ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮ ದಿನದಂದು ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯ ನಡೆದ ಕಾರಣ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಸೋತಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬುಧವಾರ ಹೇಳಿದ್ದಾರೆ.
“ಎಲ್ಲಾ ಪಂದ್ಯಗಳಲ್ಲಿ ಗೆದ್ದ ಭಾರತ ತಂಡ ಫೈನಲ್ನಲ್ಲಿ ಯಾಕೆ ಸೋತಿತು? ಎಂದು ನಾನು ಪರಿಶೀಲಿಸಿದೆ. ಈ ವೇಳೆ ಇಂದಿರಾ ಗಾಂಧಿಯವರ ಜನ್ಮ ದಿನದಂದು ಪಂದ್ಯ ನಡೆದಿರುವುದು ಗೊತ್ತಾಯಿತು” ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಈ ಮೂಲಕ ಇಂದಿರಾ ಗಾಂಧಿಯವರ ಜನ್ಮದಿನ ಒಂದು ‘ಕೆಟ್ಟ ದಿನ’ ಎಂಬರ್ಥದಲ್ಲಿ ಮಾತನಾಡಿದ್ದಾರೆ.
ಗಾಂಧಿ ಕುಟುಂಬದ ವಿರುದ್ದ ವಾಗ್ದಾಳಿ ಮುಂದುವರೆಸಿದ ಶರ್ಮಾ, “ಗಾಂಧಿ ಕುಟುಂಬದ ಸದಸ್ಯರ ಹುಟ್ಟುಹಬ್ಬದ ದಿನದಂದು ಭಾರತ ತಂಡ ಆಡಬಾರದು ಎಂದು ನಾನು ಬಿಸಿಸಿಐಗೆ ಮನವಿ ಮಾಡುತ್ತೇನೆ. ಇದನ್ನು ವಿಶ್ವಕಪ್ ಫೈನಲ್ನಿಂದ ಕಲಿತಿದ್ದೇನೆ” ಎಂದಿದ್ದಾರೆ.
ಫೆಬ್ರವರಿ 19 ರಂದು ನಡೆದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಸೋಲನುಭವಿಸಿರುವುದು ರಾಜಕೀಯ ಕೆಸೆರೆರಚಾಟಕ್ಕೆ ಕಾರಣವಾಗಿದೆ. ಪ್ರಧಾನಿ ಮೋದಿ ಕ್ರೀಡಾಂಗಣಕ್ಕೆ ಪ್ರವೇಶಿಸಿರುವುದು ಒಂದು ‘ಕೆಟ್ಟ ಶಕುನ’ (ಪನೌತಿ). ಇದರಿಂದ ಭಾರತ ತಂಡ ಪಂದ್ಯದಲ್ಲಿ ಸೋತಿತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇತ್ತ ಬಿಜೆಪಿ ನಾಯಕರು ಕೂಡ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರ ವಿರುದ್ದ ಪ್ರತಿ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಪ್ರಧಾನಿಯನ್ನು ರಾಹುಲ್ ಗಾಂಧಿ ಅವಹೇಳಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಇದನ್ನೂ ಓದಿ: ಮೋದಿ ‘ಕೆಟ್ಟ ಶಕುನ’ ಎಂದ ರಾಹುಲ್: ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು