ನೂತನ ಸಂಸತ್ ಭವನದ ಉದ್ಘಾಟನೆ ಸಮಾರಂಭವನ್ನು 20 ವಿರೋಧ ಪಕ್ಷಗಳು ಬಹಿಷ್ಕರಿಸಿರುವ ನಿರ್ಧಾರದ ನಡುವೆ ಉದ್ಧವ್ ಠಾಕ್ರೆ ಬಣದ ನಾಯಕ ಸಂಜಯ್ ರಾವತ್ ಪ್ರತಿಕ್ರಿಯಿಸಿದ್ದು, “ಸಂಸತ್ ಭವನದ ಉದ್ಘಾಟನೆ ರಾಷ್ಟ್ರೀಯ ಕಾರ್ಯಕ್ರಮವೇ ಹೊರತು ರಾಜಕೀಯ ಪಕ್ಷದ ಕಾರ್ಯಕ್ರಮವಲ್ಲ” ಎಂದಿದ್ದಾರೆ.
ಭಾನುವಾರ ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಉದ್ಘಾಟನೆಗೆ ಆಹ್ವಾನಿಸದೆ ಬಿಜೆಪಿ ಅವರನ್ನು ಪಕ್ಕಕ್ಕೆ ತಳ್ಳಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ರಾವತ್, “ಹೊಸ (ಸಂಸತ್ತು) ಕಟ್ಟಡದ ಉದ್ಘಾಟನೆಗೆ ನಾವು ವಿರೋಧಿ ವ್ಯಕ್ತಪಡಿಸುತ್ತಿಲ್ಲ. ಭಾರತದ ರಾಷ್ಟ್ರಪತಿಯವರನ್ನು ಏಕೆ ಆಹ್ವಾನಿಸಲಾಗಿಲ್ಲ ಎಂದು ನಾವು ತಿಳಿದುಕೊಳ್ಳಲು ಬಯಸುತ್ತೇವೆ. ರಾಜ್ಯಸಭೆಯ ಸ್ಪೀಕರ್ ಆಗಿರುವ ಉಪರಾಷ್ಟ್ರಪತಿಯವರು ಎಲ್ಲಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.
ನೂತನ ಸಂಸತ್ ಭವನವನ್ನು ರಾಷ್ಟ್ರಪತಿಗಳು ಉದ್ಘಾಟಿಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ.
‘ಅಚ್ಛೇ ದಿನ್’ ನೋಡಿದ ಎಲ್ಕೆ ಅಡ್ವಾಣಿ ಅವರನ್ನು ಸಮಾರಂಭದಿಂದ ದೂರವಿಡಲಾಗಿದೆಯೇ ಎಂದು ರಾವತ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
“ಕೇಂದ್ರ ಸರ್ಕಾರ ಪ್ರಶ್ನೆಗಳಿಗೆ ಉತ್ತರಿಸುವ ಬದಲು, ಇಂದಿರಾ ಗಾಂಧಿ ಅವರು ಪ್ರಸ್ತುತ ಇರುವ ಸಂಸತ್ತಿನ ವಿಸ್ತರಣಾ ಕಟ್ಟಡ ಉದ್ಘಾಟಿಸಿದರು. ರಾಜೀವ್ ಗಾಂಧಿ ಅವರು ಸಂಸತ್ತಿನ ಗ್ರಂಥಾಲಯವನ್ನು ಉದ್ಘಾಟಿಸಿದರು ಎಂದು ಹೇಳುತ್ತಿದೆ” ಎಂದು ರಾವತ್ ಟೀಕಿಸಿದ್ದಾರೆ.
“ವಿಸ್ತರಣಾ ಕಟ್ಟಡ, ಗ್ರಂಥಾಲಯ ಹಾಗೂ ಮುಖ್ಯ ಕಟ್ಟಡಕ್ಕೆ ವ್ಯತ್ಯಾಸವಿದೆ” ಎಂದು ಅವರು ತಿಳಿಸಿದ್ದಾರೆ.
“ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮುಂದಿನ ವರ್ಷ ಮಹಾರಾಷ್ಟ್ರದ 48 ಲೋಕಸಭಾ ಕ್ಷೇತ್ರಗಳಲ್ಲಿ 22ರಲ್ಲಿ ಸ್ಪರ್ಧಿಸಲು ಬಯಸಿದೆ. ಅದರ ಮಿತ್ರಪಕ್ಷ ಬಿಜೆಪಿ ಬೇಡಿಕೆಯನ್ನು ಒಪ್ಪುವುದಿಲ್ಲ” ಎಂಬ ವರದಿಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ರಾವತ್, “ಶಿಂಧೆ ನೇತೃತ್ವದ ಸೇನೆಯನ್ನು ರಾಜಕೀಯ ಪಕ್ಷವೆಂದು ಪರಿಗಣಿಸುವುದಿಲ್ಲ” ಎಂದಿದ್ದಾರೆ.
“22 ಸ್ಥಾನಗಳನ್ನು ಬಿಡಿ, ಐದು ಸ್ಥಾನ ಪಡೆದರೂ ಸಾಕು. ಶಿಂಧೆ ಬಣದವರು 48 ಸ್ಥಾನಗಳಿಗೂ ಸ್ಪರ್ಧಿಸಿದರೂ ನಮಗೆ ಚಿಂತೆಯಿಲ್ಲ. ನಮ್ಮ 19 ಲೋಕಸಭಾ ಸ್ಥಾನಗಳು (2019ರ ಚುನಾವಣೆಯಲ್ಲಿ ಅವಿಭಜಿತ ಸೇನೆಯಿಂದ ಗೆದ್ದಿದ್ದು) ಹಾಗೇ ಉಳಿಯುತ್ತವೆ” ಎಂದು ಭವಿಷ್ಯ ನುಡಿದಿದ್ದಾರೆ.