವೇ?: ಸುಪ್ರೀಂ ಪ್ರಶ್ನೆ
ಕರ್ನಾಟಕ ಮತ್ತು ಉತ್ತರ ಪ್ರದೇಶದಲ್ಲಿ 22 ದೇಶದ್ರೋಹ ಪ್ರಕರಣಗಳು ದಾಖಲಾಗಿವೆ. ಕರ್ನಾಟಕ ಪೊಲೀಸರು 17 ಪ್ರಕರಣಗಳಲ್ಲಿ ಚಾರ್ಜ್ಶೀಟ್ ಸಲ್ಲಿಸಿದ್ದು, ಒಂದು ಪ್ರಕರಣದ ವಿಚಾರಣೆಯನ್ನಷ್ಟೆ ಪೂರ್ಣಗೊಳಿಸಲಾಗಿದೆ. ಆದರೆ ಇದುವರೆಗೂ ಯಾರೂ ಶಿಕ್ಷೆಗೊಳಗಾಗಿಲ್ಲ. ಯುಪಿ ಪೊಲೀಸರು ಎಂಟು ಪ್ರಕರಣಗಳಲ್ಲಿ ಚಾರ್ಜ್ಶೀಟ್ಗಳನ್ನು ಸಲ್ಲಿಸಿದ್ದು, ಅಲ್ಲಿಯು ಯಾರೂ ಶಿಕ್ಷೆಗೊಳಗಾಗಲಿಲ್ಲ.
ಮೇಘಾಲಯ, ಮಿಜೋರಾಂ, ತ್ರಿಪುರ, ಸಿಕ್ಕಿಂ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ಪುದುಚೇರಿ, ಚಂಡೀಗಡ, ದಮನ್ ಮತ್ತು ಡಿಯು, ದಾದ್ರಾ ಮತ್ತು ನಗರ ಹವೇಲಿಯಲ್ಲಿ 2014-2019ರವರೆಗೆ ಯಾವುದೇ ದೇಶದ್ರೋಹ ಪ್ರಕರಣ ದಾಖಲಾಗಿರಲಿಲ್ಲ.
ದೇಶದ್ರೋಹದ ಅಪರಾಧವನ್ನು ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು “ಬಾಯಿ ಮುಚ್ಚಿಸಲು” ಬ್ರಿಟಿಷ್ ವಸಾಹತುಶಾಹಿಗಳು ತಂದಂತಹ ಕಾನೂನಾಗಿದೆ ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ. 2019 ರಲ್ಲಿ ಅತಿ ಹೆಚ್ಚು 93 ರಷ್ಟು ದೇಶದ್ರೋಹ ಪ್ರಕರಣಗಳು ದಾಖಲಾಗಿದ್ದವು. ಈ ಕಾನೂನಿನ ದುರುಪಯೋಗ ಮತ್ತು ಹೆಚ್ಚುತ್ತಿರುವ ಪ್ರಕರಣಗಳ ಬಗ್ಗೆ ಆತಂಕವಿದೆ ಎಂದು ನ್ಯಾಯಪೀಠ ಹೇಳಿದೆ.
ದೇಶದ್ರೋಹದ ಅಪರಾಧವು ವಸಾಹತುಶಾಹಿ ಯುಗದ ಕಾನೂನು ಎಂದು ನ್ಯಾಯಾಲಯ ಹೇಳಿದ್ದು, “ಸ್ವಾತಂತ್ರ್ಯದ 75 ವರ್ಷಗಳ ನಂತರವೂ ಈ ಕಾನೂನು ಅಗತ್ಯವಿದೆಯೆ?” ಎಂದು ಅದು ಕೇಳಿದೆ.
ಇದನ್ನೂ ಓದಿ: ಸುಪ್ರೀಂ ಕೋರ್ಟ್ನಲ್ಲಿ ದೇಶದ್ರೋಹ ಕಾನೂನಿನ ಸಾಂವಿಧಾನಿಕತೆ ಪ್ರಶ್ನಿಸಿರುವ ಎಸ್.ಜಿ ಒಂಬತ್ಕೆರೆ ಯಾರು?